Monday, May 23, 2011

ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!

ನೀವು ತೆಗೆದ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅಂತರ್ಜಾಲಕ್ಕೆ ಸೇರಿಸ ಹೊರಟಿದ್ದೀರ? ಸ್ವಲ್ಪ ನಿಧಾನಿಸಿ, ಯಾಕೆಂದರೆ "ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!".  ದಿನೇ ದಿನೇ ಹೆಚ್ಚುತ್ತಿರುವ ವೃತ್ತ ಪತ್ರಿಕೆಗಳೇ ಈ ಕಳ್ಳತನ ಮಾಡುತ್ತಿರುವುದು ವಿಷಾದದ ವಿಚಾರ.

ಕಳ್ಳತನ ಏಕೆ, ಹೇಗೆ?

ಇದು instant ಕಾಲ. ಆಹಾರದಿಂದ ಹಿಡಿದು ಸುದ್ದಿಯವರೆಗೂ ನಮಗಿರುವುದು ಅವಸರವೇ. ಮಾಹಿತಿಯ ಪರಿಶೀಲನೆಗೇ ಸಮಯವಿಲ್ಲದಿರುವಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಜೊತೆಗೆ ಮುದ್ರಿತವಾಗುವ ಚಿತ್ರಗಳನ್ನು ಪಡೆಯಲು ಬಿಡುವೆಲ್ಲಿದೆ. ಗೂಗಲ್, ಯಾಹೂ ಮೊದಲಾದ ಹುಡುಕು ತಾಣಗಳಲ್ಲಿ ನಿಮ್ಮ ಲೇಖನಕ್ಕೆ ಬೇಕಾದ ಕೀ-ವರ್ಡ್ ಹೊಡೆದರೆ ಲಕ್ಷಾಂತರ ಚಿತ್ರಗಳು ಕ್ಷಣಾರ್ಧದಲ್ಲಿ ಲಭಿಸುತ್ತದೆ. ಅದರಲ್ಲಿ ಕೆಲವನ್ನು ಆಯ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರಾಯ್ತು. ಪುಕ್ಕಟೆಯಾಗಿ ಸಿಗುವ ಸರಕು ಬೇರೆ, ಛಾಯಾಗ್ರಾಹಕನಿಗೆ ಹಣ ಕೊಡುವ ಅಗತ್ಯವೂ ಇಲ್ಲ.

ಏಕೆ ಕದಿಯಬಾರದು


ಅಂತರ್ಜಾಲದ ಹುಡುಕು ತಾಣಗಳು ನಿಮಗೆ ಬೇಕಾದ ಚಿತ್ರವನ್ನು ಹುಡುಕಿ ಕೊಡುತ್ತದಾದರೂ ಆ ಚಿತ್ರದ ಸಂಪೂರ್ಣ ಹಕ್ಕು  ಚಿತ್ರ ತೆಗೆದವರ ಅಥವಾ ಅದನ್ನು ಅಂತರ್ಜಾಲಕ್ಕೆ ಸೇರಿಸಿದವರದ್ದಾಗಿರುತ್ತದೆ. ಅವರ ಅನುಮತಿಯಿಲ್ಲದೆಯೇ ಯಾವುದೇ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಅನೀತಿ ಮಾತ್ರವಲ್ಲ ಅಪರಾಧ ಕೂಡ.ಚಿತ್ರ ತೆಗೆದವನ, ತೆಗೆಯಿಸಿಕೊಂಡವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದರೆ ಕಳ್ಳತನ ಮಾಡುವವರು ಇದರ ಹಿಂದೆ ಇನ್ನೊಬ್ಬರ ಪರಿಶ್ರಮ ಅಡಗಿದೆ ಎಂಬುದನ್ನು ಸುಲಭದಲ್ಲಿ ಮರೆಯುತ್ತಾರೆ. 


ಕದಿಯುವುದನ್ನು ತಡೆಗಟ್ಟುವುದು ಹೇಗೆ?


ಫ್ಲಿಕರ್, ಫೋಟೋ ಬಕೆಟ್ ಮೊದಲಾದ  ಚಿತ್ರ ತಾಣಗಳಲ್ಲಿ ನೀವು ಸೇರಿಸಿದ ಚಿತ್ರಗಳು ಹುಡುಕು ತಾಣಗಳಲ್ಲಿ ಕಾಣಿಸದಿರುವಂತೆ, ಡೌನ್ ಲೋಡ್ ಮಾಡಿಕೊಳ್ಳದಂತೆ ಸೆಟ್ಟಿಂಗ್ ಮಾಡಬಹುದು. ಚಿತ್ರದ ಮೇಲೆ ಕಾಪಿ ರೈಟ್ ವಾಟರ್ ಮಾರ್ಕ್ ಹಾಕುವುದೂ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು.

ಕದ್ದರೆ ಏನು ಮಾಡಬಹುದು


ಪತ್ರಿಕೆಯ ಪ್ರತಿಯನ್ನು ಸಂಗ್ರಹಿಸಿ ಈ ಮೂಲಕ ನಿಮ್ಮ ಹಕ್ಕು ಉಲ್ಲಂಘನೆಯಾದ ಬಗ್ಗೆ ಸಂಪಾದಕರಿಗೆ ಪತ್ರ ಬರೆದು ಬಹಿರಂಗ ಕ್ಷಮಾಪಣಾ ಪತ್ರ, ಪರಿಹಾರ ಕೇಳಬಹುದು. ನಿಮಗೆ ಸಂಪಾದಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ ಲಾಯರಿಂದ ನೋಟೀಸ್ ಕಳುಹಿಸಬಹುದು. ಇದಕ್ಕೂ ಪ್ರತಿಕ್ರಿಯೆ ಬಾರದಿದ್ದರೆ ಪತ್ರಿಕೆಯ ಮೇಲೆ ಕೇಸ್ ಹಾಕಿಸಿ, ಈ ವಿಚಾರವಾಗಿ ಬೇರೆ ಪತ್ರಿಕೆಯಲ್ಲಿ ಅಥವಾ ಬ್ಲಾಗಿನಲ್ಲಿ ಬರೆಯಬಹುದು.

ಇಷ್ಟಕ್ಕೂ ನಾನಿದನ್ನೆಲ್ಲಾ ಬರೆದದ್ದಕ್ಕೆ ಕಾರಣವಿದೆ. ಈಚೆಗೆ ಶಿವಮೊಗ್ಗದ ಪತ್ರಿಕೆಯೊಂದು ನನ್ನ ಕುಟುಂಬದ ಹೆಣ್ಣು ಮಗಳೊಬ್ಬಳ ಫೋಟೋವನ್ನು ನನ್ನ ಫ್ಲಿಕರ್ ಅಕೌಂಟಿನಿಂದ ಕದ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಲೇಖನದೊಂದಿಗೆ ಪ್ರಕಟಪಡಿಸಿತ್ತು. ಆ ಲೇಖನದ ಲೇಖಕರು ತಮ್ಮ ಫೇಸ್-ಬುಕ್ ಅಕೌಂಟಿನಲ್ಲಿ ಇದರ ಚಿತ್ರ ಪ್ರತಿಯೊಂದನ್ನು ಹಾಕಿ ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದರು. ಇದನ್ನು ನೋಡಿದ ನನ್ನ ಸ್ನೇಹಿತರೊಬ್ಬರು ನನಗೆ ವಿಷಯ ತಿಳಿಸಿದಾಗ ಗಾಬರಿಯಾಯ್ತು.  ಆಕೆಗೆ ಪತ್ರಿಕೆಯಲ್ಲಿ ತನ್ನ ಚಿತ್ರ ಪ್ರಕಟವಾಗಿರುವುದು ಇಷ್ಟದ ವಿಷಯವಲ್ಲ. ನನಗೂ ನನ್ನ ಫೋಟೋ ಅನುಮತಿಯಿಲ್ಲದೇ  ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಇಷ್ಟವಿಲ್ಲ.

ಇದೇ ಲೇಖನದಲ್ಲಿ ಪತ್ರಿಕೆಯವರು ಬಳಸಿದ ಇನ್ನೊಂದು ಚಿತ್ರದ್ದೂ ಇದೇ ಕಥೆ. ಅಂತರ್ಜಾಲದಿಂದ ಹುಡುಕಿದ ಈ ಚಿತ್ರಕ್ಕೆ ವಾಟರ್-ಮಾರ್ಕ್ ನಲ್ಲಿ ಕಾಪಿರೈಟ್ ಹಾಕಿದ್ದರೂ ಪತ್ರಿಕೆಯವರು ಅದನ್ನು ಅಳಿಸುವ ಜಾಣತನ ತೋರಿದ್ದಾರೆ.

ಪೇಸ್-ಬುಕ್ಕಿನಲ್ಲಿ ಲೇಖಕರು ಹಾಕಿಕೊಂಡ ಪ್ರತಿಯನ್ನು ತೆಗೆಯುವಂತೆ ಆದೇಶಿಸಿದ ನಂತರ ಲೇಖಕರು ಚಿತ್ರವನ್ನು ತೆಗೆದು, "ಇನ್ನು ಮುಂದೆ ತನಗೆ ಬರೆಯುವುದು ಬೇಡವೆನಿಸುತ್ತಿದೆ" ಎಂದು status ಹಾಕಿಕೊಂಡಿದ್ದರು. ಇದೇ ರೀತಿ ಕಳ್ಳತನವಾದರೆ ನನ್ನಂತವರಿಗೂ ಇನ್ನು ಮುಂದೆ ಚಿತ್ರವನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಮನಸ್ಸು ಬಾರದೇನೋ! ನಾನೇನಾದರೂ ನನ್ನ ಚಿತ್ರಕ್ಕೆ ಆ ಪತ್ರಿಕೆಯ ಒಂದು ಬರಹ ಹೊಂದುತ್ತದೆ ಎಂದು ಅವರ ಅನುಮತಿಯಿಲ್ಲದೇ ಅದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದರೆ ಪತ್ರಿಕೆಯವರು ಸುಮ್ಮನಿರುತ್ತಿದ್ದರೇ?

ಇದರ ಬಗ್ಗೆ ನನ್ನ ಆಕ್ಷೇಪ ವ್ಯಕ್ತ ಪಡಿಸಿದಾಗ "ವಿಷಾದವಿದೆ"  ಎಂಬ ವಿಷಯದೊಂದಿಗೆ ಸಂಪಾದಕರು ಒಂದು ದಿನದ ನಂತರ ಪತ್ರಿಸಿದ್ದರು. ಅವರ ಪ್ರತಿಕ್ರಿಯೆಯಲ್ಲಿ ತಮ್ಮ ಸಮರ್ಥನೆಯಿತ್ತೇ ಹೊರತು ತಾವು ಮಾಡಿದ್ದು ತಪ್ಪು, ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂಬುದರ ಕುರಿತು ಒಂದು ವಾಕ್ಯವೂ ಇಲ್ಲ. ನಿಮಗೆ ಕ್ರೆಡಿಟ್ ಕೊಡಬೇಕಿತ್ತು ಎನ್ನುವುದು ಅವರ ಅಭಿಪ್ರಾಯವೇ ಹೊರತು ನನ್ನ ಅಪ್ಪಣೆ ಪಡೆಯಬೇಕಿತ್ತೆಂಬ ತಿಳಿವು ಅವರಿಗಿಲ್ಲ.

ನಿಮಗೂ ಮುಂದೊಂದು ದಿನ ಈ ಪರಿಸ್ಥಿತಿ ಎದುರಾಗಬಹುದು. ಪತ್ರಿಕೋದ್ಯಮದವರ ಈ ನಡವಳಿಕೆಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳುವುದೊಳಿತು.

Tuesday, May 10, 2011

ಸಾಂಪ್ರದಾಯಿಕ ಕೃಷಿಯಿಂದ ಸಹಜ ಕೃಷಿಯೆಡೆಗೆ

DSC_2231
ಬೇಸಿಗೆಯಲ್ಲಿ ನೀರು ಹನಿಸುವುದು ಬಿಟ್ಟು ಬೇರೆ ಆರೈಕೆಯಿಲ್ಲದ ತೆಂಗಿನ ತೋಟ.


“ಐದು ವರ್ಷದ ಹಿಂದೆ ೧೫ ದೇಸೀ ತಳಿಯ ನಿಂಬೆ ಗಿಡಗಳನ್ನು ನಾಟಿ ಮಾಡಿಸಿದ್ದೆ. ಕೊಟ್ಟಿಗೆ ಗೊಬ್ಬರ, ನೀರು, ಆರೈಕೆಯಲ್ಲಿ ಬೆಳೆದ ಗಿಡಗಳು ಸುಮಾರು ೨ ವರ್ಷ ಚೆನ್ನಾಗಿಯೇ ಫಸಲು ಕೊಟ್ಟಿತು. ಮುಂದಿನ ದಿನಗಳಲ್ಲಿ ಗಿಡಗಳು ಒಂದೊಂದಾಗಿ ಸೊರಗಲಾರಂಭಿಸಿದವು. ಇದೇ ಸಮಯದಲ್ಲಿ ಬೇಸಾಯ ಕಷ್ಟವೆಂದು ನನ್ನ ೬.೫ ಎಕರೆ ತೋಟವನ್ನು ಮಾರಲು ಹೊರಟಿದ್ದೆ. ಆದರೆ ಬೇಲಿಯ ಬದಿಯಲ್ಲಿದ್ದ ನಾನೇ ನಾಟಿ ಮಾಡಿ ಮರೆತಿದ್ದ ಗಿಡವೊಂದು ಕೃಷಿಯ ಬಗೆಗಿನ ನನ್ನ ನೋಟವನ್ನು ಬದಲಾಯಿಸಿದು. ಆರೈಕೆಯಲ್ಲಿ ಬೆಳೆಸಿದ್ದ ನಿಂಬೆ ಗಿಡಗಳು ಸೊರಗಿದ್ದರೆ ಬೇಲಿಯ ಬದಿ ನೆಟ್ಟು ಮರೆತಿದ್ದ ನಿಂಬೆಗಿಡ ಚೆನ್ನಾಗಿಯೇ ಬೆಳೆದಿತ್ತು ಅಲ್ಲದೇ ಫಸಲೂ ಚೆನ್ನಾಗಿಯೇ ಕೊಡಲಾರಂಭಿಸಿತ್ತು.”  ರವಿಯವರು (೪೬) ಸಹಜ ಕೃಷಿಯತ್ತ ಒಲವು ತೋರಿಸಲು ಕಾರಣವಾದ ಘಟನೆಯನ್ನು ತಿಳಿಸಿದರು.

DSC_2229
ಹೊಸ ಸದಸ್ಯನ ಸಂಭ್ರಮದಲ್ಲಿ ರವಿ

ಬೆಂಗಳೂರಿನಲ್ಲಿ ಸಿಮೆಂಟ್ ವ್ಯಾಪಾರಿಯಾಗಿದ್ದ ರವಿಯವರು ೨೫ ವರ್ಷಗಳ ಹಿಂದೆ ಎಕರೆಗೆ ೧೫,೦೦೦ ರೂಪಾಯಿಗಳಂತೆ  ಈಗಿನ ಬೆಂಗಳೂರು-ಕನಕಪುರ ರಸ್ತೆಯಲ್ಲಿನ ಬೋಳಾರೆ ಎಂಬ ಹಳ್ಳಿಯಲ್ಲಿ ೬.೫ ಎಕರೆ ಜಮೀನು ಖರೀದಿಸಿದ್ದರು. ಕಲ್ಲು ಬಂಡೆಗಳಿದ್ದ ಜಾಗವನ್ನು ಹಸನುಗೊಳಿಸಿ, ಕೆಂಪು ಮಣ್ಣಿನ ಸುಮಾರು ೫ ಎಕರೆ ಜಾಗದಲ್ಲಿ ದೇಸೀ ತೆಂಗಿನ ಸಸಿಗಳನ್ನು ನಾಟಿ ಮಾಡಿಸಿದ್ದರು. ನೆರಳಿಗಾಗಿ ಅಲ್ಲಲ್ಲಿ ಮಾವು, ಹಲಸು, ತೇಗ, ಸಿಲ್ವರ್ ಓಕ್ ಮರಗಳನ್ನೂ ಹಾಕಿಸಿದ್ದಾರೆ. ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಿ, ತೋಡಿನ ಮೂಲಕ ಹಾಯಿಸುತ್ತಾರೆ. ಸುಮಾರು ೫ ವರ್ಷಗಳ ಹಿಂದಿನವರೆಗೂ ಉಳುವುದು, ಗೊಬ್ಬರ ಹಾಕಿಸುವುದು ಒಂದು ಸಮಸ್ಯೆಯಾಗಿರಲಿಲ್ಲ. ನಂತರದ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ತೋಟವನ್ನು ನಿಭಾಯಿಸುವುದು ಕಷ್ಟವಾಗುತ್ತಾ ಹೋಯಿತು.

ಒಂದು ಕಡೆಯಲ್ಲಿ ಸಿಮೆಂಟ್ ವ್ಯಾಪಾರ, ಇನ್ನೊಂದು ಕಡೆ ದೂರದ ಹಳ್ಳಿಯಲ್ಲಿನ ಕೃಷಿ ನಿಭಾಯಿಸುವುದು ಕಷ್ಟವಾಗಿ ತೋಟ ಮಾರುವ ನಿರ್ಧಾರ ಕೈಗೊಂಡರು. ಆದರೂ ಹಲವು ವರ್ಷಗಳ ತೋಟದೊಂದಿಗಿನ ಒಡನಾಟ ಹೊಸ ಪ್ರಯೋಗಕ್ಕೆ ಪ್ರೇರೇಪಿಸುತ್ತಿತ್ತು. ನಿಂಬೇ ಗಿಡದ ಘಟನೆಯಲ್ಲದೇ, “ರಸ್ತೆ ಬದಿಯ ಮರಗಳು, ಕಾಡಿನಲ್ಲಿ ಬೆಳೆವ ಮರಗಳು ಯಾವುದೇ ಪೋಷಣೆಯಿಲ್ಲದೇ ಬೆಳೆಯಬಹುದಾದರೆ ನನ್ನ ತೋಟದಲ್ಲಿ ಯಾವುದೇ ಪೋಷಣೆಯಿಲ್ಲದೇ ಮರಗಳು ಏಕೆ ಬೆಳೆಯಲಾರದು? ”  ಎಂಬಂತಹ ವಿಚಾರ ಸರಣಿಯಿಂದಾಗಿ ತೋಟ ಮಾರುವ ಮೊದಲು ಸಹಜ ಕೃಷಿಯ ಪ್ರಯೋಗಕ್ಕೆ ಸಿದ್ಧರಾದರು.

ಮುಂದಿನ ವರ್ಷದಿಂದ ಉಳುವುದು ಗೊಬ್ಬರವುಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ತೋಟದಲ್ಲಿಯೇ ಸಿಗುವ ತೆಂಗಿನ ಸಿಪ್ಪೆ, ಗರಿಗಳು, ಹಸಿರು ಸೊಪ್ಪಿನಿಂದ ತೋಟದ ಮೇಲ್ಮಣ್ಣನ್ನು ಮುಚ್ಚತೊಡಗಿದರು. ತೋಟದಲ್ಲಿ ಕ್ರಮೇಣ ಗೆದ್ದಲಿನ ಚಟುವಟಿಕೆ ಹೆಚ್ಚಾಗತೊಡಗಿತು. ಒಣಗಿದ ಕಸ ಕಡ್ಡಿ ತಿಂದ ಗೆದ್ದಲು, ಮಣ್ಣಿನಲ್ಲಿ ಹುದುಗಿದ್ದ ಎರೆಹುಳು ಮಣ್ಣನ್ನು ಉತ್ತಂತೆಯೇ ಹದಗೊಳಿಸತೊಗಿತು. ಕೆಲವು ಕಡೆ ಮೀರಿ ಬೆಳೆದ ಕಳೆಗಳನ್ನು ಮಾತ್ರ ಸವರಬೇಕಾಗುತ್ತಿತ್ತು. ಮುಂದಿನ ವರ್ಷಗಳಲ್ಲಿ ಕಳೆಗಳ ನಿಯಂತ್ರಣಕ್ಕೆ ಆಡನ್ನು ಸಾಕಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ತಾವು ಬೆಂಗಳೂರಿನಲ್ಲಿ ನೆಲೆಸಿದ್ದರಿಂದ ತೋಟದಲ್ಲಿ ಗುಡಿಸಲು ಕಟ್ಟಿಸಿ  ಇಬ್ಬರು ಕೃಷಿ ಕಾರ್ಮಿಕರನ್ನು ಕರೆತಂದರು. ಅವರಿಗೆ ಸಾಕಷ್ಟು ಕೆಲಸ ಒದಗಿಸುವ ಸಲುವಾಗಿ ೫ ಆಡಿನ ಜೊತೆಗೆ ೨೦ ಕೋಳಿಗಳನ್ನೂ ಖರೀದಿಸಿದರು. ತೋಟದಲ್ಲಿ ಮಿತಿಮೀರಿ ಬೆಳೆಯುತ್ತಿರುವ ಗೆದ್ದಲು ಕೋಳಿಗಳಿಗೆ ಉತ್ತಮ ಆಹಾರ ಎಂಬುದು ಅವರ ಯೋಚನೆಯಾಗಿತ್ತು. ಗಿರಿರಾಜ, ಫೈಟರ್, ನಾಟಿ ಹೀಗೆ ಕೋಳಿಯ ಆಯ್ಕೆಯಲ್ಲೂ ವೈವಿಧ್ಯತೆ.

DSC_2233
ಕೋಳಿಗಳಿಗೆ ಆಹಾರವಾಗಬಲ್ಲ ಗೆದ್ದಲು

“ಈ ಜಾತಿಯ ಆಡು ನೋಡಿ (ಜಾತಿ ಯಾವುದೆಂದು ತಿಳಿಯಲಿಲ್ಲ), ಒಂದು ವರ್ಷದಲ್ಲಿ ೪೦ ಕೆ.ಜಿ.ಯವರೆಗೆ ಬೆಳೆಯುತ್ತದೆ. ೧೦,೦೦೦ ರೂಪಾಯಿಯಂತೂ ಖಂಡಿತ. ಅಲ್ಲದೇ ಆಡು ಬಂದ ಮೇಲೆ ಕಳೆ ಕೀಳಿಸಿದ್ದೇ ಇಲ್ಲ. ತೋಟದಲ್ಲೆಲ್ಲಾ ಸುತ್ತಾಡಿ ಕಳೆ ತಿಂದು ಗೊಬ್ಬರ ಕೂಡ ಹಾಕತ್ತದೆ. ಕೋಳಿಗಳೂ ಅಷ್ಟೆ; ೨೦ ತಂದಿದ್ದು ಈಗ ೫೦ ಆಗಿದೆ. ಬೆಳೆದ ಕೋಳಿಗೆ ಇಲ್ಲಿಯೇ ೨೫೦-೩೦೦ ರೂಪಾಯಿ ಧಾರಣೆಯಿದೆ. ಅಲ್ಲದೇ ಮೊಟ್ಟೆಯೂ ಆದಾಯದ ಮೂಲ.”, ರವಿ  ತಮ್ಮ ಉಪಕಸುಬಿನ ಪ್ರಯೋಜನವನ್ನು ತಿಳಿಸಿದರು. ಕಾರ್ಮಿಕರಿಗೆ, ಈ ಉಪಕಸುಬಿಗೆ (ತೋಟದ ಮೇವಿನ ಜೊತೆಗೆ  ಅಲ್ಪ ಪ್ರಮಾಣದಲ್ಲಿ ಪಶು ಆಹಾರವನ್ನೂ ಕೊಡುತ್ತಾರೆ.) ತಿಂಗಳಿಗೆ ೬೦೦೦ ರೂಪಾಯಿಯವರೆಗೆ ವೆಚ್ಚ ಬರುತ್ತದೆ.ಈ ವೆಚ್ಚವನ್ನೆಲ್ಲಾ ಪಶುಸಂಗೋಪನೆಯೊಂದೇ ಭರಿಸಿ ಕುಟುಂಬದ ಆದಾಯದ ಹೆಚ್ಚಳಕ್ಕೂ ಕಾರಣವಾಗಿದೆ.  ಮೊದಲಿನಿಂದಲೂ ಕೀಟನಾಶಕ ಪ್ರಯೋಗಿಸಿಲ್ಲ, ಇಲ್ಲಿಯ ಹಕ್ಕಿಗಳೇ ಕೀಟ ನಿಯಂತ್ರಣ ಮಾಡುತ್ತಿವೆ.

DSC_2215
ಕಳೆ, ಕೀಟ ನಿಯಂತ್ರಿಸುತ್ತಿರುವ ಆಡು, ಕೋಳಿಗಳು

DSC_2232
ಗೊಂಚಲು ಗೊಂಚಲಾಗಿ ಹಿಡಿದ ತೆಂಗಿನ ಕಾಯಿ

ತೆಂಗಿನ ಕಾಯಿ, ಹಲಸು, ನಿಂಬೆ, ಚಿಕ್ಕು, ಮಾವು ಸಿಲ್ವರ್ ಓಕ್ ಮರದ ಕಟ್ಟಿಗೆ, ಹಿಪ್ಪು ನೇರಳೆ ಋತುಮಾನಕ್ಕನುಗುಣವಾಗಿ ವರ್ಷ ಪೂರ್ತಿ ಆದಾಯ. ಉತ್ತಿಲ್ಲ, ಗೊಬ್ಬರವುಣಿಸಿಲ್ಲವಾದರೂ ಯಾವುದರಲ್ಲೂ ಫಸಲು ಕಡಿಮೆಯಾಗಿಲ್ಲ. ಇನ್ನೊಂದು ೧೦ ವರ್ಷ ಕಳೆದರೆ ದೀರ್ಘಾವಧಿ ಬೆಳೆಗಳಾದ ತೇಗದ ಮರಗಳೂ ಆದಾಯ ಕೊಡಬಹುದು. ೨ ವರ್ಷಗಳ ಹಿಂದೆ ಸಿಮೆಂಟ್ ವ್ಯಾಪರವನ್ನು ಬಿಟ್ಟ ರವಿಯವರ ೪ ಜನರ ಕುಟುಂಬಕ್ಕೆ ಈಗ ಕೃಷಿಯೇ ಆದಾಯದ ಮೂಲ. ಈ ವರ್ಷದಲ್ಲಿ ತೆಂಗಿನ ಮರಗಳ ನಡುವೆ ಬಾಳೆ, ಶುಂಠಿ, ನುಗ್ಗೆ ಬೆಳೆಸುವ ಪ್ರಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. “ಈ ಜಾಗ ಮಾರಿಬಂದ ಹಣವನ್ನು ಬ್ಯಾಂಕ್ನಲ್ಲಿರಿಸಿ ಅದರ ಬಡ್ಡಿಯಿಂದ ಬದುಕಬಹುದಾದರೂ, ಕೃಷಿ ಆದಾಯ, ಉದ್ಯೋಗ, ಬಿಡುವು, ನೆಮ್ಮದಿ ಎಲ್ಲವನ್ನೂ ನೀಡುತ್ತಿದೆ”  ಎನ್ನುತ್ತಾರೆ ರವಿ.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)