Wednesday, December 31, 2008

ಉದ್ದ ಕಾಲಿನ ನೊಣ

ಉದ್ದ ಕಾಲಿನ ನೊಣ (long legged flies) ಸೂಕ್ಷ್ಮವಾಗಿ ಗಮನಿಸಿದಾಗ.






Kingdom: Animalia
Phylum: Arthropoda
Subphylum: Hexapoda
Class: Insecta
Subclass: Pterygota
Infraclass: Neoptera
Superorder: Endopterygota
Order: Diptera
Suborder: Brachycera
Infraorder: Asilomorpha
Superfamily: Empidoidea
Family: Dolichopodidae

Monday, December 22, 2008

ಪಂಜರದೊಳಗಿನ ಪ್ರಾಣಿಯ ಚಿತ್ರ ತೆಗೆಯಲೊಂದು ಸಲಹೆ

ಶಿವಮೊಗ್ಗದ ತಾವರೆಕೊಪ್ಪದಲ್ಲಿ ಪಂಜರದ ಒಳಗಿದ್ದ ನರಿಯ ಚಿತ್ರ. ಪಂಜರದ ಸಮೀಪ ಕ್ಯಾಮರಾ ಹಿಡಿದು (ಎಷ್ಟಾಗುತ್ತೋ ಅಷ್ಟು ಹತ್ರ), Aperture ದೊಡ್ಡದು ಮಾಡಿ (ಇಲ್ಲಿ f/೪.೦), ಫೋಕಲ್ ಲೆಂತ್ ಜಾಸ್ತಿ ಮಾಡಿದರೆ (ಜಾಸ್ತಿ ಜೂಮ್ -ಇಲ್ಲಿ ೫೧mm) ಈ ಚಿತ್ರದಲ್ಲಿರುವಂತೆ ಪಂಜರ ಔಟ್ ಆಫ್ ಫೋಕಸ್ ಆಗುತ್ತದೆ.

JACKLE

ಸೂಚನೆ: ಪ್ರಾಣಿಯ ಮನೋಭಾವವನ್ನು ತಿಳಿದು ಪಂಜರದ ಬಳಿ ಹೋಗಿ.

ಏಡಿಯ ಕಣ್ಣು ನೋಡಿದ್ದೀರಾ?

ಬೆರಗುಗಣ್ಣಿನಿಂದ ನೋಡುತ್ತಿರುವ ಏಡಿ
DSC05523

Sunday, December 21, 2008

ನಿಸರ್ಗದಲ್ಲಿ ರಿಸೇಶನ್

ಹಿನ್ನೆಲೆ:
ನಿಸರ್ಗದಲ್ಲಿ ಉತ್ಪಾದನೆಗಿಂತ ಬಳಕೆ ಜಾಸ್ತಿಯಾಗಿದ್ದು, ಈ ನಿಮಿತ್ತ ನಿಸರ್ಗ ಜಗತ್ತಿನ ಎಲ್ಲಾ ಜೀವಿಗಳ ಸಭೆ ಕರೆದು ಕೋಸ್ಟ್ ಕಟ್ಟಿಂಗ್ ಬಗ್ಗೆ ಸಮಾವೇಶ ನಡೆಸಿತ್ತು. ಉತ್ಪಾದನೆಗೆ ಯಾರ ಕೊಡುಗೆ ಎಷ್ಟು, ಯಾರ ಬಳಕೆ ಅತೀ ಹೆಚ್ಚು, ಹೇಗೆ ಈ ಸಂಕಷ್ಟದಿಂದ ಪಾರಾಗುವುದು ಎನ್ನುವುದೇ ಈ ಸಮಾವೇಶದ ಉದ್ದೇಶ. ಈ ಬಗ್ಗೆ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲಾ ಜೀವಿಗಳ ಪರಿಶೀಲನೆ ಮಾಡಿ ಈ ನಿರ್ಧಾರಕ್ಕೆ ಬರುತ್ತದೆ.

ತೀರ್ಮಾನ:
ನನಗೆ ಬಹಳ ಕಾಲದಿಂದ ಇಂತಹ ಪರಿಸ್ಥಿತಿ ಎಂದೂ ಎದುರಾದದ್ದಿಲ್ಲ, ಈ ರೀತಿಯ ಅವನತಿ ತೀರಾ ಇತ್ತೀಚೆಗಿನದ್ದು. ಹಾಗಾದರೆ ಇತ್ತೀಚೆಗೆ ಸೇರ್ಪಡೆಯಾದ ಜೀವಿ, ಅಂದರೆ ಜೈವಿಕ ಸರಪಳಿಯಲ್ಲಿನ ಕೊನೇಯ ಕೊಂಡಿಯಾದ ಮಾನವ ಇದಕ್ಕೆ ಕಾರಣನೇ? ನನ್ನ ಕಾಲಮಾನದ ದೃಷ್ಟಿಯಲ್ಲಿ, ಇನ್ನಿತರ ಜೀವಿಗಳ ಎದುರಿನಲ್ಲಿ ಮನುಜರು ಇನ್ನೂ ಶಿಶು. ಉಳಿದ ಜೀವಿಗಳಾದರೋ ತಮ್ಮ ತ್ಯಾಗಮಯ ಜೀವನದಿಂದ, ಒಂದಕ್ಕೊಂದು ಆಸರೆಯಾಗಿ ನನ್ನ ಸಂಪತ್ತನ್ನು ವೃದ್ಧಿಸುತ್ತಾ ಬಂದಿವೆ. ಅವುಗಳ ಬದುಕು ಕೂಡಾ ಎಷ್ಟು ಸರಳ. ದೈನಿಂದಿನ ಆವಶ್ಯಕತೆಯಾದ ಆಹಾರ, ಗಾಳಿ, ನೀರು, ಕೆಲವೊಂದು ಬಾರಿ ಅನನುಕೂಲ ಪರಿಸ್ಥಿತಿಯಲ್ಲಿ ಹೆಚ್ಚಿನ ಆಹಾರ ಸಂಗ್ರಹಿಸುವುದಲ್ಲದೇ ಅವುಗಳ ಬಳಕೆ ಉತ್ಪಾದನೆಗಿಂತ ಕಡಿಮೆ. ಆದರೆ ಮಾನವರು ಇದಕ್ಕೆ ವ್ಯತಿರಿಕ್ತ. ಆವಶ್ಯಕತೆಗಿಂತ ಅಧಿಕ ಬಳಕೆ, ಉತ್ಪಾದನೆ ಶೂನ್ಯ. ಈ ಹಿಂದೆ ಹೆಚ್ಚು ಕಡಿಮೆ ಡೈನೋಸಾರ್ಗಳೂ ಮಾಡಿದ್ದು ಇದನ್ನೇ ಅಲ್ಲವೇ? ಜೈವಿಕ ಸರಪಳಿಯಲ್ಲಿ ಕೊನೇಯ ಕೊಂಡಿಯಾದ ಅದನ್ನು ಕಿತ್ತೊಗೆದದ್ದರಿಂದ ನನಗಾವ ನಷ್ಟವೂ ಆಗಿಲ್ಲ. ಇತರ ಜೀವಿಗಳ ಉತ್ಪಾದನೆಯನ್ನು ಕೊಳ್ಳೆ ಹೊಡೆಯುತ್ತಾ, ಉಳಿದ ಸಮಯದಲ್ಲಿ ನನ್ನ ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡದೆ ವ್ಯರ್ಥ ಕಾಲಹರಣದಲ್ಲಿ ತೊಡಗುವ ಈ ಮಾನವರ ಕೊಂಡಿ ಕಳಚಿದರೆ ನನಗೆ ಲಾಭವಲ್ಲದೇ ನಷ್ಟ ಇದೆಯೇ?

ಪರಿಣಾಮ:
ರಿಸೇಶನ್, ಸರಳ ಜೀವನ ಮಿಕ್ಸ್ ಆಗಿ ಬಿದ್ದ ಕನಸು, ಮುಂದೇನಾಯ್ತೋ ನೀವೇ ಊಹಿಸಿಕೊಳ್ಳಿ.

Tuesday, December 16, 2008

ಆಭರಣ

ನಿಸರ್ಗ ರಚಿಸಿದ ಆಭರಣ, ಧರಿಸಲಾಗದು, ಕಣ್ಮನ ತುಂಬಿಕೊಳ್ಳಬಹುದಷ್ಟೆ - ಕೂರ್ಗಿನ ಟೀ ಎಸ್ಟೇಟಿನಲ್ಲಿ ಮುಂಜಾನೆ ಕಂಡ ಒಂದು ಕಲಾಕೃತಿ.


ಶಿವು ಅವರ ಕಾಮೆಂಟಿನ ನಂತರ:

Sunday, December 14, 2008

ಛಾಯಾಗ್ರಹಣ ಮತ್ತು ISO

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎಲ್ಲವೂ ಅಸ್ಪಷ್ಟ! ಬೆಳಕು ಕಡಿಮೆಯಾದ್ದರಿಂದ, ಫ್ಲಾಷ್ ಕೂಡ ಬಳಸದಿದ್ದುದರಿಂದ ನಿಮ್ಮ ಕ್ಯಾಮಾರದ Shutter Speed ಕಡಿಮೆಯಾದುದ್ದೇ ಇದಕ್ಕೆ ಕಾರಣ. ಕ್ಯಾಮರಾ ಹಿಡಿದ ನಮ್ಮ ಕೈ ಇಷ್ಟೊಂದು ದೀರ್ಘಾವಧಿಯವರೆಗೆ ಒಂದುಚೂರೂ ಚಲಿಸದೆ ಇರುವುದು ಕಷ್ಟ. ಇಂತಹ ಸಂದರ್ಭದಲ್ಲಿ ಟ್ರೈಪಾಡ್ ಅಥವಾ ಸ್ಥಿರವಾದ ವಸ್ತುವಿನ ಮೇಲೆ ಕ್ಯಾಮರಾ ಇರಿಸಿ ಚಿತ್ರ ತೆಗೆಯಬಹುದು. ಒಂದುವೇಳೆ ಇವೆರಡೂ ಇಲ್ಲದಿದ್ದಲ್ಲಿ? ಇಂತಹ ಸಂದರ್ಭದಲ್ಲಿ ಕ್ಯಾಮರಾದ ISO ಜಾಸ್ತಿ ಮಾಡಬಹುದು. ISO ಜಾಸ್ತಿ ಮಾಡಿದಂತೆಲ್ಲಾ ಹೆಚ್ಚಿನ Shutter Speed ಮೂಲಕ ಚಿತ್ರ ತೆಗೆಯಬಹುದು. ಹಾಗಿದ್ದಲ್ಲಿ ಎಲ್ಲಾ ಸಮಯದಲ್ಲೂ ISO ಜಾಸ್ತಿ ಇರಿಸಿಕೊಳ್ಳಬಹುದಲ್ಲಾ? ಆದರೆ ISO ಜಾಸ್ತಿ ಮಾಡಿದಂತೆಲ್ಲ ನಿಮ್ಮ ಚಿತ್ರದ ಗುಣಮಟ್ಟ ಕುಸಿಯುತ್ತದೆ.



ನೀವು ಈ ಹಿಂದೆ ಅನಲಾಗ್ ಕ್ಯಾಮರಾ ಉಪಯೋಗಿಸಿದ್ದಲ್ಲಿ, ಫಿಲ್ಮ್ ಕೊಳ್ಳುವಾಗ ಅದರ ಡಬ್ಬಿಯಲ್ಲಿ ೧೦೦, ೨೦೦, ೪೦೦ ಅಥವಾ ೮೦೦ ಮುಂತಾದ ಸಂಖ್ಯೆಯನ್ನು ಗುರುತಿಸಿರಬಹುದು. ಈ ಸಂಖ್ಯೆ ಬೆಳಕಿಗೆ, ಫಿಲ್ಮಿನ ಸಂವೇದನೆಯನ್ನು ಸೂಚಿಸುತ್ತದೆ. ಅಂದರೆ ಈ ಸಂಖ್ಯೆಯ ಬೆಲೆ ಕಡಿಮೆಯಾದಂತೆಲ್ಲಾ ಫಿಲ್ಮ್ ಚಿತ್ರವನ್ನು ಸೆರೆಹಿಡಿಯಲು ಹೆಚ್ಚಿನ ಕಾಲವಧಿ ತೆಗೆದುಕೊಳ್ಳುತ್ತದೆ. ಇದನ್ನೇ ಡಿಜಿಟಲ್ ಕ್ಯಾಮರಾಕ್ಕೆ ಅನ್ವಯಿಸುವುದಾದರೆ, ISO ಸೆನ್ಸರ್ನ್ ಸಂವೇದನೆ ಎನ್ನಬಹುದು. ISOವನ್ನು ೧೦೦, ೨೦೦, ೪೦೦, ೮೦೦, ೧೬೦೦ ಹೀಗೆ ಮೊದಲಾದ ಸಂಖ್ಯೆಯಿಂದ ಗುರುತಿಸುತ್ತಾರೆ. ISO ಹೆಚ್ಚು ಮಾಡಿದಂತೆಲ್ಲಾ ಹೆಚ್ಚಿನ Shutter Speed ಅಥವಾ ಕಡಿಮೆ Aperture ಮೂಲಕ ಚಿತ್ರ ತೆಗೆಯಲು ಅನುಕೂಲ.








ಈ ಮೇಲಿನ ಎರಡು ಚಿತ್ರ ಒಂದೇ ಕ್ಯಾಮಾರಾದಿಂದ ತೆಗೆದಿರುವುದು. ಮೊದಲನೆಯದ್ದು ISO ೮೦ರಲ್ಲಿ (ನನ್ನ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆ) ಹಾಗೂ ಎರಡನೆಯದ್ದು ISO ೧೦೦೦ದಲ್ಲಿ (ನನ್ನ ಕ್ಯಾಮರಾ ಒದಗಿಸುವ ಜಾಸ್ತಿ ಸಂಖ್ಯೆ) ತೆಗೆದದ್ದು. ಸುಲಭವಾಗಿ ಗುರುತಿಸುವಂತೆ ಮೊದಲನೆಯದ್ದಕ್ಕೆ ಹೋಲಿಸಿದಲ್ಲಿ ಎರಡನೆ ಚಿತ್ರದಲ್ಲಿ ಕಪ್ಪು ಚುಕ್ಕಿಗಳು (noise) ಜಾಸ್ತಿ ಇದೆ. ಕಪ್ಪು ಚುಕ್ಕಿಗಳು ಎರಡನೆಯ ಚಿತ್ರದ ಮಾಸಲು ಬಣ್ಣಕ್ಕೆ ಕಾರಣ. ಆದ್ದರಿಂದ ಸಾಮಾನ್ಯವಾಗಿ ಇದನ್ನು ನಮ್ಮ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆಗೆ ಹೊಂದಿಸಿಟ್ಟು ಉತ್ತಮ ಗುಣಮಟ್ಟದ ಚಿತ್ರವನ್ನು ನಿರೀಕ್ಷಿಸಬಹುದು. ಬೆಳಕು ಕಡಿಮೆಯಿದ್ದು ಫ್ಲಾಷ್ ಉಪಯೋಗಿಸಲು ಅವಕಾಶ ಇರದಿದ್ದಲ್ಲಿ ಅಥವಾ ಇಷ್ಟವಿರದಿದ್ದಲ್ಲಿ ISO ಜಾಸ್ತಿ ಮಾಡುತ್ತಾ ಹೋಗಬಹುದು.





ಜಾಸ್ತಿ ISO ಉಂಟುಮಾಡುವ ಈ ಕಪ್ಪು ಚುಕ್ಕಿಗಳನ್ನು, ವಿಷಯಕ್ಕೆ, ಮನೋಭಾವನೆಗೆ ತಕ್ಕಂತೆ ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದು. ಕಪ್ಪು ಬಿಳುಪು ಮತ್ತು ಹೆಚ್ಚಿನ ISO ಬಳಸಿ ತೆಗೆದ ಈ ಚಿತ್ರ, ವ್ಯಕ್ತಿಯ ಕಣ್ಣಿನ ಸುತ್ತ ಇರುವ ನೆರಿಗೆಗೆ ಪೂರಕವಾಗಿ ಒಂದು ರೀತಿಯ ಹಳೇಯ ಭಾವನೆ ಕೊಡುತ್ತದೆ.

Friday, December 12, 2008

ಎಲ್ಲವೂ ನಮಗಾಗಿ

ನನ್ನ ಮಿತ್ರನೊಬ್ಬ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ, ಆದ್ದರಿಂದ ಅವನ್ನು ತಿನ್ನುವುದು ಏನೂ ಅಪರಾಧವಲ್ಲ. ಮಾಂಸಾಹಾರ ಪ್ರಾಣಿ ಹಿಂಸೆ ಆದ್ರೆ ಸಸ್ಯಾಹಾರ ಸಸ್ಯ ಹಿಂಸೆ ಅಲ್ವೆ, ಅದಕ್ಕೆ ಕೂಡ ಜೀವ ಇರುತ್ತೆ ಅಂತ ಜಗದೀಶಚಂದ್ರ ಭೋಸರು ತೋರಿಸಿಕೊಟ್ಟಿಲ್ಲವೇ" ಎಂದು ನಾನ್ ವೆಜ್ ಹೋಟೆಲ್ನಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ನನ್ನನ್ನು ಪ್ರಶ್ನಿಸಿದ. ನಾನೇನೂ "ನಾನು ಮಾಂಸಾಹಾರಿ ಅಲ್ಲ, ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೀನಿ" ಅಂತ ಅವನ ಬಳಿ ಹೇಳಿಕೊಂಡಿರಲಿಲ್ಲ. ಆದರೂ ನಾನು ತಿನ್ನುತ್ತಾ ಇರೋ ಚಿತ್ರಾನ್ನ ಅವನಿಗೆ ಆ ರೀತಿ ಹೇಳ್ತೋ ಎನೋ. ಹಿಂದಿನಿಂದಲೂ ಕೇಳುತ್ತಾ ಬರುತ್ತಿದ್ದ, ಮಾನವ ಜನ್ಮ ಎಲ್ಲದಕ್ಕಿಂತ ಶ್ರೇಷ್ಠ ಎಂಬುದನ್ನು ಕಣ್ಮುಚ್ಚಿ ಒಪ್ಪಿಕೊಂಡ ನನಗೆ ಇವನು ಹೇಳಿದ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ" ಎಂಬ ಮಾತೂ ಸರಿಯಾಗಿ ಕಾಣಿಸಿತು. ನಂತರ ಆ ವಿಷಯದ ಮೇಲೆ ಮಂಥನ ನಡೆಸಿದಾಗ ಕಂಡುಕೊಂಡ ಸತ್ಯದ ಕೆಲವು ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ.



ಕೋಳಿ: ಮಾಂಸವನ್ನೊಳಗೊಂಡಂತೆ ಅದರ ತತ್ತಿಯನ್ನು ಕೂಡಾ ತಿನ್ನಬಹುದಾಗಿದೆ. ಇದರ ಹಿಕ್ಕೆ ವ್ಯವಸಾಯಕ್ಕೆ ಉತ್ತಮ ಗೊಬ್ಬರವೂ ಹೌದು.

ಪಾರಿವಾಳ: ಬ್ಯಾಡ್ ಮಿಂಟನ್ನಂತಹ ಕ್ರೀಡೆಗಳಲ್ಲಿ ಶಟಲ್ ಕಾಕ್ ತಯಾರಿಸಲು ಇದರ ಪುಕ್ಕವನ್ನು ಉಪಯೋಗಿಸಬಹುದು.

ಕಾಗೆ: ಶ್ರಾದ್ಧದಲ್ಲಿ ಹಾಕುವ ಪಿಂಡವನ್ನು ಮೃತರಿಗೆ ತಲುಪಿಸಲು ಸಹಾಯಕ.

ಗಿಳಿ: ಪಂಜರದಲ್ಲಿರಿಸಿ ಮನೆಯ ಅಲಂಕಾರಕ್ಕೆ ಉಪಯುಕ್ತ, ಮನೆಯಲ್ಲಿ ಒಬ್ಬರೇ ಕುಳಿತು ಬೇಸರವಾಗುವಂತಹ ಸಂದರ್ಭದಲ್ಲಿ ಇವಕ್ಕೆ ಮಾತನ್ನು ಕಲಿಸಿ ಸಂಭಾಷಣೆ ನಡೆಸಬಹುದು.ಅದೂ ಅಲ್ಲದೇ ನಿಮ್ಮ ಭವಿಷ್ಯವನ್ನು ಕೂಡ ಇದು ತಿಳಿಸಬಲ್ಲದು.

ನವಿಲು: ಗಂಡು ನವಿಲಿನ ಗರಿಯನ್ನು ಬೀಸಣಿಗೆಯಂತಹ ಅಲಂಕಾರಿಕ ವಸ್ತುವಿಗೆ ಮೆರುಗು ನೀಡಲು ಬಳಸಬಹುದು.

ಗೂಬೆ: ಪ್ರತ್ಯಕ್ಷ ಪ್ರಯೋಜನ ಇಲ್ಲದಿದ್ದರೂ ಊಟ ಮಾಡದ, ಹಟ ಮಾಡುವ ಮಕ್ಕಳಿಗೆ ಹೆದುರಿಸಲು ಮತ್ತು ಬೈಗಳವಾಗಿ ಇದರ ಹೆಸರನ್ನು ಬಳಸಬಹುದು.

ಕುರಿ: ಮಾಂಸಕ್ಕಾಗಿ ಹಾಗೂ ಉಣ್ಣೆಗಾಗಿ

ಹೋರಿ, ಕೋಣ: ಉಳಲು ಮತ್ತು ಸಾರಿಗೆಗೆ ಉಪಯೋಗವಾದರೂ ಈಗ ಟ್ರಾಕ್ಟರ್ ಬಂದುದರಿಂದ, ಎಮ್ಮೆ, ದನಗಳ ಕೃತಕ ಗರ್ಭದಾರಣೆಗಾಗಿ ಬೀಜ ಸಂಗ್ರಹಕ್ಕೆ ಉಪಯೋಗಿಸಬಹುದು. ಸತ್ತ ನಂತರ ಇವುಗಳ ಚರ್ಮ ಡೋಲು ಮಾಡಲು ಉಪಯುಕ್ತ.

ದನ: ಹಾಲು ಪ್ರಮುಖ ಉಪಯೋಗವಾದರೂ, ಸಗಣಿಯನ್ನು ಗೊಬ್ಬರಕ್ಕೋ, ಗ್ಯಾಸಿಗೋ, ಬೆರಣಿಗೋ ಮತ್ತು ಉಚ್ಚೆಯನ್ನು ಪಂಚಗವ್ಯದ ತಯಾರಿಕೆಗೆ ಹಾಗೂ ಮಧುಮೇಹದಂತಹ ಕಾಯಿಲಿಗೆ ಔಷಧವಾಗಿ ಬಳಸಬಹುದು.

ಆನೆ: ದೇವಸ್ಥಾನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೆರವಣಿಗೆಗೆ ಚೆಲುವು ಕೊಡಬಲ್ಲದು. ಮರ ಕಡಿದು ಅರಣ್ಯದಿಂದ ದಿಮ್ಮೆಗಳನ್ನು ಸಾಗಿಸಲು ತುಂಬಾ ಉಪಯುಕ್ತ.ಬಾಲದ ರೋಮವನ್ನು ಚಿನ್ನದೊಂದಿಗೆ ಉಂಗುರ ಅಥವಾ ಕೈಬಳೆ ಮಾಡಿಸಿಕೊಂಡರೆ ಆನೆಯ ಬಲ ಪ್ರಾಪ್ತಿಯಾಗುವುದು.

ಕುದುರೆ: ದ್ವಿಚಕ್ರ ವಾಹನದ ದೆಸೆಯಿಂದ ಇದರ ಸವಾರಿ ಕಡಿಮೆಯಾದರೂ ಜೂಜು, ಸರ್ಕಸ್ ಮೊದಲಾದ ಮನೋರಂಜನೆಗೆ ಉಪಯೋಗವಾಗುವುದು.

ನಾಯಿ: ಮನೆ ಕಾಯಲು ಹಾಗೂ ಮನೆಯಲ್ಲಿ ಬೇಸರ ಕಳೆಯಲು

ಬೆಕ್ಕು:ಇಲಿ ನಾಷಕ ಹಾಗೂ ಮನೆಯಲ್ಲಿ ಬೇಸರ ಕಳೆಯಲು

ಹುಲಿ, ಚಿರತೆ: ಕೊಂದು ಒಳಗಿನ ತಿರುಳು ಕೊರೆದು, ಜೊಂಡು ತುಂಬಿಸಿ ಅಲಂಕಾರಕ್ಕಾಗಿ ಉಪಯೋಗಿಸಬಹುದು. ಹಿಂದೆ ಋಷಿ ಮುನಿಗಳು ಇದರ ಚರ್ಮವನ್ನು ಧರಿಸಿಯೋ, ಆಸನವಾಗಿರಿಸಿಕೊಂಡೋ ತಪಸ್ಸು ಮಾಡುಲು ಉಪಯೋಗಿಸುತ್ತಿದ್ದರಂತೆ, ಇಂದು ಚರ್ಮವನ್ನು ಬಗೆಬಗೆಯ ಫೋಷಾಕು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ಉಗುರನ್ನು ಚಿನ್ನದೊಡನೆ ಬೆರೆಸಿ ಸರವನ್ನಾಗಿ ಮಾಡಿಕೊಂಡು ಹುಲಿಯ ಶೌರ್ಯ ಪಡೆಯಬಹುದು.

ನಾಗರ ಹಾವು: ನಾಗರ ಪಂಚಮಿಯಂದು ಪೂಜೆ ಸಲ್ಲಿಸಲು ಹಾಗೂ ಹಾವಾಡಿಗರ ಮನೋರಂಜನೆಯನ್ನು ನೋಡಲು ಉಪಯೋಗ.ಇದರ ಚರ್ಮವನ್ನು ಪರ್ಸು, ಬೆಲ್ಟು, ಚಪ್ಪಲಿಗಳಲ್ಲಿ ಬಳಸಬಹುದು.

ಕಪ್ಪೆ: ಕೊಯ್ದು ಅಂಗಾಂಗಗಳ ಅಭ್ಯಾಸ ಮಾಡಲು ಜೀವಶಾಸ್ತ್ರದ ವಿದ್ಯಾರ್ಥಿಗಳಿಗೆ ಮತ್ತು ಮಳೆಗಾಲದಲ್ಲಿ ಅನವಶ್ಯಕವಾಗಿ ಗದ್ದೆ, ಕೆರೆ ಕುಂಟೆಗಳಲ್ಲಿ ಕೂಗುವ ಇವನ್ನು ಹಿಡಿದು ವಿದೇಶಕ್ಕೆ ಮಾರುವುದರಿಂದ ಉತ್ತಮ ಆರ್ಥಿಕ ಲಾಭ ಇದೆ.

ಓತಿಕ್ಯಾತ: ಸೂರ್ಯ ದೇವನಿಗೆ ಹೀಯಾಳಿಸುವ ಅಥವಾ ಅಲ್ಲಾನಿಗೆ ಮೋಸ ಮಾಡಿದ ಇದನ್ನು ಕೊಂದು ಪುಣ್ಯ ಸಂಪಾದಿಸಬಹುದು.

ಮೃದ್ವಂಗಿ: ತಿರುಳು ತಿನ್ನಲು ಬರುವುದು ಸಾಮಾನ್ಯ ಉಪಯೋಗವಾದರೂ, ಇದರ ಕವಚದಿಂದ ಶಂಖ, ಕಪ್ಪೆ ಚಿಪ್ಪಿನ ಬಳೆ, ಓಲೆ, ಇನ್ನಿತರ ಪ್ರದರ್ಶನ ವಸ್ತುವನ್ನೂ ಮಾಡಲು ಬರುವುದು.

ಮೀನು: ತಿನ್ನಲು ಉಪಯೋಗ. ಮೀನಿನ ಯಕೃತ್ತಿನ ಎಣ್ಣೆಯನ್ನು ಔಷಧವಾಗಿಯೂ, ಹಿಂಡಿ ಉಳಿದ ಜಗಟಿಯನ್ನು ಹೊಗೆಸೊಪ್ಪಿನ ಕೃಷಿಗೂ ಬಳಸಬಹುದು. ತಿನ್ನಲು ಯೋಗ್ಯವಲ್ಲದ ಬಣ್ಣ ಬಣ್ಣದ ಮೀನುಗಳನ್ನು ಹಿಡಿದು, ಅಕ್ವೇರಿಯಂ ಒಳಗಿಟ್ಟು ಆನಂದಿಸಬಹುದು.

ಏರೋಪ್ಲೇನ್ ಚಿಟ್ಟೆ: ಹಿರಿಯರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲದಿದ್ದರೂ, ಮಕ್ಕಳು ಅದರ ಬಾಲಕ್ಕೆ ದಾರ ಕಟ್ಟಿ ಆಟವಾಡಬಹುದು.

ರೇಷ್ಮೆ ಹುಳು: ಕೋಶಾವಸ್ಥೆಗೆ ತಲುಪಿದ ನಂತರ ಇದನ್ನು ಕುದಿಸಿ ನವಿರಾದ ರೇಷ್ಮೆದಾರವನ್ನು ಪಡೆಯಬಹುದು.

ಜೇನು ಹುಳು: ದಿನವಿಡೀ ಕುಡಿದ ಮಕರಂದ ಜಾಸ್ತಿಯಾಗಿ ಗೂಡಿಗೆ ಮರಳಿ ವಾಂತಿಮಾಡಿದ್ದನ್ನು ಹಿಂಡಿ, ಜೇನುತುಪ್ಪವಾಗಿ ಬಳಸಬಹುದು.

ಮಿಂಚು ಹುಳು: ಟಾರ್ಚ್ ಇಲ್ಲದ ಸಂದರ್ಭದಲ್ಲಿ ಇವನ್ನು ಹಿಡಿದು ಪಾರದರ್ಶಕ ಲಕೋಟೆಯಲ್ಲಿ ಇರಿಸಿ, ಟಾರ್ಚ್ನಂತೆ ಬಳಸಬಹುದು.

ಈ ಮೇಲಿನ ಸತ್ಯ ನಿಮಗೆ ಮೊದಲೇ ಪ್ರಾಪ್ತವಾಗಿದ್ದಲ್ಲಿ ದಯವಿಟ್ಟು ನನ್ನ ದೂಷಿಸಬೇಡಿ.

ಲಾಲ್ ಬಾಗ್ನ ಒಂದು ಸಂಜೆ

Thursday, December 04, 2008

ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ ಹಾಳೆಯ ಮಧ್ಯದಲ್ಲಿ ಚೌಕಾಕಾರದ ಒಂದು ಆಕೃತಿ, ಮಧ್ಯದಲ್ಲಿ ತೆರೆದ ಬಾಗಿಲು, ಅದರ ಅಕ್ಕ ಪಕ್ಕದಲ್ಲಿ ಕಿಟಕಿ, ಅದರ ಸರಳು, ಹೆಂಚಿನದ್ದೊಂದು ಸೂರು, ಎರಡು ಮೆಟ್ಟಿಲು ನನ್ನ ಮನೆ ಇಲ್ಲಿಗೆ ಸಂಪೂರ್ಣ. ಆದರೆ ಇದೇ ಚಿತ್ರವನ್ನು ಎಷ್ಟು ಬಾರಿ ಬಿಡಿಸುವುದು, ಮನೆಯ ಪಕ್ಕದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆನ್ನ. ಆದರೆ ಮಧ್ಯದಲ್ಲಿ ಮನೆ ಬಿಡಿಸಿದರೆ ನದಿಗೆ ಜಾಗ ಎಲ್ಲಿ? ಮನೆಯನ್ನು ಕೊಂಚ ಬಲಕ್ಕೆ ಸರಿಸಿದರೆ ಪಕ್ಕದಲ್ಲೊಂದು ನದಿ ಬಿಡಿಸಬಹುದು. ಬರೀ ನದಿ ಇದ್ದರೆ ಸಾಕೇ,ಹಿನ್ನೆಲೆಯಲ್ಲಿ ಗುಡ್ಡ ಬೆಟ್ಟ ಇದ್ದರೆ? ಮತ್ತೆ ಜಾಗದ ಅಭಾವ, ಮನೆಯನ್ನು ಸ್ವಲ್ಪ ಕೆಳಕ್ಕೆ ತಂದು, ಹಿನ್ನೆಲೆಯಲ್ಲಿ ಗುಡ್ಡ ಬರೆದು, ಪಕ್ಕದಲ್ಲಿ ಅಂಕುಡೊಂಕಾಗಿ ಹರಿಯುವ ನದಿಯ ಚಿತ್ರ ಬರೆದರೆ? ಇವನ್ನೆಲ್ಲಾ ಸೇರಿಸಿ ಚಿತ್ರ ಬರೆದಾಗ ಮಧ್ಯದಲ್ಲಿ ಒಂಟಿಯಾಗಿ ಕೂತ ಹಳೇಯ ಚಿತ್ರಕ್ಕಿಂತ, ಇದು ಚೆನ್ನಾಗಿ ಕಾಣಿಸಿತು.



ಕಾರಣ, ನನಗೆ ತಿಳಿಯದಂತೆಯೇ ನಾನಿಲ್ಲಿ ಚಿತ್ರ ಸಂಯೋಜನೆಯ ಒಂದು ನಿಯಮವನ್ನು ಪಾಲಿಸಿದ್ದಕ್ಕೆ ಮತ್ತು ಮೂಲ ವಿಷಯಕ್ಕೆ ಪೂರಕವಾದ ಇನ್ನಿತರ ವಿಷಯವನ್ನು ಬಳಸಿದ್ದರಿಂದ. ಈ ನಿಯಮದಂತೆ ಚಿತ್ರವನ್ನು ೨ ಅಡ್ಡ ಗೆರೆ, ೨ ಉದ್ದ ಗೆರೆ ಎಳೆದು ಸರಿಯಾದ ೯ ಭಾಗ ಮಾಡಿದರೆ, ಸಿಗುವ ಗೆರೆಗಳೊಂದಿಗೆ ಅಥವಾ ಅದು ಕೂಡುವ ಸ್ಥಳದಲ್ಲಿ ನಮ್ಮ ವಿಷಯವನ್ನು ಇರಿಸಬೇಕು. ಚಿತ್ರ ಪರಿಣತರ ಸಂಶೋಧನೆಯಿಂದ ಕಂಡು ಬಂದ ವಿಷಯವೇನೆಂದರೆ ಚಿತ್ರವನ್ನು ನೋಡುವವರ ದೃಷ್ಟಿ ಸ್ವಾಭಾವಿಕವಾಗಿ ಈ ೪ ಬಿಂದುವಿನ ಮೇಲೆ ಬೀಳುವುದು. ಆದ್ದರಿಂದ ನಮ್ಮ ಮೂಲ ವಿಷಯವನ್ನು ಫ್ರೇಮಿನ ಮಧ್ಯದಲ್ಲಿಡದೆ ನಾಲ್ಕು ಬಿಂದುವಿನಲ್ಲಿ ಒಂದು ಕಡೆ ಇರಿಸಬೇಕು, ಆಗ ವೀಕ್ಷಕರ ಮೇಲೆ ನಮ್ಮ ಚಿತ್ರ ಹೆಚ್ಚಿನ ಪರಿಣಾಮ ಬೀರುತ್ತದೆ.



ಈಗ ಹಿಂದೆ ಬರೆದ ಚಿತ್ರವನ್ನು ಇದೇ ನಿಯಮದಂತೆ ೯ ಪಾಲು ಮಾಡಿದರೆ, ಮನೆಯು ಕೆಳ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಸಂಧಿಸುವಲ್ಲಿದ್ದು, ನದಿ ಮೇಲಿನ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಕೂಡುವಲ್ಲಿ ಆರಂಭವಾಗಿ ಕೆಳಗಿನ ಅಡ್ಡ ರೇಖೆ ಮತ್ತು ಎಡ ಉದ್ದ ರೇಖೆ ಕೂಡುವಲ್ಲಿ ಹಾದು ಹೋಗುತ್ತದೆ. ಗುಡ್ಡದ ಶ್ರೇಣಿ ಮೇಲಿನ ಅಡ್ಡ ರೇಖೆಯೊಂದಿಗೆ ಸಾಗುತ್ತದೆ. ಈ ಕೆಳಗಿನ ಚಿತ್ರದಂತೆ




ನಾನು ಹೆಚ್ಚಾಗಿ ಒಂಟಿಯಾಗಿ ಪ್ರಯಾಣ ಮಾಡುವುದು ಜಾಸ್ತಿ. ಪಯಣಿಸುವಾಗಲೆಲ್ಲಾ ಈ ಬಾರಿಯಾದರೂ ಒಂದು ಚೆಲುವೆ ಬಳಿ ಕೂರಬಾರದೇ ಎಂದು ಕೊಂಡೇ ಹೋಗುತ್ತೇನೆ. ಕಳೆದ ತಿಂಗಳ ಪ್ರಯಾಣದಲ್ಲಿ ನನ್ನ ಅಭಿಲಾಷೆ ನಿಜವಾಯಿತು. ಆಕೆ, ಅದರಲ್ಲೂ ಆಕೆಯ ಕಂಗಳು ಎಷ್ಟು ಸುಂದರವಾಗಿತ್ತೆಂದರೆ ಚೀಲದಲ್ಲಿ ಹುದುಗಿದ್ದ ನನ್ನ ಕ್ಯಾಮರಾ ಹೊರಗೆ ತೆಗೆದು ಆಕೆಯ ಚಿತ್ರವನ್ನು ಇದೇ ನಿಯಮವನ್ನು ಗಮನದಲ್ಲಿರಿಸಿಕೊಂಡು ತೆಗೆದಾಗ ಮೂಡಿದ್ದು ಈ ಚಿತ್ರ.ಇಲ್ಲಿ ಆಕೆಯ ಎಡ ಕಣ್ಣು ಫ್ರೇಮಿನ ಬಲ ಮೇಲ್ತುದಿಯ ಬಿಂದುವಿನಲ್ಲಿ, ಬಲಗಣ್ಣು ಎಡ ಉದ್ದ ರೇಖೆಯಲ್ಲಿ ಹಾಗೂ ಬಾಯಿ ಬಲಗಡೆಯ ಕೆಳ ಬಿಂದುವಿನಲ್ಲಿದೆ.



ಪ್ರಾಣಿಯೋ, ಹಕ್ಕಿಯೋ, ಕೀಟವೋ, ನದಿಯೋ,ಗುಡ್ಡ ಬೆಟ್ಟವೋ, ಸಾಮಾನ್ಯವಾಗಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮುಖ ಎಂಬುದೊಂದಿರುತ್ತದೆ. ಸಾಮಾನ್ಯವಾಗಿ ಅದರ ಮುಖವನ್ನು ಅವಲಂಭಿಸಿ ಈ ನಾಲ್ಕು ಬಿಂದುವಿನಲ್ಲಿ ಅದಕ್ಕೆ ಸೂಕ್ತವಾದ ಸ್ಥಳದಲ್ಲಿ ವಿಷಯವನ್ನು ಇರಿಸಬಹುದು. ಮುಖ ಯಾವ ದಿಕ್ಕಿನಲ್ಲಿ ಇರುತ್ತದೆಯೋ ಆ ದಿಕ್ಕಿನಲ್ಲಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕು. ಈ ಕೆಳಗಿನ ಚಿತ್ರದಲ್ಲಿ ಕೀಟದ ಮುಖ ಎಡಗಡೆಗೆ ನೋಡುತ್ತಿದ್ದು, ಕೊಂಚ ಕೆಳಗೆ ಬಾಗಿದ್ದರಿಂದ ಇದನ್ನು ಚಿತ್ರದಲ್ಲಿ ಬಲಗಡೆಯ ಮೇಲ್ತುದಿಯಲ್ಲಿ ಇರಿಸಿದ್ದೇನೆ. ಅಂತೆಯೇ ಹಾರಲು ಹೊರಟ ಹಕ್ಕಿಯ ಮುಖ ಮೇಲಕ್ಕಿರುವುದರಿಂದ ಅದರ ಮುಖದ ದಿಕ್ಕನ್ನು ಅನುಸರಿಸಿ ಅದನ್ನು ಕೆಳಗಡೆಯ ಎಡ ಅಥವಾ ಬಲ ಬಿಂದುವಿನಲ್ಲಿ ಇರಿಸಬಹುದು.




ಅಂತೆಯೇ ಲ್ಯಾಂಡ್ ಸ್ಕೇಪುಗಳಲ್ಲಿ ಆಕಾಶ ಮತ್ತು ಭೂಮಿಯ ಎಲ್ಲೆಯನ್ನು ನಿರ್ಧರಿಸಬಹುದು. ನಿಮ್ಮ ವಿಷಯ ಸುಂದರವಾದ ಮರುಭೂಮಿಯೋ, ಕಾಡೋ, ನದಿಯೋ, ಸಮುದ್ರವೋ ಆಗಿದ್ದಲ್ಲಿ ಅದನ್ನು ಫ್ರೇಮಿನ ೨/೩ ರಷ್ಟರಲ್ಲಿ ಚಿತ್ರಿಸಿ ಉಳಿದ ೧/೩ ರಷ್ಟನ್ನು ಆಕಾಶಕ್ಕೆ ಮೀಸಲಾಗಿಡಬಹುದು. ಈ ಚಿತ್ರದಲ್ಲಿ ಮರದ ರೆಂಬೆ ಮತ್ತೆ ನಡುವಿನಿಂದ ತೂರಿ ಬರುತ್ತಿರುವ ಸೂರ್ಯ ನನ್ನ ವಿಷಯವಾದ್ದರಿಂದ ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಸಮುದ್ರವನ್ನು ಬರೀ ೧/೩ರಷ್ಟು ಇರುವಂತೆ ಸಂಯೋಜಿಸಿದ್ದೇನೆ.ಇಲ್ಲಿಯೂ ಕೂಡ ಸೂರ್ಯನನ್ನು ನಿಯಮಕ್ಕೆ ಅನುಗುಣವಾಗಿ ಕೂರಿಸಿರುವುದನ್ನು ಗಮನಿಸಬಹುದು.



ಸಾಮಾನ್ಯವಾಗಿ ಮೇಲೆ ಹೇಳಿದಂತೆ ಸಂಯೋಜಿಸಿದರೆ ನಿಮ್ಮ ಚಿತ್ರ ಚೆನ್ನಾಗಿ ಕಾಣಿಸುವುದಾದರೂ ಇದನ್ನು ಪಾಲಿಸಿದರೆ ಮಾತ್ರ ನಿಮ್ಮ ಚಿತ್ರ ಚೆನ್ನಾಗಿದೆ ಇಲ್ಲವಾದಲ್ಲಿ ಇಲ್ಲ ಎಂದೇನೂ ಇಲ್ಲ. ವಿಷಯಕ್ಕೆ ತಕ್ಕಂತೆ ಈ ನಿಯಮವನ್ನು ಮುರಿದು ನಿಮ್ಮ ಪ್ರತಿಭೆಯನ್ನು ತೋರಬಹುದು.



ಸೂಚನೆ: ಆಟೋಫೋಕಸ್ ಉಪಯೋಗಿಸುವವರಾದಲ್ಲಿ, ಕ್ಯಾಮರಾ ಸಾಮಾನ್ಯವಾಗಿ ಮಧ್ಯದ ಸ್ಥಳವನ್ನು ಫೋಕಸ್ ಮಾಡುವುದರಿಂದ ಈ ನಾಲ್ಕು ಬಿಂದುವಿನಲ್ಲೊಂದರಲ್ಲಿ ಕೂರಿಸ ಹೊರಟ ನಿಮ್ಮ ವಿಷಯ ಅಸ್ಪಷ್ಟವಾಗಿ ಮೂಡಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವಿಷಯವನ್ನು ಮಧ್ಯದಲ್ಲಿರಿಸಿ ಕ್ಯಾಮರಾದ ಬಟನ್ನನ್ನು ಅರ್ಧ ಅಮುಕಿ,ಹಾಗೆಯೇ ಹಿಡಿದು ಕೊಂಡು ಮರು ಸಂಯೋಜಿಸಿ ಚಿತ್ರ ತೆಗೆಯಬಹುದು.

Saturday, November 29, 2008

Aperture ಮತ್ತು Depth of Field

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ ಕ್ಯಾಮರಾದ ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಅಧಿಕವಾಗಿರುತ್ತದೆ. ಬೆಳಕಿಂಡಿಯನ್ನು ಛಾಯಾಗ್ರಹಣದಲ್ಲಿ f/2.8, f/4, f/5.2, f/8 ಎಂದು 'f-stops'ಎಂಬ ಮಾನ ದಂಡದಿಂದ ಅಳೆಯುತ್ತಾರೆ. ಇಲ್ಲಿ 'f-stops'ನ ಬೆಲೆ ಜಾಸ್ತಿಯಾದಂತೆ ಬೆಳಕಿಂಡಿಯ ಗಾತ್ರ ಕಿರಿದಾಗುತ್ತದೆ ಮತ್ತು ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ f/8 ಗಿಂತ f/2.8ನ ಬೆಳಕಿಂಡಿ ದೊಡ್ಡದು.



ಆದರೆ ಈ ಬೆಳಕಿಂಡಿ ಕೇವಲ ಬೆಳಕನ್ನು ನಿಯಂತ್ರಿಸುವುದೂ ಅಲ್ಲದೇ "Depth of Field"ನ ಮೇಲೂ ತನ್ನ ಪರಿಣಾಮ ಬೀರುತ್ತದೆ. ಪಕ್ಕದ ಚಿತ್ರದಲ್ಲಿ ಮರದೆಲೆಯ ಚಿಗುರು ಸ್ಪುಟವಾಗಿ ಕಾಣಿಸಿ ಹಿಂದಿನ ಗುಡ್ಡವು ಅಸ್ಪಷ್ಟವಾಗಿದೆ. ಅಂದರೆ ಈ ಚಿತ್ರದಲ್ಲಿ "Depth of Field"ಕಡಿಮೆಯಿದೆ. ಇಲ್ಲಿ ಚಿಗುರು ನನ್ನ ಪ್ರಧಾನ ವಿಷಯವಾಗಿದ್ದು, ಚಿತ್ರ ನೋಡುವವರ ಗಮನ ಹಿನ್ನೆಲೆಗೆ ಸರಿಯುವುದನ್ನು ತಡೆಯಲು ಅದನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5. ಅಂದರೆ ಬೆಳಕಿಂಡಿ ಹೆಚ್ಚಾದಂತೆಲ್ಲಾ "Depth of Field" ಕಡಿಮೆಯಾಗುತ್ತದೆ. ಇದೇ ಚಿತ್ರವನ್ನು f/8 ನಿಂದ ತೆಗೆದಿದ್ದರೆ "Depth of Field" ಜಾಸ್ತಿಯಾಗಿ ಗುಡ್ಡವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.









ಈ ಮೇಲಿನ ಎರಡು ಚಿತ್ರಗಳಲ್ಲಿ ಮಿಡತೆ ನನ್ನ ವಿಷಯ. ಆದರೆ ಸೂಕ್ಷವಾಗಿ ಗಮನಿಸಿದಾಗ ಇವೆರಡರ ನಡುವಿನ "Depth of Field" ವ್ಯತ್ಯಾಸ ತಿಳಿಯುತ್ತದೆ. ಮೊದಲ ಚಿತ್ರದಲ್ಲಿ ಕಣ್ಣು, ಮುಖ ಮಾತ್ರ ಸ್ಪುಟವಾಗಿದ್ದರೆ, ಎರಡನೆಯದರಲ್ಲಿ ಕಣ್ಣು, ಕಾಲು, ರೆಕ್ಕೆ ಎಲ್ಲವೂ ಸ್ಪುಟವಾಗಿದೆ. ಮೊದಲ ಚಿತ್ರಕ್ಕೆ f/3.5 ಹಾಗೂ ಎರಡನೆಯದ್ದಕ್ಕೆ f/8 ಬಳಸಿದ್ದರಿಂದ ಈ ವ್ಯತ್ಯಾಸ.



ಸಾಮಾನ್ಯವಾಗಿ "landscape"ನಲ್ಲಿ
ಮುನ್ನೆಲೆ, ನಡುನೆಲೆ('middle ground'ಗೆ ಪರ್ಯಾಯವಾಗಿ), ಹಿನ್ನೆಲೆ ಎಲ್ಲವೂ ಸ್ಪುಟವಾಗಿರಬೇಕಾದ್ದರಿಂದ ಕಡಿಮೆ ಬೆಳಕಿಂಡಿಯನ್ನು ಉಪಯೋಗಿಸಬಹುದು. ಕೆಳಕಿನ ಚಿತ್ರದಲ್ಲಿ ಮುನ್ನೆಲೆಯ ಮಂಟಪ, ನಡುನೆಲೆಯ ಹುಲು ಮಾನವರು, ಹಿನ್ನೆಲೆಯ ಬೆಟ್ಟ ಎಲ್ಲವೂ ಸ್ಪುಟವಾಗಿ ಕಾಣಿಸಲು f/8 ಬಳಸಿದ್ದೇನೆ.



portrait ಮತ್ತು Macro ದಲ್ಲಿ ಕೇವಲ ವಿಷಯಕ್ಕೆ ಮಹತ್ವ ಕೊಡುವುದರಿಂದ ಹೆಚ್ಚಿನ ಬೆಳಕಿಂಡಿಯನ್ನು ಉಪಯೋಗಿಸಿ ಉಳಿದದ್ದನ್ನು ಅಸ್ಪಷ್ಟವಾಗಿಸಬಹುದು. ಈ ಕೆಳಗಿನ ಚಿತ್ರದಲ್ಲಿ ಹಿನ್ನೆಲೆಯನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5


ನನ್ನ ಮೃದಂಗಾಭ್ಯಾಸ

ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿದವಳಲ್ಲ. ಆದ್ದರಿಂದ ಸಂಗೀತದ ಗಂಧ ಗಾಳಿ ಇಲ್ಲದೇ ಇದ್ದರೂ, ಮನೆಯಲ್ಲಿ ಅಪ್ಪ ಹಾಕುತ್ತಿದ್ದ ಕಾಳಿಂಗರಾಯರದ್ದೊ, ಅಶ್ವಥ್ಥರದ್ದೋ, ರಫಿಯದ್ದೋ ಗಾನ ಸುಧೆಯಲ್ಲಿ ತೇಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಬ್ಬನೇ ಹಾಡಿಕೊಂಡು ಚಪಲ ತೀರಿಸಿಕೊಂಡದ್ದು ಇದೆ. ಅಲ್ಲದೆ ಚಿಕ್ಕಂದಿನಲ್ಲಿ ಊರಲ್ಲಾಗುತ್ತಿದ್ದ ಬಯಲಾಟದ ಚಂಡೆ, ಮದ್ದಳೆ, ಭಾಗವತಿಗೆ ಕೇಳಿ ಮನೆಯಲ್ಲಿರುವ ಪಾತ್ರೆ, ಡಬ್ಬಿ ಸೌಟು ಹಿಡಿದುಕೊಂಡು ಅವರನ್ನು ಅನುಸರಿಸ ಹೋಗಿ ಅಮ್ಮನಿಂದ ಬೈಸಿಕೊಂಡದ್ದಿದೆ.



ಇಂಜಿನಿಯರ್ಗೆಂದು ಊರನ್ನು ಬಿಟ್ಟು, ಸ್ವತಂತ್ರವಾದ ನನ್ನ ಮನಸ್ಸಿಗೆ ಸಂಗೀತ ಕಲಿಯಬೇಕೆಂಬ ಹಂಬಲ ಒಂದು ಮೂಲೆಯಲ್ಲಿ ಮೊಳೆತಿತ್ತು.ಹುಟ್ಟಿನಿಂದಲೇ ಆಲಸಿಯಾದ ನಾನು ಯಾವ ಬಗೆಯ ಸಂಗೀತ, ಯಾವ ಗುರುಗಳಲ್ಲಿ ಕಲಿಯಬೇಕು ಎಂಬ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳದೇ ಸುಖವಾಗಿದ್ದೆ. ಹಂಬಲ ಜಾಸ್ತಿಯಾದಾಗ ಗುರುಗಳು ತಾನಾಗಿಯೇ ಒಲಿಯುತ್ತಾರೆ ಎಂಬ ಮಾತು ನನ್ನ ಜೀವನದಲ್ಲಿ ದಿಟವಾಯ್ತು. ನನ್ನ ವಿದ್ಯಾರ್ಥಿ ನಿಲಯದವನೇ ಆದ ರಾಮಮೂರ್ತಿ ತಬಲಾ ಕಲಿಯುವ ತನ್ನ ಹಂಬಲವನ್ನು ವ್ಯಕ್ತಪಡಿಸಿ, ಗುರುಗಳನ್ನೂ ಹುಡುಕಿರುವುದಾಗಿ ತಿಳಿಸಿದ. ತಬಲಾ ಆದರೆ ತಬಲಾ, ಎನೋ ಒಂದು ಕಲಿತರಾಯಿತು ಎಂದು ನಿರ್ಧರಿಸಿ ನಾನೂ ಅವನ ಜೊತೆ ಸೇರಿದೆ.



ನಮ್ಮ ಗುರುಗಳು ಎಂದರೆ ಸಂಗೀತದ ಮಹಾ ವಿದ್ವಾಂಸರು ಎಂದು ಭಾವಿಸಬೇಡಿ, ಅವರು ನಾವು ಕಲಿಯುತ್ತಿದ್ದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಬಿಡುವಿನ ವೇಳೆಯಲ್ಲಿ ಊರಲ್ಲಿ ಕೆಲವೊಮ್ಮೆ ನಡೆಯುವ ಭಾವಗೀತೆ, ಸುಗಮ ಸಂಗೀತಗಳಂತಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದರು. ಒಳ್ಳೆಯ ದಿನವೊಂದನ್ನು ಗೊತ್ತು ಮಾಡಿ, ಶಾರದಾ ಮಂದಿರಕ್ಕೆ ತೆರಳಿ, ಆಕೆಯ ಆಶೀರ್ವಾದ ಪಡೆದು, ಬರಿಗೈಯಲ್ಲಿ ಗುರುಗಳ ಮನೆಗೆ ಹೋದೆವು. ನಮ್ಮನ್ನು ಕಂಡು ಮೊದಲು ಹೇಳಿಕೊಡಲು ಒಲ್ಲೆ ಎಂದರೂ, ರಾಮಮೂರ್ತಿ ಪರಿಪರಿಯಾಗಿ ಕಾಡಿದ್ದರಿಂದ ಕೊನೆಗೆ ಒಪ್ಪಿಕೊಂಡರು. ವಾರಕ್ಕೆ ೨ ತರಗತಿ ಮಂಗಳವಾರ ಹಾಗೂ ಗುರುವಾರದಂದು, ತಿಂಗಳಿಗೆ ೭೫ರೂ ಶಿಕ್ಷಣಶುಲ್ಕ.ಶುಲ್ಕವನ್ನು ಕಲಿಕೆಯಲ್ಲಿ ನಮಗೆ ಶ್ರದ್ಧೆ ಇರಲಿ ಎಂದು ತೆಗೆದುಕೊಳ್ಳುತ್ತಿದ್ದರಲ್ಲದೇ ಅದರಿಂದ ತಮ್ಮ ಜೀವನ ಸಾಗಿಸುವ ಆವಶ್ಯಕತೆ ಅವರಿಗೆ ಇರಲಿಲ್ಲ.



ಅಂದಿನಿಂದಲೇ ನಮ್ಮ ಶಿಕ್ಷಣ ಆರಂಭವಾಯಿತು; ಮೊದಲಿಗೆ ಸಂಗೀತದ ಪರಿಚಯ. ನಾವು ತಿಳಿದಂತೆ ನಮ್ಮ ಗುರುಗಳು ತಬಲಾ ವಾದಕರಾಗಿರದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗ ವಾದಕರಾಗಿದ್ದರು. ತಾಳಗಳ ಬಗ್ಗೆ ವಿವರಿಸುತ್ತಾ ಆದಿ ತಾಳದಿಂದ ನಮ್ಮ ಪಾಠವನ್ನು ಆರಂಭಿಸಿದರು. ನಮ್ಮ ಮೊದಲ ಪಾಠವಾದ ತ, ದಿ, ತೊಂ, ನಂ ಇವನ್ನು ಬರೆಸಿ ಕಂಠಪಾಠ ಮಾಡಿಸಿ, ಕೈಯಲ್ಲಿ ತಾಳ ಹಾಕಿ, ಅಭ್ಯಾಸ ಮಾಡಿಸಿದರು. ಕಾಲೇಜಿಗೆ ಹೋಗುವಂತೆಯೇ ಎರಡು ಹಾಳೆ ಮತ್ತೊಂದು ಪೆನ್ನು ತೆಗೆದುಕೊಂಡು ಹೋಗಿದ್ದ ನನಗೆ ಗುರುಗಳು, ತಮ್ಮ ೨೫ ವರ್ಷಗಳಿಗಿಂತಲೂ ಹಳೇಯದಾದ ಪುಸ್ತಕಗಳನ್ನು ತೋರಿಸುತ್ತಾ, ಮುಂದಿನ ಬಾರಿ ಬರುವಾಗ ಹೊಸದೊಂದು ಪುಸ್ತಕ ಕೊಂಡು ಈ ಅಭ್ಯಾಸಕ್ಕೆ ಮೀಸಲಾಗಿರಿಸಿ ಜೋಪಾನವಾಗಿ ಇರಿಸಿ ಕೊಳ್ಳಬೇಕೆಂದು ಹೇಳಿದರು . ಎದುರು ಗಡೆ ಇಟ್ಟ ಮೃದಂಗದಲ್ಲಿ ಎಂದಿಗೆ ನನ್ನ ಕೈಚಳಕ ತೋರಿಸುವೆನೋ ಎಂದು ಕಾತರನಾಗಿದ್ದೆ. ಜನಾರಣ್ಯದಲ್ಲಿ ಬಾಯಿಬಿಡದ ಸಂಕೋಚ ಸ್ವಭಾವದ ನನ್ನ್ನ ಬಾಯಿಯಿಂದ ಪಾಠವನ್ನು ಹೊರಡಿಸಲು ಗುರುಗಳು ಹರಸಾಹಸ ಪಟ್ಟರು. ನಂತರ ಮೃದಂಗ ತಮ್ಮ ಕೈಗಿತ್ತುಕೊಂಡು ತ,ದಿ,ತೊಂ, ನಂ ಎಲ್ಲಿ ಹೊಡೆಯಬೇಕು ಎಂದು ತೋರಿಸಿಕೊಟ್ಟರು. ಮೃದಂಗ ನನ್ನ ಕೈಗೆ ಬಂದ ನಂತರ ಒಂದು ಬಗೆಯ ಅಳುಕು, ಗಟ್ಟಿಯಾಗಿ ಹೊಡೆದರೆ ಎಲ್ಲಿ ಅದರ ಚರ್ಮ ಹರಿದು ಹೋಗುವುದೋ ಎಂಬ ಭೀತಿ, ಆದ್ದರಿಂದ ತುಂಟ ಮಕ್ಕಳ ಕೆನ್ನೆಯನ್ನು ಪ್ರೀತಿಯಿಂದ ನೇವರಿಸುವಂತೆ ಅದರ ಮೇಲೆ ಕೈ ಆಡಿಸಿದೆ. ಗುರುಗಳು ಕೈಯೂರಿ ನುಡಿಸಬೇಕು, ನಾದ ಹೊಮ್ಮಬೇಕು ಎಂದು ಇನ್ನೊಮ್ಮೆ ತೋರಿಸಿಕೊಟ್ಟರು. ಒಡೆದು ಹೋಗಲಾರದು ಎಂಬ ಭರವಸೆಯ ಮೇರೆಗೆ ಗಟ್ಟಿಯಾಗಿ ಎಡಗಡೆಗೆ ತ ಎಂದು ಪ್ರಹಾರ ಮಾಡಿದರೆ ನಾದದ ಜೊತೆ ಮೃದಂಗ ಬಲಕ್ಕೆ ವಾಲಿತು. ದಿ, ನಂ ಗಳನ್ನು ಬಲಗಡೆ ಹೊಡೆದು ಸ್ವಲ್ಪ ಮಟ್ಟಿಗೆ ಅದನ್ನು ಯಥಾ ಸ್ಥಾನಕ್ಕೆ ಕೂರಿಸುತ್ತಿದ್ದೆನಾದರೂ ನನ್ನ ತ, ತೊಂ ಪ್ರಹಾರ ಅದಕ್ಕಿಂತ ಬಲವಾಗಿ, ಟೈಪ್ ರೈಟರ್ನಂತೆ ಮೃದಂಗ ಬಲಗಡೆ ಸರಿಯುತ್ತಿತ್ತು. ಆಗಾಗ ಅದನ್ನು ಮೊದಲಿನ ಸ್ಥಳಕ್ಕೆ ಸರಿಸುತ್ತಾ, ತಾಳ ತಪ್ಪುತ್ತಾ ಇದ್ದ ನನ್ನ ಅವಸ್ಥೆ ನೋಡಲಾರದೆ ಮೃದಂಗ ಹಿಡಿದುಕೊಳ್ಳಬೇಕಾದರೆ ಮಡಿಸಿದ ಎಡ ಮಂಡಿಯ ಒತ್ತಡ ಅದರ ಮೇಲೆ ಹೇರಬೇಕಾಗಿ ಸೂಚಿಸಿದರು. ಮೊದಲ ದಿನ ನಾನು ತಿಳಿದ ವಿಷಯ ಬಹಳವಾಗಿತ್ತು ಭಾರತದ ಸಂಗೀತ ಪ್ರಭೇದ, ರಾಗ, ತಾಳಗಳ ಕಿರುಪರಿಚಯ, ತದಿತೊಂನಂ, ಮೃದಂಗ ಹಿಡಿದುಕೊಳ್ಳುವುದು.



ಮುಂದಿನ ತರಗತಿಯಲ್ಲಿ ಕಾಲಗಳ ಪರಿಚಯ ಮಾಡಿಕೊಟ್ಟು ಎರಡನೇ, ಮೂರನೇ ಕಾಲದಲ್ಲಿ ಹಿಂದಿನ ದಿನದ ಪಾಠವನ್ನು ನುಡಿಸುವುದು ಹೇಗೆ ಎಂದು ಕಲಿಸಿಕೊಟ್ಟರು. ಗುರುಗಳ ಪಾಠವೇನೋ ಸಾಗುತ್ತಿತ್ತು, ಆದರೆ ಆಭ್ಯಾಸ ಮಾಡಲು ಮೃದಂಗ ನಮ್ಮ ಬಳಿ ಇರಲಿಲ್ಲ. ಸುಮಾರು ೧,೫೦೦ಕ್ಕೆ ಹೊಸದು ಸಿಗುತ್ತಿತ್ತಾದರೂ ನಮ್ಮಿಬ್ಬರ ಬಳಿ ಅಷ್ಟು ಹಣವಿರಲಿಲ್ಲ, ಮನೆಯವರಿಂದ ಕೇಳಿ ತರಿಸಿಕೊಳ್ಳೋಣ ಎಂದರೆ, ನಾವು ಕಲಿಯುತ್ತಿರುವುದನ್ನು ಅವರಿಗೆ ತಿಳಿಸದೆ, ಕಲಿತ ಮೇಲೆ ನಮ್ಮ ಕೈಚಳಕ ಒಮ್ಮೆಲೇ ತೋರಿಸಿ ಅವರನ್ನು ಚಕಿತಗೊಳಿಸಬೇಕೆಂಬ ಹಂಬಲ. ಕೊನೇಗೆ ನಮ್ಮ ವಿದ್ಯಾರ್ಥಿನಿಲಯದ ಮೇಜಿನಲ್ಲೇ ಮೃದಂಗದಲ್ಲಿರುವಂತೆ ವೃತ್ತ ಬರೆದು ನಮ್ಮ ಅಭ್ಯಾಸ ಆರಂಭಿಸಿದೆವು. ಮೊದಲು ಒಬ್ಬ ತಾಳ ಹಾಕುವುದು, ಇನ್ನೊಬ್ಬ ಮೇಜಿನ ಮೇಲೆ ಬಡಿಯುವುದು, ಪುಣ್ಯಕ್ಕೆ ನಮ್ಮ ಮಿತ್ರರಾರೂ ಇದಕ್ಕೆ ಆಕ್ಷೇಪ ಎತ್ತಲಿಲ್ಲ. ಹೀಗೆ ನಮ್ಮ ಅಭ್ಯಾಸ ಸಾಗುತ್ತಿರಬೇಕಾದರೆ ನಮ್ಮ ಗುರುಗಳ ಮಿತ್ರರೊಬ್ಬರು ತಮ್ಮ ಮಗ ಕಲಿತು ಬಿಟ್ಟ ಮೃದಂಗವನ್ನು ಅಭ್ಯಾಸ ಮಾಡಲು ತೆಗೆದುಕೊಂಡು ಹೋಗಬಹುದಾಗಿ ತಿಳಿಸಿದರು.



ವಿದ್ಯಾರ್ಥಿನಿಲಯದ ಉಪ್ಪರಿಗೆಯ ಖಾಲಿ ಕೋಣೆಯಲ್ಲಿ ನಮ್ಮ ಅಭ್ಯಾಸ ತರಗತಿಯನ್ನು ಆರಂಭಿಸಿದೆವು. ಮೃದಂಗ ಸಿಕ್ಕಿದ ಮಾರನೆಯ ದಿನದಿಂದ ಕೆಲವು ತಿಂಗಳುಗಳವರೆಗೆ ಎಡಬಿಡದೆ ನಮ್ಮ ಅಭ್ಯಾಸದಲ್ಲಿ ತೊಡಗಿಕೊಂಡೆವು. ನಾವು ಮೂರನೇ ಕಾಲದವರೆಗೂ ನುಡಿಸುವುದನ್ನು ಕಲಿಯುವುದು ಪದ್ಧತಿಯಾದರೂ, ನಮಗೆ ಬೇಸರ ಬರಬಾರದೆಂದು ಗುರುಗಳು ನಾವು ಮೂರನೇ ಕಾಲದಲ್ಲಿ ನುಡಿಸಿ ತೋರಿಸುವುದರೊಳಗಾಗಿ ಮುಂದಿನ ಪಾಠವನ್ನು ಹೇಳಿ ಕೊಡುತ್ತಿದ್ದರು. ಮುಂದೆ ಕಲಿತ ತಕಿಟಕಿಟತಕ, ತಕಿಟಕಿಟತಕ ಕಿಟತಕತಾಕಿಟತಕ ತರಿಕಿಟತಕ ಮೊದಲಾದ ಪಾಠಗಳು ತುಂಬಾ ಸಂತೋಷ ಕೊಟ್ಟವು. ಅದಾಗಲೇ ಸಂಗೀತಾಭ್ಯಾಸದ ಗುಂಪಿಗೆ ಸೇರಿದ್ದ ನಾವು ಅಲ್ಲಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೂ ಹೋಗತೊಡಗಿದೆವು. ನಮಗೀಗಾಗಲೇ ತಿಳಿದಿದ್ದ ಆದಿತಾಳದ ಹಾಡು ಹಾಡತೊಡಗಿದರಂತೂ ಮೈಯೆಲ್ಲಾ ಕಿವಿಯಾಗಿಸಿ ಮನದಲ್ಲೇ ತಾಳ ಹಾಕ ತೊಡಗಿದ್ದೆವು.



ನಮ್ಮ ಅಭ್ಯಾಸ ಹೀಗೆ ಸಾಗುತ್ತಿರಬೇಕಾದರೆ ಸೆಮಿಸ್ಟರ್ನ ಕೊನೆ ಬಂದು ನಮ್ಮ ಅಭ್ಯಾಸಕ್ಕೆ ತಾತ್ಕಾಲಿಕ ಬಿಡಿವು ದೊರಕಿತ್ತು. ಪರೀಕ್ಷೆ ಮುಗಿಸಿ, ಊರಿಗೆ ತೆರಳಿ ರಜಾ ದಿನಗಳಲ್ಲಿ ಮೃದಂಗವನ್ನು ಸಂಪೂರ್ಣವಾಗಿ ಮರೆತು, ಮತ್ತೆ ಕಾಲೇಜಿಗೆ ಬಂದು ಹಳೇಯ ಪಾಠಗಳನ್ನು ಅಭ್ಯಸಿಸಿ ಒಂದು ತಿಂಗಳ ನಂತರ ಗುರುಗಳ ಬಳಿಗೆ ಮರಳಿದೆವು. ೪ ತಿಂಗಳ ಒಡನಾಟದಿಂದ ಗುರುಗಳು ನಮಗೆ ಆಪ್ತರಾಗಿದ್ದರು, ಮನೆಗೆ ಹೋದೊಡನೆ ಕಾಫಿ, ಅವಲಕ್ಕಿ ಅಥವಾ ಏನಾದರೂ ಕುರುಕುಲು ತಿಂಡಿ ಲಭಿಸುತ್ತಿತ್ತು. ಕಾಫಿ ಹೀರುತ್ತಾ ಸುಮಾರು ಅರ್ಧಗಂಟೆ ಕಳೆದ ನಂತರವಷ್ಟೆ ನಮ್ಮ ಪಾಠ ಆರಂಭವಾಗುತ್ತಿತ್ತು. ಅವರು ಹೇಳಿ ಕೊಡುತ್ತಿದ್ದ ಅ, ಆ, ಇ, ಈ ಕಲಿಯುತ್ತಿದ್ದೆನಾದರೂ ಇವನ್ನೆಲ್ಲಾ ಸೇರಿಸಿ ನನ್ನದೇ ವಾಕ್ಯ ರಚನೆಯ ಕಲೆ ನನಗೆ ಸಿದ್ಧಿಸುತ್ತಲೇ ಇರಲಿಲ್ಲ.ಹೀಗೆ ವರ್ಷದಲ್ಲಿ ಸುಮಾರು ೭ ತಿಂಗಳು ಪಾಠ ಹೇಳಿಸಿಕೊಳ್ಳುವ ಅವಕಾಶ ಸಿಗುತ್ತಿತ್ತಾದರೂ ನನಗೆ ಕಲಿಕೆಯಲ್ಲಿ ಕ್ರಮೇಣ ಆಸಕ್ತಿ ಕುಂದ ತೊಡಗಿತು. ಅದೇ ನೀರಸ ಅಭ್ಯಾಸ, ಒಂದು ಸ್ವಂತಿಕೆಯಿಲ್ಲ, ಒಂದು ಭಾವನೆಯಿಲ್ಲ, ಶಾಲೆಯಲ್ಲಿನ ಡ್ರಿಲ್ನಂತೆ. ಆದರೂ ರಾಮಮೂರ್ತಿಗಾಗಿ ಅವನೊಡನೆ ಪಾಠ ಹೇಳಿಸಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ನಮ್ಮ ಅಭ್ಯಾಸ ಹೀಗೆ ಸಾಗುತ್ತಿರಲು ನಮ್ಮ ಕಾಲೇಜಿನ ಕೊನೇಯ ವಾರ್ಷಿಕೋತ್ಸವ ಕಾಲಿಟ್ಟಿತು. ಪ್ರತೀ ವರ್ಷ ವಿಧ್ಯಾರ್ಥಿನಿಲಯದ ಹುಡುಗರು ನಮ್ಮಿಬ್ಬರಿಂದ ಒಂದು ಕಾರ್ಯಕ್ರಮವನ್ನು ನಿರೀಕ್ಷಿಸುತ್ತಿದ್ದರು. ನಾವು ಮುಂದಿನವರ್ಷ ಎಂದು ತಳ್ಳಿ ಹಾಕಿ, ಕೊನೇಯ ವರ್ಷದಲ್ಲೂ ಏನು ಮಾಡಬೇಕೆಂದು ತೋಚದೆ ನಮ್ಮ ಹುಡುಗರ ಉತ್ಸಾಹಕ್ಕೆ ತಣ್ಣೀರೆರೆಚಿದೆವು.



ಕೊನೇಯ ಪರೀಕ್ಷೆಯನ್ನು ಮುಗಿಸಿ ಗುರುಗಳಿಗೆ ಕಾಣಿಕೆಯೊಪ್ಪಿಸಿ, ಮೃದಂಗವನ್ನು ಅವರ ಮಿತ್ರರಿಗೆ ಮರಳಿಸಿ ನಮ್ಮ ಅಭ್ಯಾಸಕ್ಕೆ ತಾತ್ಕಾಲಿಕ ಬಿಡುವು ಕೊಟ್ಟೆವು. ಮರಳುವಾಗ ಬಿಡುವಿನ ಸಮಯವನ್ನು ಮೃದಂಗ ಕಲಿಕೆಗೆ ಮೀಸಲಾಗಿಡಿ, ನೀವು ಚೆನ್ನಾಗಿಯೇ ಕಲಿಯುತ್ತಿದ್ದೀರಿ ಎಂದು ಗುರುಗಳು ಹರಸಿದರು. ಬೆಂಗಳೂರಿಗೆ ಬಂದು ಹೊಟ್ಟೇಪಾಡಿನ ಚಿಂತೆಯಲ್ಲಿ ಮೃದಂಗ ಕಲಿಕೆಯ ಯೋಚನೆ ನನ್ನಿಂದ ದೂರ ಉಳಿದು ಬಿಟ್ಟಿತು. ರಾಮಮೂರ್ತಿ ಮಾತ್ರ ಹೊಸ ಗುರುಗಳನ್ನು ಕಂಡು, ಹೊಸ ಮೃದಂಗ ಕೊಂಡು ಮತ್ತೆ ಅಭ್ಯಾಸ ಆರಂಭಿಸಿರುವುದಾಗಿ ಹಿಂದೊಮ್ಮೆ ಸಿಕ್ಕಾಗ ಹೇಳಿದ್ದ. ಆದಿ ತಾಳದಿಂದ ಆರಂಭವಾದ ನನ್ನ ಕಲಿಕೆ ಮಾತ್ರ ಆದಿಯಲ್ಲೇ ಕೊನೆಗೊಂಡಿತು.

Saturday, November 22, 2008

ಛಾಯಾಗ್ರಹಣದಲ್ಲಿ "Shutter Speed" ನ ಪಾತ್ರ

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.



ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.




ಮೇಲೆ ತಿಳಿಸಿದಂತೆ ಚಲಿಸುವ ವಸ್ತುಗಳನ್ನು ಸ್ತಬ್ಧಗೊಳಿಸಲು ಹೆಚ್ಚಿನ "Shutter Speed" ಅಗತ್ಯ ಇದೆಯಾದರೂ ಕೆಲವೊಂದು ಸಂದರ್ಭದಲ್ಲಿ, ಕಡಿಮೆ "Shutter Speed" ಉಪಯೋಗಿಸಿ ಚಲನೆಯ ಪರಿಣಾಮವನ್ನು ನಿಮ್ಮ ಚಿತ್ರದಲ್ಲಿ ಸೆರೆಹಿಡಿಯಬಹುದು.
ಈ ಕೆಳಗಿನ ಎರಡು ಚಿತ್ರ ಅದಕ್ಕೆ ಉದಾಹರಣೆ.




ಇಲ್ಲಿ ಸೈಕಲ್ ಸವಾರನನ್ನು ನನ್ನ ವಿಷಯವನ್ನಾಗಿಸಿಕೊಂಡು, ಚಲನೆಯನ್ನು ನನ್ನ ಚಿತ್ರದಲ್ಲಿ ಸೆರೆಹಿಡಿಯಲು ಕಡಿಮೆ "Shutter Speed" (೧/೧೫) ಬಳಸಿದ್ದೇನೆ. ಇಲ್ಲಿ ಸವಾರ ಸ್ಪಷ್ಟವಾಗಿದ್ದು, ಹಿನ್ನೆಲೆ ಅಸ್ಪಷ್ಟವಾಗಿದ್ದು ಚಲನೆಯನ್ನು ಬಿಂಬಿಸುತ್ತಿದೆ (panning).





ಈ ಚಿತ್ರದಲ್ಲಿ ಬೆಂಕಿಯ ಜಾಡನ್ನು ಚಿತ್ರಿಸಲು ನಾನು ಬಳಸಿದ್ದು ೧೫ ಕ್ಷಣಗಳಷ್ಟು ದೀರ್ಘವಾದ "Shutter Speed".



ಹಾಗಾಗಿ ಛಾಯಾಗ್ರಹಣದಲ್ಲಿ "Shutter Speed" ನ್ನು ಬೆಳಕು ಹಾಗು ಚಲನೆಯನ್ನು ನಿಯಂತ್ರಿಸಲು ಉಪಯೋಗಿಸಬಹುದು.

Friday, November 07, 2008

ದೀಪಾವಳಿ

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಇಂದು ದೀಪಾವಳಿಯಾದ್ದರಿಂದ, ಹಿಂದಿನ ರಾತ್ರಿಯಿಂದ ಮುಂಜಾನೆ ೪ ಗಂಟೆಯವರೆಗೂ ತಮ್ಮ ಆಪ್ತರ ಮನೆಯಾದ ಸೋಲಂಕಿಯವರ ಮನೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಲ್ಲಿ ಸಹಾಯ ಮಾಡುತ್ತಾ ನಿಂತಿದ್ದಳು. ಸುಕ್ಕು ಮುಖ, ನೆರೆತ ಉದ್ದನೆಯ ಕೂದಲು,ಇತಿಹಾಸದ ಕುರುಹೋ ಎಂಬಂತೆ ನಕ್ಕರೆ ಮಾತ್ರ ಕಾಣಿಸುವ ಮುಂದಿನ ಎರಡು ಹಲ್ಲುಗಳು, ಮಂದವಾದ ದೃಷ್ಟಿ, ಸುಮಾರು ೭೫ರ ಆಸುಪಾಸಿನ ಆಕೆಯನ್ನು ೪ ಗಂಟೆಯ ಜಾವಕ್ಕೆ ಮನೆಯಿಂದ ಹೊರಗೆ ಕಳುಹಿಸಲು ಮನಸ್ಸು ಬಾರದಿದ್ದರೂ ಆಕೆಯ ಹಟಕ್ಕೆ ಸೋಲಂಕಿಯವರ ಮನೆಯಾಕೆ ಸೋಲಬೇಕಾಗಿತ್ತು.ವೃತ್ತಿಯಿಂದ ಹೂವಾಡಿಗಳಾದ ಆಕೆಗೆ,ದಿನ ನಿತ್ಯ ಒದಗಿಸುವ ಹೂವಲ್ಲದೆ, ಹಬ್ಬದ ದಿನವಾದ ಇಂದು ಇನ್ನೂ ಹೆಚ್ಚಿನ ಬೇಡಿಕೆ ಇದ್ದುದರಿಂದ ಸೋಲಂಕಿಯವರ ಮನೆಯಲ್ಲಿ ಉಳಿಯದೆ, ಬೆಳಿಗ್ಗೆ ಬೇಗ ಏಳುವ ಉದ್ದೇಶದಿಂದ ಮನೆಗೆ ಬಂದಿದ್ದಳು. ಜನರ ಚಟುವಟಿಕೆಯಿಲ್ಲದ ಬೀದಿಯಲ್ಲಿ ಒಬ್ಬಳೇ, ದಾರಿಯಲ್ಲಿ ಬಿದ್ದಿದ್ದ ಮಾಟ ಮಾಡಿಸಿದ ನಿಂಬೆ ಹಣ್ಣನ್ನು ತುಳಿಯದೆ ಎಚ್ಚರಿಕೆಯಿಂದ ಕಾಲಿಡುತ್ತಾ ತನ್ನ ಇಷ್ಟ ದೇವತೆಯಾದ ಹನುಮನ ಜಪ ಮಾಡುತ್ತಾ ಮನೆಗೆ ತೆರಳಿ ಆಗ ತಾನೆ ನಿದ್ರಿಸಿದ್ದಳು.ನಿದ್ರಾ ಹೀನತೆಯಿಂದ ಕೆಂಪಾದ ಕಣ್ಣುಗಳು ಬಳಲಿ ಉಬ್ಬಿದ್ದವು.ಬಿಳಿಯ ಮಾಸಲು ಬಣ್ಣದ ರವಿಕೆಯ ಮೇಲೆ ಅದೇ ಬಣ್ಣದ ಸೀರೆಯನ್ನು ಗುಜರಾತಿ ಹೆಂಗಸರು ಸೀರೆ ಉಡುವ ಮಾದರಿಯಲ್ಲಿ, ಸೆರಗನ್ನು ಬಲಗಡೆಯಿಂದ ಹೊದ್ದು, ಮನೆಯ ಕದವಿಕ್ಕಿ ಮಾರುಕಟ್ಟೆಯ ಕಡೆಗೆ ಸಾಗಿದಳು.



ದಿಯು ಗುಜರಾತಿನ ಸಮೀಪದ ಒಂದು ಪುಟ್ಟ ದ್ವೀಪ. ಭಾರತದ ಕೇಂದ್ರಾಡಳಿತಕ್ಕೆ ಒಳ ಪಡುವ ಮುಂಚೆ ಅಂದರೆ ೧೯೬೧ರ ವರೆಗೂ ಪೋರ್ಚುಗೀಸರ ವಸಾಹತಾಗಿದ್ದ ಇಲ್ಲಿನ ಜನ ಜೀವನದ ಮೇಲೆ ಅವರ ಪ್ರಭಾವ ಅಧಿಕ.ಮೇಲ್ನೋಟಕ್ಕೆ ಗುಜರಾತಿಗಳಂತೆ ಕಂಡು ಬಂದರೂ ಇವರ ಆಚರಣೆ, ಸಂಪ್ರದಾಯ, ಆಹಾರ ಪದ್ಧತಿ ಗುಜರಾತಿಗಳಿಗಿಂತ ಕೊಂಚ ಭಿನ್ನ. ಸುಮಾರು ೪೦,೦೦೦ದಷ್ಟು ಜನ ಸಂಖ್ಯೆಯಿರುವ ಈ ದ್ವೀಪದ ಜನರ ಉದ್ಯೋಗ ಅಲ್ಲಿನ ಜನರ ಜೀವನಾವಶ್ಯಕತೆಯಾದ ಶಿಕ್ಷಣ, ಚಿಲ್ಲರೆ ವ್ಯಾಪಾರದ ಮೇಲೆ ಅವಲಂಭಿಸಿದೆ. ಮೀನುಗಾರಿಕೆ, ವ್ಯವಸಾಯದಿಂದೊದಗುವ ನೆಲಗಡಲೆ, ಕಬ್ಬು, ಹತ್ತಿ, ಅಲ್ಲದೆ ಪ್ರವಾಸೋದ್ಯಮದಿಂದ ಬರುವ ಹಣ ಮಾತ್ರ ಇಲ್ಲಿಯ ಆದಾಯ. ನೆರೆಯ ಗುಜರಾತಿನಲ್ಲಿ ಮದ್ಯಪಾನ ನಿಷಿದ್ಧವಾದ್ದರಿಂದ ಜನರು ಮೋಜಿಗಾಗಿ ಬಿಡುವಿನ ವೇಳೆಯಲ್ಲಿ ಇಲ್ಲಿ ಸಮಯ ಕಳೆಯುವುದುಂಟು. ಅಲ್ಲದೆ ಐತಿಹಾಸಿಕ ಪ್ರಾಮುಖ್ಯತೆ ಪಡೆದ ಇಲ್ಲಿಯ ಕೋಟೆಗಳನ್ನು, ಚರ್ಚ್, ಮ್ಯೂಸಿಯಂ, ನಿಸರ್ಗ ನಿರ್ಮಿತ ಗುಹೆಗಳನ್ನು, ಬಂಡೆಗಳಿಂದ ಅಲಂಕೃತವಾದ ಸಮುದ್ರ ತೀರವನ್ನು ನೋಡಲು ಜನರು ದೇಶದ ವಿವಿಧೆಡೆಗಳಿಂದಲೂ ಬರುವುದುಂಟು. ಕೇವಲ ಪದವಿ ಪೂರ್ವ ಶಿಕ್ಷಣಕ್ಕೆ ಇಲ್ಲಿಯ ವಿದ್ಯಾಭ್ಯಾಸ ಸೀಮಿತವಾದ್ದರಿಂದ ಅನುಕೂಲವಂತರು ತಮ್ಮ ಮಕ್ಕಳನ್ನು ಮುಂದಿನ ವ್ಯಾಸಂಗಕ್ಕಾಗಿ ನೆರೆ ರಾಜ್ಯವಾದ ಗುಜರಾತಿಗೋ,ಮಹಾರಾಷ್ಟ್ರಕ್ಕೋ, ಗೋವೆಗೋ ಕಳುಹಿಸುವುದು ರೂಢಿ. ಅಲ್ಲಿ ಕಲಿತು ತಮ್ಮ ಸೇವೆಯನ್ನು ದೇಶದ ಇತರ ರಾಜ್ಯಗಳಲ್ಲಿ , ವಿದೇಶಗಳಲ್ಲಿ ಸಲ್ಲಿಸುತ್ತಿರುವ ಇವರು ಊರಿನ ಮುಖ ನೋಡುವುದು ಮದುವೆಗೋ ಇಲ್ಲವೇ ಇತರ ಹಬ್ಬ ಹರಿದಿನಗಳಂದು. ಹಿರಿಯ ತಲೆಮಾರಿನವರು ಪೋರ್ಚುಗೀಸರ ಪ್ರಜೆಗಳಾದ್ದರಿಂದ ಇವರಿಗೆ ಪೋರ್ಚುಗೀಸ್ ಪಾಸ್ ಪೋರ್ಟ್ ದೊರಕಿಸಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದ್ದರಿಂದ ಕಲಿಯದ ಜನರೂ ಕೂಡ ಪೋರ್ಚುಗೀಸ್ ಪಾಸ್ ಪೋರ್ಟ್ ದೊರಕಿಸಿಕೊಂಡು, ವಿದೇಶದಲ್ಲಿ ಅದರಲ್ಲಿಯೂ ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿರುವುದು ಸಾಮಾನ್ಯ.



ಪೋರ್ಚುಗೀಸರ ರಾಜ್ಯಾಡಳಿತದಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಕಾಂತಾ ಮದುವೆಯಾದದ್ದು ಹೂವು ಮಾರಿ ಜೀವನ ಸಾಗಿಸುವುದು ಕುಲಕಸುಬಾದ ತನ್ನ ಅಂತಸ್ತಿನ ಯುವಕನೊಬ್ಬನನ್ನು. ಮದುವೆಯಾಗಿ ಚೊಚ್ಚಲ ಗಂಡುಮಗುವನ್ನು ಹೆತ್ತು, ತಮ್ಮ ಬಾಳ ಬೆಳಗಿಸಿದ ಮಗುವಿಗೆ ರೋಶನ್ ಎಂದು ನಾಮಕರಣ ಮಾಡಿ, ತೃಪ್ತ ಜೀವನ ನಡೆಸುತ್ತಿರಬೇಕಾದರೆ ಆಕೆಯ ಗಂಡ ಅದ್ಯಾವುದೋ ಕಾಯಿಲೆಗೆ ತುತ್ತಾಗಿ ತೀರಿಕೊಂಡ. ಗಂಡನ ಮನೆ, ತವರಿನ ಮನೆ ಎರಡು ಕಡೆಯಿಂದಲೂ ತಕ್ಕಷ್ಟು ಅನುಕೂಲವಿಲ್ಲವಾದ್ದರಿಂದ ಆಕೆ ತನ್ನ ಹಾಗು ೩ ವರ್ಷದ ತನ್ನ ಮಗುವಿನ ಜವಾಬ್ದಾರಿಯನ್ನು ತಾನೇ ಹೊರಬೇಕಾಯಿತು. ಚಿಕ್ಕಂದಿನಿಂದಲೂ ತಮ್ಮ ಮಕ್ಕಳೊಂದಿಗೆ ಆಡಿ ಬೆಳೆದಿದ್ದ ಹುಡುಗಿಯ ಪರಿಸ್ಥಿತಿಗೆ ನೊಂದು, ಸೋಲಂಕಿ ಮನೆತನದ ಹಿರಿಯರೊಬ್ಬರು ಇವಳ ಕಷ್ಟಕ್ಕೆ ನೆರವಾಗಿ ನಿಂತು, ಆಕೆಗೆ ಉಳಿದುಕೊಳ್ಳಲು ತಮ್ಮದೊಂದು ಹಳೇಯ ಮನೆಯನ್ನು ಒದಗಿಸಿಕೊಟ್ಟು,ಹೊಸ ಜೀವನದ ಆರಂಭಕ್ಕೆ ಅನುಕೂಲವಾಗಲೆಂದು ಸ್ವಲ್ಪ ಹಣವನ್ನೂ ಕೈಯಲ್ಲಿರಿಸಿ ಹರಸಿದರು. ತಮ್ಮ ಹಳೇಯ ಗಿರಾಕಿಗಳನ್ನೊಪ್ಪಿಸಿ ಗಂಡನ ಕುಲ ಕಸುಬಾದ ಹೂವಿನ ವ್ಯಾಪರವನ್ನು ಮತ್ತೆ ಕೈಗೆತ್ತಿಕೊಂಡಳು. ಬೆಳಿಗ್ಗೆ ಎದ್ದು, ಮಾರುಕಟ್ಟೆಗೆ ತೆರಳಿ ಹೂವು ಕೊಂಡು, ಅದನ್ನು ಪೋಣಿಸಿ, ಮೊದಲು ತನ್ನ ಇಷ್ಟದೇವರಾದ ಹನುಮನ ಗುಡಿಗೆ ಒಂದಿಷ್ಟು ಅರ್ಪಿಸಿ, ಉಳಿದದ್ದನ್ನು ತನ್ನ ಮಗುವನ್ನು ಹೊತ್ತು ಗಿರಾಕಿಗಳ ಮನೆಗೆ ತೆರಳಿ ಅವರ ಮನೆಗೆ ಒಪ್ಪಿಸುವುದು ಆಕೆಯ ನಿತ್ಯದ ಕಸುಬಾಯಿತು. ಮನೆಗೆ ಮರಳಿ ಉಪಹಾರ, ಭೋಜನ ಮುಗಿಸಿ ಸೋಲಂಕಿಯವರ ಋಣ ತೀರಿಸುವ ಸಲುವಾಗಿ ಅವರ ಮನೆಗೆ ಭೇಟಿ ಕೊಟ್ಟು, ಮನೆಯವರ ಚಿಲ್ಲರೆ ಕೆಲಸವನ್ನು ಮಾಡುತ್ತಿದ್ದಳು. ಮಗ ಬೆಳೆದು ಶಾಲೆಗೆ ಹೋಗುವ ಹಂತ ತಲುಪಿದ ಮೇಲೆ ಆತನನ್ನು ಊರಿನ ಸರ್ಕಾರಿ ಶಾಲೆಯಲ್ಲಿ ದಾಖಲಿಸಿದಳು. ದಿನ ಕಳೆದಂತೆ ಮಗನ ಅವಶ್ಯಕತೆ ಬೆಳೆದದ್ದರಿಂದ ಆಕೆ ಊರಿನ ಕೆಲವು ಇನ್ನಿತರ ಮನೆಯಲ್ಲಿಯೂ ಕೆಲಸ ಮಾಡಬೇಕಾಗಿ ಬಂತು.



ಬೆಳೆದಂತೆ ಮಗನಿಗೆ ತನ್ನ ಹಾಗೂ ತನ್ನ ಸುತ್ತಮುತ್ತಲಿನ ಜನರ ಅಂತಸ್ತಿನ ಅರಿವಾಗತೊಡಗಿತು. ಉತ್ತಮ ಪೋಷಾಕು, ಆಭರಣ ತೊಟ್ಟು ಅನುಕೂಲವಂತರ ಮಕ್ಕಳು, ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿದ್ದ ಆಂಗ್ಲ ಮಾಧ್ಯಮದ ಶಾಲೆಗೆ ಹೋಗುತ್ತಿದ್ದರೆ ಈತ ಕಡಿಮೆ ಬೆಲೆಯ ಸರ್ಕಾರಿ ಶಾಲೆಗೆ ತೃಪ್ತಿ ಪಡಬೇಕಾಗಿತ್ತು. ಬಿಡುವಿನ ವೇಳೆಯಲ್ಲಿ ಅವನ ಒತ್ತಿನ ಹುಡುಗರು ತಮ್ಮ ಗೆಳತಿಯರೊಂದಿಗೆ ಕೋಟೆಯಲ್ಲಿ ಕುಳಿತು ಸರಸ ಸಲ್ಲಾಪ ಮಾಡುತ್ತಿದ್ದರೆ ಇವನು ಅಮ್ಮನೊಂದಿಗೆ ಹೂ ಮಾರುತ್ತಾ ಇತರರ ಮನೆಗಳಿಗೆ ಸಂಚರಿಸುತ್ತಿದ್ದನು. ಅವನ ಮನದಲ್ಲೂ ಕೂಡ ಇತರರಂತೆ ಗೆಳತಿಯರೊಂದಿಗೆ ಕುಳಿತು ಸಲ್ಲಾಪಿಸಬೇಕೆಂಬ ಆಸೆಯಿದ್ದರೂ ಕೂಡ ಅದಕ್ಕೆ ತಕ್ಕ ಅನುಕೂಲತೆಯಾಗಲಿ, ರೂಪವಾಗಲೀ ಆತನಲ್ಲಿ ಇರಲಿಲ್ಲ. ಓದಿನಲ್ಲಿ ಅಷ್ಟೇನೂ ಚುರುಕಿಲ್ಲದ ಹುಡುಗನಿಗೆ ಹೈಸ್ಕೂಲ್ ಹಂತಕ್ಕೆ ತಲುಪಿದ ಮೇಲೆ ಓದಿನ ಮೇಲೆ ಬೇಸರ ಬಂದು ಶಾಲೆಗೆ ಇತಿಶ್ರೀ ಹಾಡಿದ. ಮುಂದೆ ಏನು ಎಂಬ ಚಿಂತೆಯಿಲ್ಲದೆ ಹೂ ಮಾರುವ ಕೆಲಸವದ ಜವಾಬ್ದಾರಿಯನ್ನು ಸಂಪೂರ್ಣವಹಿಸಿಕೊಂಡ. ಇತ್ತ ತಾಯಿಗೂ ಕೂಡ ಇದರಿಂದ ಅನುಕೂಲವಾದ್ದರಿಂದ ಆಕೆ ಮಗನ ನಡವಳಿಕೆಗೆ ಆಕ್ಷೇಪವೇನೂ ಎತ್ತಲಿಲ್ಲ. ಹೀಗೆ ಸುಮಾರು ಒಂದೆರಡು ವರ್ಷ ಅವರ ಬಾಳು ಅನುಕೂಲವಾಗಿರದಿದ್ದರೂ, ಒಬ್ಬರಿಗೊಬ್ಬರು ಆಸರೆಯಂತೆ ತಮ್ಮ ಕಷ್ಟ ಮರೆತು ತೃಪ್ತಿಯಿಂದಲೇ ಬಾಳ್ವೆ ನಡೆಸುತ್ತಿದ್ದರು.



ದಿಯು ಭಾರತದ ಪಾಲಾದ ಮೇಲೆ ಅಲ್ಲಿ ನೆಲೆಸಿದ್ದ ಪೋರ್ಚುಗೀಸರು ಒಬ್ಬೊಬ್ಬರಾಗಿ ತಮ್ಮ ದೇಶಕ್ಕೆ ಮರಳಲಾರಂಭಿಸಿದರು. ಅದುವರೆಗೂ ಅವರ ಜೊತೆಯಲ್ಲಿ ಕೆಲಸಕ್ಕಿದ್ದ ಸ್ಥಳೀಯ ಜನರು ಕೆಲಸ ಕಳೆದುಕೊಂಡು ಭವಿಷ್ಯದ ಬಗ್ಗೆ ಯೋಚಿಸಲಾರಂಭಿಸಿದ್ದರು. ಪೋರ್ಚುಗೀಸರು ಮರಳುವಾಗ ನಿಷ್ಟರೆನಿಸಿದ ತಮ್ಮಕೆಲವು ಸೇವಕರನ್ನು ತಮ್ಮ ಖರ್ಚಿನಲ್ಲೇ ತಮ್ಮ ದೇಶಕ್ಕೆ ಕೊಂಡೊಯ್ದದ್ದರಿಂದ ಇತರರಲ್ಲಿಯೂ ವಿದೇಶದಲ್ಲಿ ದುಡಿಯುವ ಆಸೆ ಮೊಳೆಯತೊಡಗಿತು. ಹೀಗೆ ಒಬ್ಬೊಬ್ಬರಾಗಿ ಪೋರ್ಚುಗೀಸ್ ಪಾಸ್ ಪೋರ್ಟಿನ ಸಹಾಯದಿಂದ ಪೋರ್ಚುಗಲ್ಗೋ, ಇಂಗ್ಲೆಂಡೋ, ಆಫ್ರಿಕಾಕ್ಕೋ ತೆರಳಿ, ದಿಯುವಿನಲ್ಲಿ ಕೇವಲ ವೃದ್ಧರು ಬಿಟ್ಟರೆ ಮಕ್ಕಳು ಉಳಿಯುವಂತಾಯಿತು. ಊರಿನಲ್ಲಿ ಇಷ್ಟೆಲ್ಲಾ ಕಾರುಬಾರು ನಡೆಯುತ್ತಿರಬೇಕಾದರೆ ರೋಶನ್ ಕೂಡ ವಿದೇಶಕ್ಕೆ ಹೋಗುವ ಕನಸು ಕಾಣತೊಡಗಿದ್ದ. ಪೋರ್ಚುಗಲ್ ಬಾರದಿದ್ದರೂ, ತರಗತಿಯಲ್ಲಿ ಕಲಿತ ಅಲ್ಪ ಸ್ವಲ್ಪ ಇಂಗ್ಲೀಷಿನ ಸಹಾಯದಿಂದ ಇಂಗ್ಲೆಂಡಿಗೆ ಹೋಗಬಹುದೆಂಬ ಆಸೆ ಪ್ರಭಲವಾಗುತ್ತಾ ಬಂದಿತು. ತನ್ನ ಹಂಬಲವನ್ನು ತಾಯಿಯ ಮುಂದಿಟ್ಟರೆ ಆಕೆಯಿಂದ ಪ್ರೋತ್ಸಾಹವಾಗಲೀ, ನಿರಾಕರಣೆಯಾಗಲೀ ಕಂಡು ಬರಲಿಲ್ಲ. ಆಕೆಯ ಮೌನವನ್ನು ಸಮ್ಮತಿಯೆಂದು ಬಗೆದು ರೋಶನ್ ಸೋಲಂಕಿಯವರ ಮನೆಯವರಿಗೆ ತಿಳಿಸುವ ಸಲುವಾಗಿ ಅವರ ಮನೆಯತ್ತ ಪಾದ ಬೆಳೆಸಿದ. ತಮ್ಮ ಹಿತೈಷಿಯೂ ಅಲ್ಲದೆ ಅವನ ಈ ಪ್ರಯಾಣಕ್ಕೆ ಅವರ ನೆರವಿನ ಅಗತ್ಯವಿದ್ದುದರಿಂದ ಅವರ ಸಲಹೆ ಅವನಿಗೆ ಅಗತ್ಯವಿತ್ತು. ಮನೆಯ ಯಜಮಾನರಲ್ಲಿ ತನ್ನ ಹಂಬಲ ತಿಳಿಸಿದಾಗ, ಅವರು ಅವನ ವಿಚಾರವನ್ನು ಪ್ರೋತ್ಸಾಹಿಸಿದ್ದೂ ಅಲ್ಲದೆ, ಅವನಿಗೆ ಹಣವನ್ನು ಸಾಲವಾಗಿ ಕೊಡುವ ಭರವಸೆಯನ್ನೂ ಇತ್ತರು. ಸೋಲಂಕಿಯವರು ಇಂಗ್ಲೆಂಡಿನಲ್ಲಿ ತಮಗೆ ಪರಿಚಯವಿರುವವರನ್ನು ಸಂಪರ್ಕಿಸಿ, ಅಲ್ಲಿನ ಪ್ರಮುಖ ಹೋಟೆಲ್ ಒಂದರ ಪಾರಿಚಾರಕ ಕೆಲಸವನ್ನು ಇವನಿಗಾಗಿ ಕಾಯ್ದಿರಿಸಿದರು. ಮುಂಬೈನಲ್ಲಿ ಪಾಸ್ ಪೋರ್ಟ್ ಅರ್ಜಿ ಹಾಕಿ, ಒಂದು ತಿಂಗಳಲ್ಲೆಲ್ಲಾ ಅದು ಮಂಜೂರಾಗಿ, ಮುಂದಿನ ತಿಂಗಳಲ್ಲಿ ಇಂಗ್ಲೆಂಡಿಗೆ ತೆರಳುವ ನಿರ್ಧಾರ ಕೈಗೊಂಡ.



ಕಾಂತಾಳಿಗೆ ಮಗನ ನಿರ್ಗಮನ ಸಂತೋಷ ತರುವಂತದ್ದಲ್ಲವಾದರೂ, ಅವನ ಭವಿಷ್ಯಕ್ಕೆ ತಣ್ಣೀರೆರಚಬಾರದೆಂದು ಮೌನವಹಿಸಿದ್ದಳು. ತಮ್ಮ ಹಿತೈಷಿಗಳ ಅಭಿಪ್ರಾಯದಿಂದ ಮನಸ್ಸು ನಿರಮ್ಮಳವಾದರೂ ಮುಂದೊದಗಬಹುದಾದ ಒಂಟಿತನವನ್ನು ನೆನೆದು ದುಃಖದಿಂದಲೇ ಮಗನನ್ನು ಬೀಳ್ಕೊಟ್ಟಿದ್ದಳು. ಮಗನ ನಿರ್ಗಮನದಿಂದ ಆಕೆಯ ದೈನಂದಿನ ಆವಶ್ಯಕತೆ ಕಡಿಮೆಯಾದ್ದರಿಂದ, ದೈಹಿಕ ಅನಾನುಕೂಲತೆಯಿಂದ ಮಾಡುವ ಕೆಲಸ ಕಡಿಮೆ ಮಾಡಿಕೊಂಡಿದ್ದರೂ, ಹೂವು ಮಾರುವ ಕೆಲಸ ಹಾಗೂ ಸೋಲಂಕಿಯವರ ಮನೆಯಲ್ಲಿ ದುಡಿಯುವುದನ್ನು ಬಿಡಲಿಲ್ಲ. ಯಜಮಾನರ ಮನೆಯಲ್ಲಿ ದೊರೆಯುವ ಹೆಂಗಸರ ಸಹವಾಸ,ಅಲ್ಲಿಯ ಮಕ್ಕಳ ಚಾಕರಿ ಆಕೆಯ ಒಂಟಿ ಜೀವನಕ್ಕೆ ಆವಶ್ಯವಾಗಿದ್ದಿತು.



ರೋಶನ್ ದಿಯುವನ್ನು ಬಿಟ್ಟು ಸುಮಾರು ಎರಡು ವರ್ಷಗಳಾಗಿತ್ತು. ಮೊದಲೆರಡು ವರ್ಷಗಳಲ್ಲಿ ಕಷ್ಟಪಟ್ಟು ಸಾಲ ತೀರಿಸಿ, ತಾಯಿಗಾಗಿ ಪ್ರತೀ ತಿಂಗಳೂ ಒಂದಿಷ್ಟು ಹಣ ಹಾಗೂ ಯೋಗಕ್ಷೇಮದ ಬಗ್ಗೆ ನಾಲ್ಕು ಸಾಲಿನ ಪತ್ರವನ್ನು ಕಳುಹಿಸುತ್ತಿದ್ದ. ಕಾಂತಾಳಿಗೆ ಹಣದ ಆವಶ್ಯಕತೆ ಇರದಿದ್ದುದರಿಂದ ಮಗನ ಹಣವನ್ನು ಮುಂದೆ ಬೇಕಾಗಬಹುದೆಂಬ ಉದ್ದೇಶದಿಂದ ಕೂಡಿಡುತ್ತಿದ್ದಳು. ಸ್ವೇಚ್ಛೆಯ ಪರಿಸರ, ಕೈಯಲ್ಲಿ ಕಾಸು ರೋಶನ್ ಮನದಲ್ಲಿದ್ದ ಅಭಾವ ವೈರಾಗ್ಯವನ್ನು ತೊಲಗಿಸಿತು. ಹಿಂದೆ ತನಗೆ ಅಲಭ್ಯವಾಗಿದ್ದ ಕುಡಿತ, ಹುಡುಗಿಯರ ಸಹವಾಸ ಆತನಿಗೆ ಇಲ್ಲಿ ಅನಾಯಾಸವಾಗಿ ಲಭಿಸುತ್ತಿತ್ತು. ದಿನ ಕಳೆದಂತೆ ಅವನ ಆವಶ್ಯಕತೆ, ಸ್ವೇಚ್ಛೆ ಹೆಚ್ಚಿ, ಕೊಟಡಿ ಶುಚಿಗೊಳಿಸುವಾಗ ಪುಡಿಗಾಸನ್ನೂ, ಹೋಟೆಲಿನಲ್ಲಿ ಮದ್ಯವನ್ನೂ ಕದಿಯುವ ಹವ್ಯಾಸ ಬೆಳೆಸಿಕೊಂಡ. ಇವನ ನಡವಳಿಕೆಗೆ ಬೇಸತ್ತು ಅಲ್ಲಿನ ಮೇಲಧಿಕಾರಿಗಳು ಆತನನ್ನು ಕೆಲಸದಿಂದ ಬಿಡಿಸಿದರು. ಮುಂದೆ ತನ್ನ ಒಬ್ಬ ಮಿತ್ರರ ಸಹಾಯದಿಂದ ವಿಮಾನ ನಿಲ್ದಾಣವನ್ನು ಶುಚಿಗೊಳಿಸುವ ಕೆಲಸಕ್ಕೆ ಸೇರಿಕೊಂಡ. ಭಾರತದ ಕೆಲಸಗಾರರು ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದುದರಿಂದ, ಕೆಲಸ ದೊರಕಿಸಿಕೊಳ್ಳುವುದು ಈತನಿಗೆ ಕಷ್ಟವಾಗಲಿಲ್ಲ. ಮಗನ ನಡವಳಿಕೆಯನ್ನು ಊರಿನ ಜನರ ಬಂಧು ಮಿತ್ರರ ನೆರವಿನಿಂದ ಅರಿತ ಕಾಂತಾ ಬೆನ್, ಮನನೊಂದು ಮಗನನ್ನು ಸರಿಯಾದ ದಾರಿಗೆ ತರಲು ಆತನಿಗೆ ಮದುವೆಯ ಆವಶ್ಯಕತೆಯನ್ನು ನೆನೆದು, ಅವರಿವರನ್ನು ಕಾಡಿ ತನ್ನ ಮಗನಿಗೆ ವಧುವನ್ನು ನಿಷ್ಚಯ ಮಾಡಿದಳು. ಮಗನಿಗೆ ಕಾಗದವನ್ನು ಬರೆಯಿಸಿ, ಮುಂದಿನ ದೀಪಾವಳಿಗೆ ಊರಿಗೆ ಬರಬೇಕೆಂದೂ, ತಾನು ಆತನಿಗಾಗಿ ಹುಡುಗಿಯನ್ನು ಗೊತ್ತುಮಾಡಿರುವುದಾಗಿಯೂ ಪತ್ರ ಬರೆಸಿದಳು. ಆತನಿಗೂ ತನ್ನವರು ಒಬ್ಬರು ಬೇಕೆನಿಸಿದ್ದರಿಂದ, ತಾಯಿಯ ಮಾತಿಗೆ ಸಮ್ಮತಿಯಿತ್ತು ಮರುಪತ್ರ ಬರೆದು ಮುಂದಿನ ದೀಪಾವಳಿಗೆ ಊರಿಗೆ ಬರುವುದಾಗಿ ತಿಳಿಸಿದ.



ಮಗನ ಆಗಮನದಿಂದ ಕಾಂತಾಳ ಜೀವನದಲ್ಲಿ ಹೊಸ ಹುರುಪು ಹುಟ್ಟಿತ್ತು. ಮದುವೆ ದೀಪಾವಳಿಗೆ ೧೫ದಿನ ಮುಂಚಿತವಾಗಿ ಗೊತ್ತುಮಾಡಿದ್ದರು. ಸೋಲಂಕಿಯವರ ಅಪ್ಪಣೆ ಪಡೆದು ಮನೆಗೆ ಸುಣ್ಣ, ಬಣ್ಣ ಬಳಿದು ಅಂದಗೊಳಿಸಿದರು. ಆಭರಣಗಳು ಕಾಂತಾಳದ್ದೇ ಇದ್ದುವಾದ್ದರಿಂದ ಬಟ್ಟೆ ಬರೆ, ಉಡುಗೊರೆಗಳನ್ನು ಕೊಂಡು ಮದುವೆಯನ್ನು ಅದ್ಧೂರಿಯಲ್ಲದಿದ್ದರೂ ಸಾಂಗವಾಗಿ ನೆರವೇರಿಸಿದರು. ಮುಂದಿನ ಕೆಲವು ದಿನಗಳಲ್ಲಿ ನವ ದಂಪತಿಗಳು ತಮ್ಮ ಪರಿಚಿತರ ಮನೆಗೆ ತೆರಳಿ, ಉಡುಗೊರೆ, ಹಿರಿಯರ ಆಶೀರ್ವಾದ ಪಡೆಯುವುದರಲ್ಲಿ ಕಳೆದರು. ದೀಪಾವಳಿಯ ಹಿಂದಿನ ರಾತ್ರಿ ಅತ್ತೆ, ಸೊಸೆ ಸೇರಿ ವಿವಿಧ ಭಕ್ಷ್ಯಗಳನ್ನು ತಯಾರಿಸಿದರು. ಮೊದಲ ದಿನ ಆಭರಣದ ಅಂಗಡಿಗೆ ತೆರಳಿ ಶಾಸ್ತ್ರಕ್ಕೆ ಹೊಸ ಆಭರಣ ಕೊಂಡು, ಸಂಪತ್ತಿನ ಅಧಿ ದೇವತೆಯಾದ ಲಕ್ಷಿಗೆ ಪೂಜೆ ಸಲ್ಲಿಸಿದರು. ಮನೆಯ ಮುಂದೆ ರಂಗೋಲಿಯ ಚಿತ್ತಾರಗಳನ್ನು ಬಿಡಿಸಿ, ಬಣ್ಣ ತುಂಬಿ, ಮುಸ್ಸಂಜೆಯಾಗುತ್ತಿದಂತೆಯೆ ಹಣತಿಗೆಯ ದೀಪದಿಂದ ಮನೆಯನ್ನೆಲ್ಲಾ ಅಲಂಕರಿಸಿದರು. ಎರಡನೆಯ ದಿನದಂದು, ಹೆಂಗಸರು ತಲೆ ಸ್ನಾನ ಮುಗಿಸಿ ಊರ ಮುಂಬಾಗಿಲಿನಲ್ಲಿರುವ ಹನುಮಂತನ ಗುಡಿಗೆ ತೆರಳಿದರು. ಹನುಮಂತನಿಗೆ ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ, ಮನೆಯಿಂದ ತಂದಿದ್ದ ಚೂರಿಯನ್ನು ದೀಪಕ್ಕೆ ಹಿಡಿದು ಮಸಿ ಸಂಗ್ರಹಿಸಿ, ಕೆಟ್ಟ ದೃಷ್ಟಿಯಿಂದ ರಕ್ಷಣೆಗಾಗಿ ಅದನ್ನುಕಾಡಿಗೆಯಂತೆ ಕಣ್ಣಿಗೆ ಲೇಪಿಸಿಕೊಂಡರು. ಮೂರನೇ ದಿನದಂದು ಗಣೇಶನ ಹಾಗೂ ಲಕ್ಶ್ಮಿಯ ಪೂಜೆ ನೆರವೇರಿಸಿದರು. ನಾಲ್ಕನೆಯ ದಿನ ಗುಜರಾತಿಗಳಿಗೆ ಹೊಸವರ್ಷವಾದ್ದರಿಂದ ಹೊಸ ಉಡುಪು, ಆಭರಣಗಳನ್ನು ಧರಿಸಿ ಬಂಧು ಬಾಂಧವರೊಂಡಗೂಡಿ ಉಡುಗೊರೆಯನ್ನು ಹಂಚಿಕೊಂಡರು. ಕೊನೇಯ ದಿನ ನವ ವಧು ಪತಿಯೊಡನೆ ತವರಿಗೆ ತೆರಳಿ, ತನ್ನ ಸಹೋದರರಿಗೆ ಆರತಿ ಬೆಳಗಿ, ತಿಲಕವಿಟ್ಟು, ಅವರ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ತಿಸಿ, ಊಡುಗೊರೆಗಳೊಂದಿಗೆ ತಿರುಗಿ ಮನೆ ಸೇರಿದರು. ತನ್ನವರ ಒಡನಾಟದಲ್ಲಿ ಕಾಂತಾಳಿಗೆ ದಿನಗಳು ಉರುಳಿದ್ದರ ಪರಿವೆಯೇ ಆಗಲಿಲ್ಲ, ತನ್ನ ಮದುವೆಯ ಕಾಲದಲ್ಲೂ ಸಂಭ್ರಮಿಸದಂತಹ ದೀಪಾವಳಿ ಅವಳ ಪಾಲಿಗೆ ಇದಾಗಿತ್ತು.ತನ್ನ ಹೊಸ ಸಂಗಾತಿಯೊಡನೆ ರೋಶನ್ ಮತ್ತೆ ಇಂಗ್ಲೆಂಡಿಗೆ ಹೊರಟು ನಿಂತ. ಭಾರವಾದ ಹೃದಯದಿಂದ ಕಾಂತಾ ಬೆನ್ ತನ್ನ ಮಗ, ಸೊಸೆಯನ್ನು ಬೀಳ್ಕೊಟ್ಟು ಮತ್ತೆ ತನ್ನ ದೈನಂದಿನ ಕಾರ್ಯದಲ್ಲಿ ತೊಡಗಿಕೊಂಡಳು.



ಅದೇ ಆಕೆಯ ಮನದಲ್ಲುಳಿದ ಕೊನೇಯ ದೀಪಾವಳಿಯಾಗಿತ್ತು. ಅತ್ತ ಹಣದ ನೆಪವೊಡ್ಡಿ ಮಗ ಮತ್ತೆ ಊರಿಗೆ ಹಿಂದಿರುಗಲಿಲ್ಲ, ಇತ್ತ ಇಳಿ ವಯಸ್ಸಿನಲ್ಲಿ ಆಕೆಗೆ ಇಂಗ್ಲೆಂಡಿಗೆ ಹೋಗಬೇಕೆಂಬ ಹಂಬಲವೂ ಇರಲಿಲ್ಲ. ಪತ್ರದಿಂದ ಮೊಮ್ಮಗನ ಸುದ್ದಿ ಕೇಳಿ ತಿಳಿದು, ಹರಸಿ, ಆತನನ್ನು ಎಂದು ನೋಡುವೆನೋ ಎಂದು ಕಾತುರಳಾಗಿದ್ದಳು. ಎಂದಿನಂತೆ ಮಾರುಕಟ್ಟೆಯಲ್ಲಿ ಹೂವಿನ ಖರೀದಿಗೆ ತೊಡಗಿದ್ದ ಕಾಂತಾ, ತನ್ನ ಮೊಮ್ಮಗನ ವಯಸ್ಸನ್ನೆಣಿಸುತ್ತಿದ್ದಳು, ಆತನ ಮದುವೆಯ ನೆಪದಿಂದ ಲಭಿಸುವ ಕೊನೇಯ ದೀಪಾವಳಿಯನ್ನು ನೋಡುವ ಹಂಬಲದಿಂದ.

Wednesday, October 22, 2008

ಪಿತೃ ವಾತ್ಸಲ್ಯ

ನವರಾತ್ರಿಯ ಒಂದು ರಜಾ ದಿನ, ಪ್ರಥಮ ಪಿ.ಯು. ಓದುತ್ತಿದ್ದ ನಾನು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ, ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯಾಸ್ತಮಾನವನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ ನೋಡುತ್ತಿದ್ದೆ. ಸಮಯ ಕಳೆದಂತೆ, ಪಡುವಣದಿಂದ ಮುಗಿಲೆದ್ದು, ವಿವಿಧಾಕೃತಿಯನ್ನು ತಳೆದು, ಬಣ್ಣ ಬಳಿದುಕೊಂಡ ಆಗಸ ಆಕರ್ಷಕವಾಗಿ ಕಾಣಿಸತೊಡಗಿತು. ಮಧ್ಯಾಹ್ನದಿಂದ ಒಂದೇ ಸಮನೆ ಓದುತ್ತಿದ್ದ ನನಗೆ, ಮನದ ವಿಶ್ರಾಂತಿಗಾಗಿ ಬದಲಾವಣೆಯ ಅಗತ್ಯ ತೋರಿದ್ದರಿಂದ, ಅಮ್ಮನಿಗೆ ತಿಳಿಸಿ, ನನ್ನ ಸೈಕಲ್ ಏರಿ, ಮನೆಯಿಂದ ೧ ಕಿ.ಮೀ. ದೂರವಿರುವ ಕಡಲಿನ ಕಡೆಗೆ ತೆರಳಿದೆನು. ಹೊರಡುವಾಗ ಸೂರ್ಯ ಮುಳುಗಿದ ಕೆಲವು ಗಳಿಗೆಯಲ್ಲಿ ಮನೆ ಸೇರುತ್ತೇನೆ ಎಂದೂ, ನೀರಿಗಿಳಿಯುವುದಿಲ್ಲ ಎಂದು ಮನೆಯವರಿಗೆ ಭರವಸೆಯಿತ್ತು ಬಂದಿದ್ದೆ.



ದಾರಿಯ ಇಕ್ಕೆಲಗಳಲ್ಲಿ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ, ತೆನೆ ತುಂಬಿ, ಸುಳಿದಾಡುವ ಗಾಳಿಗೆ ತೆಲೆದೂಗುವ ಭತ್ತದ ಗದ್ದೆ, ಮಧ್ಯದಲ್ಲಿ ಅಲ್ಲಲ್ಲಿ ಎತ್ತರವಾಗಿ ತಲೆಯೆತ್ತಿ ನಿಂತ ತಾಳೆ ಮರಗಳು, ಅದರ ಗರಿಗಳಿಗೆ ಜೋತು ಬಿದ್ದಂತೆ ಕಟ್ಟಿದ ಗೀಜಗನ ಗೂಡು, ದಾರಿಯಲ್ಲಿ ಕಡಲಿನ ಹಿನ್ನೀರಿಗೆ ಹಾಕಿದ ಪುಟ್ಟ ಸೇತುವೆ, ಅದರ ಮಗ್ಗುಲಲ್ಲಿರುವ ಮೀನಿನ ಕಾರ್ಖಾನೆ, ಮುಂದೆ ಸಿಗುವ ಹೊಯಿಗೆಯ ಬೆಟ್ಟು, ಅದರ ನೆತ್ತಿಯಲ್ಲೊಂದು ಬೊಬ್ಬರ್ಯನ ಗುಡಿ, ಸುತ್ತ ಗಾಳಿ ಮರ, ಪಕ್ಕದಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಆಡುತ್ತಿರುವ ಹುಡುಗರ ತಂಡ, ಚಿಕ್ಕ ಪುಟ್ಟ ಅಂಗಡಿಗಳು, ಮೀನು ಸಂರಕ್ಷಣೆಗಾಗಿ ತಯಾರಿಸುವ ಮಂಜುಗಡ್ಡೆ ಕಾರ್ಖಾನೆ, ಬಂಡೆಯಂತಹ ಮಂಜುಗಡ್ಡೆಯನ್ನು ದೊಡ್ಡ ದೊಡ್ಡ ಸುತ್ತಿಗೆಯಲ್ಲಿ ಪುಡಿ ಮಾಡಿ ಮೀನಿನ ಲಾರಿಯಲ್ಲಿ ತುಂಬಿಸುವ ಮೊಗವೀರರು, ಕಳ್ಳಿನಂಗಡಿ, ಪುಡಿ ಮೀನು ಮಾರುವ ಬೆಸ್ತರ ಹೆಂಗಸರು, ಅವರು ಬಿಸಾಕಬಹುದಾದಂತಹ ಹಾಳಾದ ಮೀನಿಗಾಗಿ ಆಸೆಯಿಂದ ನೋಡುತ್ತಿರುವ ನಾಯಿಗಳು, ಬೆಕ್ಕುಗಳು, ಆಗ್ಗೆ ಸುಮಾರು ೧೦ ವರ್ಷದಿಂದಲೂ ನೋಡುತ್ತಿರುವುದು ಇದೇ ಸನ್ನಿವೇಷದ ಪುನರಾವರ್ತೆನೆಯಾದರೂ, ಆ ದಾರಿಯಲ್ಲಿ ಸಾಗುವುದು ಇಂದಿಗೂ ಕೂಡ ನನಗೆ ಪ್ರಿಯವಾಗಿದೆ.



ಕಡಲು ಸಮೀಪಿಸುತ್ತಿದ್ದಂತೆ ದಂಡೆಯಲ್ಲಿ ವಿಶಾಲವಾಗಿ ಹರಡಿದ ತೆಂಗಿನ ತೋಪು, ಶುಭ್ರವಾದ ಬಿಳಿ ಬಣ್ಣದ ಹೊಯಿಗೆ ರಾಶಿ,ಸ್ವಾಗತಿಸುತ್ತಿತ್ತು.ಕಡಲಿನಲ್ಲಿ ಬಹು ದೂರ ಸಾಗಿ, ಮೀನಿನ ಹೊರೆ ಹೊತ್ತುಕೊಂಡು ಮರಳಿದ್ದ ಮರದ ದೋಣಿಗಳು, ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಕಡಲ ಹಕ್ಕಿಗಳು ತೆರೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿ, ಏಡಿಗಳನ್ನು ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿತ್ತು. ಸೈಕಲ್ಲಿನಿಂದ ಇಳಿದು ಹೊಯಿಗೆಯಲ್ಲಿ ನಡೆಯುತ್ತಾ, ನನ್ನ ಆಗಮನದಿಂದ ಬೆದರಿದ ಏಡಿಗಳನ್ನು ಅವುಗಳ ಗೂಡಿಗೆ ಓಡಿಸುತ್ತಾ ಮುಂದುವರೆಯುತ್ತಿದ್ದೆ. ನಶೆಯೇರಿಸಿಕೊಂಡು ದಾರಿಯಲ್ಲಿ ತಿರುಗುತ್ತಿರುವವರನ್ನು ಮಾತನಾಡಿಸುತ್ತಾ, ಅವರು ವಿರಳವಾಗತೊಡಗಿದ ನಂತರ ನಡಿಗೆಯನ್ನು ನಿಲ್ಲಿಸಿ ಮರಳಿನ ಮೇಲೆ ಮಲಗಿ ಆಗಸದ ಸವಿಯನ್ನು ಸವಿಯತೊಡಗಿದೆ.ನನಗೆ ಸೂರ್ಯಾಸ್ತಮಾನಕ್ಕಿಂತಲೂ, ಅದರ ನಂತರ ಮುಗಿಲಿನಲ್ಲಾಗುವ ಕಲಾಕೃತಿಯನ್ನು ನೋಡುವುದು ಹೆಚ್ಚು ಪ್ರಿಯ. ಸೂರ್ಯಾಸ್ತಮಾನದಲ್ಲಿ ಕೇವಲ ಹಳದಿ, ಕಿತ್ತಳೆ ವರ್ಣಸಂಯೋಜನೆಯಿದ್ದರೆ, ಅದರ ನಂತರದ ಬಣ್ಣಗಳಾದರೋ ಹಲವು ಬಗೆಯದು, ಅದು ರಚಿಸುವ ಕಲಾಕೃತಿ ಪ್ರತಿ ದಿನವೂ ವಿನೂತನ.



ಕತ್ತಲಾಗತೊಡಗಿದ್ದರಿಂದ ಮರಳುವ ನಿರ್ಧಾರ ಮಾಡಿದೆ. ಮತ್ತೆ ಸೈಕಲ್ ಹತ್ತಿ, ದಾರಿದೀಪವಿಲ್ಲದ, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಿಧಾನಕ್ಕೆ ಸಾಗುತ್ತಿರಬೇಕಾದರೆ, ನನ್ನ ಸ್ನೇಹಿತನ ಬಳಿಯಿರುವ ಪುಸ್ತಕದ ನೆನಪಾಯಿತು. ನಾನು ಹಲವು ದಿನಗಳಿಂದ ಓದಬೇಕೆಂದಿದ್ದ ಪುಸ್ತಕವನ್ನು ಅವನು ಓದಿ ಮುಗಿಸಿದ್ದರಿಂದ, ಅದನ್ನು ಎರವಲು ತಂದು ಓದಬೇಕೆಂದಿದ್ದೆ. ೧೦ ನಿಮಿಷದ ಕೆಲಸ ಎಂದು ಬಗೆದು ಮನೆಯಕಡೆ ಹೋಗದೆ ಸ್ನೇಹಿತನ ಮನೆಯ ಕಡೆ ಸಾಗಿದೆನು. ಕುಶಲೋಪರಿಯನಂತರ ಪುಸ್ತಕವನ್ನು ಕೊಂಡು ಮನೆಗೆ ಮರಳಬೇಕೆಂದಿರುವಾಗ, ಸ್ನೇಹಿತನ ಅಜ್ಜಿ "ನವರಾತ್ರಿ ಪೂಜೆಯ ಊಟ ಮಾಡಿ ಹೋಗು" ಎಂದರುಹಿದರು. ಬಳಕೆಯ ಮನೆಯಾದ್ದರಿಂದ ಹಾಗೂ ಭೋಜನ ಪ್ರಿಯನಾದ್ದರಿಂದ, ಅವರ ಮಾತಿಗೆ ಒಪ್ಪಿ, ಸ್ನೇಹಿತನೊಂದಿಗೆ ಹರಟೆ ಕೊಚ್ಚುತ್ತಾ ಕುಳಿತೆ. ಪುರೋಹಿತರ ಮನೆಯಾದ್ದರಿಂದ ಪೂಜೆ ಸಾವಕಾಶವಾಗಿಯೇ ಸಾಗಿತು. ೮:೩೦ರ ಸಮಯಕ್ಕೆ ಊಟದ ಕರೆ ಬಂದದ್ದರಿಂದ ಕೈ ಕಾಲು ತೊಳೆದು, ಬಾಳೆ ಎಲೆಯ ಮುಂದೆ ಕುಳಿತೆನು. ಕೋಸುಂಬರಿ, ಚಟ್ನಿ, ಮೂರ್ನಾಲ್ಕು ಬಗೆಯ ಪಲ್ಯ, ಚಿತ್ರಾನ್ನ, ಅನ್ನ, ಅದರ ಮೇಲೊಂದಿಷ್ಟು ತುಪ್ಪ, ಕೊನೇಯದಾಗಿ ತೊವ್ವೆ ಬಡಿಸಿದ ಮೇಲೆ "ಹರಹರ ಮಹದೇವ" ಎಂಬ ಘೋಷಣೆಯೊಂದಿಗೆ ನಮ್ಮ ಊಟ ಆರಂಭವಾಯಿತು. ಪದ್ಧತಿಯಂತೆ ಸುತ್ತು ಕಟ್ಟಿ, ಬಡಿಸಿದ ಪದಾರ್ಥಗಳನ್ನು ಒಂದೊಂದಾಗಿ ಭುಂಜಿಸುತ್ತಿದ್ದಂತೆ, ಒಂದರ ಹಿಂದೊಂದರಂತೆ, ಸಾರು,ಹಪ್ಪಳ, ಸಂಡಿಗೆ, ಸೌತೇಕಾಯಿ ಹುಳಿ, ಅನಾನಾಸಿನ ಮುದ್ದು ಹುಳಿ, ಬದನೇಕಾಯಿ ಕಾಯಿ ಹುಳಿ, ಅಲಸಂಡೆಯ ಮಜ್ಜಿಗೆ ಹುಳಿ,ವಿವಿಧ ಬಗೆಯ ಭಕ್ಷ್ಯಗಳು, ಬೆಲ್ಲದ ಪಾಯಸ, ಹಣ್ಣಿನ ರಸಾಯನಗಳನ್ನು ಸವಿದು, ಮಜ್ಜಿಗೆಗಾಗಿ ಅನ್ನ ಹಾಕಿಸಿಕೊಂಡು ಕಟ್ಟೆ ಕಟ್ಟುತ್ತಿರಬೇಕಾದರೆ ಅವರ ಮನೆಯ ದೂರವಾಣಿ ರಿಂಗಿಸಲಾರಂಭಿಸಿತು. ಸ್ನೇಹಿತ ಕರೆಯನ್ನು ಸ್ವೀಕರಿಸಿ "ಹೌದು ಇಲ್ಲೇ ಊಟ ಮಾಡುತ್ತಾ ಇದ್ದಾನೆ" ಎಂದು ನನ್ನ ಕಡೆ ನೋಡಿ, ನಿಮ್ಮ ಮನೆಯವರು ಎಂದು ಅರುಹಿದ.



೬ ಗಂಟೆಗೆ ಮನೆ ಬಿಟ್ಟ ಒಬ್ಬನೇ ಮಗ, ಮನೆಗೆ ಹಿಂದಿರುಗದೇ ಇದ್ದುದಕ್ಕಾಗಿ ಗಾಬರಿಯಾಗಿ ಕರೆ ಮಾಡಿರಬಹುದೆಂದು ತಿಳಿದು, ಊಟ ಮುಗಿಸಿ ಆತುರ, ಅಳುಕಿನೊಂದಿಗೆ ಮನೆಯ ಕಡೆ ತೆರಳಿದೆ. ದಾರಿಯಲ್ಲಿ ಸಿಕ್ಕಿದ ಎಲ್ಲಾ ಅಂಗಡಿಯವರ ನೋಟ ಎಂದಿನಂತಿರದೆ ವಿಚಿತ್ರವಾಗಿತ್ತು. ಮನೆಗೆ ಹೋದರೆ,ಅಪ್ಪ, ಅಮ್ಮ, ಎದುರು ಮನೆ ಚಿಕ್ಕಪ್ಪ, ಪಕ್ಕದೂರಿನ ಬಾವ,ಅಕ್ಕಂದಿರು, ಪಕ್ಕದ ಮನೆಯವರು ಎಲ್ಲರೂ ನನ್ನ ಬರವಿಗಾಗಿ ಕಾದಿದ್ದರು. ನನ್ನ ಬೇಜವಾಬ್ದಾರಿ ತನಕ್ಕೆ, ಎಲ್ಲರಿಂದಲೂ ಮಂಗಳಾರತಿ ಮಾಡಿಸಿಕೊಂಡು, ಎನೂ ಮಾತನಾಡದೆ ಚಾಪೆ ಬಿಡಿಸಿ ಮಲಗಿದೆ. ಕೇವಲ ಮನೆಗೆ ತಿಳಿಸದೆ ಊಟಕ್ಕೆ ಹೋಗಿದ್ದಕ್ಕಾಗಿ, ಊರನ್ನೆಲ್ಲಾ ಹುಡುಕಿ, ನನ್ನ ಮಾನ ಕಳೆದು ಹಾಕಿದರಲ್ಲಾ, ನಾನು ನಾಳೆಯಿಂದ ಊರಿನವರಿಗೆ ಹೇಗೆ ಮುಖ ತೋರಿಸಲಿ, ಅವರು ಕೇಳುವ ಪ್ರಶ್ನೆಗಳಿಗೆ ಏನೆಂದು ಉತ್ತರ ಕೊಡಲಿ, ಎಂದು ಅಪ್ಪನ ಮೇಲೆ ಕೋಪಗೊಂಡೆ. ನನ್ನ ಮೊಂಡುತನಕ್ಕೆ ಬೇಸತ್ತು ನನ್ನ ಅಮ್ಮ ನಾ ಮಲಗಿದ್ದಲ್ಲಿಗೆ ಬಂದು ನಡೆದ ಘಟನೆಯನ್ನು ಸವಿಸ್ತಾರವಾಗಿ ಹೇಳತೊಡಗಿದಳು. ೭:೩೦ ಆದರೂ ಕಡಲಿನಿಂದ ಹಿಂದಿರುಗದಿದ್ದರಿಂದ ನೀರಿಗಿಳಿದು ಏನಾದರೂ ಅನಾಹುತ ಮಾಡಿಕೊಂಡೆನೋ ಎಂದು ಬಗೆದ ಅಪ್ಪ, ಉಬ್ಬಸದಿಂದ ಏಗುತ್ತಿರುವ ಶರೀರ ಹೊತ್ತುಕೊಂಡು, ಕಡಲಿನವರೆಗೂ ಕಾಲ್ನಡಿಗೆಯಿಂದ ಸಾಗಿ, ಎರಡು ಮಗ್ಗುಲಲ್ಲೂ ತಮ್ಮ ಕುರುಡು ಟಾರ್ಚ್ನಿಂದ ಹುಡುಕಿ, ನನ್ನ ಕುರುಹು ಕಾಣದೆ, ಎಲ್ಲಾ ಅಂಗಡಿಗಳಲ್ಲೂ ವಿಚಾರಿಸಿ ಅಲ್ಲಿಯೂ ಎನೂ ಸುಳಿವು ದೊರಕದೆ, ಒಬ್ಬೊಬ್ಬರಿಗಾಗಿ ಕರೆ ಮಾಡ ತೊಡಗಿ, ನನ್ನ ಸ್ನೇಹಿತನ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಮೇಲೇ ಅವರು ನಿರಮ್ಮಳರಾದರೆಂದು. ಇದನ್ನು ಕೇಳುತ್ತಾ ನನ್ನ ದಿಂಬು ನನಗರಿವಿಲ್ಲದಂತೆಯೇ ತೋಯ್ದಿತ್ತು, ಈ ವರ್ಷ ಎಂದಿಗಿಂತ ತುಸು ಹೆಚ್ಚೇ ಉಬ್ಬಸದಿಂದ ಬಳಲಿದ್ದರೂ, ಅವರು ತೋರಿದ ಮಮತೆಯ ಮುಂದೆ ನನ್ನ ಅವಮಾನ ತುಂಬಾ ಚಿಕ್ಕದೆನಿಸಿತು.

Friday, October 17, 2008

ಅಂಗೈಯಲ್ಲಿ ಕಚಗುಳಿ

ಚಿಕ್ಕವರಿದ್ದಾಗ ತೋಟದ ಮೂಲೆಯಲ್ಲೆಲ್ಲೋ, ಒಣಗಿದ ಹುಡಿಯಾದ ಮಣ್ಣಿನಲ್ಲಿ ಆಲಿಕೆಯಾಕಾರದ ಗುಳಿಗಳು ಕಂಡು ಬಂದರೆ ಒಂದು ರೀತಿಯ ಸಂಭ್ರಮ. ಆ ರಚನೆಯ ಬುಡಕ್ಕೆ ಕೈ ಹಾಕಿ, ಕೈಯಲ್ಲಿನ ಮಣ್ಣನ್ನು ಸ್ವಲ್ಪ ಸ್ವಲ್ಪವೇ ಗಾಳಿಸಿ, ಕೊನೇಯಲ್ಲಿ ಉಳಿಯುವ, ನಾವು ಕರೆಯುತ್ತಿದ್ದ ಗುಬ್ಬಚ್ಚಿ (ಹಕ್ಕಿಯಲ್ಲ) ಅಥವಾ ಅಜ್ಜಿ ಹುಳವನ್ನು ಅಂಗೈಯಲ್ಲಿರಿಸಿಕೊಂಡು ಕಚಗುಳಿಯನ್ನು ಸವಿಯುವುದು ನಮ್ಮ ಆಟಗಳಲ್ಲೊಂದು.



ಈ ಹುಳದ ಮೂಲವನ್ನು ಅರಸುತ್ತಾ, ಅದರ ಚಿತ್ರವನ್ನು INWನಲ್ಲಿ ಪ್ರಕಟಿಸಿದಾಗ, ಮಿತ್ರರೊಬ್ಬರ ಸಹಾಯದಿಂದ, ಇದು "Antlion" ಎಂಬ ಕೀಟದ ಲಾರ್ವಾ ಎಂದು ತಿಳಿಯಿತು.


Antlion Larva



"Antlion"ನ ವೈಜ್ಣಾನಿಕ ವರ್ಗೀಕರಣ ಈ ಕೆಳಗಿನಂತಿದೆ:
Kingdom: Animalia
Phylum: Arthropoda
Subphylum: Hexapoda
Class: Insecta
Subclass: Pterygota
Infraclass: Neoptera
Superorder: Endopterygota or Neuropterida
Order: Neuroptera
Suborder: Myrmeleontiformia
Superfamily: Myrmeleontoidea
Family: Myrmeleontidae

Friday, October 10, 2008

ಕುಮಾರ ಪರ್ವತದಲ್ಲಿ ಚಾರಣ

ನಮ್ಮ ತಯಾರಿ

ಕರ್ನಾಟಕದಲ್ಲಿ, ಅತ್ಯಂತ ಕಠಿಣವಾದ, ರಮಣೀಯವಾದ ಕುಮಾರ ಪರ್ವತದಲ್ಲಿ ಚಾರಣ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಬಯಕೆಯಾಗಿತ್ತು.ಹಲಕೆಲವು ಕಾರಣಗಳಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಅಕ್ಟೋಬರ್ ೨ ೨೦೦೮, ಗುರುವಾರವಾಗಿದ್ದು ಗಾಂಧಿ ಜಯಂತಿಯ ಪ್ರಯುಕ್ತ ರಜೆ ಇದ್ದುದರಿಂದ, ಇದರೊಂದಿಗೆ ಶುಕ್ರವಾರದ ನನ್ನ ಖಾಸಗಿ ರಜೆ ಸೇರಿಸಿ ಸಿಗುವ ೪ ದಿನಗಳನ್ನು ನಿಸರ್ಗದೊಡನೆ ಕಳೆಯುವ ನನ್ನ ಹಂಬಲಕ್ಕೆ ಮೊದಲು ತೋಚಿದ್ದು ಕುಮಾರ ಪರ್ವತ. ನನ್ನ ಚಾರಣ ಮಿತ್ರರಲ್ಲಿ ಮೂವರು ವಿದೇಶೀ ಪಾಲದ್ದರಿಂದ, ಉಳಿದ ಇಬ್ಬರಲ್ಲಿ ಒಮ್ಮತಕ್ಕೆ ಬರಲು ಹೆಚ್ಚಿನ ಸಮಯ ತಗಲಲಿಲ್ಲ. ಈ ಮೊದಲು ರಾಘವೇಂದ್ರ ಕುಮಾರ ಪರ್ವತಕ್ಕೆ ೨ ಬಾರಿ ಭೇಟಿ ಕೊಟ್ಟಿದ್ದರೂ ಮತ್ತೆ ಅಲ್ಲಿಗೆ ಹೋಗುವ ಉತ್ಸಾಹ ತೋರಿಸಿದ. ನಮ್ಮ ಹಳೇಯ ಜೊತೆಗಾರರನ್ನು ಬಿಟ್ಟು ನಾವಿಬ್ಬರೇ ಹೋಗುವ ವಿಚಾರದಿಂದ ಮೊದಲಿಗೆ ತುಸು ಇರುಸು ಮುರುಸಾದರೂ ಅಕ್ಟೋಬರ್ ೧ರ ರಾತ್ರಿ ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಹೋಗಲಿರುವ ಕ.ರಾ.ರು.ಸಾ.ಸಂ.ನಲ್ಲಿ ೨ ಟಿಕೇಟನ್ನು ಕಾಯ್ದಿರಿಸಿದೆವು. ಟಿಕೇಟ್ ಕಾಯ್ದಿರಿಸಲು ವಿಳಂಬ ಮಾಡಿದ್ದರಿಂದ ಕೊನೇಯ ೨ ಸೀಟುಗಳಿಗೆ ತೃಪ್ತಿ ಪಡಬೇಕಾಯಿತು. ಮರಳುವ ದಿನ ನಿರ್ಧರಿಸಿರಲಿಲ್ಲವಾದ್ದರಿಂದ ಸುಬ್ರಮಣ್ಯದಿಂದ ಬೆಂಗಳೂರಿಗೆ ಬರುವ ಟಿಕೇಟನ್ನು ಕಾಯ್ದಿರಿಸಲಿಲ್ಲ.ಇದಲ್ಲದೆ ಹೊರಡುವ ದಿನ ರಾಘವೇಂದ್ರ ಬಾಡಿಗೆ ಟೆಂಟನ್ನು ತಂದದ್ದು ಬಿಟ್ಟರೆ ಇನ್ನಾವುದೇ ಪೂರ್ವ ತಯಾರಿ ಇರಲಿಲ್ಲ.



ಸ್ಥಳ ಪುರಾಣ

ದಕ್ಷಿಣ ಕನ್ನಡ ಜೆಲ್ಲೆಯ,ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ಪುಣ್ಯ ಕ್ಷೇತ್ರ, ಕರ್ನಾಟಕದ ೨ನೇ ಎತ್ತರದ ಶಿಖರವಿರುವ (ಪುಷ್ಪಗಿರಿ - ಸಮುದ್ರ ಮಟ್ಟದಿಂದ ೫೬೧೫ ಅಡಿಗಳು - ಮೊದಲನೆಯ ಎತ್ತರದ ಶಿಖರ ಮುಳ್ಳಯ್ಯನಗಿರಿ, ಎತ್ತರ ಸಮುದ್ರ ಮಟ್ಟದಿಂದ ೬೩೧೭ ಅಡಿಗಳು) ಕುಮಾರ ಪರ್ವತದ ಮಡಿಲಲ್ಲಿ ನಿಂತಿದೆ.ಆಳೆತ್ತರದ ಗೋಡೆಯಂತೆ ಭೃಹದಾಕಾರವಾಗಿ ನಿಂತಿರುವ ಪಶ್ಚಿಮ ಘಟ್ಟದ ಸಾಲು, ಮಂದಗತಿಯಿಂದ ಸಾಗುವ ಕುಮಾರ ಧಾರೆ ನದಿ, ಈ ಕ್ಷೇತ್ರಕ್ಕೆ ಹೆಚ್ಚಿನ ಸೊಬಗನ್ನು ತಂದುಕೊಟ್ಟಿದೆ. ನಾಗಾರಾಧನೆಗೆ ದೇಶದಾದ್ಯಂತ ಪ್ರಸಿದ್ಧವಾದ ಈ ಕ್ಷೇತ್ರ, ಘಾಟಿ ಸುಬ್ರಮಣ್ಯ ಹೊರತು ಪಡಿಸಿದರೆ ನಾಗಾರಾಧನೆ ನಡೆಯುವ ಏಕೈಕ ಸ್ಥಳ ಎಂದು ಖ್ಯಾತಿ ಪಡೆದಿದೆ. ಆದುದರಿಂದ ದೇಶದಾದ್ಯಂತ ಜನರು ನಾಗ ದೋಷ ಪರಿಹಾರಾರ್ಥವಾಗಿ ಇಲ್ಲಿಗೆ ಭೇಟಿ ಕೊಡುವುದುಂಟು. ಕೇವಲ ಹಿಂದುಗಳು ಮಾತ್ರವಲ್ಲದೆ ಮುಸಲ್ಮಾನರಿಗೂ ಇದು ಪೂಜನೀಯ ಸ್ಥಳವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಸಲ್ಮಾನರೂ ಕೂಡ ನಾಗರ ಪಂಚಮಿಯಂದು ತನು(ಹೂವು, ಕಾಯಿ, ಹಣ್ಣು) ಕೊಡುವುದು ಕ್ರಮವಾಗಿದೆ.



ಪ್ರಯಾಣ

ಅಕ್ಟೋಬರ್ ೧ರ ರಾತ್ರಿ ೯:೦೫ ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ತೊರೆದ ನಮ್ಮ ಬಸ್ಸು ಮಂದಗತಿಯಿಂದ ಪಶ್ಚಿಮ ದಿಕ್ಕಿನೆಡೆಗೆ ಹೊರಟಿತ್ತು. ಕಿಟಕಿ ಬಾಗಿಲನ್ನು ಸಂಪೂರ್ಣ ತೆರೆದು ಹೊರಗಿನ ದೃಶ್ಯ ವೀಕ್ಷಿಸುತ್ತಿದ್ದರೂ ನನ್ನ ಮನಸ್ಸು ಹಿಂದಿನ ಹಲವು ಚಾರಣದ ನೆನಪಿನಿಂದ ಮುಂದಿನ ಅನುಭವದ ಕಲ್ಪನೆಯನ್ನು ಹೊಸೆದು ಸ್ವಪ್ನ ಲೋಕದಲ್ಲಿ ವಿಹರಿಸುತ್ತಿತ್ತು. ಹಾಸನಕ್ಕೆ ತುಸು ಹಿಂದೆ ಯಾವುದೋ ಊರಿನಲ್ಲಿ ಊಟಕ್ಕೆಂದು ಬಸ್ಸು ನಿಲ್ಲಿಸಿದಾಗಷ್ಟೇ ನನ್ನ ಸ್ವಪ್ನ ಲೋಕದಿಂದ ಹೊರಬಂದದ್ದು. ತುಂತುರು ಮಳೆ ಬೀಳುತ್ತಿದ್ದುದರಿಂದ ಬಸ್ಸನ್ನಿಳಿದು ಚಹಾ ಕುಡಿಯುವ ಮನಸ್ಸಾಯಿತು. ರಾತ್ರಿ ಚಹಾ ಕುಡಿದರೆ ನಿದ್ರೆ ಬರುವುದಿಲ್ಲ ಎಂದು ಬಲ್ಲವರು ಹೇಳುತ್ತಾರಾದರೂ, ನನ್ನ ಸ್ವಾನುಭವ ಈ ಹೇಳಿಕೆಗೆ ಸಮ್ಮತಿಸಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ಪರೀಕ್ಷೆಗೆ ಓದಲೆಂದು ಚಹಾ ಕುಡಿದು ಪುಸ್ತಕ ಹಿಡಿದರೆ ಸಾಕು ತನ್ನಂತೆಯೇ ನಿದ್ರೆ ಆವರಿಸಿ ಬಿಡುತ್ತಿತ್ತು. ಇದು ಚಹಾದ ಮಹಿಮೆಯೋ ಇಲ್ಲಾ ಪುಸ್ತಕದ ಮಹಿಮೆಯೋ ಅಂತೂ ಚಹಾ ಕುಡಿದರೆ ನಿದ್ರೆ ಬರುವುದಿಲ್ಲವೆಂಬ ಮಾತಿನಲ್ಲಿ ನನಗೇಕೋ ನಂಬಿಕೆಯಿಲ್ಲ.೧೫ ನಿಮಿಷದಲ್ಲಿ ಬಸ್ಸು ಮತ್ತೆ ಹೊರಟು, ತೆರೆದ ಕಿಟಕಿಯಿಂದ ತಣ್ಣನೆಯ ಗಾಳಿ ಬೀಸತೊಡಗಿತು. ಚಳಿಯ ಕೊರೆತ ಜೋರಾಗಲು ಕಿಟಕಿಯ ಬಾಗಿಲನ್ನು ಮುಚ್ಚಿ ಮಲಗುವ ಪ್ರಯತ್ನ ಮಾಡಿದೆ. ಹಾಸನ ದಾಟಿ ಸಕಲೇಶಪುರದ ಕಡೆಗೆ ತೆರಳುತ್ತಿರಬೇಕಾದರೆ ಕೆಟ್ಟ ರಸ್ತೆಯಿಂದಾಗಿ ಹಡಗಿನಲ್ಲಿ ಕುಳಿತಿದ್ದೇನೆಯೋ ಎಂಬ ಭ್ರಮೆ ಉಂಟಾಯಿತು. ಬಸ್ಸಿನ ಓಲಾಟದಿಂದಾಗಿ ಅಗುಳು ಸರಿಯಿಲ್ಲದ, ಮುಚ್ಚಿದ ಕಿಟಕಿ ಸ್ವಲ್ಪ ಸ್ವಲ್ಪವೇ ತೆರೆದು ತಣ್ಣನೆಯ ಗಾಳಿ ನುಸುಳಿ ತೊಂದರೆ ಕೊಡತೊಡಗಿತು. ಚಿಕ್ಕ ತೆರವಿನಲ್ಲಿ ನುಸುಳುವ ಗಾಳಿ ಅಲ್ಪವಾದರೂ ಅದರ ಪರಿಣಾಮ ಮಾತ್ರ ಪೂರ್ತಿ ತೆರೆದ ಕಿಟಕಿಯಿಂದ ಸುಳಿಯುವ ಗಾಳಿಗಿಂತಲೂ ಅಧಿಕ, ಸೂಜಿ ಮೊನೆಯ ಸ್ಪರ್ಷ ಹಾಗೂ ಮೊಳೆಯ ಸ್ಪರ್ಷದ ನಡುವಿನ ವ್ಯತ್ಯಾಸದಂತೆ. ಆದ್ದರಿಂದ ಕಿಟಕಿಯ ಅಗುಳನ್ನೂ, ಬಸ್ಸನ್ನೂ, ಕ.ರಾ.ರು.ಸಾ.ಸಂ.ನ್ನೂ ಶಪಿಸುತ್ತ ಕಿಟಕಿಯನ್ನು ಪೂರ್ತಿಯಾಗಿ ತೆರೆದೆ. ಶಿರಾಡಿ ಘಾಟಿ ಹತ್ತಿರಬಂದಂತೆ ರಸ್ತೆಯ ಗುಣಮಟ್ಟ ಇನ್ನೂ ಕಳಪೆಯಾದ್ದರಿಂದ ನಿದ್ರೆಯ ಆಸೆಯನ್ನು ತೊರೆದು ಕಿಟಕಿಯ ಹೊರಗೆ ದೃಷ್ಟಿ ನೆಟ್ಟು ಮತ್ತೆ ಅಂತರ್ಮುಖಿಯಾದೆ. ೫ ಗಂಟೆಗೆ ನಮ್ಮ ಈ ಸೊಗಸಾದ ಪ್ರಯಾಣ ಮುಗಿದು ಸುಬ್ರಮಣ್ಯ ತಲುಪಿದ್ದೆವು.



ಉಗ್ರಗಾಮಿಗಳಾಗಿ

ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ಕೊಡುವವರು, ಇತರ ಪುಣ್ಯ ಕ್ಷೇತ್ರಗಳಂತೆಯೇ ಸಾಮನ್ಯವಾಗಿ ನದಿಯ ಸ್ನಾನ ಘಟ್ಟಕ್ಕೆ ತೆರಳಿ, ದೇಹದ ಪಾಪ ತೊಳೆದು, ಶುದ್ಧ ಮನಸ್ಸಿನಿಂದ ದೇವರ ದರ್ಶನ ಮಾಡುವುದು ಪದ್ಧತಿ. ಅಂತೆಯೇ ನಾವೂ ಕೂಡ ಬಸ್ ನಿಲ್ದಾಣದಿಂದ ೧.೫ ಕಿ.ಮಿ. ದೂರವಿರುವ ಸ್ನಾನ ಘಟ್ಟಕ್ಕೆ ತೆರಳಿದೆವು. ೫ ಗಂಟೆಗೆಲ್ಲಾ ಜನರು ಜಮಾಯಿಸಿರುವ ಸಾಧ್ಯತೆ ಬಹಳ ಅಲ್ಪವೆಂದು ಬಗೆದಿದ್ದ ನಮ್ಮ ಆಲೋಚನೆ ಸುಳ್ಳಾಗಿತ್ತು. ಕೆಲವು ಜನರು ನಮಗಿಂತಲೂ ಮುಂಚೆ ಬಂದು ಅದಾಗಲೇ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಡುತ್ತಿದ್ದರೆ, ಇನ್ನು ಕೆಲವರು ಸ್ನಾನದಲ್ಲಿ ತೊಡಗಿದ್ದರು.ನದಿಯ ತಟದಲ್ಲಿದ್ದ ಧ್ವನಿವರ್ಧಕದಲ್ಲಿ ಸುಬ್ಬಲಕ್ಷ್ಮಿಯವರ "ಶುಕ್ಲಾಂ ಭರದರಂ ವಿಷ್ಣುಂ" ಬದಲಾಗಿ ಕಳ್ಳಕಾಕರಿಂದ ಜಾಗ್ರತೆಯಾಗಿರುವಂತೆ ಜನರಿಗೆ ಎಚ್ಚರಿಕೆಯ ಸಂದೇಶ ಬಿತ್ತರಿಸಲಾಗುತ್ತಿತ್ತು.ಜನ ಸಂದಣಿಯಿಂದ ಬೇಸತ್ತು ನದಿಗೆ ಅಡ್ಡವಾಗಿ ಕಟ್ಟಿದ್ದ ಸೇತುವೆಯ ಬಳಿ ತೆರಳಿದೆವು. ಸುಮ್ಮನೇ ಕುಳಿತು ಹೊತ್ತು ಹೋಗದ್ದುದ್ದರಿಂದ ನನ್ನ ಟ್ರೈಪೋಡ್ ನಿಲ್ಲಿಸಿ, ಅದರ ಮೇಲೆ ಕ್ಯಾಮರಾ ಇಟ್ಟು ಫೋಟೊ ತೆಗೆಯಲಾರಂಭಿಸಿದೆ. ಒಂದೇ ಒಂದು ಫೋಟೊ ತೆಗೆದಿದ್ದೆನಷ್ಟೆ, ಅದೆಲ್ಲಿಂದಲೋ ಬಂದ ಆಟೋ ಚಾಲಕ ನಮ್ಮ ಬಗ್ಗೆ ತನಿಖೆ ಆರಂಭಿಸಿದ. ಕುತೂಹಲಕ್ಕಿರಬಹುದು ಎಂದು ಲಘುವಾಗಿ ತೆಗೆದುಕೊಂಡು ಆತನ ಪ್ರಶ್ನೆಗೆ ಉತ್ತಿರಿಸುತ್ತಿರುವಾಗಿ, ಸುಮಾರು ೧೦ ಜನರ ಗುಂಪೇ ಅಲ್ಲಿ ಕಲೆತಿತು. ನೀವ್ಯಾರು, ಎಲ್ಲಿಂದ ಬಂದಿರಿ, ಹೆಸರೇನು, ಇಲ್ಲಿ ಏನು ಮಾಡುತ್ತಿರುವಿರಿ ಮುಂತಾದ ಪ್ರಶ್ನೆಗಳ ಸುರಿಮಳೆ. ಎಲ್ಲಿಂದ ಬಂದಿರಿ ಎಂಬ ಅವರ ಪ್ರಶ್ನೆಗೆ ನಾನು ಕೋಟ ಎಂದೂ, ರಾಘವೇಂದ್ರ ಬೆಂಗಳೂರು ಎಂದು ಒಮ್ಮೆಲೇ ಉಸುರಿದ್ದರಿಂದ ಅವರ ಅನುಮಾನಕ್ಕೆ ಪುಷ್ಟಿ ದೊರೆತು, ನಡೆಯಿರಿ ಆರಕ್ಷಕರ ಕಛೇರಿಗೆ ಎಂದು ನನ್ನ ರಟ್ಟೆ ಹಿಡಿದು ಕರೆದೊಯ್ಯಲನುವಾದರು. ನನಗೂ ಕೋಪ ಬಂದು ನನ್ನ ಬಳಿಯಿರುವ ಪ್ಯಾನ್ ಕಾರ್ಡ್ ತೋರಿಸಿದ ಮೇಲೆ ತುಸು ತಣ್ಣಗಾಗಿ, "ಹೀಗೆಲ್ಲ ಅನುಮಾನಾಸ್ಪದವಾಗಿ ತಿರುಗಾಡಬಾರದು, ದೇಶದಲ್ಲಿ ಆಗುವ ಅನಾಹುತದ ಬಗ್ಗೆ ಗೊತ್ತಿಲ್ಲವೇ?" ಎಂದು ಪ್ರಶ್ನಿಸಿ ಜನರಿರುವ ಕಡೆ ಹೋಗಲು ಆದೇಶಿಸಿದರು. ಅವರ ಅನುಮಾನವೂ ಸರಿಯಾದದ್ದೇ ಎಂದು ಬಗೆದು ಅಲ್ಲಿಯೇ ಬಳಿಯಲ್ಲಿರುವ ಚಹಾ ಅಂಗಡಿಗೆ ತೆರಳಿ, ಕಾಲ ಹರಣ ಮಾಡಿ ನಂತರ ಸ್ನಾನ ಘಟ್ಟದ ಬಳಿಯಲ್ಲಿರುವ ಶೌಚಾಲಯಕ್ಕೆ ತೆರಳಿ ದೇಹಭಾದೆ ತೀರಿಸಿಕೊಂಡು, ಅರುಣೋದಯದ ಸಮಯಕ್ಕೆ ಸರಿಯಾಗಿ ಸೇತುವೆಯ ಇನ್ನೊಂದು ಮಗ್ಗುಲಲ್ಲಿರುವ ನದೀ ತೀರಕ್ಕೆ ತೆರಳಿದೆವು. ಸ್ನಾನ ಮಾಡೋಣವೆಂದಿದ್ದರೆ, ಶೌಚಾಲಯವಿದ್ದೂ ನದಿಯ ತೀರದಲ್ಲಿಯೇ ದೇಹಭಾದೆ ತೀರಿಸಿಕೊಳ್ಳುತ್ತಿದ್ದ ಭಕ್ತರನ್ನು ನೋಡಿ ಜಿಗುಪ್ಸೆಗೊಂಡು ಕೈಕಾಲು ಮುಖಗಳನ್ನು ತೊಳೆದುಕೊಂಡು, ದೇಹ ಶುದ್ಧಿಗಿಂತ ಮನಃಶುದ್ಧಿ ಮುಖ್ಯ ಎಂಬ ಮಾತಿನಂತೆ ದೇವಸ್ಥಾನದ ಕಡೆಗೆ ತೆರಳಿದೆವು.



ದೇವರ ದರ್ಶನ

ನದೀ ತೀರದಿಂದ ಸುಬ್ರಮಣ್ಯ ದೇಗುಲಕ್ಕೆ ಬರುವ ಮಧ್ಯೆ ಇನ್ನೆರಡು ದೇವಾಲಯ ಸಿಗುತ್ತದೆ. ಮೊದಲನೆಯದ್ದು ವನದೇವಿಯದ್ದು, ಎರಡನೆಯದ್ದು ಗಣೇಶನದ್ದು. ವನ ಸುತ್ತಲು ಹೊರಟ ನಮಗೆ ವನದೇವಿಯ ಕೃಪಾಕಟಾಕ್ಷ ಅನಿವಾರ್ಯವಾದದ್ದರಿಂದ ಮೊದಲು ಸಿಕ್ಕ ವನದೇವಿಯ ಗುಡಿಯನ್ನು ಹೊಕ್ಕೆವು. ಜಂಬಿಟ್ಟಿಗೆ (ನೈಸರ್ಗಿಕವಾಗಿ ಸಿಗುವಂತಹ ಇಟ್ಟಿಗೆ ಬಣ್ಣದ ಕಲ್ಲು ಚಪ್ಪಡಿ) ಜೋಡಿಸಿ, ಸಿಮೆಂಟಿನ ಗಾರೆಯಿಲ್ಲದ ಹೆಂಚಿನ ಗುಡಿ, ಬೆಳಿಗ್ಗಿನ ಸೂರ್ಯ ಕಿರಣದಿಂದಾಗಿ ಸುಂದರವಾಗಿತ್ತು. ಗರ್ಭಗುಡಿಯೊಳಗೆ ಎರಡೂ ಕಡೆ ಹಚ್ಚಲಾಗಿದ್ದ ಎಳ್ಳೆಣ್ಣೆಯ ದೀಪದಿಂದ ಹೊಮ್ಮುತ್ತಿರುವ ಬೆಳಕಿನಿಂದ, ದೇವರ ವಿಗ್ರಹ ಅರೆಬರೆಯಾಗಿ ಕಾಣಿಸುತ್ತಿತ್ತು. ತೀರ್ಥವನ್ನು ಸೇವಿಸಿ ಮುಂದೆ ಗಣೇಶನ ಗುಡಿಯತ್ತ ಹೊರಟೆವು. ಕಪ್ಪು ಬಳಪದ ಕಲ್ಲಿನ ಸುಮಾರು ೫-೬ ಆಳೆತ್ತರದ ಗಣೇಶನ ವಿಗ್ರಹ ಸುಂದರವಾಗಿತ್ತು. ಇದಕ್ಕೆ ಅಲಂಕಾರಕ್ಕಾಗಿ ಹಿಂದುಗಡೆಯಿಂದ ಏಣಿಯನ್ನೂ ಇಡಲಾಗಿತ್ತು. ಗಣೇಶನ ಪ್ರಸಾದವನ್ನೂ ಸ್ವೀಕರಿಸಿ ಸುಬ್ರಮಣ್ಯನ ಗುಡಿಗೆ ತೆರಳಿದೆವು. ತೀರಾ ನೂಕು ನುಗ್ಗಲು ಇರದಿದ್ದರೂ ದೇವಾಲಯ ಜನನಿಬಿಡವಾಗಿತ್ತು. ಸಾಲಂಕೃತವಾದ ಸುಬ್ರಮಣ್ಯನ ವಿಗ್ರಹ ದೇದೀಪ್ಯಮಾನದಿಂದ ಕಂಗೊಳಿಸುತ್ತಿತ್ತು. ಹೆಚ್ಚಿನ ಆಧುನೀಕತೆಯ ವೈಭವವಿರದ ಗುಡಿ ಸರಳವಾಗಿತ್ತು. ಅಲ್ಲಿಂದ ಹೊರಟು ದೇವಾಲಯದ ಪಕ್ಕದಲ್ಲೇ ಇದುವ ಆದಿ ಸುಬ್ರಮಣ್ಯ ದೇವಸ್ಥಾನದ ಕಡೆ ಪಾದ ಬೆಳೆಸಿದೆವು. ದಾರಿಯಲ್ಲಿ ಅಕ್ಕಪಕ್ಕದಲ್ಲಿ ಭಕ್ತಿ ಗೀತೆಯ ಧ್ವನಿ ಸುರುಳಿ, ದೇವರ ಫೊಟೊ,ಹೂವು ಹಣ್ಣು ಮಾರುವ ಅಂಗಡಿಗಳಿದ್ದವು. ಕುಮಾರಧಾರೆಯ ಸಣ್ಣದೊಂದು ಸೆರಗು ಇದನ್ನು ಬಳಸಿ ಹರಿಯುತ್ತದೆ. ಎದುರಿಗಿರುವ ಅಶ್ವತ್ಥ ವೃಕ್ಷಕ್ಕೆ ಮಹಿಳೆಯರು ಕೆಂಪು ದಾರವನ್ನು ಸುತ್ತುತ್ತಾ ಸುತ್ತು ಬರುತ್ತಿದ್ದರು.ಇಲ್ಲಿಯ ವಿಗ್ರಹ ನೆನಪಿಗೆ ಬಾರದಿದ್ದರೂ ಒಳಗೆ ಹುತ್ತವನ್ನು ಕಂಡಿದ್ದು ನೆನಪಿನಲ್ಲಿದೆ, ಅಲ್ಲದೆ ಇಲ್ಲಿ ಹುತ್ತದ ಮಣ್ಣನ್ನೇ ಪ್ರಸಾದವಾಗಿ ನೀಡುತ್ತಾರೆ.



ಅವಶ್ಯ ವಸ್ತುಗಳ ಸಂಗ್ರಹ


ದೇವರ ದರ್ಶನ ಮುಗಿಸಿ ಮೊದಲು ಮಾಡಿದ ಕೆಲಸ ಹೊಟ್ಟೆ ತುಂಬಿಸಿದ್ದು. ರಥ ಬೀದಿಯಲ್ಲಿ ಇರುವ ಹೋಟೆಲ್ ಒಂದಕ್ಕೆ ನುಗ್ಗಿ ಹಸಿವನ್ನು ತಣಿಸಿ, ಇನ್ನೆರಡು ದಿನಕ್ಕೆ ಬೇಕಾಗುವಷ್ಟು ಪೂರಿ, ಬನ್ಸ್, ಪರೋಟವನ್ನು ಕಟ್ಟಿಸಿಕೊಂಡು ಹೊರಬಿದ್ದೆವು.ದಾರಿ ಖರ್ಚಿಗೆ ಚೊಕಲೇಟುಗಳನ್ನೂ, ಟೆಂಟ್ ಹಿಡಿದುಕೊಳ್ಳಲು ಸುಲಭವಾಗಲು ಗೋಣಿ ದಾರವನ್ನೂ,ದಾಹ ನೀಗಿಸಲು ನೀರನ್ನೂ, ರಾತ್ರಿಗಾಗಿ ಟಾರ್ಚ್, ಮೇಣದ ಬತ್ತಿ, ಬೆಂಕಿ ಪೊಟ್ಟಣವನ್ನು ಕೊಂಡು ನಮ್ಮ ಸಾಮಾನುಗಳನ್ನು ಇರಿಸಿದ್ದ ಕಛೇರಿಯತ್ತ ನಡೆದೆವು.



ನಡೆದಾಡುವ ಗಾಂಧಿ



ರಥ ಬೀದಿಯಲ್ಲಿ ನಿಲ್ಲಿಸಲಾಗಿದ್ದ ಬೆಳ್ಳಿ ವರ್ಣದ ಗಾಂಧಿ ಪ್ರತಿಮೆಯನ್ನು ನೋಡಿದಾಗ ಇಂದು ಅಕ್ಟೋಬರ್ ೨, ಗಾಂಧಿಜಯಂತಿ ಎಂಬ ನೆನಪಾಯಿತು! ಸುತ್ತಲೂ ಜನರ ಗುಂಪಿದ್ದು, ಪ್ರತಿಮೆಗೆ ಹತ್ತಿರದಲ್ಲಿಯೇ ಕಾಣಿಕೆ ಡಬ್ಬ ಇದ್ದುದರಿಂದ ನಮ್ಮ ಕುತೂಹಲ ಹೆಚ್ಚಿ, ಸಮೀಪ ಹೋದಾಗಲೇ ತಿಳಿದಿದ್ದು ಅದು ಗಾಂಧಿಯ ಪ್ರತಿಮೆಯಲ್ಲ, ಗಾಂಧಿಯ ವೇಷ ತೊಟ್ಟ "ಸುರೇಂದ್ರ ಬಾಬು" ಎಂದು. ನಡೆದಾಡುವ ಗಾಂಧಿ ಎಂದೇ ಪ್ರಸಿದ್ಧಿ ಪಡೆದ ಇವರು ೬೮ರ ಇಳಿವಯಸ್ಸಿನಲ್ಲೂ ದೇಶದೆಲ್ಲೆಡೆ ಸಂಚರಿಸುತ್ತ, ಗಾಂಧಿಯ ವೇಷ ತೊಟ್ಟು ೨೦ ಗಂಟೆಗಳಷ್ಟು ಕಾಲ ಪ್ರತಿಮೆಯಂತೆ ನಿಲ್ಲಬಲ್ಲವರು. ಒಂದು ಗಂಟೆಗಳಿಗೊಮ್ಮೆ ಕಾಲನ್ನು ಬದಲಿಸುವುದು ಬಿಟ್ಟರೆ, ಅವರು ಉಸಿರಾಡುವುದೂ ಕೂಡ ಗಮನಿಸುವುದು ಕಷ್ಟ! ವಿಶೇಷ ಸಂದರ್ಭಗಳಲ್ಲಿ ದೇಶ ಸಂಚರಿಸುವ ಇವರು ಕೆಲಸದಲ್ಲಿರುವುದು ಮೈಸೂರಿನ ಮೃಗಾಲಯದಲ್ಲಿ.



ಮೊದಲ ಘಟ್ಟ


ಕೊಂಡ ವಸ್ತುಗಳನ್ನು ನಮ್ಮ ಚೀಲಕ್ಕೆ ತುಂಬಿಸಿಕೊಂಡರೆ, ಅದು ಬಿರಿಯುವಂತೆ ಉಬ್ಬಿ ತೂಕವನ್ನು ಇಮ್ಮಡಿಗೊಳಿಸಿಕೊಂಡಿತು. ಭಾರವಾದ ಹೊರೆ ಹೊತ್ತು, ದೇವಾಲಯದ ಎಡಗಡೆ ಇರುವ ಡಾಮರು ರಸ್ತೆಯಲ್ಲಿ ಮುಂದುವರೆದೆವು. ದಾರಿಯ ಬೇಲಿಯಲ್ಲಿ ಬೆಳೆದ ಕಾಡು ಹೂಗಳು, ಮಕರಂದಕ್ಕೆ ಎರಗುವ ಚಿಟ್ಟೆ, ಅವನ್ನು ಹಿಡಿಯಲು ಬಂದ ಮಡಿವಾಳ ಹಕ್ಕಿ, ಊರ ಕೋಳಿ,ರಸ್ತೆಯಿಂದ ಸರ್ರನೆ ಸರಿದು ಹೋದ ಯವುದೋ ಜಾತಿಯ ಕರಿ ಉರಗ, ಇವನ್ನೆಲ್ಲಾ ನೋಡುತ್ತ ೩ ಫರ್ಲಾಂಗ್ ನಡೆಯುವಷ್ಟರಲ್ಲಿ ರಸ್ತೆಯ ಎಡಗಡೆಯಲ್ಲಿ ಒಂದು ಕಾಲು ದಾರಿ ಹಾಗೂ "ಚಾರಣಿಗರಿಗೆ ಸ್ವಾಗತ" ಎಂಬ ಫಲಕದಲ್ಲಿ ಕೆಲವು ಉಪಯುಕ್ತ ಮಾಹಿತಿ ಕಂಡುಬಂದಿತು. ಪರ್ವತದ ಎತ್ತರ, ಮೊದಲು ನೀರು ಸಿಕ್ಕುವ ಸ್ಥಳ, ಚಾರಣದ ವಿವಿಧ ಹಂತಗಳು, ಪಾಲಿಸಬೇಕಾದ ನಿಯಮಗಳು ಹಾಗೂ ಚಿತ್ರಗಳು ಈ ಫಲಕದಲ್ಲಿದ್ದವು. ಇಲ್ಲಿಂದ ಕುಮಾರ ಪರ್ವತದ ಶಿಖರ ೧೩ ಕಿ.ಮೀ. ಹಾಗೆಯೇ ಕಾಲು ಹಾದಿಯಲ್ಲಿ ಸಾಗುತ್ತ ಮುಂದುವರಿದಂತೆ ಎಲ್ಲಿಯೂ ಸಮತಟ್ಟು ಅಥವಾ ಇಳುಜಾರಿನ ಸುಳಿವೇ ಇಲ್ಲದಂತೆ ದಾರಿ ಒಂದೇ ಸಮನೆ ಮೇಲಕ್ಕೇರುತ್ತಾ ಸಾಗುತ್ತದೆ. ಹೊಟ್ಟೆ ತುಂಬ ತಿಂದ ಪರಿಣಾಮವಾಗಿ ಮೊದಲಿಗೆ ಕೇವಲ ೧ ಕಿ.ಮೀ.ಗೆ ೧ ಗಂಟೆಯಂತೆ ಮುಂದುವರೆದರೂ ಬರುಬರುತ್ತಾ ನಮ್ಮ ನಡಿಗೆ ನಿಧಾನವಾಗಿ, ನಡೆಯುವುದಕ್ಕಿಂತ ವಿಶ್ರಮಿಸುವುದೇ ಅಧಿಕವಾಗ ತೊಡಗಿತು. ಹೀಗೆಯೇ ಒಂದು ಕಡೆ ವಿಶ್ರಮಿಸುತ್ತಿರಬೇಕಾದರೆ ೩ ಜನರ ಇನ್ನೊಂದು ತಂಡ ಸಮೀಪಿಸಿತು. ಮೂವರೂ ಸುಮಾರು ೪೦ರ ಆಸುಪಾಸಿನವರು, ಒಬ್ಬನ ಕೈಯಲ್ಲಿ ನಾರಿನ ಚೀಲವಿತ್ತು. ಉಭಯ ಕುಶಲೋಪರಿಯ ನಂತರ ಅವರೂ ಕೂಡ ಬೆಂಗಳೂರಿನವರೇ ಎಂದು ತಿಳಿದು ಬಂತು.ತಮ್ಮನ್ನು ಪತ್ರಕರ್ತರೆಂದು ಪರಿಚಯಿಸಿಕೊಂಡು ತಾವು ಬಂದ ಉದ್ದೇಶ ಚಾರಣವಲ್ಲ, "ಕುಮಾರ ಕುಂಭ" ಎಂಬ ಸ್ಪಟಿಕದಂತಹ ಕಲ್ಲನ್ನು ಅರಸಲು ಬಂದಿರುವುದಾಗಿಯೂ, ಅದು ಪರ್ವತದ ಮೇಲಿರುವ ಗುಡಿಯ ಬಳಿ ಸಿಕ್ಕುತ್ತದೆ ಎಂದೂ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಿದರೆ ಅದೃಷ್ಟ ದೇವತೆ ಒಲಿಯುವುದಾಗಿಯೂ ತಿಳಿಸಿದರು. ಇಷ್ಟೆಲ್ಲಾ ಮಾತುಕತೆಯ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಸಿದೆವು. ೩ ಕಿ.ಮೀ. ಗಳಷ್ಟು ಮುಂದೆ ಸಾಗಲಾಗಿ ಭೀಮನಕಲ್ಲು ಎಂಬ ಹೆಸರಿನ ನೀರಿನ ಒರತೆ ಎದುರಾಯಿತು. ಬೆವರಿಳಿದು ಒದ್ದೆಯಾಗಿದ್ದ, ಬವಳಿ ಮುದ್ದೆಯಂತಾಗಿದ್ದ, ಶರೀರಕ್ಕೆ ತಣ್ಣನೆಯ ನೀರಿನ ಸಿಂಚನದಿಂದ ಮರು ಜೀವ ಬಂದಂತಾಯಿತು. ಆ ಕಾಡಿನಲ್ಲಿ ಹರಿಯುವ ನೀರಿಗೆ ಅದ್ಯಾವ ಶಕ್ತಿ ಇದೆಯೋ ಎನೋ, ಅದರ ಸ್ಪರ್ಷ ಮಾತ್ರದಿಂದ ಮೈಯಲ್ಲಿ ಉಲ್ಲಾಸ ಸಂಚರಿಸಿದಂತಾಗಿ ಅದುವರೆಗೂ ಮಂದವಾಗಿ ಕೇಳಿಸುತ್ತಿದ್ದ ಹಲವು ಬಗೆಯ ಹಕ್ಕಿಗಳ ಮಧುರ ಸಂಗೀತ, ತಮ್ಮ ಅಸ್ಥಿತ್ವವನ್ನು ಸಾರಲೋ ಎಂಬಂತೆ ಕಿರುಚಾಡುವ ಕೀಟ, ಎತ್ತರೆತ್ತರದ ಮರದ ಚಿಗುರು,ಪೊದೆಗಳು, ಹುಲ್ಲುಗಳು, ಸೂರ್ಯ ಕಿರಣಗಳು ಅದರ ಮೇಲೆ ಬಿದ್ದು ಮತ್ತೆ ಕೆಲವು ನುಸುಳಿ ಬಂದು ಉಂಟುಮಾಡುತ್ತಿದ್ದ ಬೆಳಕಿನಾಟ, ಹಲವು ಬಗೆಯ ಮಿಡತೆಗಳು, ಆಕರ್ಷಕ ವರ್ಣ ಸಂಯೋಜನೆಯೊಂದಿಗೆ ನವಿರಾದ ಕೂದಲಿನ ಕಂಬಳಿ ಹುಳುಗಳು, ತೇವ ಭರಿತ ಕತ್ತಲೆಯಲ್ಲಿ ಬೆಳೆದ ಪಾಮಾಜಿಗಳು, ಅಣಬೆಗಳು, ಕಲಾತ್ಮಕವಾಗಿ ಬಲೆ ಹೆಣೆದು ಭೇಟೆಗಾಗಿ ಹೊಂಚು ಹಾಕುತ್ತಿದ್ದ ಜೇಡಗಳು, ಮಂದಗತಿಯಿಂದ ಹರಿಯುವ ನೀರಿನಲ್ಲಿ ಬರೀ ಕಣ್ಣು ಮಾತ್ರ ಮೇಲೆ ಕಾಣಿಸುವಂತೆ ದೇಹವನ್ನು ಹುದುಗಿಸಿ ಕುಳಿತ ಕಪ್ಪೆಗಳು,ಕಲ್ಲಿನ ಸಂದಿಯಲ್ಲಿ ಓಡಾಡುವ ಏಡಿಗಳು, ಹಾಗೂ ಪರಿಚಯವಿಲ್ಲದ ಇನ್ನೂ ಅನೇಕ ಬಗೆಯ ಜೀವವೈವಿಧ್ಯಗಳು ಗಮನಕ್ಕೆ ಬಂದವು. ಇದ್ದ ಕಾಡನ್ನು ಕಡಿದು, ಅರಣ್ಯ ಬೆಳೆಸುವ ಉದ್ದೇಶದಿಂದ ಗುಡ್ಡಗಳ ಮೇಲೆ ಕೆಲವು ಅಕೇಶಿಯಾ ಗಿಡ ಹಾಕಿಬಿಟ್ಟ ಮಾತ್ರಕ್ಕೆ ಅದು ಹೆಸರಿಗೆ ಹಸುರಾಗಿರುತ್ತದೆಯೇ ಹೊರತು, ಇಂತಹ ವಿವಿಧತೆಯಿಂದ ಕೂಡಿದ ಅರಣ್ಯವಾಗಲಾರದು.




ಮತ್ತೆ ಹೊರಲಾರದ ಹೊರೆ ಹೊತ್ತು, ಏದುಸಿರು ಬಿಡುತ್ತಾ ಹತ್ತಿಪ್ಪತ್ತು ಹೆಜ್ಜೆಗೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುತ್ತಾ ಸಾಗುತ್ತಿರಬೇಕಾದರೆ ಗಿರಿಗದ್ದೆ ಮನೆಯ ಭಟ್ಟರ ತಮ್ಮನ ಭೇಟಿಯಾಯಿತು. ದಾರಿಯಲ್ಲಿ ಸಿಕ್ಕ ಪತ್ರಕರ್ತರ ವಿಷಯ ಕೇಳಲಾಗಿ, ಅವರು ಕಂಠ ಪೂರ್ತಿ ಕುಡಿದು ಮರಳಿದರು ಎಂಬ ಉತ್ತರ ಬಂತು. ಪರಿಚಯವಾದ ನಂತರ ಚುರುಕು ನಡಿಗೆಯ ಭಟ್ಟರ ತಮ್ಮ, ಸರಸರನೆ ಹೆಜ್ಜೆ ಹಾಕಿ ನಡೆದು ಹೋದರೆ, ನಾವು ನಮ್ಮದೇ ವೇಗದಲ್ಲಿ ಮುಂದುವರಿದೆವು. ಮುಂದೆ ಮರಗಳು ವಿರಳವಾಗುತ್ತಾ ಹೋಗಿ ಬೆಟ್ಟದ ತಪ್ಪಲು ಕಾಣಿಸತೊಡಗಿ, ಇಮ್ಮಡಿ ಉತ್ಸಾಹದಿಂದ ಬಳಸು ದಾರಿ ತೊರೆದು ನೇರದಾರಿಯನ್ನು ಹಿಡಿದೆವು. ನೇರ ಎಂಬುದು ಕ್ರಮಿಸಿದ ಹಾದಿಯ ತುದಿಗಳನ್ನು ಜೋಡಿಸಿದಾಗ ಸಿಗುವ ರೇಖಾಗಣಿತದ ಸರಳ ರೇಖೆಯಾಗಿತ್ತೇ ಹೊರತು, ಉದ್ದೇಶಪಟ್ಟು ಮಾಡಿದ ಸುಲಭದ ಕಾಲುಹಾದಿಯಾಗಿರಲಿಲ್ಲ; ಆಳೆತ್ತರಕ್ಕೆ ಬೆಳೆದ, ಮೈ ಸೋಕಿದರೆ ಚರ್ಮ ಕಿತ್ತು ಹೋಗುವ ಹುಲ್ಲುಗಳು, ಮಳೆಗಾಲದಲ್ಲಿ ನೀರು ಹರಿದು ಉಬ್ಬು ತಗ್ಗಿನಿಂದ ಕೂಡಿದ, ಕಲ್ಲು ಎದ್ದು ಬಂದಿರುವ ಹಾದಿ. ಅಂತೂ ಗುಡ್ಡದ ನೆತ್ತಿ ತಲುಪಿ ಬೆಳೆದೊಂದು ಮರದ ಬುಡದಲ್ಲಿ ವಿಶ್ರಮಿಸುತ್ತಾ ಕುಳಿತಿರಬೇಕಾದರೆ, ನೀರಡಿಕೆಯಾಗಿ ಎಷ್ಟು ನೀರು ಕುಡಿದರೂ ತೃಪ್ತಿಯಾಗದ ಸ್ಠಿತಿಯನ್ನು ತಲುಪಿದ್ದೆವು. ಆಗ ಆದಿ ಸುಬ್ರಮಣ್ಯದಲ್ಲಿ ಪ್ರಸಾದವಾಗಿ ಕೊಟ್ಟಿದ್ದ ಬೆಲ್ಲದ ನೆನಪು ಬಂದು, ಅದರೊಂದಿಗೆ ನೀರು ಕುಡಿದ ನಂತರ ತುಸು ಸಮಾಧಾನವಾಯಿತು.ಬೆಲ್ಲದೊಂದಿಗೆ ಅವಲಕ್ಕಿ ಹಾಗೂ ತೆಂಗಿನ ಕಾಯಿ ಕಡಿ ಕೊಟ್ಟಿದ್ದರಿಂದ, ತುರುಮಣೆ ಹೊತ್ತು ತಂದಿದ್ದರೆ ಕಾಯಿ ತುರಿದು, ಬೆಲ್ಲ ಹೆರೆದು ಅವಲಕ್ಕಿಯೊಂದಿಗೆ ಕಲಸಿ ತಿನ್ನಬಹುದಾಗಿತ್ತು ಎಂಬ ಆಲೋಚನೆ ಬಂದಿತು. ತುರುಮಣೆ ಇಲ್ಲದಿದ್ದರೇನಂತೆ, ಕಾಯನ್ನು ಬಂಡೆಗೆ ಕುಟ್ಟಿ ಅದರಿಂದ ಕರಟವನ್ನು ಬೇರ್ಪಡಿಸಿ, ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಕೈಯಲ್ಲಿ ಹಿಸುಕಿ ಅವಲಕ್ಕಿಯೊಂದಿಗೆ ಬೆರೆಸಿದೆವು. ಈ ಮಿಶ್ರಣವನ್ನು ಒಂದೊಂದೇ ಮುಷ್ಟಿ ಬಾಯಿಗೆ ಹಾಕಿಕೊಳ್ಳುತ್ತಿದಂತೆ, ತೆಂಗಿನ ಕಾಯ ಹೋಳುಗಳು ಹಲ್ಲುಗಳ ನಡುವೆ ಸಿಲುಕಿ, ಚಿಕ್ಕ ಚಿಕ್ಕ ಚೂರುಗಳಾಗಿ ಹಾಲನ್ನು ಸ್ರವಿಸುತ್ತಾ, ಬೆಲ್ಲದ ಸವಿಯೊಡನೆ ಬೆರೆತು, ಶುಷ್ಕವಾದ ಅವಲಕ್ಕಿಯನ್ನು ನೆನೆಯಿಸಿ ಜಠರಾಗ್ನಿಯನ್ನು ತಣಿಸತೊಡಗಿ ಅಪೂರ್ವ ಆನಂದ ಉಂಟಾಯಿತು.




ಮುಂದಿನ ದಾರಿ ಹೆಚ್ಚು ಏರಿಲ್ಲದೇ ಸುಗಮವಾಗಿ ಸಾಗಿತ್ತಾದರೂ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ೧ ಗಂಟೆ ನಡೆಯುವುದರೊಳಗೆ ಭಟ್ಟರ ಮನೆ (ಗಿರಿಗದ್ದೆ) ಸಮೀಪಿಸಿದ್ದೆವು. ಈ ೬ ಕಿ.ಮೀ. ಕ್ರಮಿಸಲು ನಾವು ತೆಗೆದುಕೊಂಡ ಸಮಯ ೪ ೧/೨ ಗಂಟೆಗಳಷ್ಟು. ನಮ್ಮ ಬಳಿ ಬಾಡಿಗೆಗೆ ಕೊಂಡು ಬಂದ ಟೆಂಟು ಹಾಗೂ ಊಟಕ್ಕೆ ಬೇಕಾದಷ್ಟು ಇದ್ದುದರಿಂದ ಭಟ್ಟರ ಮನೆಗೆ ಹೋಗದೆ, ಅವರ ಮನೆಗೆ ತುಸು ದೂರದಲ್ಲಿ ನಮ್ಮ ಅಂದಿನ ಪ್ರಯಾಣ ಮುಗಿಸಿದೆವು. ಬಲಗಡೆ ಉನ್ನತವಾದ ಬೆಟ್ಟದ ಸಾಲಿದ್ದು ಮರುದಿನದ ಪ್ರಯಾಣ ಅದನ್ನು ಹಾದೇ ಹೋಗಬೇಕಿತ್ತು. ನಾವು ತಂಗಿದ ಸ್ಥಳ ಹಿಂದಿನ ಅರಣ್ಯ ಇಲಾಖೆಯವರ ಕಛೇರಿಯಿದ್ದ ತಳಪಾಯವಾಗಿತ್ತು. ಮೂರು ಕಡೆ ಗುಡ್ಡಗಳಿಂದಾವೃತವಾದ ಸ್ಥಳದ ಒಂದು ಮಗ್ಗುಲಿಗೆ ಕಣಿವೆಯಿತ್ತು. ಪಕ್ಕದಲ್ಲಿ ಕಾಲ ಹಾದಿ ಸಾಗುತ್ತಿದ್ದು, ಸುತ್ತಲೂ ಪೇರಳೆ ಹಾಗೂ ಗಾಳಿ ಮರಗಳಿದ್ದವು.ಮೋಡ ಹಾಗೂ ಬಿಸಿಲಿನ ಕಣ್ಣಾ ಮುಚ್ಚಾಲೆಯಿಂದ ಕೆಲವು ಗುಡ್ಡಗಳು ಬಿಸಿಲಿನಿಂದ ಹೊಳೆದರೆ, ಇನ್ನು ಕೆಲವಕ್ಕೆ ನೆರಳು ಕವಿದಿರುತ್ತಿತ್ತು. ಸ್ವಲ್ಪ ಸುಧಾರಿಸಿಕೊಂಡು ಅಕ್ಕ ಪಕ್ಕದ ಚಿಕ್ಕ ಪುಟ್ಟ ಗುಡ್ಡಗಳನ್ನು ಏರಿ, ನೋಟಕ್ಕೊದಗಬಹುದಾದ ವಿವಿಧ ದೃಷ್ಯಾವಳಿಯನ್ನು ಕಣ್ಮನಗಳಲ್ಲಿ ತುಂಬಿಕೊಂಡೆವು. ಕತ್ತಲಾಗುವ ಮೊದಲೇ ಟೆಂಟ್ ನಿಲ್ಲಿಸುವುದು ಒಳ್ಳೆಯದೆಂದು ಬಗೆದು, ಟೆಂಟ್ ಬಿಡಿಸಿ ಸಿದ್ಡಪಡಿಸಿದೆವು. ಪಕ್ಕದಲ್ಲಿ ಬಿದ್ದಿದ್ದ ಒಣಗಿದ ಕಡ್ಡಿ, ಬಿಸಿಲಿಗೆ ಒಣಗಿ ಬೆರಣಿಯಂತಿದ್ದ ದನದ ಸಗಣಿ ಒಟ್ಟು ಮಾಡಿ ಸಣ್ಣಗೆ ಬೆಂಕಿ ಹೊತ್ತಿಸಿದೆವು. ಹಿಂದಿನ ದಿನ ಮಳೆಯಾಗಿದ್ದರೂ, ಬೆಳಿಗ್ಗಿನಿಂದ ಒಣಗಿದ ಕಡ್ಡಿಗಳಾದ್ದರಿಂದ ಬೆಂಕಿ ಹೊತ್ತಿಸಲು ಹೆಚ್ಚಿನ ಪ್ರಾಯಾಸ ಪಡಬೇಕಾಗಿರಲಿಲ್ಲ.




ನಮ್ಮ ಸಾಮಗ್ರಿಗಳನ್ನೆಲ್ಲ ಟೆಂಟ್ ಒಳಗಿಟ್ಟು, ಸೂರ್ಯಾಸ್ತಮಾನದ ಸೊಬಗ ಸವಿಯಲು ಪಕ್ಕದ ಗುಡ್ಡ ಹತ್ತಿದೆವು. ಪಶ್ಚಿಮ ದಿಕ್ಕಿನಲ್ಲಿ ಬೆಳಕಿನ ಕಿರಣಗಳು ಮೋಡದಿಂದ ಸೋಸಿ ಸ್ವಲ್ಪ ದೂರದಲ್ಲೇ ಕಾಣಿಸುತ್ತಿದ್ದ ಸುಬ್ರಮಣ್ಯಕ್ಕೆ ಬೀಳುತ್ತಿದ್ದರೆ, ಹಿನ್ನೆಲೆಯಲ್ಲಿ ಅಲೆ ಅಲೆಯಾಗಿ, ಹತ್ತಿರದವು ಕಡು ನೀಲಿ ಹಾಗೂ ದೂರ ಸರಿದಂತೆ ತಿಳಿ ನೀಲ ವರ್ಣದ ಪರ್ವತ ಶ್ರೇಣಿ ಹಬ್ಬಿತ್ತು. ಪೂರ್ವದಿಕ್ಕಿನಲ್ಲಿ ನಾವು ಹಾದು ಹೋಗಬೇಕಿದ್ದ ಬತ್ತದ ರಾಶಿ ಎಂಬ ಗಗನ ಚುಂಬಿ ಪರ್ವತ ಮೋಡಗಳೊಂದಿಗೆ ಸರಸವಾಡುತ್ತಿತ್ತು. ದಕ್ಷಿಣ ಹಾಗೂ ಉತ್ತರದಲ್ಲಿ ಆಳವಾದ ಕಣಿವೆಯಿದ್ದು, ಭೇದಿಸಲಸಾಧ್ಯವಾದ ವೃಕ್ಷ ಸಮೂಹವಿತ್ತು ಮತ್ತು ಹಿನ್ನೆಲೆಯಲ್ಲಿ ಬೆಟ್ಟದ ಸೆರಗಿತ್ತು.ಇಂತಹ ಪರಿಸರದ ಹಿನ್ನೆಲೆಯಲ್ಲಿ ಸಮೀಪದಲ್ಲೇ ಕಾಣುತ್ತಿದ್ದ ಭಟ್ಟರ ೫ ಎಕರೆ ಕಂಗಿನ ತೋಟ ಬಿಸಿಲು ಬಿದ್ದು ನಳನಳಿಸುತ್ತಿತ್ತು.ದೂರದ ಗುಡ್ಡದಲ್ಲಿ ಭಟ್ಟರ ಮನೆಯ ದನಗಳು ಕೊರಳಿಗೆ ಕಟ್ಟಿದ್ದ ಗಂಟೆಯ ನಾದಗೈಯುತ್ತಾ ಸಾವಕಾಶವಾಗಿ ರಸಭರಿತವಾದ ಹುಲ್ಲನ್ನು ಮೇಯುತ್ತಿದ್ದವು. ಸಮಯವಾಗುತ್ತಿದಂತೆ ನವಿರಾಗಿ ಬೀಸುತ್ತಿದ್ದ ಗಾಳಿ ಕರಿ ಬಿಳಿ ಮೋಡವನ್ನು ಹೊತ್ತು ತಂದು, ಮೈಯನ್ನು ಹಾದು ಚಳಿ ಹುಟ್ಟಿಸುತ್ತಿತ್ತು.ಇದರೊಂದಿಗೆ ಚಿಕ್ಕ ಪುಟ್ಟ ಮಳೆಹನಿಯೂ ಬೀಳ ತೊಡಗಿದ್ದರಿಂದ ಟೆಂಟ್ ಕಡೆ ಮರಳಿದೆವು. ಮಳೆಯಿಂದ ಬೆಂಕಿಯ ರಕ್ಷಣೆಗಾಗಿಯೂ, ಬೆಂಕಿಯು ಇತರೆಡೆಗೆ ಹರಡದಂತೆಯೂ, ಅದರ ಎರಡು ಕಡೆ ಕಲ್ಲನ್ನಿರಿಸಿ ಅದರ ಮೇಲೊಂದು ವಿಶಾಲವಾದ ಚಪ್ಪಡಿಯನ್ನು ಹೇರಿದೆವು. ಟೆಂಟ್ ಒಳಗೆ ನುಸುಳಿ, ಹದವಾಗಿ ಬೀಳುತ್ತಿದ್ದ ಮಳೆಯ ಸದ್ದನ್ನು ಆಲಿಸುತ್ತ ಕಾಲ ಕಳೆದೆವು. ಸ್ವಲ್ಪ ಸಮಯದ ನಂತರ ಮಳೆಹನಿಯು ನಿಂತಂತಾಗಿ ಹೊರಗೆ ಬಂದು ನೋಡಿದರೆ ಎಲ್ಲಾ ಕಡೆಯಲ್ಲೂ ಮೋಡದ ಮರೆಯಿದ್ದು, ಮರ ಗಿಡಗಳು ರೇಖಾ ಚಿತ್ರದಂತೆ ಕಂಡು ಬಂದವು. ನಾವು ಸಿದ್ಧಪಡಿಸಿದ್ದ ಬೆಂಕಿ ನಂದಿ ಹೋಗಿದ್ದರೂ, ಚಪ್ಪಡಿಯ ಕೆಳಗೆ ಕೆಂಡದುಂಡೆಗಳು ಮಿರುಗುತ್ತಿದ್ದವು. ಕೊಳ್ಳಿಗಳನ್ನು ನಿಧಾನಕ್ಕೆ ಮುಂದೂಕಿ ಹದವಾದ ಬೆಂಕಿಯೊಂದಿಗೆ ಹೊಮ್ಮಿದ ಸವಿಯಾದ ಹೊಗೆಯನ್ನು ಆಸ್ವಾದಿಸುತ್ತಾ, ಹರಟುತ್ತಾ ಕುಳಿತೆವು. ಬಾಯಾಡಿಸಲು ಉಳಿದಿದ್ದ ಅವಲಕ್ಕಿಯನ್ನು ತಂದ ಮೇಲಂತೂ ಸಂಭಾಷಣೆಗೆ ಇನ್ನೂ ಕಳೆ ಕಟ್ಟಿತ್ತು. ಅವಲಕ್ಕಿ ಬರಿದು ಮಾಡಿ, ಬೆಳಿಗ್ಗಿನಿಂದ ಭಾರ ಹೊತ್ತು ದಣಿದಿದ್ದ ಬೆನ್ನಿಗೆ ವಿಶ್ರಾಂತಿ ಕೊಡುವ ಉದ್ದೇಶದಿಂದ ಟೆಂಟ್ ಒಳ ಹೊಕ್ಕು ಕಾಲುಚಾಚಿ ಮಲಗಿದೆವು.




ಮಲಗಿದ ೧೦ ನಿಮಿಷಗಳಲ್ಲೆಲ್ಲಾ ರಾಘವೇಂದ್ರ ನಿದ್ರೆ ಹೋದರೆ, ನಾನು ಟೆಂಟ್ ಹೊರಗಡೆ ಕೇಳಿಸುತ್ತಿದ್ದ ನಾನಾ ರೀತಿಯ ಸಪ್ಪಳವನ್ನಾಲಿಸುತ್ತಿದ್ದೆ.ಸ್ವಲ್ಪ ಸಮಯದಲ್ಲಿ ಬೇಸರವಾಗಿ ಹೊರಗೆ ಬಂದು ಬೆಂಕಿಯನ್ನು ಕಾಯಿಸುತ್ತಾ ಕುಳಿತೆ. ನಾನು ಕುಳಿತಲ್ಲಿಗೆ ಭಟ್ಟರ ಮನೆಯ ಕಡೆಯಿಂದ ಇಬ್ಬರು ಮಾತನಾಡುತ್ತಾ ಬಂದು ನನ್ನ ಮುಂದೆಯೇ ಕುಳಿತರು. ನಮ್ಮಂತೆಯೇ ಬಂದ ಚಾರಣಿಗರು ಇರಬಹುದು ಎಂದು ಬಗೆದಿದ್ದ ನನಗೆ, ಏಕಾಂತದ ಭಂಗದಿಂದ ತುಸು ಅಸಮಾಧಾನವಾದರೂ, ತಾವು ಭಟ್ಟರ ಮನೆಯಲ್ಲಿ ಕೆಲಸಕ್ಕಿರುವವರೆಂದು ಅವರು ಪರಿಚಯಿಸಿಕೊಂಡ ನಂತರ ಅವರನ್ನು ಸ್ವಾಗತಿಸಿದೆ. ನಂತರ ೧ ತಾಸುಗಳಷ್ಟು ದೀರ್ಘವಾದ ಅವರೊಂದಿಗಿನ ಸಂಭಾಷಣೆ, ಅವರ ಕೆಲಸ, ಮನೆ, ಭಟ್ಟರ ಮನೆಯವರ ವಿಚಾರ, ಊರಿನ ರಾಜಕೀಯ, ದೇಶದ ರಾಜಕೀಯ ಇವುಗಳನ್ನೊಳಗೊಂಡು ಸ್ವಾರಸ್ಯವಾಗಿತ್ತು. ಭಟ್ಟರಿಗಿರುವುದು ಅಡಿಕೆ ತೋಟವಾದ್ದರಿಂದ ದಿನಬಳಕೆಗೆ ಬೇಕಾದ ಸಾಮಗ್ರಿಗಳನ್ನು ೬ ಕಿ.ಮೀ. ದೂರವಿರುವ ಸುಬ್ರಮಣ್ಯದಿಂದ ಹೊತ್ತು ತರುವುದು ಇವರ ಕೆಲಸ. ವಾರಾಂತ್ಯಗಳಲ್ಲಿ ಚಾರಣಿಗರ ಸಂಖ್ಯೆ ಅಧಿಕವಾದದ್ದರಿಂದ ಅವರಿಗೆ ಆಹಾರ, ವಸತಿ ಒದಗಿಸುವುದು ಭಟ್ಟರ ಮನೆಯವರಿಗೆ ಒಂದು ವ್ಯಾಪಾರವಾಗಿದೆ. ೯ ಗಂಟೆಯ ಸಮಯಕ್ಕೆ ಊಟದ ನೆಪದಿಂದ ಅವರಿಬ್ಬರೂ ಹೊರಡಲನುವಾಗಬೇಕಾದರೆ, ರಾಘವೇಂದ್ರ ನಿದ್ರೆಯಿಂದ ಎಚ್ಚೆತ್ತು ಹೊರಗೆ ಬಂದಿದ್ದ. ಮೋಡದ ದಟ್ಟಣಿ ಹೆಚ್ಚಿ, ತುಂತುರು ಮಳೆ ಬೀಳತೊಡಗಿದ್ದು, ಭಟ್ಟರ ಮನೆಯಲ್ಲಿರಬಹುದಾದ ಬಿಸಿಯೂಟದ ಕನಸು ಕಾಣುತ್ತಾ ನಾವು ತಂದ ತಣಕಲು ಪೂರಿಯನ್ನು ತಿಂದೆವು.ಊಟ ಮುಗಿದ ಮೇಲೆ ನಮ್ಮ ಟಾರ್ಚ್ ಹಚ್ಚಿ ೧೦೦ ಹೆಜ್ಜೆಗಳ ವಾಕಿಂಗ್ ಮುಗಿಸಿ, ಮೋಡಗಳ ಮೇಲೆ ಬೆಳಕು ಚೆಲ್ಲುತ್ತಾ, ಅದರಿಂದ ಉಂಟಾದ ಚಿತ್ರ ವಿಚಿತ್ರ ಆಕೃತಿಗಳನ್ನು ನೋಡಿ ಆನಂದಿಸುತ್ತಾ ಕಾಲ ಕಳೆದೆವು. ಬೆಂಕಿಯ ಗಾವನ್ನು ಕಡಿಮೆ ಮಾಡಿ ಅದು ಇತರೆಡೆಗೆ ಹರಡದಂತೆ ಮಾಡಿ, ಟೆಂಟ್ ಒಳಗೆ ಮಲಗಿ ನಿದ್ರೆ ಹೋದೆವು. ೧೦ ಗಂಟೆಗೆ ಮಲಗಿದ್ದ ನಮಗೆ ಎಚ್ಚರವಾದದ್ದು ಮರುದಿನ ಬೆಳಿಗ್ಗೆ ೬ಕ್ಕೇ.



ಎರಡನೇ ಘಟ್ಟ


ಬೆಳಿಗ್ಗೆ ೬ಗಂಟೆಗೆಲ್ಲಾ ಸಾಕಷ್ಟು ಬೆಳಕು ಹರಿದಿತ್ತು. ಹಿಂದಿನ ದಿನ ಹಚ್ಚಿದ್ದ ಬೆಂಕಿ ನಂದಿ, ಇದ್ದಲಿನ ಮತ್ತು ಬೂದಿಯ ಕುರುಹು ಮಾತ್ರ ಉಳಿದಿತ್ತು. ಹಿಂದಿನ ದಿನದ ಸೂರ್ಯಾಸ್ತಮಾನವನ್ನು ಮೋಡದ ದೆಸೆಯಿಂದ ಕಳೆದುಕೊಂಡಿದ್ದರೂ, ಸೂರ್ಯೋದಯ ಕಾಣಲು ಸಿಗಬಹುದೆಂಬ ಆಸೆಯಿಂದ ಎಡ ಮಗ್ಗುಲಲ್ಲಿರುವ ಗುಡ್ಡವನ್ನು ಏರ ತೊಡಗಿದೆವು. ಸುತ್ತಲಿನ ಕಣಿವೆಗಳೆಲ್ಲಾ ಹತ್ತಿಯಂತೆ ಶುಭ್ರವಾದ ಮೋಡದ ಸೆರಗನ್ನು ಹೊದ್ದು ಪವಡಿಸಿದ್ದವು. ದೂರದ ಕೆಲವು ಮನೆಗಳ ಹೆಂಚಿನ ಛಾವಣಿಗಳಿಂದ ಹೊಗೆ ಹೊಮ್ಮುತ್ತಿತ್ತು. ಪೂರ್ವ ದಿಕ್ಕಿನಲ್ಲಿ ನಾವು ಹತ್ತ ಬೇಕಿದ್ದ ಪರ್ವತದ ಸಾಲು ಸೂರ್ಯನನ್ನು ಮರೆಮಾಡಿರುವೆ ಎಂದು ಠೀವಿಯಿಂದ ಬೀಗುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವೆಂದು ಬಗೆದು, ನಮ್ಮ ಟೆಂಟ್ ಕಳಚಿ ಭಟ್ಟರ ಮನೆಯ ದಾರಿಯಲ್ಲಿ ನಡೆದೆವು. ಭಟ್ಟರ ಪರಿಚಯ ಮಾಡಿಕೊಂಡು ಮುಖ ಮಜ್ಜನಾದಿ ಪೂರೈಸಿ, ಅನಾವಶ್ಯಕವಾದ ವಸ್ತುಗಳನ್ನು ಅವರ ಮನೆಯಲ್ಲಿರಿಸಿ, ಆ ದಿನಕ್ಕೆ ಬೇಕಾದ ಆಹಾರ, ನೀರು, ಕ್ಯಾಮರ ಹಿಡಿದುಕೊಂಡು ಮುಂದುವರೆದೆವು. ಅಲ್ಲಿಂದ ಸ್ವಲ್ಪದೂರದಲ್ಲಿಯೇ ಇರುವ ಅರಣ್ಯ ಇಲಾಖೆಯ ಕಛೇರಿಯಲ್ಲಿ ಸುಂಕ ತೆತ್ತೆವು. ಅಲ್ಲಿಯೂ ಎಲ್ಲಿಂದ ಬಂದದ್ದು, ಎಷ್ಟು ಜನ, ಇಬ್ಬರೇ ಬಂದಿದ್ದೀರ, ಮರ್ಗದರ್ಶಕರು ಬೇಕೆ, ಮುಂತಾದ ವಿಚಾರಣೆ ನಡೆಯಿತು.




ನಮ್ಮ ಮುಂದಿನ ಮೈಲಿಗಲ್ಲು ೨ ಕಿ.ಮೀ ದೂರವಿರುವ ಕಲ್ಲಿನ ಮಂಟಪ. ಹದವಾದ ಏರಿನಿಂದ ಕೂಡಿದ ಕಾಲ್ದಾರಿ ಇದ್ದುದರಿಂದ ಮತ್ತು ಹಿಂದಿನ ದಿನದ ಹೊರೆ ಇರದುದ್ದರಿಂದ ದಾರಿ ಸುಗಮವಾಗಿ ಸಾಗಿತು. ನಿಸರ್ಗವನ್ನು ನೋಡುವ ನೆಪದಿಂದ ಅಲ್ಲಲ್ಲಿ ವಿಶ್ರಮಿಸಿ, ಸಾವಕಾಶವಾಗಿ ೧೦ ಗಂಟೆಯ ಸಮಯಕ್ಕೆ ಕಲ್ಲಿನ ಮಂಟಪ ತಲುಪಿದ್ದೆವು. ಮಂಟಪ ನಾಲ್ಕು ಕಲ್ಲಿನ ಕಂಬಗಳನ್ನಿರಿಸಿ, ಕಲ್ಲಿನ ಹಾಸು ಹಾಸಿ, ಮುಚ್ಚಿಗೆ ಹೊದಿಸಿದ್ದ ಸುಮಾರು ೭ ಅಡಿ ಉದ್ದ, ೭ ಅಡಿ ಅಗಲದಷ್ಟು ಅಗಲವಾದ ಒಂದು ಕಲಾಕೃತಿ. ಅದನ್ನು ಯಾರು, ಯಾವ ಕಾಲದಲ್ಲಿ, ಯಾವ ಉದ್ದೇಶಕ್ಕಾಗಿ ರಚಿಸಿದರೋ ತಿಳಿಯದು. ಅದರ ಎಡ ಮಗ್ಗುಲಲ್ಲಿ ಕುರುಚಲು ಕಾಡಿದ್ದು ಸಣ್ಣದೊಂದು ನೀರಿನ ಒರತೆ ಹರಿಯುತ್ತಿದ್ದುದರಿಂದ, ಹಿಂದನ ಕಾಲದಲ್ಲಿ ಮಡಿಕೇರಿಯ ಕಡೆಯಿಂದ ಸುಬ್ರಮಣ್ಯದ ಕಡೆಗೆ ಪಯಣಿಸುವವರಿಗೆ ವಿಶ್ರಾಂತಿಗಾಗಿ ಕಟ್ಟಿಸಿರಬಹುದೆನೋ ಎಂದು ಊಹಿಸಬಹುದೇನೋ. ಮಂಟಪದಲ್ಲಿ ಕೂತು, ಚಪ್ಪಲಿಯನ್ನು ಕಳಚಿಟ್ಟು ಇಂತಹ ಯೋಚನೆಯಲ್ಲಿ ಮಗ್ನನಾಗಿರುವಾಗ ನನ್ನ ಕಾಲಿನಿಂದ ಸೃವಿಸುತ್ತಿದ್ದ ರಕ್ತವನ್ನು ನೋಡಿದಾಗ ಅದುವರೆಗೂ ಗಮನಕ್ಕೆ ಬರದ ಇಂಬಳಗಳೂ ಗೋಚರವಾದವು. ಜಿಗುಪ್ಸೆಯಿಂದ ಅವನ್ನು ಕಿತ್ತೊಗೆದು, ನೀರಿನ ಒರತೆಯ ಬಳಿಗೆ ಸಾಗಿದೆವು. ನೀರಿನ ಜರಿಯನ್ನು ಸಮೀಪಿಸುತ್ತಿದಂತೆಯೇ ಫ್ರಿಜ್ ಒಳಗೆ ಹೊಕ್ಕಂತೆ ತಣ್ಣನೆಯ ಅನುಭವವಾಗಿ, ಕೈ ಕಾಲು ಮುಖ ತೊಳೆದುಕೊಂಡು ಅಲ್ಲಿಯೇ ಸ್ವಲ್ಪ ಕಾಲ ಕೂತಿದ್ದು ಮತ್ತೆ ಮಂಟಪದ ಕಡೆಗೆ ತೆರಳಿದೆವು. ಹೋಟೆಲ್ನಲ್ಲಿ ಕಟ್ಟಿಕೊಂಡು ಬಂದಿದ್ದ ಬನ್ಸ್ ತಿಂದು, ನೀರಡಿಕೆ ನೀಗಿಸಿಕೊಂಡು ಭತ್ತದ ರಾಶಿಯತ್ತ ಮುಂದುವರಿದೆವು.




ಸುತ್ತಲೆಲ್ಲಾ ಭತ್ತ ಬೆಳೆಯದ ಈ ಗುಡ್ಡಕ್ಕೆ "ಭತ್ತದ ರಾಶಿ" ಎಂಬ ಹೆಸರು ಏಕೆ ಬಂತೋ ತಿಳಿಯದು. ಇಲ್ಲಿಂದ ದಾರಿ ಒಂದೇ ಸಮನೇ ಏರುತ್ತಾ ಸಾಗುತ್ತದೆ. ಬೆಟ್ಟ, ಪಶ್ಚಿಮ ದಿಕ್ಕಿನಿಂದ ಹಿಂಡು ಹಿಂಡಾಗಿ ಬೆನ್ನತ್ತಿ ಬರುವ ಮೋಡವನ್ನು ತಡೆದು ಸುತ್ತಲೆಲ್ಲಾ ಪಸರಿಸಿತ್ತು. ಜಾತಕ ತಿಳಿಯದ ಹಲವು ಬಗೆಯ ಹೂಗಳು ಸಂತಸದಿಂದ ತನ್ನೆಡೆಗೆ ತೇಲಿ ಬರುತ್ತಿರುವ ಅಂಗೈ ಗಾತ್ರದ, ಹಾರುವ ಹೂವಾದ ಚಿಟ್ಟೆಗಳನ್ನು ಆಹ್ವಾನಿಸುತ್ತಿತ್ತು.ಹಲವು ಬಗೆಯ ಏರೋಪ್ಲೇನ್ ಚಿಟ್ಟೆಗಳು ಹಾರಾಡಿ, ಅಲ್ಲಲ್ಲಿ ಕುಳಿತು, ಕೆಲವೊಮ್ಮೆ ಮುಖವನ್ನು ಕಾಲಿನಿಂದ ತೀಡಿಕೊಳ್ಳುತ್ತಿತ್ತು. ಆಗಂತುಕನಂತೆ ಯಾವುದೋ ಜಾತಿಯ ಕಂದು ಬಣ್ಣದ ಹಕ್ಕಿಗಳು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಇದ್ಯಾವುದನ್ನೂ ಗಮನಿಸದೆ ಅಲ್ಲಲ್ಲಿ ಹಿರಿದಾದ ಕಪ್ಪು ಇರುವೆ ತಮ್ಮ ಗೂಡು ಕಟ್ಟುವ ಕಾರ್ಯದಲ್ಲಿ ಮಗ್ನವಾಗಿದ್ದವು. ಮುಂದೆ ಸಾಗುತ್ತಿದಂತೆಯೇ ಬೆಟ್ಟದಿಂದ ಇಳಿದು ಬರುತ್ತಿದ್ದ ಇನ್ನೂ ಕೆಲವು ತಂಡಗಳು ಕಾಣಿಸಿದವು. ಕೆಲವರು ರಾತ್ರಿ ಪರ್ವತದ ಮೇಲೆ ಕಳೆದು ಬಂದವರಾಗಿದ್ದರೆ ,ಇನ್ನು ಕೆಲವರು ಸೋಮವಾರ ಪೇಟೆಯ ಕಡೆಯಿಂದ ಬಂದವರಾಗಿದ್ದರು. ದಾರಿಯಲ್ಲಿ ಅಲ್ಲಲ್ಲಿ ಕುಳಿತು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡು ಮುಂದೆ ಸಾಗಿದೆವು. ಕಾಲು ದಾರಿ ಸ್ಪಷ್ಟವಾಗಿದ್ದುದರಿಂದಲೂ, ಅಲ್ಲಲ್ಲಿ ಗುರುತುಗಳಿದ್ದುದರಿಂದಲೂ ದಾರಿ ತಪ್ಪಿ ಹೋಗುವ ಸಂಭವ ತೀರಾ ದುರ್ಲಭವಾಗಿತ್ತು. ಮುಂದೆ ಹೋದಂತೆ ಬಂಡೆಗಳ ದಟ್ಟಣಿ ಹೆಚ್ಚಿದ್ದು, ಮಳೆಯಿಂದಾಗಿ ಪಾಮಾಜಿಗಳು ಬೆಳೆದದ್ದರಿಂದ ಜಾಗರೂಕತೆಯಿಂದ ಹೆಜ್ಜೆಯಿಡಬೇಕಿತ್ತು. ಅಂತೆಯೇ ಇನ್ನೊಂದು ಬೆಟ್ಟದ ನೆತ್ತಿಯನ್ನು ತಲುಪಿದಾಗ ಸುಮಾರು ೧೫೦೦ ಅಡಿಗಳಷ್ಟು ಮೇಲಕ್ಕೇರಿದ್ದೆವು. ಎಡ ಮಗ್ಗುಲಲ್ಲಿ ಕಾಡು ಬಲಗಡೆ ಬಂಡೆಯಿಂದ ನಿರ್ಮಿಸಲ್ಪಟ್ಟ, ಆಳವಾದ ಕಣಿವೆ. ಆ ಬಂಡೆಗಳಾದರೋ ಗುಡ್ಡದ ಮೇಲ್ಮೈಯಂತೆ ಇಳುಜಾರಾಗಿರದೆ, ಗೋಡೆಯಂತೆ ಲಂಬವಾಗಿತ್ತು. ೧.೫ ಕಿ.ಮೀ. ಎತ್ತರದ ಗೋಡೆಯ ಮೇಲೆ ನಿಂತುಕೊಂಡು ಕೆಳಗಿನ ದೃಶ್ಯ ವೀಕ್ಷಿಸಿದಂತಿತ್ತು. ಆದರೂ ಮೋಡದ ದೆಸೆಯಿಂದಾಗಿ ಈ ದೃಶ್ಯದ ಭಯಾನಕತೆಯ ತೀವ್ರತೆ ಕಡಿಮೆಯಾಗಿತ್ತು.




ಮುಂದಿನದಾರಿ ಪಶ್ಚಿಮ ಘಟ್ಟದ ಮಳೆ ಕಾಡಾಗಿತ್ತು. ಪಾಚಿ, ಪಾಮಾಜಿಗಳು ಬೆಳೆದು, ಕೇವಲ ಎಲೆಗಳಲ್ಲದೆ, ಕಾಂಡದಿಂದ ಹಿಡಿದು ಬೇರಿನವರೆಗೂ ಹಸಿರುಮಯವಾಗಿತ್ತು. ಕೆಲವು ಪಾಚಿಗಳಂತೂ ಮರದ ಕೊಂಬೆಯಿಂದ ಜೋತು ಬಿದ್ದು, ಸುಳಿಯುವ ಮೋಡಗಳನ್ನು ಕರಗಿಸಿ, ಒದ್ದೆಯಾಗಿ, ತಮ್ಮ ತೆಕ್ಕೆಯಲ್ಲಿ ಬಂಧಿಯಾಗಿದ್ದ ಹಿಮ ಮಣಿಗಳಲ್ಲಿ ಇನ್ನೊಂದೇ ಪ್ರಪಂಚ ಬಿಂಬಿಸುತ್ತಿತ್ತು. ಫೋಟೋ ತೆಗೆಯುವ ಆಸೆಯಿಂದ ನಿಂತು ಕ್ಯಾಮರಾ ಕೈಗೆತ್ತುಕೊಂಡರೆ, ಅಷ್ಟ ದಿಕ್ಕುಗಳಿಂದಲೂ ಇಂಬಳದ ಸೈನ್ಯ ದಾಳಿ ಇಡಲಾರಂಭಿಸಿತು. ಇವುಗಳ ದಾಳಿಗೆ ತತ್ತರಿಸಿ ಬೀಸುಬೀಸನೆ ಹೆಜ್ಜೆ ಹಾಕುತ್ತಾ ಮುಂದುವರೆದೆವು. ಮುಂದೆ ಒಂದು ಸಣ್ಣ ತೊರೆ ದಾಟಿ ದಾರಿ ಹುಡುಕುತ್ತಿರಬೇಕಾದರೆ ಎದುರಿಗಿರುವ, ಜಲಪಾತದ ನೀರು ಶುಷ್ಕವಾಗಿ ಬರೀ ಕಲ್ಲು ಬಂಡೆಗಳಿಂದ ಕೂಡಿದ ಏರು ಕಾಣಿಸಿತು. ಅನುಮಾನದಿಂದ ಅದನ್ನೇ ಹತ್ತುತ್ತಿರಬೇಕಾದರೆ, ಇದು ನಿಜವಾಗಿಯೂ ಜಲಪಾತವಾಗಿದ್ದು,ಮೇಲಿನಿಂದ ಒಮ್ಮೆಲೇ ನೀರು ಹರಿದು ಬಂದರೆ ಎಂಬ ಆಲೋಚನೆಯಾಯಿತು.ಮೇಲೆ ಹತ್ತಿದೊಡನೆ ೨೫ ಅಡಿಗಳಷ್ಟು ಎತ್ತರಕ್ಕೆ ವಿಶಾಲವಾಗಿ ಹರಡಿಕೊಂಡ ಬಂಡೆ ಕಾಣಿಸಿತಲ್ಲದೇ, ಯಾವುದೇ ದಾರಿ ಗೋಚರವಾಗಲಿಲ್ಲ. ದಾರಿ ತಪ್ಪಿಸಿಕೊಂಡೆವೋ ಎಂಬ ಅನುಮಾನದಿಂದ ಸುಳಿದಾಡಬೇಕಾದರೆ, ಮೇಲಿನಿಂದ ಯಾವುದೋ ಜನರ ಗುಂಪೊಂದು ನಮ್ಮನ್ನು ಕರೆದು, ಕೆಳಗೆ ಹೋಗುವ ದಾರಿ ಯಾವುದೆಂದು ಕೇಳಿತು. ಮೇಲ್ಗಡೆ ಮೋಡದ ದಟ್ಟಣಿ ಅಧಿಕವಾದದ್ದರಿಂದ ಚಾರಣಿಗರ ಗುಂಪೊಂದು ೧ ತಾಸಿನಿಂದ ದಾರಿಯ ಶೋಧದಲ್ಲಿ ತೊಡುಗಿತ್ತು. ಕೆಳಗೆ ಹೋಗುವ ದಾರಿ ಅವರಿಗೆ ತೋರಿಸಿ ಮೇಲೆ ಹತ್ತಬೇಕಾಗಿದ್ದ ನಮ್ಮ ದಾರಿಯ ಬಗ್ಗೆ ತಿಳಿದುಕೊಂಡು, ಅಲ್ಲಲ್ಲಿ ಗುರುತಿಗಾಗಿ ನಮ್ಮ ಬಳಿಯಿರುವ ವಸ್ತುವನ್ನಿರಿಸಿ ಮೇಲೆ ಹತ್ತಿದೆವು. ಬಂಡೆಯ ಮೇಲೆ ಎಲ್ಲಿ ನೋಡಿದರೂ ೫ ಅಡಿಗಳಷ್ಟು ಎತ್ತರದ ಪೊದೆ. ಆದರೂ ದಾರಿಯ ವಿಚಾರವಾಗಿ ಕೇಳಿ ತಿಳಿದಿದ್ದ ನಮಗ ಬಲಗಡೆಯಿರುವ ಒಂದು ಪೊದೆ ಹೊಗ್ಗಬೇಕೆಂದು ಕಂಡುಹಿಡಿಯಲು ಹೆಚ್ಚಿನ ಸಮಯ ತಗಲಲಿಲ್ಲ. ಒಂದು ಬಾರಿಗೆ ಒಬ್ಬರೇ ನುಸುಳಬಹುದಾದಷ್ಟು ಜಾಗವಿದ್ದುದರಿಂದ ಬೆನ್ನು ಬಗ್ಗಿಸಿಕೊಂಡು, ಒಬ್ಬರ ಹಿಂದೊಬ್ಬರಂತೆ ಮುನ್ನಡೆದೆವು.





ಪುಷ್ಪಗಿರಿಯ ನೆತ್ತಿ ಇನ್ನು ಕೆಲವೇ ಫರ್ಲಾಂಗುಗಳಷ್ಟು ದೂರವಿತ್ತು. ಏಕ ಶಿಲೆಯಂತಿದ್ದ ಬಂಡೆಯ ದಾರಿ ಹತ್ತಿ, ಶಿಖರವನ್ನು ತಲುಪಿದೆವು. ಮೊದಲಿಗೆ ಕಾಣಿಸಿದ್ದು ಆಯ ಅಳತೆಗಳಿಲ್ಲದೇ, ಕಲ್ಲುಗಳನ್ನು ಜೋಡಿಸಿ ರಚಿಸಿದ ಗುಡಿ; ಗುಡಿಯಲ್ಲಿ ಶಿವಲಿಂಗವಿತ್ತು. ಸುತ್ತಲೂ ಮೂರು ಅಡಿಗಳಷ್ಟು ಎತ್ತರದ ಕಲ್ಲಿನ ಪಾಗರವನ್ನೂ ಕಟ್ಟಿದ್ದರು. ದೀಪದ ಬೆಳಕೂ ಅಲಭ್ಯವಾಗಿದ್ದ ಗುಡಿಯಲ್ಲಿ ನೈಸರ್ಗಿಕ ಬೆಳಕು ಒಂದು ಕಂಡಿಯಿಂದ ತೂರಿಬರುತ್ತಿತ್ತು . ಯಾರೋ ದೇಣಿಗೆಯಾಗಿ ಕೊಟ್ಟ ಗಂಟೆ, ಕಿಲುಬು ಹಿಡಿದಿದ್ದ ದೀಪದ ಸೊಡರನ್ನು ಹೊರತು ಪಡಿಸಿದರೆ ಇನ್ಯಾವುದೇ ಪೂಜಾಸಾಮಗ್ರಿಯೂ ಅಲ್ಲಿರಲಿಲ್ಲ. ಶಿಖರದ ಸುತ್ತಲೂ ಮಡಿಕೇರಿ, ದಕ್ಷಿಣ ಕನ್ನಡದ ಸೊಬಗನ್ನು ವೀಕ್ಷಿಸಬಹುದಾದರೂ ಮೋಡ ಕವಿದದ್ದರಿಂದ ನಮಗೆ ಯಾವುದೇ ಬಗೆಯ ನೋಟ ಕಾಣಿಸಲಿಲ್ಲ.ಗುಡಿಯ ಒಂದು ಮಗ್ಗುಲಲ್ಲಿ ವಿಶ್ರಾಂತಿ ತೆಗೆದುಕೊಂಡು, ಕಲ್ಲಿನಂತೆ ಕಠಿಣವಾದ ಪರೋಟವನ್ನು, ಹೇರಳೆಕಾಯಿ, ನಿಂಬೇ ಕಾಯಿ, ಶುಂಠಿಗಳಿಂದ ತಯಾರಿಸಿದ ಸಂರಕ್ಷಕ ರಹಿತವಾದ ಉಪ್ಪಿನಕಾಯಿ ಜೊತೆಗೆ ತೃಪ್ತಿಯಿಂದ ತಿಂದು ಕೆಳಮುಖವಾಗಿ ಹೊರಟೆವು.




ಇಳಿಯುವ ದಾರಿ ಹತ್ತುವ ದಾರಿಯಂತೆ ತ್ರಾಸದಾಯಕವಾಗಿರದಿದ್ದರೂ,ಜಾರುವ ಇಳಿಜಾರಿನಲ್ಲಿ ಬೀಳದಂತೆ ಜಾಗರೂಕತೆಯಿಂದ ಇಳಿಯಬೇಕಾಗುತ್ತದೆ. ಹತ್ತಬೇಕಾದರೆ ಹಾದಿಗೆ ಹೆಚ್ಚಿನ ಗಮನ ಕೊಡದೆ ಸುತ್ತಲಿನ ಸೌಂದರ್ಯ ಸವಿಯುತ್ತಾ ಸಾಗಬಹುದಾದರೆ, ಇಳಿಯಬೇಕಾದರೆ ಕಾಲಿನ ಕಡೆಗೇ ಲಕ್ಷ್ಯ ಕೊಡಬೇಕಾಗುತ್ತದೆ. ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ, ಅಲ್ಲಲ್ಲಿ ಎಡವಿ, ತೊಡರುತ್ತಾ, ಒಂದು ರೀತಿಯ ಬಳಲಿಕೆಯಿಂದ ತೂಕಡಿಸುತ್ತಾ, ಕತ್ತಲೆ ಆವರಿಸುತ್ತಾ ಇನ್ನೇನು ಮಳೆ ಬೀಳುತ್ತದೆ ಎನ್ನುವ ಹೊತ್ತಿಗೆ ಭಟ್ಟರ ಮನೆ ತಲುಪಿದೆವು.



ಬೆಟ್ಟದ ಜೀವ



ಭಟ್ಟರ ಮನೆಗೆ ಹೊಗ್ಗುತ್ತಿದಂತೆಯೇ ನಮ್ಮಂತೆಯೇ ಚಾರಣಕ್ಕೆ ಬಂದ ಇನ್ನೆರಡು ಗುಂಪುಗಳು ಕಣ್ಣಿಗೆ ಬಿದ್ದವು. ಮರುದಿನ ಬೆಟ್ಟದ ತುದಿಗೆ ಹೊರಟಿದ್ದ ಎಲ್ಲರೂ ಕಲೆತು ಇಸ್ಪೀಟ್ ಆಟದಲ್ಲಿ ಮಗ್ನರಾಗಿದ್ದರು. ಕೈಕಾಲು ಮುಖ ತೊಳೆದು ಬಂದು ನಾವು ಭಟ್ಟರ ಜೊತೆಗೆ ಹರಟೆಗೆ ಕೂತೆವು. ಭಟ್ಟರು ಕಳೆದ ಸುಮಾರು ೩೦ ವರ್ಷಗಳಿಂದ ಅದೇ ಬೆಟ್ಟಗಳ ನಡುವೆ ೫ ಎಕರೆ ಅಡಿಕೆ ತೋಟವನ್ನು ಮಾಡಿಕೊಂಡು ಬದುಕುತ್ತಿದ್ದಾರೆ.ಸುತ್ತಲಿನ ಪರಿಸರ "ವೈಲ್ಡ್ ಲೈಫ್"ರಕ್ಷಣೆಯಲ್ಲಿದ್ದರೂ ಪಿತ್ರಾರ್ಜಿತವಾಗಿ ಬಂದ ಭಟ್ಟರ ಆಸ್ತಿ ಇದಕ್ಕೆ ಹೊರತಾಗಿದೆ. ಭಟ್ಟರು ಮೂಲತಹಃ ಉತ್ತರ ಕನ್ನಡದ ಹವ್ಯಕ ಬ್ರಾಹ್ಮಣರಾಗಿದ್ದು, ಅಪ್ಪನ ಕಾಲದಲ್ಲಿ ಇಲ್ಲಿಗೆ ಬಂದು ನೆಲೆಸಿದ್ದಾರೆ. ಸುಮಾರು ಅರವತ್ತು ವರ್ಷದ ಆಸುಪಾಸಿನ ಭಟ್ಟರು ಮಾಸಲು ಬಣ್ಣದ ಅಂಗಿ, ಪಂಚೆ, ಅರೆ ನೆರೆತ ಗಡ್ಡ ಕೂದಲು,ಚುರುಕಾದ ನಡಿಗೆ, ಎಲ್ಲರೊಂದಿಗೂ ಮಾತನಾಡುವ ಅವರ ಸ್ವಭಾವದಿಂದಾಗಿ, ಸರಳರಾಗಿ ತೋರಿದರೂ, ಎಲ್ಲಾ ತಿಳಿದವರಂತೆ ಕಾಣುತ್ತಾರೆ. ಹೆಂಡತಿ ತೀರಿಕೊಂಡಿದ್ದು, ತಮ್ಮ ಅತ್ತೆ ಹಾಗೂ ತಮ್ಮನ ಜೊತೆ ಇದ್ದುಕೊಂಡು ಚಾರಣಿಗರಿಗೆ ಆಶ್ರಯದಾತರಾಗಿದ್ದಾರೆ (ಭಟ್ಟರ ದೂ.ಸಂ. ೯೪೪ ೮೬೪ ೭೯೪೭ ಕ್ಕೆ ಕರೆ ಮಾಡಿ ಅರ್ಧ ದಿನ ಮುಂಚಿತವಾಗಿ ತಿಳಿಸಬಹುದು). ೮೦ರ ಆಸುಪಾಸಿನವರಂತೆ ಕಾಣುವ ಅವರ ಅತ್ತೆ, ಸಂಕಷ್ಟದ ದ್ಯೋತಕವೋ ಎಂಬತೆ ಬಾಗಿದ ಬೆನ್ನಿನ ನೆರವಿನಿಂದ ತಮ್ಮ ಕೆಲಸವಷ್ಟೇ ಅಲ್ಲದೆ, ಚಾರಣಿಗರಿಗೆ ಅಡುಗೆ ಮಾಡುವ ಕೆಲಸವನ್ನೂ ಮಾಡುತ್ತಾರೆ. ಬೆಳಿಗ್ಗಿನ ಮತ್ತು ಮಧ್ಯಾಹ್ನದ ಅಡುಗೆಯ ಕೆಲಸ ಭಟ್ಟರದ್ದಾದರೆ, ರಾತ್ರಿಯ ಆಡುಗೆ ಪಾಳಿ ಅವರ ಅತ್ತೆಯದು. ಭಟ್ಟರು, ೧೯೯೮ನೇ ಇಸವಿಯಿಂದ ಅವರ ಮನೆಗೆ ಭೇಟಿ ಕೊಟ್ಟ ಚಾರಿಣಿಗರ ಹೆಸರು, ವಿಳಾಸ, ಭೇಟಿ ಕೊಟ್ಟ ಸಮಯ ಇವುಗಳನ್ನು ಬರೆಸಿಕೊಂಡಿದ್ದು, ೨೦೦೨ ಏಪ್ರಿಲ್ನಲ್ಲಿ ಈ ಹಿಂದೆ ಭೇಟಿ ಕೊಟ್ಟ ರಾಘವೇಂದ್ರನ ತಂಡದ ಹೆಸರು ಅವರ ಕಡತದಲ್ಲಿರುವುದನ್ನು ಕಂಡು ಸಂತೋಷಗೊಂಡ.




ಹೊರಗಡೆ ಹಿತವಾಗಿ ಮಳೆ ಸುರಿಯುತ್ತಿದ್ದು, ಬಚ್ಚಲು ಮನೆಯಲ್ಲಿ ಹಚ್ಚಿದ್ದ ಕಿಚ್ಚು ಹಂಡೆಯ ನೀರನ್ನು ಬಿಸಿಯಾಗಿಸುತ್ತಿತ್ತು. ಬೆಂಕಿಯ ಮುಂದೆ ಕೂತು ಚಳಿಕಾಯಿಸುತ್ತಾ, ಬಿಸಿನೀರಿನ ಸ್ನಾನದ ಕನಸು ಕಾಣತೊಡಗಿದೆವು. ಮೊದಲು ಕೇಳಲು ಸಂಕೋಚವಾದರೂ, ನಡೆದು ದಣಿದಿದ್ದ ಮೈಗೆ ಬಿಸಿನೀರಿನ ಸ್ನಾನದ ಹಂಬಲ ಅಧಿಕವಾಗಿ, ಸಂಕೋಚವನ್ನು ಬದಿಗಿಟ್ಟು ಭಟ್ಟರನ್ನು ಕೇಳಲಾಗಿ, "ನನ್ನ ಸ್ನಾನದ ನಂತರ ಧಾರಾಳವಾಗಿ ಮಾಡಬಹುದು" ಎಂದರು. ಭಟ್ಟರ ಸ್ನಾನದ ನಂತರ ಬಚ್ಚಲು ಮನೆಗೆ ತೆರಳಿ, ಕುದಿಯುವ ನೀರನ್ನು ಪಕ್ಕದಲ್ಲಿದ್ದ ತಣ್ಣೀರಿಗೂ ಬೆರೆಸದೆ, ಒಂದೊಂದಾಗಿ ಚೊಂಬಿನಿಂದ ತಲೆಯ ಮೇಲೆ ಸುರಿದು ಕೊಳ್ಳತೊಡಗಿದ ನಂತರ ಮೈ ಮನಗಳಲ್ಲಿದ್ದ ಉದಾಸೀನ ಭಾವ ತೊಲಗಿ, ಹಗುರವಾಯಿತು. ಬಿಸಿನೀರಿನ ಅಭ್ಯಂಜನದಿಂದ ಕೆಂಪಗೆ ಹಬೆಯಾಡುತ್ತಿದ್ದ ಮೈಯನ್ನು ಹೊತ್ತುಕೊಂಡು ಮನೆಯ ಚಾವಡಿಗೆ ಬಂದು ಊಟದ ಕರೆಗಾಗಿ ಕಾಯುತ್ತಾ ಕುಳಿತೆವು.ಚೆನ್ನಾಗಿ ಹಸಿದಿದ್ದ ಹೊಟ್ಟೆಗೆ ಬಿಸಿಬಿಸಿಯಾದ ಅನ್ನ, ಆಲೂಗಡ್ಡೆ ಹುಳಿ ತುಂಬಾ ರುಚಿಯಾಗಿ ಕಾಣಿಸಿತು. ಉಂಡು, ಬೆಚ್ಚಗೆ ಮಲಗಿದ ನಮಗೆ ಬೆಳಿಗ್ಗೆ ೭ ಗಂಟೆಗೆ ಭಟ್ಟರ ಮನೆಯ ಆಕಾಶವಾಣಿ ಕೇಳಿಯೇ ಎಚ್ಚರವಾದದ್ದು.




ಬೆಳಿಗ್ಗೆ ಎದ್ದು ಭಟ್ಟರ ಮನೆಯ ವೀಕ್ಷಣೆಗೆ ತೊಡಗಿದೆವು. ಕೆಂಪು ಮಣ್ಣಿನಿಂದ ಎಬ್ಬಿಸಿದ ಗೋಡೆ, ಮರ ಹಾಗೂ ಕಬ್ಬಿಣವನ್ನು ಉಪಯೋಗಿಸಿ ಹೆಂಚು ಹೊದೆಸಿದ್ದ ಸೂರು, ಉದ್ದವಾಗಿದ್ದ ಮನೆಯ ಮುಂಭಾಗದ ಚಾವಡಿಗೆ ಅರೆ ಮುಚ್ಚಿದ ಗೋಡೆ, ಮರದ ಬಾಗಿಲು ತೆರೆದು ತಲೆತಗ್ಗಿಸಿ ಮುಂದುವರಿದರೆ ಮತ್ತೆ ಅದೇ ಚಾವಡಿಯಂತಹ ಉದ್ದನೆಯ ರಚನೆಯ ಎಡಗಡೆ ಅರೆ ಗೋಡೆಯನ್ನಿರಿಸಿ ರಚಿಸಿದ ೨ ಚಿಕ್ಕ ಕೋಣೆ, ಒಂದರಲ್ಲಿ ಸೌರ ಫಲಕದಲ್ಲಿ ತಯಾರಾಗುವ ವಿದ್ಯುತ್ ಶೇಖರಿಸುವ ಬ್ಯಾಟರಿ, ಮುಂದಕ್ಕೆ ಬಾಗಿಲು ದಾಟಿ ಹೋದರೆ ಅಡುಗೆ ಸಾಮಾನು ಇಡುವ ಕೊಟಡಿ, ಮಗ್ಗುಲಲ್ಲಿ ಚಿಕ್ಕ ಅಡುಗೆ ಕೋಣೆ, ಅದರ ಹಿಂದೆ ವಿಶಾಲವಾದ ಇನ್ನೊಂದು ಅಡುಗೆ ಕೋಣೆಯಿದ್ದು ಇದನ್ನು ಭಟ್ಟರೂ, ಇನ್ನೊಂದನ್ನು ಅವರ ಅತ್ತೆಯೂ ಅಡುಗೆಗಾಗಿ ಬಳಸುತ್ತಾರೆ. ಮನೆಯ ನೆಲ ಕೆಲವು ಕಡೆ ಸಿಮೆಂಟಿನಿಂದ ಹಾಗೂ ಇನ್ನು ಕೆಲವೆಡೆ ಸಗಣಿ ಹಾಗು ಇದ್ದಲನ್ನು ಒರೆದು ಮಾಡಿದ್ದು.ಮನೆಯ ಬಲಗಡೆ ದನದ ಕೊಟ್ಟಿಗೆ, ಎಡಗಡೆ ಬಚ್ಚಲು ಮನೆ, ಅಲ್ಲೇ ಕೆಳಗಡೆ ತೋಟಕ್ಕೆ ಹೋಗುವ ದಾರಿಯಲ್ಲಿ ಶೌಚಾಲಯವಿತ್ತು. ಕಿಟಕಿಗಳು ಇಲ್ಲದೆಡೆ ಮನೆಯ ಮಾಡಿನಲ್ಲಿ ಒಂದೆರಡು ಗಾಜಿನ ಫಲಕವಿಟ್ಟು ಬೆಳಕು ಬರುವಂತೆ ಮಾಡಿದ್ದಾರೆ. ಮನೆಯ ಗೋಡೆಯ ಮೇಲೆ ಹಳೆಯ ಕ್ಯಾಲೆಂಡರ್, ಚಿತ್ರ ಪಟಗಳು ತೂಗುಹಾಕಿದ್ದವು. ಇಂತಹ ವಾತಾವರಣದಲ್ಲೇ ಭಟ್ಟರ ಫೋಟೊ ತೆಗೆಯಲು ಅನುಮತಿ ಕೇಳಿದಾಗ, ಸಂತೋಷದಿಂದಲೇ ಒಪ್ಪಿಕೊಂಡು ಪೋಸು ನೀಡಿದರು.




ಬಂದಿದ್ದ ಎರಡು ತಂಡಗಳು ಅದಾಗಲೇ ಚಾರಣಕ್ಕೆ ಹೊರಟಿತ್ತು. ನಮಗೆ ಅಂತಹ ತರಾತುರಿ ಇಲ್ಲದ್ದರಿಂದ ಪ್ರಾತಃ ವಿಧಿಗಳನ್ನು ಮುಗಿಸಿ, ಉಪ್ಪಿಟ್ಟು, ಚಿತ್ರಾನ್ನ ತಿಂದು, ಚಹಾ ಹೀರಿ ಸಾವಕಾಶವಾಗಿ ಹೊರಡಲನುವಾದೆವು. ಭಟ್ಟರನ್ನು ದುಡ್ಡು ಎಷ್ಟು ಎಂದು ಕೇಳಲಾಗಿ "ಎಷ್ಟಾದರೂ ಕೊಡಿ" ಎಂಬ ಉತ್ತರ ಬಂತು. ನಮಗೆ ತೋಚಿದಷ್ಟು ಕೊಟ್ಟು, ಹಿಂದಿನ ದಿನ ಅವರು ಮೆಚ್ಚಿಕೊಂಡಿದ್ದ ನಮ್ಮ ಟಾರ್ಚ್ ಕೊಟ್ಟು, ವಿದಾಯ ಹೇಳುತ್ತಾ ಸುಬ್ರಮಣ್ಯದ ದಾರಿ ಹಿಡಿದೆವು.



ಜನಾರಣ್ಯದೆಡೆಗೆ


ಮತ್ತೆ ಬಂದ ಹಾದಿಯಲ್ಲೇ, ಸೋನ್ ಪಪ್ಪಡಿಯನ್ನು ಎಳೆ ಎಳೆಯಾಗಿ ಸವಿಯುವಂತೆ, ನಡೆದದ್ದಕ್ಕಿಂತ ಜಾಸ್ತಿಯಾಗಿ ಅರಣ್ಯದ ಸೊಬಗನ್ನು ಸವಿಯುತ್ತಾ ಮುನ್ನೆಡೆದೆವು. ವಾರಾಂತ್ಯವಾದ್ದರಿಂದ ದಾರಿಯಲ್ಲಿ ಹಲವು ಚಾರಣಿಗರ ಗುಂಪು ಭೇಟಿಯಾಯಿತು. ಕೊನೇಯಲ್ಲಿ ಸಿಕ್ಕಿದ ಗುಂಪೊಂದು ದಾರಿಯ ಬೇಸರ ಕಳೆಯಲು ಬಿಯರ್ ಕುಡಿಯುತ್ತಾ,ಖಾಲಿ ಡಬ್ಬವನ್ನು ಅಲ್ಲಲ್ಲಿ ಬಿಸಾಡುತ್ತಾ, ಕಿರುಚಾಡುತ್ತಾ ಬರುತ್ತಿದ್ದರು. ಅವರು ನಾವು ವಿಶ್ರಮಿಸುತ್ತಿದ್ದ ಬಂಡೆಯೆಡೆಗೆ ಬಂದು, ನಮ್ಮ ಜೊತೆಯೇ ಕುಳಿತು, ನಮ್ಮ ಅನುಭವ ಹಂಚಿಕೊಂಡು ಪರಿಚಯ ಮಾಡಿಕೊಂಡ ನಂತರ, "ಹೀಗೆಲ್ಲ ಕಂಡ ಕಂಡಲ್ಲಿ ಡಬ್ಬ ಎಸಯಬಾರದು, ಅವನ್ನೆಲ್ಲಾ ಸಂಗ್ರಹಿಸಿ ಇಟ್ಟುಕೊಂಡು ಮುಂದೆ ಸಿಗುವ ಕಸದ ತೊಟ್ಟಿಯಲ್ಲಿ ಎಸಯಿರಿ" ಎಂದು ಕೇಳಿಕೊಂಡೆವು. ನಮ್ಮ ಮಾತಿಗೆ ಸಮ್ಮತಿಸಿ ಖಾಲಿ ಡಬ್ಬವನ್ನು ಚೀಲದೊಳಗೆ ಹಾಕಿಕೊಂಡರಾದರೂ, ಹೊರಡುವ ವೇಳೆಯಲ್ಲಿ ಅವರಲ್ಲೊಬ್ಬ "ಈ ಡಬ್ಬಿಗಳು ಕಾಲಂತರದಲ್ಲಿ ಮಣ್ಣಿನೊಡನೆ ಬೆರೆತು ಹೋಗುತ್ತದೆ" ಎಂದು ಗೊಣಗಿಕೊಂಡು ಹೋದನು. ನಮ್ಮ ಸ್ವಾರ್ಥಕ್ಕಾಗಿ ಸಮಾಜದ ಸ್ವತ್ತನ್ನು ಹಾಳುಗೆಡುವಬಾರದೆಂಬ ಅರಿವು, ಅವರವರ ಮನದೊಳಗೆ ಮೂಡಬೇಕೇ ಹೊರತು, ಇಂತಹ ಯುವ-ಕರು-ಗಳಿಗೆ ಬುದ್ಧಿಮಾತಿನಿಂದ ಯಾವುದೇ ಪ್ರಯೋಜನವಿಲ್ಲ.




೬ ಗಂಟೆಗಳಷ್ಟು ದೀರ್ಘ ಪ್ರಯಾಣ ಮುಗಿದು ನಾಗರೀಕತೆಯ ದ್ಯೋತಕವೋ ಎಂಬಂತೆ ತೋಟಗಳಿಗೆ ಹಾಕಿದ್ದ ಬೇಲಿಯನ್ನು ನೋಡುವುದರೊಂದಿಗೆ ನಮ್ಮ ಕುಮಾರ ಪರ್ವತದ ಚಾರಣ ಮುಕ್ತಾಯವಾಯಿತು. ಸುಬ್ರಮಣ್ಯಕ್ಕೆ ಹೋಗಿ, ಬೆಂಗಳೂರಿಗೆ ಹೊರಡಲಿರುವ ಕ.ರಾ.ರು.ಸಾ.ಸಂ.ನಲ್ಲಿ ಉಳಿದಿದ್ದ ಕೊನೇಯ ಎರಡು ಸೀಟ್ ಕಾಯ್ದಿರಿಸಿದೆವು. ರಾತ್ರಿ ೧೦ಕ್ಕೆ ಹೊರಡಲಿರುವ ಬಸ್ಸು, ೧೦.೩೦ಕ್ಕೆ ಬಂದಂದ್ದರಿಂದ, ೫ ಗಂಟೆಗಳಷ್ಟು ದೀರ್ಘವಾದ ಬಿಡುವಿನ ವೇಳೆಯನ್ನು ರಥ ಬೀದಿಯಲ್ಲಿ ತಿರುಗಾಡುತ್ತಾ,ವಾಚನಾಲಯದಲ್ಲಿ ಓದುತ್ತಾ ಕಳೆದೆವು. ಬಸ್ಸಿನಲ್ಲಿ ಕುಳಿತ ನಮಗೆ ಕಳೆದ ಮೂರು ದಿನಗಳ ಪ್ರಕೃತಿಯೊಂದಿಗಿನ ಮಧುರ ನೆನಪು ಕಾಡುತ್ತಿತ್ತು, ಜೊತೆಗೆ ಇಂಬಳಗಳ ಕಡಿತದಿಂದುಂಟಾದ ತುರಿಕೆಯೂ ಕೂಡ.



ಫೋಟೋ ಆಲ್ಬಮ್

Friday, September 12, 2008

ಪತ್ರಗಳು


"ಮೈಲ್" ಎಂದಾಕ್ಷಣ ನಮ್ಮ ನೆನಪಿಗೆ ಬರುವುದು "ಇ-ಮೈಲ್", ನನ್ನಂತೆಯೆ ಸ್ವಲ್ಪ ಹಳೆಯ ಕಾಲದವರಾದರೆ "ಆ-ಮೈಲ್" ಕೂಡಾ ನೆನಪಿಗೆ ಬರಬಹುದು! ನಾನು ಈಗ ಹೇಳ ಹೊರಟಿರುವುದು ಅದೇ "ಆ-ಮೈಲ್" ಬಗ್ಗೆ. ಅಚ್ಚ ಕನ್ನಡದಲ್ಲಿ ಪತ್ರಗಳು ಎಂದರೆ ನಿಮಗೆ ನಾನು ಹೇಳ ಹೊರಟಿರುವ ಆ-ಮೈಲ್ನ ಸುಳಿವು ಸಿಗಬಹುದು.




ತಿಳಿ ನೀಲಿ ಬಣ್ಣದ "ಅಂತರ್ದೇಶೀಯ ಪತ್ರ", ಹಳದಿ ಬಣ್ಣದ "ಪೋಸ್ಟ್ ಕಾರ್ಡ್", ಕಾವಿ ಬಣ್ಣದ್ದೋ, ಖಾಕಿ ಬಣ್ಣದ್ದೋ, ಇಲ್ಲ ಹಲವು ವರ್ಣ ಸಂಯೋಜನೆಗಳ "ಪೋಸ್ಟ್ ಕವರ್"ಎಂಬಿತ್ಯಾದಿ ಹಲವು ಬಗೆಯ ವೈವಿಧ್ಯತೆಯಿಂದ ಕೂಡಿದ ಸಂದೇಶವಾಹಕಗಳು. ಈ ಮೇಲೆ ಹೇಳಿದ ಬರೀ ಪತ್ರಗಳಿಗೆ ಸಂದೇಶವಾಹಕಗಳು ಎಂದು ಕರೆದದ್ದನ್ನು ನೀವು ಆಕ್ಷೇಪಿಸಬಹುದೋ ಎನೋ, ಪತ್ರಕ್ಕೆ ಕಾಲುಂಟೆ, ರೆಕ್ಕೆ ಉಂಟೆ ಎಂದು ಪ್ರಶ್ನೆಗಳನ್ನು ಕೇಳಿ ನನ್ನನ್ನು ಪೇಚಿಗೆ ಸಿಲುಕಿಸಬಹುದು.ಆದರೆ ಈ ಹಲವು ಬಗೆಯ ಪತ್ರಗಳೊಂದಿಗೆ ಅವನ್ನು ವಿವಿಧೆಡೆಗೆ ಸಾಗಿಸುವ ಅಂಚೆಯವರನ್ನೂ ಸೇರಿಸಿ, ಈ ಶಬ್ದ ಪ್ರಯೋಗಿಸಿದ್ದಾದರೆ ನೀವು ಆಕ್ಷೇಪಿಸಲಾರಿರಿ.

ಅಂತರ್ದೇಶೀಯ ಪತ್ರ ತಿಳಿ ನೀಲಿ ಬಣ್ಣದ, ಎರಡು ಪುಟಗಳಷ್ಟು ವಿಸ್ತಾರವಾಗಿರುವ, ಬಲ ಮೇಲು ತುದಿಯಲ್ಲಿ ಮುಖಬೆಲೆಯೊಂದಿಗೆ ಭಾರತ ಸರಕಾರದ ಮೊಹರುಳ್ಳ ಪತ್ರದ ಒಂದು ಮಾದರಿ. ಎರಡು ಪುಟಗಳಲ್ಲಿ ಅರ್ಧ ಪುಟವನ್ನು "ಗೆ" ಹಾಗೂ "ಇಂದ" ಬರೆಯಲು ಅನುಕೂಲವಾಗುವಂತೆ ತಯಾರಿಸಲಾಗಿರುತ್ತದೆ. ಇಲ್ಲಿ "ಗೆ" ಎಂದರೆ ನಾವು ಯಾರಿಗೆ ಪತ್ರ ಕಳುಹಿಸಲು ನಿರ್ಧರಿಸಿದ್ದೇವೆಯೋ ಅವರ ವಿಳಾಸ ಹಾಗೂ "ಇಂದ" ಎನ್ನುವುದು ನಮ್ಮ ವಿಳಾಸ ಎಂಬುದನ್ನು ಗಮನದಲ್ಲಿರಿಸಬೇಕು. ಅಂದರೆ ಸುಮಾರು ಒಂದುವರೆ ಪುಟಗಳಷ್ಟು ವಿಸ್ತಾರವಾದ ಹಾಳೆಯಲ್ಲಿ ನಿಮಗನ್ನಿಸಿದ್ದನ್ನು ಬರೆಯಬಹುದಾಗಿದೆ. ಸುಮಾರು ಒಂದುವರೆ ಎಂದು ಹೇಳಲು ಕಾರಣ ಇದೆ, ಈ ಪತ್ರದ ಬಲ ಹಾಗೂ ಕೆಳಗಡೆಯಲ್ಲಿ ಒಂದು ಸೆ.ಮಿ.ನಷ್ಟು ವಿಸ್ತರಣೆ ಇದ್ದು, ಪತ್ರ ಬರೆದ ನಂತರ ಅಂಟು ಹಾಕಿ, ನಿಮ್ಮ ಬರಹವನ್ನು ಯಾರೂ ನೋಡದಂತೆ ಮಾಡುವ ವ್ಯವಸ್ಥೆ ಇದೆ. ನೀವು ಜಾಣರಾದಲ್ಲಿ ಅದರಲ್ಲಿಯೂ ಕೂಡ ನಿಮ್ಮ ಬರಹವನ್ನು ತುರುಕಬಹುದು. ಇದರ ಬೆಲೆ ನಾನು ಶಾಲೆಗೆ ಹೋಗುವ ವೇಳೆಯಲ್ಲಿ ೭೫ ಪೈಸೆ ಇದ್ದು, ಕಾಲೇಜು ಬಿಟ್ಟು ಪತ್ರ ಬರೆಯುವುದನ್ನೂ ಬಿಡುವ ವೇಳೆಯಲ್ಲಿ ೨ ರೂಪಾಯಿಗಳಾಗಿತ್ತು. ನಿಮಗೆ ಇ-ಮೈಲ್ ಮಾಡಲು ತಿಳಿಯದೇ ಇದ್ದು, ನಿಮ್ಮ ಮಕ್ಕಳೋ ಮರಿ ಮಕ್ಕಳೋ ಅಪಹಾಸ್ಯ ಮಾಡಿದಾಗ, ಹೊಸದಾಗಿ ತಂದಿರುವ ಅಂತರ್ದೇಶೀಯ ಪತ್ರ ಅವರ ಕೈಗಿತ್ತು, ಮಡಿಸಿ ಅಂಟು ಹಾಕಲು ಹೇಳಿ, ಅವರನ್ನು ಪೇಚಿಗೆ ಸಿಲುಕಿಸಿ ನಿಮ್ಮ ಸೇಡನ್ನು ತೀರಿಸಿಕೊಳ್ಳಬಹುದು. ಈ ಪತ್ರವನ್ನು ಮಡಿಸುವುದೂ ಒಂದು ವಿದ್ಯೆ, ಸುಮ್ಮನೆ ಕಂಪ್ಯೂಟರಿನ ಕೀ-ಪ್ಯಾಡ್ ಮೇಲೋ, ಮೌಸ್ನ ಮೇಲೋ ಕೈಯಾಡಿಸಿದಷ್ಟು ಸುಲಭವಾಗಿ ಇದು ಕರಗತವಾಗಲಾರದು.

ಪೋಸ್ಟ್ ಕಾರ್ಡ್ನ್ನ ಬಡವರ ಸಂದೇಶವಾಹಕ ಎಂದರೆ ತಪ್ಪಾಗಲಾರದು. ಚುಟುಕಾದ ಸಂದೇಶವನ್ನು ಕಡಿಮೆ ವೆಚ್ಚದಲ್ಲಿ ತಲುಪಿಸುವ ಸೌಲಭ್ಯ, ನನಗೆ ತಿಳಿದಂತೆ ೧೫ ಪೈಸೆ ಇದ್ದ ಇದರ ಬೆಲೆ ಮುಂದೆ ೨೫ ಪೈಸೆಯಾಗಿತ್ತು. ಇನ್ನು ಇದರ ಗುಣ ಲಕ್ಷಣದ ಬಗ್ಗೆ ತಿಳಿದುಕೊಳ್ಳೋಣ, ಸಾಧಾರಣವಾಗಿ ತಿಳಿ ಹಳದಿ ಬಣ್ಣದ, ೪/೬ ಅಳತೆಯ, ರಟ್ಟಿನಷ್ಟು ಅಲ್ಲದಿದ್ದರೂ ಸ್ವಲ್ಪ ಗಡುಸಾದ ಪತ್ರದ ಇನ್ನೊಂದು ಮಾದರಿ. ಇದರ ಒಂದು ಮುಖವನ್ನು ಸರಿಯಾದ ಎರಡು ಭಾಗಗಳಾಗಿ ವಿಂಗಡಿಸಿ, ಬಲ ಭಾಗದಲ್ಲಿ ಅಂತರ್ದೇಶೀಯ ಪತ್ರದಂತೆ ಮುಖಬೆಲೆ ಹಾಗೂ "ಗೆ" ಬರೆಯಲು ಅವಕಾಶವಿದ್ದರೆ, ಎಡ ಭಾಗದ ಖಾಲಿ ಜಾಗವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ "ಇಂದ" ಬರೆಯಲೋ ಅಥವಾ ಸಂದೇಶ ಬರೆಯಲೋ ಉಪಯೋಗಿಸಬಹುದು. ನೀವು ಯಾರಿಗಾದರೂ ಆಗಿಂದಾಗ್ಗೆ ಪತ್ರ ಬರೆಯುವವರಾಗಿದ್ದು, ನಿಮ್ಮ ಕೈ ಬರಹದಿಂದಲೇ ನಿಮ್ಮನ್ನು ಗುರುತಿಸಬಹುದಾದ ಸಂದರ್ಭ ಇರುವುದರಿಂದ, "ಇಂದ" ಬರೆಯುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ಆದುದರಿಂದ ಪೋಸ್ಟ್ ಕಾರ್ಡ್ನ್ನ ಚುಟುಕಾದ ಸಂದೇಶ ಕಳುಹಿಸಲೋ, ಬಾನುಲಿ, ಟಿ.ವಿ. ಮುಂತಾದ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುರಭಿಯಂತಹ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಲೋ ಬಳಸಬಹುದು. ಪೋಸ್ಟ್ ಕಾರ್ಡ್ನ್ನ ಕಡಿಮೆ ಬೆಲೆಗೆ ಒದಗಿಸಿ ಕೈ ಸುಟ್ಟುಕೊಂಡ ಸರಕಾರ ಪ್ರಶ್ನೋತ್ತರ ಕಳುಹಿಸುವ ಕಾರ್ಡ್ನು ಬೆರೆಯೇ ಆಗಿ ವಿಂಗಡಿಸಿ ಅದರ ಬೆಲೆಯನ್ನು ಏರಿಸಿದ್ದಾರೆ.ಇದರ ಒಂದು ಅನಾನುಕೂಲ ಏನೆಂದರೆ ಅಂತರ್ದೇಶೀಯ ಪತ್ರ ಮತ್ತು ಪೋಸ್ಟ್ ಕವರ್ನಲ್ಲಿಯಂತೆ ಗೌಪ್ಯ ವಿಷಯವನ್ನು ಕಳುಹಿಸಲು ಸಾಧ್ಯವಿಲ್ಲದಿರುವುದು. ಇನ್ನು ಅಂತರ್ದೇಶೀಯ ಪತ್ರ ಹಾಗೂ ಪೊಸ್ಟ್ ಕಾರ್ಡ್ಗಳಲ್ಲಿನ ಒಂದು ಸಾಮ್ಯತೆ ತಿಳಿಸಿ ಮುಂದಿನ ವಿಷಯಕ್ಕೆ ಹೋಗಬಹುದು. ಕೆಲವೊಮ್ಮೆ ಸರಕಾರದ ಸಂದೇಶ ಜನರಿಗೆ ಸುಲಭವಾಗಿ ತಲುಪುವ ಉದ್ದೇಶದಿಂದ, "ಸಾಕ್ಷರತೆ", "ಕುಟುಂಬ ಕಲ್ಯಾಣ" ಮೊದಲಾದ ವಿಷಯಕ್ಕೆ ಸಂಬಂಧಿಸಿದ ಮುದ್ರಿತ ಬರಹವನ್ನೂ ಇವುಗಳಲ್ಲಿ ಕಾಣಬಹುದು.

ಇನ್ನುಳಿದದ್ದು ಪೋಸ್ಟ್ ಕವರ್, ಇದಕ್ಕೆ ಕನ್ನಡದಲ್ಲಿ ಲಕೋಟೆ ಎಂದರೆ ತಪ್ಪಾಗಲಾರದು. ಕತೆ, ಕವನ ಮೊದಲಾದ ಬರಹವನ್ನು ಸಂಪಾದಕರಿಗೆ ಕಳುಹಿಸುವ ಸಲುವಾಗಿಯೋ, ಮದುವೆಯ ಸಂದರ್ಭದಲ್ಲಿ ಹುಡುಗ ಹುಡುಗಿಯ ಜಾತಕ ವಿನಿಮಯ ಮಾಡಿಕೊಳ್ಳಲೋ, ಒಟ್ಟಿನಲ್ಲಿ ಅಂತರ್ದೇಶೀಯ ಪತ್ರ ಹಾಗೂ ಪೋಸ್ಟ್ ಕಾರ್ಡ್ನಲ್ಲಿ ನಿಮ್ಮ ಸಂದೇಶ ಹಿಡಿಸಲಾರದ ಪಕ್ಷದಲ್ಲಿ ಅಥವಾ ಕೆಲವು ದಾಖಲೆಗಳನ್ನು ನಿಮ್ಮ ಸಂದೇಶದೊಂದಿಗೆ ಕಳುಹಿಸಬೇಕಾದ ಸಂದರ್ಭದಲ್ಲಿ ಇದನ್ನು ಬಳಸಬಹುದು. ಸರಕಾರಿ ಮುದ್ರಿತ ಲಕೋಟೆ ೪/೬ ಅಳತೆಯಲ್ಲಿದ್ದು ನಿಮ್ಮ ವ್ಯವಹಾರಕ್ಕೆ ಅದು ಅನಾನುಕೂಲವಾಗಿ ತೋರಿದ ಪಕ್ಷದಲ್ಲಿ, ಖಾಸಗಿ ಲಕೋಟೆ ಕೊಂಡು ಅದಕ್ಕೆ ಅಂಚೆ ಚೀಟಿ ಅಂಟಿಸುವ ಅನುಕೂಲತೆ ಇದೆ. ಸರಕಾರಿ ಲಕೋಟೆಯಲ್ಲಿ ಮುಖಬೆಲೆ ಬಲ ಮೇಲ್ತುದಿಯಲ್ಲಿ ಇದ್ದರೆ, ಖಾಸಗಿ ಲಕೋಟೆಗೆ ಅದೇ ಜಾಗದಲ್ಲಿ ಅಂಚೆ ಚೀಟಿ ಅಂಟಿಸಬಹುದು. ಅಂಚೆ ಚೀಟಿಯ ಕೆಳಗೆ "ಗೆ" ಹಾಗೂ ಎಡ ಕೆಳ ತುದಿಯಲ್ಲಿ "ಇಂದ" ಬರೆಯಬಹುದು.

ಲಕೋಟೆಯ ಇನ್ನೊಂದು ವರ್ಗದಡಿ "ಆಮಂತ್ರಣ ಪತ್ರ" ಹಾಗೂ "ಶುಭಾಷಯ ಪತ್ರ" ಸೇರಿಸಬಹುದು. ದೂರದ ಬಂಧು ಮಿತ್ರರಿಗೆ ವಿಶೇಷ ಕಾರ್ಯಕ್ರಮಗಳಿಗೆ ಆಮಂತ್ರಿಸುವುದೋ, ಹಬ್ಬ ಹರಿದಿನಗಳಂದು ಶುಭಾಶಯ ತಿಳಿಸುವುದೋ,ಇದರ ಉಪಯೋಗ.ಎರಡೂ ಬಗೆಯ ಪತ್ರಗಳು ಸರಕಾರೀ ಲಕೋಟೆಯ ಬದಲು ಪ್ರತ್ಯೇಕವಾದ ಲಕೋಟೆ ಬಳಸುವುದರಿಂದ ಅಂಚೆ ಚೀಟಿಯನ್ನು ಮೇಲೆ ಹೇಳಿದಂತೆ ಲಗತ್ತಿಸಬೇಕು. ಇದಕ್ಕೆ ಅಂಟನ್ನು ಅಂಟಿಸದೆ ಲಕೋಟೆಯ ಮೆಲ್ತುದಿಯ ಮಧ್ಯ ಭಾಗದಲ್ಲಿ "ತೆರದ ಅಂಚೆ" ಎಂದು ನಮೂದಿಸಿದರೆ ಸಾಧಾರಣ ಬೆಲೆ, ಇಲ್ಲವಾದಲ್ಲಿ ಅದರ ಬೆಲೆ ಕಟ್ಟುವ ನಿರ್ಧಾರ ಅಂಚೆ ಕಛೇರಿಗೆ ಬಿಟ್ಟಿದ್ದು. ಲಕೋಟೆಯ ಬೆಲೆ ನನಗೆ ತಿಳಿವು ಬಂದಾಗ ೧ ರೂಪಾಯಿ ಇದ್ದು, ನಾನು ಇ-ಮೈಲ್ನಿಂದ ಶುಭಾಷಯ ಪತ್ರ ಕಳುಹಿಸಲು ಕಲಿತ ವೇಳೆಗೆ ೫ ರೂಪಾಯಿಯಾಗಿತ್ತು. ಇನ್ನು "ತೆರೆದ ಅಂಚೆಯ" ಸ್ಠಾನದಲ್ಲಿ "ರಿಜಿಸ್ಟರ್ಡ್ ಪೊಸ್ಟ್" ಮತ್ತು "ಸ್ಪೀಡ್ ಪೋಸ್ಟ್" ಎಂಬ ವಿಶೇಷಣವನ್ನೂ ಕೆಲವೊಮ್ಮೆ ನೋಡಬಹುದು. "ರಿಜಿಸ್ಟರ್ಡ್ ಪೊಸ್ಟ್" ಎಂದರೆ "ಗೆ"ಗೆ ಕಳುಹಿಸಿದ ಪತ್ರವನ್ನು ಅವನ ಕೈಗೇ ಒಪ್ಪಿಸಿ ಅವನಿಂದ ಮರುಪತ್ರ ಪಡೆಯುವ ವ್ಯವಸ್ಥೆ. ಇದೇ ವ್ಯವಸ್ಥೆ "ಸ್ಪೀಡ್ ಪೋಸ್ಟ್"ನಲ್ಲೂ ಇದೆಯಾದರೂ ಇದು ಉಳಿದ ಪತ್ರಗಳಿಗಿಂತ ತ್ವರಿತವಾಗಿ ಎಂದರೆ, ಸಾಮಾನ್ಯ ಪತ್ರ ತಲುಪಲು ಸುಮಾರು ೭ ದಿನ ತೆಗೆದುಕೊಂಡರೆ ಅದೇ ಪತ್ರ "ಸ್ಪೀಡ್ ಪೋಸ್ಟ್" ಮೂಲಕ ಒಂದೇ ವಾರದಲ್ಲಿ ತಲುಪಬಲ್ಲದು! ಇವೆರಡೂ ಮೌಲ್ಯವರ್ಧಿತ ಸೇವೆಗಳಾದುದರಿಂದ, ಪತ್ರದ ತೂಕ ಹಾಗೂ ದೂರವನ್ನವಲಂಬಭಿಸಿ ಬೆಲೆ ನಿರ್ಧರಿಸಲಾಗುತ್ತದೆ.

ಮೇಲೆ ತಿಳಿಸಿದ ಎಲ್ಲಾ ಬಗೆಯ ಪತ್ರಗಳನ್ನೂ (ರಿಜಿಸ್ಟರ್ಡ್ ಪೊಸ್ಟ್, ಸ್ಪೀಡ್ ಪೋಸ್ಟ್ ಹೊರತಾಗಿ) ಅಂಚೆ ಪೆಟ್ಟಿಗೆ ಎಂಬ ಕೆಂಪು ಬಣ್ಣದ, ಕಪ್ಪು ಟೊಪ್ಪಿಯ ಡಬ್ಬದೊಳಗೆ ಹಾಕುವುದು ನಮ್ಮ ಕರ್ತವ್ಯ ಎಂದೂ, ಅದನ್ನು ಸರಿಯಾದ "ಗೆ"ಗೆ ಕಳುಹಿಸುವುದು ಅಂಚೆಕಛೇರಿಯವರ ಕೆಲಸವೆಂದೂ ತಿಳಿದುಕೊಂಡರೆ ಸಾಕು. ಬರೀ ಇಷ್ಟೇ ಅಲ್ಲದೆ "ಮನಿ ಆರ್ಡರ್", "ವಿ.ಪಿ.ಪಿ" ಹಾಗೂ "ಟೆಲಿಗ್ರಾಂ" ಕೂಡ ಅಂಚೆಯವರು ಒದಗಿಸುವ ಇತರ ಬಗೆಯ ಪತ್ರದ ಮಾದರಿಯ ಸಾಲಿಗೆ ಸೇರಿಸಬಹುದಾಗಿದೆ. ಮೊದಲೆರಡನ್ನು ಹಣ ಕಳುಹಿಸಲೂ, ಕೊನೆಯದ್ದನ್ನು ತುರ್ತು ಸಂದೇಶ ಕಳುಹಿಸಲು ಉಪಯೋಗಿಸುತ್ತಿದ್ದರೆಂದು ಹಿರಿಯರಿಂದ ಕೇಳಿ ತಿಳಿದ ನೆನಪು.

ಕೆಲವೊಮ್ಮೆ ಯಾರಾದರೂ ನನ್ನ ಬಳಿ ಯಾವುದಾದರೂ ವಿಷಯ ಹಂಚಿಕೊಳ್ಳುತ್ತಿದ್ದರೆ, ಕೊನೇಯಲ್ಲಿ ಇವನು ಇದನ್ನೆಲ್ಲಾ ನನಗೆ ಏಕೆ ಹೇಳುತ್ತಿದ್ದಾನೆ ಎಂಬ ಪ್ರಶ್ನೆ ಮೂಡುತ್ತದೆ. ಅಂತೆಯೇ ಈ ಮೇಲಿನ ಬರಹ ಓದಿ ನಿಮಗೆ ಹಾಗೆಯೇ ಅನಿಸಿರಬಹುದು. ಆದರೆ ನಾನು ಇಷ್ಟೆಲ್ಲಾ ಬರೆಯಲು ಕಾರಣವಿಲ್ಲದಿಲ್ಲ! ಕೋಟದಿಂದ ಚಿಕ್ಕಮಗಳೂರಿಗೂ, ಚಿಕ್ಕಮಗಳೂರಿನಿಂದ ಬೆಂಗಳೂರಿಗೂ, ಬೆಂಗಳೂರಿನಿಂದ ಮೈಸೂರಿಗೂ, ಮೈಸೂರಿನಿಂದ ಮತ್ತೆ ಬೆಂಗಳೂರಿಗೆ ನನ್ನ ಜೊತೆ ಪ್ರಯಾಣಿಸಿದ ನನ್ನ ಹಳೇಯ "ಸೂಟ್ ಕೇಸ್" ಇದಕ್ಕೆಲ್ಲಾ ಕಾರಣ. ನಿನ್ನೆ ಒಂದು ರೀತಿಯ ಕುತೂಹಲ ಹುಟ್ಟಿ ಅದನ್ನು ತೆಗೆದು ನೋಡಿದಾಗ ಸುಮಾರು ನೂರಕ್ಕೂ ಮಿಕ್ಕ, ನನ್ನ ೧೦ ವರ್ಷಗಳ ಇದೇ ಪತ್ರಗಳ ಸಂಗ್ರಹ. ಇದನ್ನು ಓದುತ್ತ ನನ್ನ ವಿದ್ಯಾರ್ಥಿ ಜೀವನ, ಕಾಲೇಜು ಜೀವನ, ಕೆಲಸಕ್ಕೆ ಸೇರಿದ್ದ ಆರಂಭದ ದಿನಗಳು ಮತ್ತೆ ನೆನಪಿಗೆ ಬಂದವು. ಅಂಚೆ ಕಛೇರಿ ಈ ಪತ್ರಗಳ ಸೌಲಭ್ಯವನ್ನು ಕೊನೆಗಾಣಿಸುವುದರೊಳಗಾಗಿ ನನಗೆ ಪತ್ರ ಕಳುಹಿಸುತ್ತಿದ್ದ ಕೆಲವರಿಗಾದರೂ ಮತ್ತೆ ಪತ್ರ ಕಳುಹಿಸಬೇಕೆಂಬ ಆಸೆಯಾಗುತ್ತಿದೆ, ಅದಕ್ಕೇ ಇಂದಿನಿಂದಲೇ ಅವರಿಗೆಲ್ಲಾ ಕರೆ ಮಾಡಿ ವಿಳಾಸ ತಿಳಿದುಕೊಳ್ಳುತ್ತಿದ್ದೇನೆ. ಇದನ್ನು ನನ್ನ ಹುಚ್ಚುತನ ಎಂದು ನೀವು ನಕ್ಕರೂ ಚಿಂತೆಯಿಲ್ಲ, ನನ್ನ ಹುಚ್ಚುತನದಿಂದ ಇತರರಿಗೆ ಕೆಡುಕಾಗದೆ ಇದ್ದರಾಯಿತು.

Monday, September 08, 2008

ವಾರಾಂತ್ಯ ಹೇಗಿತ್ತು?

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನು ಶೋಪ್ಪಿಂಗ್ಗೆ ಹೋಗಿದ್ದೆ, ಫಿಲ್ಮ್ಗೆ ಹೋಗಿದ್ದೆ, ಅಥವಾ ಆ ಹೋಟೆಲ್ ಈ ರೆಸಾರ್ಟ್ಗೆ ಹೋಗಿದ್ದೆ ಮುಂತಾದ ವಿವರವಾದ ಉತ್ತರ ನಿರೀಕ್ಷಿಸಬಹುದು. ಕೆಲವರಿಗೆ ಈ ಪ್ರಶ್ನೆ ಅತ್ಯಂತ ಕಠಿಣದ್ದಾಗಿ ಕಾಣಿಸಬಹುದು, ಅಥವಾ ಇತರರ ಉತ್ತರ ಕೇಳಿ ತಾವು ಮಾಡಿದ್ದನ್ನು ಹೇಳಲು ಸಂಕೋಚವೂ ಆಗಬಹುದು. ಸಂಕೋಚ ಪಡುವಂತಹ ಕೆಟ್ಟ ಕೆಲಸ ಏನೂ ಮಾಡದಿದ್ದರೂ, ಅವರ ವಾರಾಂತ್ಯ ಎಂದಿನ ದಿನಕ್ಕಿಂತ ಭಿನ್ನವಾಗಿಲ್ಲದಿರುವುದೇ ಈ ಸಂಕೋಚಕ್ಕೆ ಕಾರಣ. ನಾನೂ ಈ ಕೊನೆಯ ವರ್ಗಕ್ಕೆ ಸೇರಿದವನಾದ್ದರಿಂದ, ನನಗೆ ಈ ಪ್ರಶ್ನೆ ಎದುರಾದಾಗಲೆಲ್ಲ ಒಂದು ಬಗೆಯ ಮುಜುಗರ. ಆದ್ದರಿಂದಲೇ ನನ್ನ ವೈವಿಧ್ಯಪೂರ್ಣವಲ್ಲದ ವಾರಾಂತ್ಯದ ಚುಟುಕು ಪರಿಚಯ ಈ ಬರಹದ ಮೂಲಕ ಮಾಡಿಕೊಟ್ಟು, ನನಗೆ ಈ ಪ್ರಶ್ನೆ ಕೇಳುವವರಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ಈ ಬರಹದ ಕಡೆಗೆ ಬೊಟ್ಟು ಮಾಡಿ ನನ್ನ ಸಮಯದ ಸದುಪಯೋಗ ಪಡಿಸಿಕೊಳ್ಳುವ ದುರಾಲೋಚನೆ.

ನನಗೆ ಮೊದಲಿನಿಂದ ಬೆಳಿಗ್ಗೆ ಬೇಗ ಏಳುವ ದುರಭ್ಯಾಸ. ಹಾಗಂತ ೪, ೫ ಗಂಟೆಗೆಲ್ಲ ಏಳುತ್ತೇನೆ ಎಂದು ತಪ್ಪು ತಿಳಿಯಬೇಡಿ. ನನ್ನ ಬೇಗ ಎಂದರೆ ಬೆಂಗಳೂರಿನ ಸೂರ್ಯ ವಂಶದವರಿಗೆ ಹೋಲಿಸಿದರೆ. ಸಾಮನ್ಯವಾಗಿ ಇವರು ಗಡಿಯಾರ ೧೧, ೧೨ ಗಂಟೆ ತೋರಿಸುತ್ತಿದ್ದು, ಸೂರ್ಯ ನಡು ನೆತ್ತಿಯ ಮೇಲೆ ಬಂದಾಗಲಷ್ಟೇ ಮುಸುಕು ತೆಗೆಯುವ ಪ್ರಯತ್ನ ಮಾಡುತ್ತಾರೆ. ಹಾಗಂತ ಅದು ತಪ್ಪು ಅಂತ ನನ್ನ ಭಾವನೆಯಲ್ಲ, ವಾರದ ಉಳಿದ ದಿನಗಳಲ್ಲಿ ಬೆಳಿಗ್ಗೆ ಬೇಗ ಎದ್ದು ಆಫೀಸಿಗೆ ಹೋಗಿ ಮಧ್ಯರಾತ್ರಿಯವರೆಗೂ ದುಡಿಯುವ ಇವರಿಗೆ ವಾರದಲ್ಲಿ ಎರಡು ದಿನ ರಿಯಾಯಿತಿ ಕೊಡುವುದು ತಪ್ಪಲ್ಲವೇನೋ. ನಾನು ಮಾತ್ರ ಲೆಕ್ಕಾಚಾರಕ್ಕೆ ಸರಿಯಾಗಿ ದಿನಕ್ಕೆ ೮ ಗಂಟೆ ಕೆಲಸ ಮಾಡುತ್ತೇನೆ ಎಂದು ಇತರರೂ ನನ್ನಂತೆಯೇ ಶುದ್ಧ ಸೋಮಾರಿಗಳು ಎಂದು ಭಾವಿಸುವುದು ತಪ್ಪು. ಹೋಗಲಿ ಬಿಡಿ ವಿಷಯ ಎಲ್ಲೆಲ್ಲಿಗೋ ಹೋಯಿತು, ನನ್ನ ಬೇಗ ಎಂದರೆ ಸುಮಾರು ೬ ಗಂಟೆ, ನಾನು ಪ್ರತಿನಿತ್ಯ ಏಳುವ ಸಮಯ.

ಶೌಚಾದಿಗಳೆಲ್ಲ ಮುಗಿದ ನಂತರ ನನ್ನ ಮೊದಲ ಕೆಲಸ ಎಂದರೆ ಮನೆಯ ಪಕ್ಕದಲ್ಲೇ ಇರುವ ವಿವೇಕಾನಂದ ಪಾರ್ಕ್ನಲ್ಲಿ ಕೆಲವು ಸುತ್ತು ಹೊಡೆಯುವುದು. ಕೇವಲ ಒಲಂಪಿಕ್ಸ್ ಮುಂತಾದ ಕ್ರೀಡೆಯನ್ನು ನೋಡಿ ಕೆಲವು ದಿನ ಹುರುಪುಗೊಂಡು ನನ್ನ ಕಾಲುಗಳು ಓಡುವುದಾದರೂ ಸಾಮಾನ್ಯವಾಗಿ ಅದು ವಿರಾಮದಲ್ಲಿ ನಡೆಯುವುದೇ ಜಾಸ್ತಿ. ವಾರಾಂತ್ಯ ಎಂದು ದಿನನಿತ್ಯ ನೋಡುವ ಹಕ್ಕಿಗಳಲ್ಲೋ, ಮುಂಜಾನೆಯ ಅರುಣೋದಯದ ಗುಲಾಬಿ ವರ್ಣದಲ್ಲೋ , ಪಾರ್ಕಿನಲ್ಲಿ ಆಡುವ ಮಕ್ಕಳಲ್ಲೋ, ಅಸಹಜವಾಗಿ ನಗುವ ವಯೋವೃದ್ಧರ ಗುಂಪಿನಲ್ಲೋ, ಗುಡಾಣದ ಹೊಟ್ಟೆ ಕರಗಿಸುವ ಸಲುವಾಗಿ ವ್ಯಾಯಾಮ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಡುವಯಸ್ಕರಲ್ಲೋ ಯಾವುದೇ ಬಗೆಯ ವ್ಯತ್ಯಯ ನಿಮಗೆ ಕಾಣಿಸುವುದು ತೀರ ದುರ್ಲಭ.

ಹೀಗೆಯೇ ಸುಮಾರು ೩೦ ನಿಮಿಷ ಸಮಯ ಕೊಂದು ವೃತ್ತ ಪತ್ರಿಕೆ, ಹಾಲಿನೊಂದಿಗೆ ಮನೆಗೆ ಬಂದರೆ ಬಿಸಿಯಾದ ಚಹಾದೊಂದಿಗೆ ವರ್ತಮಾನ ತಿಳಿದುಕೊಳ್ಳುವ ಆತುರವಾಗುತ್ತದೆ. ನನಗೆ ಮೊದಲಿನಿಂದ ಎರಡೆರಡು ಕೆಲಸ ಒಟ್ಟಿಗೆ ಮಾಡಿ ಅಭ್ಯಾಸವಿಲ್ಲದ್ದರಿಂದ, ಮೊದಲು ತಂದ ಹಾಲನ್ನು ಕಾಯಿಸಿ ಚಹಾ ಮಾಡಿ ನಂತರ ಚಹಾದ ಗುಟುಕಿನೊಂದಿಗೆ ಪತ್ರಿಕೆಯ ಸಮಾಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮಗೆ ಆಶ್ಚರ್ಯವಾದರೂ ಆಗಬಹುದು, ಎರಡೆರಡು ಕೆಲಸ ಒಟ್ಟಿಗೆ ಮಾಡದ ಇವನು ಚಹಾ ಕುಡಿಯುತ್ತ ಹೇಗೆ ಪತ್ರಿಕೆ ಓದುತ್ತಾನೆ ಎಂದು. ಚಹಾ ಕುಡಿಯುವುದೊಂದು ಕೆಲಸವಲ್ಲ ಎನ್ನುವ ಉತ್ತರ ನಿಮಗೆ ಸಮಾಧಾನ ತಂದರೂ ಎಲ್ಲರಿಗೂ ತರುವುದಿಲ್ಲ. ಅದಕ್ಕೆಂದೇ ಹಿಂದೆ ಎಲ್ಲೋ ಝೆನ್ ಕತೆಗಳಲ್ಲಿ ಓದಿದ್ದ ಚಹಾ ಕುಡಿಯುತ್ತ ಪತ್ರಿಕೆ ಓದುವುದು ನನ್ನ ಒಂದು ಕೆಲಸ ಎಂದು ಹೇಳಿ ಸಮಾಧಾನ ಪಡಿಸುತ್ತೇನೆ.

ಇಷ್ಟು ಹೊತ್ತಿಗೆ ಹಸಿವಿನ ಕೂಗು ಪ್ರಭಲವಾಗಿ ಮೆದುಳು ಪತ್ರಿಕೆಯ ವಿಷಯವನ್ನು ಇನ್ನು ಗ್ರಹಿಸಲಾರೆ ಎಂದು ಸಂಪು ಹೂಡುತ್ತದೆ. ಬೆಳಿಗ್ಗಿನ ತಿಂಡಿ ಮಾಡುವುದು ದೊಡ್ಡ ಕೆಲಸ ಅಲ್ಲದಿದ್ದರೂ ಯಾವ ತಿಂಡಿ ಮಾಡುವುದು ಎಂದು ನಿರ್ಣಯಿಸುವುದು ಮಾತ್ರ ತುಂಬಾ ಕಠಿಣದ ಕೆಲಸ. ಅಡುಗೆ ಮನೆಯಲ್ಲಿ ಇದೆಯೆಂದು ಭ್ರಮಿಸಿದ ಸಾಮಾನನ್ನು ನೆನಪಿಸಿಕೊಂಡು, ಪುನರಾವರ್ತನೆ ಆಗದಂತೆ ಇತ್ತೀಚಿನ ದಿನಗಳಲ್ಲಿ ಮಾಡಿದ ತಿಂಡಿಯನ್ನು ನೆನಪಿಸಿಕೊಂಡು, ನಾಲಗೆ ಚಪಲವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಣಯಿಸಬೇಕಾಗುತ್ತದೆ. ಅಂತೂ ಕಷ್ಟ ಪಟ್ಟು ಅಕ್ಕಿ ರೊಟ್ಟಿ ಜೊತೆಗೆ ಕಾಯಿ ಚಟ್ನಿ ಮಾಡಬೇಕು ಅಂತ ನಿರ್ಧಾರ ಮಾಡಿದೆ ಅಂದುಕೊಳ್ಳಿ, ಚಟ್ನಿಗೆ ಒಗ್ಗರಣೆ ಹಾಕುವ ಸಮಯದಲ್ಲಷ್ಟೇ ಹಿಂದಿನ ದಿನ ಖಾಲಿಯಾದ ಸಾಸಿವೆಯ ನೆನಪು ಬರುತ್ತದೆ. ಬಾಯ ಚಪಲ ಹಸಿವನ್ನು ಹಿಂದಿಕ್ಕಿ, ಕಾಲು ಹತ್ತಿರದ ಅಂಗಡಿಯ ಹಾದಿ ಹಿಡಿಯುತ್ತದೆ.

ಹೆತ್ತವರಿಗೆ ಹೆಗ್ಗಣ ಮುದ್ದಂತೆ, ಹಾಗೆಯೇ ನಾನು ಮಾಡಿದ ಅರೆಬೆಂದ, ಇಲ್ಲವೇ ಕರಟಿ ಹೋದ ರೊಟ್ಟಿ ನನಗೆ ಆಪ್ಯಾಯಮಾನವಾಗಿ ತೋರಿ ಒಮ್ಮೊಮ್ಮೆ ನನ್ನನ್ನು ನಾನು ನಳ ಮಹಾರಾಜನಿಗೆ ಹೋಲಿಸುವುದಿದೆ! ನನ್ನ ಸ್ನೇಹಿತರೋ ಬಂಧುಗಳೋ ನಮ್ಮ ಮನೆಗೆ ಬಂದು ನಾನು ಮಾಡಿದ ನಳ ಪಾಕವನ್ನು ಬಹಳ ಕಷ್ಟದಿಂದ ಗಂಟಲೊಳಗೆ ತುರುಕುವಾಗ ಅವರ ಮುಖದಲ್ಲಿನ ಸಂಕಟದಿಂದಷ್ಟೇ ನನಗೆ ತಿಳಿಯುವುದು ನನ್ನ ಪಾಕದ ಗುಣಮಟ್ಟ!

ಇವೆಲ್ಲ ದಿನನಿತ್ಯದ ಕೆಲಸವಾದರೆ ವಾರಾಂತ್ಯಕ್ಕೆ ಮೀಸಲಾದ ಕೆಲಸ ಕಾದಿರುತ್ತದೆ. ಶನಿವಾರ ಬೆಳಿಗ್ಗೆ ನಮ್ಮ ಮನೆ ಶುಚಿಗೊಳಿಸುವ ದಿವಸ. ವಾರಕ್ಕೊಮ್ಮೆಯಾದರೂ ಮನೆಯನ್ನು ಶುಚಿಗೊಳಿಸುವುದರಿಂದ ಇತರ ಅವಿವಾಹಿತರಿಗಿಂತ ನಾನೇ ಮೇಲು ಎಂದು ಗರ್ವದಿಂದ ಹೇಳಬಹುದು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುವ ಹುಡುಗಿಯರೂ ಕೂಡ ಪಿ.ಜಿ. ಎಂದು ಹಣ ಕೊಟ್ಟು ಅತಿಥಿಗಳಾಗಿ ಈ ಜವಾಬ್ದಾರಿಯಿಂದ ಪಾರಾಗುತ್ತಿದ್ದಾರೆ. ಅವರ ಗಂಡಂದಿರ ಬಗ್ಗೆ ಒಮ್ಮೊಮ್ಮೆ ಅನುಕಂಪವೂ ಮೂಡುತ್ತದೆ.

ಮೊದಲಿನ ಕೆಲಸ ಗುಡಿಸುವುದು, ಒಂದು ವಾರದಿಂದ ಮನೆಯೊಳಗೆ ನುಗ್ಗಿರಬಹುದಾದ ಧೂಳು, ಮಣ್ಣು, ಉದುರಿ ಹೋದ ತಲೆಕೂದಲು, ತರಕಾರಿ ಸಿಪ್ಪೆ, ಮೂಲೆಯಲ್ಲಿ ಬೆಳೆದಿರಬಹುದಾದ ಜೇಡರ ಬಲೆ, ಪ್ಲಾಸ್ಟಿಕ್, ಮನೆಯಲ್ಲಿ ನನ್ನೊಂದಿಗೆ ವಾಸಿಸುತ್ತಿರುವ ಜಿರಳೆ ಹಾಗೂ ಇತರ ಜೀವಿಗಳ ಮೃತ ಶರೀರ, ಒಂದೇ ಎರಡೇ ಹಲವು ಬಗೆಯ ವೈವಿಧ್ಯಗಳನ್ನು ನೀವು ಇಲ್ಲಿ ಕಾಣಬಹುದು.

ಹೀಗೆ ಕೆಲವೊಮ್ಮೆ ಗುಡಿಸುವಾಗ ಹಲವು ತಿಂಗಳಿಂದ ಸಂಗ್ರಹಿಸಿದ್ದ ಹಾಲಿನ ಪ್ಲಾಸ್ಟಿಕ್ ಅಟ್ಟದ ಮೇಲೆ ಅಸ್ತವ್ಯಸ್ತವಾಗಿ ಹರಡಿ, ಅದರಿಂದ ಹೊರಡುತ್ತಿದ್ದ ಗಂಧಕ್ಕೆ ನುಸಿ ಮುತ್ತಿ ಗುಂಯಿಕಾರ ಮಾಡುವ ದನಿಯೋ, ಅಥವಾ ಪ್ರತಿನಿತ್ಯ ಸಂಗ್ರಹಿಸಿ ಚಿಕ್ಕ ಗುಡ್ದದೆತ್ತರಕ್ಕೆ ಬೆಳೆದ ಪತ್ರಿಕೆಯ ರಾಶಿಯನ್ನೋ ನೋಡಿದಾಗ ಮತ್ತೆ ೧ ಗಂಟೆಯ ಕಾಲ ಹರಣ ಮಾಡುವ ಮನಸ್ಸಾಗುತ್ತದೆ. ಇದನ್ನೆಲ್ಲಾ ಸರಿಯಾಗಿ ಜೋಡಿಸಿ ಹತ್ತಿರದಲ್ಲಿರುವ ಗುಜರಿಗೆ ಕೊಟ್ಟರೆ ಬರುವ ಹಣ ಸುಮಾರು ೩೦ ರಿಂದ ೪೦ ರೂಪಾಯಿ. ಅದರಿಂದ ಬರುವ ಹಣ ಅಲ್ಪವಾದರೂ ಪ್ಲಾಸ್ಟಿಕ್ ಮರು ಬಳಕೆಗೆ ನನ್ನದೂ ಒಂದು ಕೊಡುಗೆಯಿರಲಿ ಎಂಬ ಒಂದು ಆಸೆ!
ಇನ್ನು ಮುಂದಿನ ಕೆಲಸ ಫಿನೈಲ್, ನೀರನ್ನು ಬಳಸಿ ನೆಲ ಒರೆಸುವುದು. ಗುಡಿಸಲು ಬಾರದ ಧೂಳಿನ ಚಿಕ್ಕ ಕಣಗಳು ಇದರಿಂದ ತೊಲಗುತ್ತದೆ. ಆದರೆ ಅಡುಗೆ ಮನೆಗೆ ಹೋದಾಗ ಮಾತ್ರ ಇತರ ಬಗೆಯ ಕೊಳೆ ಕಾಣಿಸಬಹುದು. ಕಳೆದ ಒಂದು ವಾರದ ಸಾಧನೆಯೋ ಎಂಬಂತೆ ಒಲೆ, ಮಿಕ್ಸರ್ಗಳಲ್ಲಿ ಹಿಡಿದ ಅಡುಗೆಯ ಮಾದರಿಗಳೆಲ್ಲವೂ ಇಲ್ಲಿ ದೊರಕುತ್ತದೆ.

ಇಷ್ಟೆಲ್ಲಾ ಮುಗಿಯಬೇಕಾದರೆ ಗಂಟೆ ೧೨ ಹೊಡೆದು ಹೊಟ್ಟೆ ಮತ್ತೆ ತಾಳ ಹಾಕಲು ಆರಂಭಿಸಿರುತ್ತದೆ. ಕೊಳೆಯಾದ ಮೈಯನ್ನು ನೀರಿಗೊಡ್ಡಿ ಸ್ನಾನ ಮುಗಿಸಿಕೊಂಡು ಬಂದರೆ ಮತ್ತೆ ಅಡುಗೆಯ ಚಿಂತೆ ಹುಟ್ಟುತ್ತದೆ. ತಿಂಡಿ ಮಾಡುವಾಗಿನ ಸಮಸ್ಯೆಗಳು ಇಲ್ಲಿಯೂ ಕಾಣಿಸುತ್ತದೆ. ಅಂತೂ ಯಾವುದೋ ಅಡುಗೆ, ಅನ್ನ ಮಾಡಿ ಹೊಟ್ಟೆಯನ್ನು ತೃಪ್ತಿ ಪಡಿಸಿದ ನಂತರ, ಮೆದುಳಿನ ಹಸಿವನ್ನು ತೃಪ್ತಿ ಪಡಿಸುವ ಚಪಲದಿಂದ ಚಾಪೆಯನ್ನು ಹಾಸಿ ಒಂದು ಪುಸ್ತಕ ಹಿಡಿದುಕೊಳ್ಳುವುದರೊಳಗಾಗಿ ಮಂದವಾದ ನಿದ್ರೆ ಓದುವ ಹಸಿವನ್ನು ಮೂಲೆಗೊತ್ತುತ್ತದೆ.

ಎದ್ದ ನಂತರ ಮತ್ತೆ ಚಹವನ್ನು ಕುಡಿದು, ಓದಬೇಕೆಂದಿದ್ದ ಪುಸ್ತಕ ಹಿಡಿದರೋ, ಸ್ನೇಹಿತರ ಭೇಟಿಗೋ ಹೋದರೆ ಅಲ್ಲಿಗೆ ದಿನ ಮುಗಿದಿರುತ್ತದೆ. ಅಪರಾನ್ಹವೇ ಮಾಡಿದ ಭೋಜನ ಉಂಡು ಮಲಗಿದರೆ, ವಾರಾಂತ್ಯದ ಎರಡನೇ ದಿನ ಮತ್ತೆ ಇದರ ಪುನರಾವರ್ತನೆ. ಇಲ್ಲಿ ಮನೆ ಶುಚಿಗೊಳಿಸುವ ಕೆಲಸದ ಬದಲು ಬಟ್ಟೆ ಒಗೆಯುವ, ಇಸ್ತ್ರಿ ಹಾಕುವ ಕೆಲಸ ಬಿಟ್ಟರೆ ಉಳಿದೆಲ್ಲ ಹಿಂದಿನ ದಿನದ ಪುನರಾವರ್ತನೆ.

ಇದೆಲ್ಲ ಓದಿದ ನಂತರ ಈ ಮನುಷ್ಯ ಎಂತಹ ಅರಸಿಕ ಎಂಬ ಭಾವನೆ ನಿಮಗೆ ಬರಬಹುದು. ಆದರೆ ಅದಕ್ಕೆ ನಾನು ಹೊಣೆಯಲ್ಲ! ನಾನು ವಾರಾಂತ್ಯದಲ್ಲಿ ಏನು ಮಾಡುತ್ತೀನೋ ಅದನ್ನು ಪ್ರಾಮಾಣಿಕವಾಗಿ ಬರೆದಿದ್ದೇನೆ. ಅಲ್ಲದೆ ಇದರಲ್ಲಿ ಒಮ್ಮೊಮ್ಮೆ ಕೆಲವು ಬದಲಾವಣೆ ಆಗುವುದೂ ಉಂಟು. ನಮ್ಮ ಮನೆಯ ಗ್ಯಾಸ್ ಖಾಲಿಯಾದಾಗ ಹೋಟೆಲ್ಗೂ, ಓದಲು ಏನೂ ಇಲ್ಲದಿದ್ದಾಗ ಚಲನಚಿತ್ರಕ್ಕೂ, ವಾರಾಂತ್ಯದ ಜೊತೆ ಬೇರೆ ರಜೆ ಬಂದರೆ ತಿರುಗಾಟಕ್ಕೂ ಹೋಗುವುದಿದೆ. ಆದರೆ ಇವೆಲ್ಲ ಕ್ರಮವಾಗಿ ವರ್ಷಕ್ಕೆ ೨, ೧, ೧೦ ಒಟ್ಟಿಗೆ ೧೩ ಬಾರಿ ಆಗುವುದರಿಂದ ನನಗೆ "ವಾರಾಂತ್ಯ ಹೇಗಿತ್ತು?" ಎಂಬ ಪ್ರಶ್ನೆ ಎದುರಾದಾಗಲೆಲ್ಲ ಮುಜುಗರವಾಗುತ್ತದೆ... ನಿಮಗೆ?

Wednesday, July 30, 2008

ಉತ್ತರ ಕನ್ನಡದ ಮುಂಗಾರಿನಲ್ಲಿ

Photography by Palachandra, All rights reserved೨೫ ಜುಲೈ ೨೦೦೮, ಬೆಂಗಳೂರಿನ ಪಾಲಿಗೆ ಕರಾಳ ದಿನ, ಒಂದೇ ದಿನದಲ್ಲಿ ೭ ಕಡೆ ಲಘು ಬಾಂಬ್ ಸ್ಪೋಟ, ಒಂದು ಸಾವು. ತಾವೂ ಬದುಕದೆ ಇತರರಿಗೂ ಬದುಕಲು ಬಿಡದೆ ಮನುಷ್ಯ ಯಾವ ಉದ್ಧೇಶ ಸಾಧಿಸಲು ಹೊರಟಿದ್ದಾನೆಯೋ ತಿಳಿಯುತ್ತಿಲ್ಲ. ಸುಮಾರು ಒಂದು ತಿಂಗಳ ಹಿಂದೆ ಹಮ್ಮಿಕೊಂಡಿದ್ದ ನಮ್ಮ ಉತ್ತರ ಕನ್ನಡದ ಪ್ರವಾಸಕ್ಕೆ, ಹೊರಡುವ ದಿನದಂದೇ ನಡೆದ ಈ ಕಹಿ ಘಟನೆ ಮನಸ್ಸಿಗೆ ಆತಂಕ ತಂದಿತ್ತು. ಹದವಾಗಿ ಮಳೆ ಬೀಳುತ್ತಿದ್ದುದರಿಂದ ಬೇಗನೆ ಮೆಜೆಸ್ಟಿಕ್ ಸೇರುವ ಹಂಬಲದಿಂದ ೮ ಗಂಟೆಗೆ ಮನೆಯನ್ನು ಬಿಟ್ಟಿದ್ದೆ. ಆದರೆ ಬೆಂಗಳೂರಿನಲ್ಲಿ ಎಂದಿನಂತೆ ವಾಹನದ ದಟ್ಟಣಿ ಇರದೇ ಅರ್ಧ ಗಂಟೆಯಲ್ಲೆಲ್ಲ ಮೆಜೆಸ್ಟಿಕ್ ತಲುಪಿದ್ದೆ.

ನಾನು, ನಾಗೇಶ್, ರಾಘವೇಂದ್ರ ಮತ್ತೆ ರವೀಂದ್ರ ಈ ಪ್ರಯಾಣದ ಜೊತೆಗಾರರು. ನಾಗೇಶ್ ಮುಂದಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳುವವನಾದ್ದರಿಂದ ಇದು ಅವನೊಂದಿಗಿನ ಕೊನೆಯ ಪ್ರಯಾಣ ಎಂಬ ಭಾವನೆಯಿತ್ತು. ರವೀಂದ್ರ ೧ ವಾರದ ಹಿಂದಷ್ಟೇ ಫಿನ್ಲ್ಯಾಂಡ್ನಿಂದ ಮರಳಿ ಕೋಟದಲ್ಲಿ ರಜೆಯ ಮಜವನ್ನು ಸವಿಯುತ್ತಿದ್ದುದರಿಂದ, ಬೆಂಗಳೂರಿನಿಂದ ನಾವು ಮೂವರು ಹೊರಟು ಶಿರಸಿಯಲ್ಲಿ ಅವನನ್ನು ಸೇರುವುದಾಗಿತ್ತು. ರಾತ್ರಿ ೯:೩೦ ಕ್ಕೆ ಬಂದ ರಾಜಹಂಸ, ಬೆಳಿಗ್ಗೆ ೭ ಗಂಟೆಗೆಲ್ಲ, ಸುಮಾರು ೩೫೦ ಕಿ.ಮೀ. ಗಳಷ್ಟು ದೂರದ ಶಿರಸಿಗೆ ನಮ್ಮನ್ನು ಕೊಂಡೊಯ್ಯಿತು. ಶಿರಸಿಯ ಹಳೆ ಬಸ್ ಸ್ಟ್ಯಾಂಡ್ನಲ್ಲಿ ಮೊದಲೇ ಆಗಮಿಸಿದ್ದ ರವೀಂದ್ರನೊಂದಿಗೆ "ಪಂಚವಟಿ" ಎಂಬ ರೆಸಾರ್ಟ್ಗೆ ತೆರಳಿದೆವು.

ಪ್ರತೀ ಬಾರಿ ನಮ್ಮ ಪ್ರಯಾಣಕ್ಕೆ ಸರಿಯಾದ ಗೊತ್ತು ಗುರಿ ಇರುತ್ತಿರಲಿಲ್ಲ. ಆದರೆ ಈ ಬಾರಿ ಅಂತರ್ಜಾಲವನ್ನು ಜಾಲಾಡಿ ನೋಡಬೇಕಾದ ಸ್ಥಳಗಳ ಸ್ಥೂಲ ಪರಿಚಯ ಮಾಡಿಕೊಂಡಿದ್ದೆವು. ಅದರಂತೆ ಕೆಲವು ಜಲಪಾತ, ಬನವಾಸಿ, ಮಾರಿಕಾಂಬ ದೇವಸ್ಥಾನ ನಮ್ಮ ಸ್ಥಳಗಳ ಪಟ್ಟಿಯಲ್ಲಿದ್ದವು. ಒಂದು ವಾರದ ಹಿಂದಿನಿಂದಷ್ಟೇ ಶಿರಸಿಯ ಆಸುಪಾಸಿನಲ್ಲಿ ಮಳೆ ಆರಂಭವಾಗಿತ್ತು, ಮಲೆನಾಡ ಮಳೆಯ ಸವಿಯನ್ನು ಸವಿಯಲು ಒಂದು ಬಗೆಯ ಕಾತುರವಿತ್ತು!

Photography by Palachandra, All rights reservedಪಂಚವಟಿಯಲ್ಲಿ ಸ್ನಾನ, ಉಪಹಾರಾದಿಗಳನ್ನು ಮುಗಿಸಿ, ಇಂಡಿಕಾ ಕಾರನ್ನು ಬಾಡಿಗೆಗೆ ಗೊತ್ತು ಮಾಡಿದೆವು. ಮೊದಲು ಶಿರಸಿಯ ಪೇಟೆಯಲ್ಲಿರುವ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿಕೊಟ್ಟೆವು. ಬಿಳಿ ಬಣ್ಣದ ಸುಣ್ಣದ ಗೋಡೆಯ ಮೇಲೆ ಕೆಂಪು ಬಣ್ಣದ ಚಿತ್ತಾರದಿಂದ ದೇವಸ್ಥಾನ ಸರಳವಾಗಿದ್ದರೂ ಸುಂದರವಾಗಿತ್ತು, ಮಾರಿಕಾಂಬಳ ರೂಪವೂ ಆಕರ್ಷವಾಗಿತ್ತು. ೨ ವರ್ಷಗಳಿಗೊಮ್ಮೆ ಆಚರಿಸುವ "ಮಾರಿಕಾಂಬ ಜಾತ್ರೆ" ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧಿ. ಹಿಂದೆ ನಡೆಯುತ್ತಿದ್ದ ಕೋಣದ ಬಲಿಯನ್ನು ಕೆಲವು ವರ್ಷಗಳಿಂದೀಚೆಗೆ ನಿಲ್ಲಿಸಿದ್ದಾರೆ.

ಮಳೆಗಾಲದಲ್ಲಿ ಜಲಪಾತ ಬೇರೆಯೇ ರೀತಿಯಲ್ಲಿ ಕಾಣಿಸುತ್ತದೆ. ಉಳಿದ ದಿನಗಳಲ್ಲಿ ಶ್ವೇತ ವರ್ಣಿ- ಲಾಲಿತ್ಯದಿಂದ ಬಳುಕುತ್ತ ಹರಿದರೆ, ಮಳೆಗಾಲದಲ್ಲಿ ಮಳೆ ನೀರು ಅಸಂಖ್ಯ ತೊರೆಗಳನ್ನು ನಿರ್ಮಿಸಿ, ಕಾನನದ ಮಣ್ಣಿನೊಡನೆ ಬೆರೆತು, ಕೆಂಪು ವರ್ಣ ತಳೆದು, ಜಲಪಾತದೊಡನೆ ಬೆರೆತು ಅದರ ಉಕ್ಕು ಸೊಕ್ಕನ್ನು ಹೆಚ್ಚಿಸಿ, ಧುಮುಕುತ್ತದೆ. ಮಳೆಗಾಲದಲ್ಲಿ ಜಲಪಾತದ ಸೊಬಗು ರುದ್ರ ರಮಣೀಯತೆಯಿಂದ ಕೂಡಿರುತ್ತದೆ. ಹೀಗಾಗಿ ನಮ್ಮ ಪ್ರಯಾಣ ಹಲವಾರು ಜಲಪಾತಗಳನ್ನು ಸಂದರ್ಶಿಸುವುದೂ ಆಗಿತ್ತು.

Photography by Palachandra, All rights reservedಸುಮಾರು ೧೧೬ ಮೀಟರ್ ಎತ್ತರದಿಂದ ಧುಮುಕುವ ಅಘನಾಶಿನಿ ನದಿ ನಿರ್ಮಿತ ಉಂಚಳ್ಳಿ ಜಲಪಾತ ನಮ್ಮ ಮೊದಲ ಭೇಟಿಯಾಗಿತ್ತು. ಶಿರಸಿ - ಸಿದ್ಧಾಪುರ ರಸ್ತೆಯಲ್ಲಿ ೩೦ ಕಿ.ಮಿ. ಕ್ರಮಿಸಿದರೆ ಉಂಚಳ್ಳಿಗೆ ಹೋಗುವ ಕಾಲು ದಾರಿ ಎದುರಾಗುತ್ತದೆ. ಜೋಗಕ್ಕೆ ಹೋಲಿಸಿದಲ್ಲಿ ಇದರ ಭೋರ್ಗರೆತ ತುಂಬ ಕಮ್ಮಿ ಆದ್ದರಿಂದ ಇದನ್ನು ಕೆಪ್ಪು ಜೋಗ ಎಂದೂ ಕರೆಯುವುದುಂಟು. ಈ ಬಾರಿ ಮುಂಗಾರು ಹಿಂದೆ ಬಿದ್ದದರಿಂದ ದಾರಿಯುದ್ದಕ್ಕೂ ಬೇಸಾಯದ ಆರಂಭದ ಸೊಬಗನ್ನು ಸವಿಯಬಹುದಾಗಿತ್ತು. ಸಾಗುವ ದಾರಿ ಸುಗಮವಾಗಿತ್ತದರೂ ಮಳೆಯೂ ಒಂದೇ ಸಮನೆ ಸುರಿಯುತ್ತಿತ್ತು. ಜಲಪಾತದ ಸಮೀಪ ಬಂದಾಗ ಮಾತ್ರ ನಿರಾಸೆ ಉಂಟಾಯಿತು. ಮೋಡ ಹಾಗು, ರಭಸವಾಗಿ ಧುಮುಕುತ್ತಿದ್ದ ಜಲಪಾತದ ನೀರ ಕಣಗಳು ಮೇಲೆದ್ದು, ಜಲಪಾತಕ್ಕೂ ನಮ್ಮ ನೋಟಕ್ಕೂ ನಡುವೆ ಒಂದು ಬಗೆಯ ತೆರೆಯನ್ನು ನಿರ್ಮಿಸಿತ್ತು. ಗಾಳಿಯ ಬಡಿತಕ್ಕೆ ಕೆಲವೊಂದು ಬಾರಿ ಮರೆ ಸರಿದು ಜಲಪಾತದ ಸೊಬಗು ಕಾಣಿಸುತ್ತಿತ್ತು, ಆದರೆ ಮತ್ತೆ ಮೋಡದ ಕೈ ಮೇಲಾಗಿ ತೆರೆ ಬೀಳುತ್ತಿತ್ತು. ಈ ಬಗೆಯ ಪ್ರಕೃತಿಯ ಕಣ್ಣಾ ಮುಚ್ಚಾಲೆಯಲ್ಲೇ ಜಲಪಾತವನ್ನು ನೋಡಿ ಮರಳಿದೆವು.

Photography by Palachandra, All rights reserved

ಅಘನಾಶಿನಿ, ಉಂಚಳ್ಳಿಗೆ ಸಮೀಪದಲ್ಲೇ ಬೆಣ್ಣೆ ಹೊಳೆ ಎಂಬ ಹೆಸರಿನಿಂದ ಸುಮಾರು ೨೦೦ ಅಡಿಗಳಿಂದ ಧುಮುಕುತ್ತಾಳೆ. ಡಾಮರು ಬಳಿದ ರೋಡಿನಿಂದ ಸುಮಾರು ೬ ಕಿ.ಮಿ ಗಳಷ್ಟು ಕ್ರಮಿಸಿದರೆ ಈ ಜಲಪಾತ ಎದುರಾಗುತ್ತದೆ. ೪ ಕಿ.ಮಿ.ಗಳಷ್ಟು ಮಣ್ಣಿನ ರಸ್ತೆ ಇದ್ದರೂ ಮಳೆಗಾಲವಾದ್ದರಿಂದ ವಾಹನ ಸಂಚಾರ ಅಸಾಧ್ಯವಾಗಿತ್ತು, ಅದ್ದರಿಂದ ಕಾಲ್ನೆಡಿಗೆಯಿಂದಲೇ ಹೊರಡಲನುವಾದೆವು. ಏರು ತಗ್ಗು, ಕೊಳೆತ ಕಸ ಕಡ್ಡಿ, ಎಲ್ಲಕ್ಕಿಂತ ಮುಖ್ಯವಾಗಿ ಅಸಂಖ್ಯ ಇಂಬಳಗಳಿಂದ ಕೂಡಿದ್ದ ದಾರಿ ದುರ್ಗಮವಾಗಿತ್ತು. ಆದರೆ ೪ ಕಿ.ಮಿ.ಗಳ ಮಣ್ಣಿನ ರಸ್ತೆ ಕಳೆದ ಮೇಲೆ ಎದುರಾದ ಇಳಿಜಾರಿನ ಜಾರುವ ಕಾಡಿನ ಕಾಲು ದಾರಿ ಇದುವರೆಗೂ ಕ್ರಮಿಸಿದ ಹಾದಿಗಿಂತ ಕಷ್ಟತರವಾಗಿತ್ತು. ಆದರೆ ಕಷ್ಟ ಪಟ್ಟಿದ್ದು ಮಾತ್ರ ವ್ಯರ್ಥವಾಗಲಿಲ್ಲ. ಹಳದಿ, ಶ್ವೇತ ವರ್ಣಗಳಿಂದ ಜಲಪಾತ ಮೈದುಂಬಿ ಹರಿಯುತ್ತಿತ್ತು. ಗಾಳಿಯ ದಿಕ್ಕು ನಮಗೆ ಅಭಿಮುಖವಾಗಿತ್ತಾದ್ದರಿಂದ ಜಲಪಾತದಿಂದ ಏಳುತ್ತಿದ್ದ ನೀರ ಕಣಗಳ ತುಂತುರು ಮಳೆ ನಮ್ಮ ಮೇಲೆ ಸಿಂಚನವಾಗುತ್ತಿತ್ತು. ಎದುರಿದ್ದ ಕಡಿದಾದ ಕಣಿವೆ, ಮೋಡ ಮುಸುಕಿದ ಗುಡ್ಡ, ಕಡು ಹಸಿರು ಬಣ್ಣವನ್ನು ತಳೆದ ತರು ಲತೆಗಳಂತೂ ಕಣ್ಮನ ಸೆಳೆಯುತ್ತಿತ್ತು. ನಿಸರ್ಗದ ಸೌಂದರ್ಯವೇ ಇಂತಹುದು, ಎಷ್ಟು ಸವಿದರೂ ಖಾಲಿಯಾಗದು! ಸುಮಾರು ೧ ಗಂಟೆಗಳಷ್ಟು ಸೌಂದರ್ಯ ಸವಿದ ನಂತರ ಮರಳಲು ಅನುವಾದೆವು. ಜಲಪಾತಕ್ಕೆ ಹೋಗುವಾಗ ಕಾಣಿಸದ ಕವಲುದಾರಿ ಮರಳಿ ರಸ್ತೆ ಸೇರುವಾಗ ಕಾಣಿಸಿತು. ಒಂದು ಕಡೆಯಂತೂ ಯಾವುದೊ ನೀರು ಹರಿಯುವ ಜಾಗವನ್ನೇ ದಾರಿಯೆಂದು ಭ್ರಮಿಸಿ ದಾರಿ ತಪ್ಪಿಸಿಕೊಂಡೆವು. ಕೂಡಲೇ ತಪ್ಪಿದ ಹಾದಿಯ ಅರಿವಾಗಿ ಮರಳಿ ಸರಿಯಾದ ದಾರಿಯನ್ನೇ ಹಿಡಿದೆವು. ಘೋರ ಅರಣ್ಯದ ಮಧ್ಯೆ, ಮಳೆಗಾಲದಲ್ಲಿ ದಾರಿ ತಪ್ಪಿದವನ ಪಾಡು ಅನುಭವಿಸಿಯೇ ತಿಳಿಯಬೇಕು. ಬೆಳಿಗ್ಗಿನ ಉಪಹಾರದ ಹೊರತಾಗಿ ಬೇರೆ ಏನೂ ಹೊಟ್ಟೆಗೆ ಬೀಳದಿದ್ದುದರಿಂದ ಹೊಟ್ಟೆ ತಾಳ ಹಾಕುತಿತ್ತು, ಅಲ್ಲದೆ ಕಾಲು ನಮ್ಮ ಆಜ್ಞೆಯನ್ನು ಪಾಲಿಸುವ ಬದಲು ತನಗಿಷ್ಟ ಬಂದಂತೆ ವರ್ತಿಸುತ್ತಿತ್ತು.

ಮಳೆಯಲ್ಲೇ ನೆನೆಯುತ್ತ ಡಾಮರು ರಸ್ತೆಗೆ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಎಂದರೆ, ನಮ್ಮ ಪಾದರಕ್ಷೆಗಳನ್ನು ಕಳಚಿ ಇಂಬಳವನ್ನು ತೆಗೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಾಗುವ ದಾರಿಯಲ್ಲಿ ಇಂಬಳವನ್ನು ಕಿತ್ತು ಕಿತ್ತು ಬೇಸರ ಬಂದು, ಹೀರಿದಷ್ಟು ರಕ್ತ ಹೀರಲಿ ಎಂದು ಬಿಟ್ಟಿದ್ದ ನಮ್ಮ ಕಾಲು, ಮೈಗಳಲ್ಲಿ ರಕ್ತ ಸೋರುತ್ತಿತ್ತು. ಇಂಬಳಗಳಾದರೋ ತುಂಬಾ ಹೇಸಿಗೆಯ ಪ್ರಾಣಿ, ರಬ್ಬರ್ನಂತೆ ಎಳೆದಷ್ಟೂ ಉದ್ದವಾಗಿ, ದೇಹವನ್ನು ಬಿಗಿದಪ್ಪಿ ಹಿಡಿದಿರುತ್ತದೆ. ಅದನ್ನು ಕೀಳಲು ಹರಸಾಹಸ ಮಾಡಬೇಕು, ಕಾಲಿಗಂಟಿದ ಇಂಬಳವನ್ನು ಕಷ್ಟ ಪಟ್ಟು ಬಲಗೈಯಿಂದ ಕಿತ್ತು ತೆಗೆದರೆ, ಕೊಡವಿದರೂ ಬೀಳದಂತೆ ಕೈಗೆ ಅಂಟಿಕೊಂಡಿರುತ್ತದೆ. ಇಂಬಳಗಳು ಮಾಡುವ ಗಯಾ ಚಿಕ್ಕದಾದರೂ, ಒಂದು ಬಗೆಯ ರಾಸಾಯನಿಕವನ್ನು ಲೇಪಿಸುವುದರಿಂದ ನಮ್ಮ ರಕ್ತ ಹೆಪ್ಪುಗಟ್ಟುವ ಶಕ್ತಿಯನ್ನು ಕಳೆದುಕೊಂಡು, ನಿಲ್ಲದೆ ಒಂದೇ ಸಮನೆ ಹರಿಯುತ್ತದೆ. ಕೆಲವು ಬಗೆಯ ಇಂಬಳವನ್ನು ಕೆಟ್ಟ ರಕ್ತವನ್ನು ಹೊರ ತೆಗೆಯುವ ಸಾಧನವಾಗಿ ಚಿಕಿತ್ಸೆಯಲ್ಲೂ ಬಳಸುವುದುಂಟು.

ಮಳೆಯ ಚಳಿ, ಖಾಲಿ ಹೊಟ್ಟೆ, ರಸಿಕ ಮನದಲ್ಲಿ ಬಿಸಿ ಬಿಸಿಯ, ಖಾರವಾದ ತಿಂಡಿಯನ್ನು ಮೆಲುಕು ಹಾಕುತ್ತಿರುತ್ತದೆ. ಬೇಗನೆ ಶಿರಸಿಯನ್ನು ಸೇರಿ ಹೊಟ್ಟೆ ತುಂಬಾ ತಿನ್ನಬೇಕೆಂದು ನಾವು ಬಗೆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು. ನಾವು ಬಾಡಿಗೆಗೆ ಗೊತ್ತುಮಾಡಿದ್ದ ಇಂಡಿಕ ಕೆಟ್ಟು, ಮುಂದೆ ಹೋಗಲೊಲ್ಲೆ ಎಂದು ಹಠ ಹಿಡಿದು ನಿಂತಿತು. ದೂರವಾಣಿಯ ಸಂಕೇತ ಸಿಗದಷ್ಟು ದೂರ ಇದ್ದುದರಿಂದ ನಮ್ಮ ಚಾಲಕ ಪಕ್ಕದ ಹಳ್ಳಿಗೆ ತೆರಳಿ ಬೇರೆ ಗಾಡಿಯನ್ನು ಗೊತ್ತು ಮಾಡಿ ಬರುವಷ್ಟರವರೆಗೆ ೧.೫ ಗಂಟೆ ಮೀರಿತ್ತು. ಅಂತೂ ಬಂದ ಇನ್ನೊಂದು ಗಾಡಿಯಲ್ಲಿ ಶಿರಸಿ ತಲುಪಿದಾಗ ಗಂಟೆ ೮ ಆಗಿತ್ತು. ಹಿಂದಿನ ಕತೆಗಳಲ್ಲಿ ಓದುತ್ತಿದ್ದ ಬಯಸಿದ ತಿಂಡಿಯನ್ನು ಕ್ಷಣಾರ್ಧದಲ್ಲಿ ಕಣ್ಣ ಮುಂದಿರಿಸುವ ಮಾಯಾ ತಟ್ಟೆ ದೊರಕಿದ್ದರೆ ನಮ್ಮ ಬಯಕೆಯ ಪತ್ರೊಡೆ, ಹೀರೆ ಕಾಯಿ ಚಟ್ಟಿ, ಕಡಲೆ ಹಾಕಿ ಮಾಡಿದ ಕೆಸುವಿನ ದಂಟಿನ ಹುಳಿ, ಕಳಲೆ ಪಲ್ಯ, ಹುರುಳಿ ಸಾರು, ಉದ್ದಿನ ಹಪ್ಪಳ ಮೊದಲಾದುವನ್ನು ತರಿಸಿ ತಿನ್ನಬಹುದಿತ್ತೋ ಏನೋ. ಆದರೆ ನಾವು ರಸ್ತೆ ಬದಿಯಲ್ಲಿ ಮಾಡುತ್ತಿದ್ದ ಅಮ್ಲೆಟ್, ಬೇಯಿಸಿದ ಮೊಟ್ಟೆ ತಿಂದು ತೃಪ್ತರಾದೆವು. ನಂತರ ಪಂಚವಟಿಗೆ ತೆರಳಿ ಇನ್ನೊಮ್ಮೆ ಊಟ ತರಿಸಿಕೊಂಡು ಹೊಟ್ಟೆಯಲ್ಲಿ ಇನ್ನೂ ಉಳಿದಿದ್ದಿರುವ ಜಾಗದಲ್ಲಿ ತುಂಬಿಸಿ, ಇಂಬಳದ ಸವಿಗನಸನ್ನು ಕಾಣುತ್ತ ಪವಡಿಸಿದೆವು.

೨ನೆಯ ದಿನದ ನಮ್ಮ ಪ್ರಯಾಣ ಬನವಾಸಿ ಹಾಗು ಬುರುಡೆ ಜಲಪಾತವನ್ನು ಸಂದರ್ಶಿಸುವುದಾಗಿತ್ತು. ಬೆಳಿಗ್ಗೆ ಬೇಗ ಎದ್ದು ೮ ಗಂಟೆಗೆಲ್ಲ ತಯಾರಾದ ನಾವು, ನಿನ್ನೆಯ ಇಂಡಿಕಾದ ಘಟನೆಯಿಂದ ಹಾಗೂ "ಹಳೆಯದ್ದೆಲ್ಲ ಚಿನ್ನ" ಎಂಬ ಆಂಗ್ಲ ಗಾದೆಗೆ ಮನ್ನಣೆ ಕೊಟ್ಟು ಇಂದಿನ ಪಯಣಕ್ಕೆ ೩೦ ವರ್ಷ ಹಳೆಯ ಅಂಬಾಸಿಡರ್ ಕಾರನ್ನು ಗೊತ್ತು ಮಾಡಿದೆವು. ಅದರ ಚಾಲಕನಾದರೋ ೭೦ ವರ್ಷದ ಮುದುಕ, ಎರಡಲ್ಲ ಒಂದು ಸ್ಥಳವನ್ನು ನೋಡುತ್ತೀವೋ ಇಲ್ಲವೊ ಎಂಬ ಶಂಕೆ ಉಂಟಾದರೂ ತೋರಿಸಿಕೊಳ್ಳದೆ ಗಾಡಿಯನ್ನೇರಿದೆವು.

ಆದರೆ ನಮ್ಮ ಊಹೆ ತಪ್ಪು ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ೭೦ ವರ್ಷದ ಮುದುಕನಾದರೂ ೨೦ ವರ್ಷದ ಯುವಕನನ್ನು ನಾಚಿಸುವಂತೆ ಗಾಡಿಯನ್ನು ನಡೆಸತೊಡಗಿದನು. ಹಳ್ಳ ದಿಣ್ಣೆ ಒಂದೂ ಲೆಕ್ಕಿಸದೆ, ಮುಂದೆ ಬೇರೆ ಗಾಡಿ ಬಂದರೆ ತೀರ ಸಮೀಪ ಹೋಗಿ ತಿರುವು ತೆಗೆದುಕೊಂಡು ನಮ್ಮ ಮುಖ ನೋಡಿ ನಗುವ ವೈಖರಿ ಜೇಮ್ಸ್ ಬಾಂಡ್ ನನ್ನೂ ಮೀರಿಸುವಂತಿತ್ತು. ನಂತರ ಆತ ತನಗೆ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಟಾಟಾ ಮೋಟರ್ಸ್-ನ್ನು ಒಳಗೊಂಡಂತೆ ೫೦ ವರ್ಷದ ಅನುಭವ ಇದೆ ಎಂದಾಗ ಮನಸ್ಸು ನಿರಮ್ಮಳವಾಯಿತು. ಆದರೂ ಮುಂದಿನ ಸೀಟ್-ನಲ್ಲಿ ಸರದಿಯಂತೆ ಕುಳಿತ ನಾಗೇಶ್ ಹಾಗೂ ರವೀಂದ್ರರ ಮುಖದಲ್ಲಿ ಭಯ ಗುರುತಿಸಬಹುದಾಗಿತ್ತು.

Photography by Palachandra, All rights reserved೧೦:೩೦ಕ್ಕೆಲ್ಲ ಪಂಪ ಹೇಳಿದ "ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ", ಕನ್ನಡದ ಆರಂಭದ ರಾಜಮನೆತನಗಳಲ್ಲಿ ಒಂದಾದ ಕದಂಬರ ರಾಜಧಾನಿಯಾದ ಅದೇ ಬನವಾಸಿ ದೇಶದಲ್ಲಿದ್ದೆವು. ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಮೂಲ ಮುಧುಕೇಶ್ವರ ದೇವಾಲಯ ೨ ಶತಮಾನಗಳಷ್ಟು ಹಳೆಯದಂತೆ. ನಂದಿ ಮಂಟಪ, ಸಭಾ ಮಂಟಪ, ನೃತ್ಯ ಮಂಟಪ, ಸಂಕಲ್ಪ ಮಂಟಪ ಹಾಗೂ ಗರ್ಭ ಗುಡಿಯಲ್ಲಿ ಬಳಸಿದ ಕಲ್ಲು ಹಾಗೂ ಕೆತ್ತನೆಯ ಶೈಲಿ ಭಿನ್ನವಾದದ್ದು ಎಂದು ತೋರುತ್ತದೆ. ಇಲ್ಲಿರುವ ಬೇರೆ ಬೇರೆ ಪ್ರಾಂಗಣವು ಬೇರೆ ಬೇರೆ ಕಾಲದಲ್ಲಿ ನಿರ್ಮಿಸಿದಂತೆ ತೋರುತ್ತದೆ. ಇಲ್ಲಿಯ ಲಿಂಗ ಮಧು (ಜೇನಿನ) ಬಣ್ಣದ್ದಾದುದರಿಂದ ದೇವರಿಗೆ ಮಧುಕೇಶ್ವರ ಎಂಬ ಹೆಸರು ಬಂತೆಂಬ ಪ್ರತೀತಿ ಇದೆ. ಗರ್ಭ ಗುಡಿಯಲ್ಲಿ ಶಿವಲಿಂಗವಲ್ಲದೆ ಹಾಲು ಗಲ್ಲಿನಿಂದ ಕೆತ್ತಿದ ದತ್ತಾತ್ರೇಯನ ವಿಗ್ರಹ ಹಾಗೂ ಕಪ್ಪು ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ವಿಗ್ರಹ ಇದೆ. ವಿಷ್ಣು ಹಿಡಿದಿರುವ ಚಕ್ರ ಅಡ್ಡಕ್ಕೆ ತಿರುಗುವ ಬದಲು ಬೆರಳಿನ ಮಧ್ಯದಲ್ಲಿ ಉದ್ದಕ್ಕೆ ತಿರುಗುತ್ತಿದೆ. ನಂದಿ ವಿಗ್ರಹ ಎಲ್ಲ ಶಿವಾಲಯದಲ್ಲಿರುವಂತೆ ಶಿವಲಿಂಗದ ಎದುರಿದ್ದರೂ ತನ್ನ ಮುಖವನ್ನು ತುಸು ಬಲಕ್ಕೆ ತಿರುಗಿಸಿದೆ. ಹಾಗಾಗಿ ನಂದಿಯ ಒಂದು ಕಣ್ಣು ಶಿವಲಿಂಗ ನೋಡಿದರೆ ಇನ್ನೊಂದು ಪಕ್ಕದ ಗುಡಿಯಲ್ಲಿರುವ ಪಾರ್ವತಿಯನ್ನು ನೋಡಿತ್ತಿದೆ. ಸಭಾಮಂಟಪದಲ್ಲಿನ "ತ್ರಿಲೋಕ ಮಂಟಪ" ಎಂಬ ಶಿಲ್ಪದಲ್ಲಿ ಮೂರು ಲೋಕದ ಚಿತ್ರಣ ಚಿತ್ರಿಸಿದ್ದಾರೆ. ಮಂಟಪದ ಕಲಶದಲ್ಲಿ ಶಿವ, ವಿಷ್ಣು, ಬ್ರಹ್ಮರನ್ನೊಳಗೊಂಡ ನಾಕವನ್ನು ಚಿತ್ರಿಸಿದರೆ, ಮಧ್ಯದಲ್ಲಿ ಭೂಮಿ ಹಾಗೂ ಬುಡದಲ್ಲಿ ಪಾತಾಳ ಲೋಕವನ್ನು ನಾಗ ದೇವತೆಗಳೊಂದಿಗೆ ಚಿತ್ರಿಸಿದ್ದಾರೆ. ಮಧ್ಯದ ಪೀಠದಲ್ಲಿ ೩ ಮೆಟ್ಟಿಲುಗಳಿದ್ದು, ಮೇಲಿನದ್ದು ಸಾತ್ವಿಕ, ಮಧ್ಯದ್ದು ರಾಜಸಿಕ ಹಾಗೂ ಮೂರನೆಯದು ತಾಮಸಿಕ ಪ್ರವೃತ್ತಿಯನ್ನು ಸೂಚಿಸುತ್ತದಂತೆ. ದೇವಾಲಯದ ಸುತ್ತಲೂ ಆಯಾ ದಿಕ್ಕಿನ ಪ್ರತಿನಿಧಿಯಾದ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯದ ಎಡಗಡೆಯಲ್ಲಿ ಒಂದೇ ಕಪ್ಪು ಕಲ್ಲಿನಿಂದ ಕೆತ್ತಿದ ಮಂಚವಿದೆ. ಜನ ರಹಿತ ಹಳೆಯ ದೇವಾಲಯದಿಂದ ಮರಳುವಾಗ ಯಾವುದೊ ಒಂದು ಬಗೆಯ ಕೃತಾರ್ಥ ಭಾವನೆ ನಮ್ಮಲ್ಲಿತ್ತು.


ನಂತರ ಅಲ್ಲೇ ಪಕ್ಕದಲ್ಲಿದ್ದ ಕಲಾ ಸಂಗ್ರಹಕ್ಕೆ ಭೇಟಿ ಕೊಟ್ಟೆವು. ಹೋಗುವ ಮೊದಲು ನನ್ನ ಮನಸ್ಸಿನಲ್ಲಿ ಹಳೆಯ ಬನವಾಸಿಯ ಚಿತ್ರಣ ದೊರೆಯಬಹುದೇನೋ ಎಂಬ ಕಲ್ಪನೆಯಿತ್ತು. ಆದರೆ ಅಲ್ಲಿಗೆ ಭೇಟಿ ಕೊಟ್ಟ ಮೇಲೆ ಇಂದಿನ ಕಲಾಕಾರರು ಮಣ್ಣಿಂದ ಮಾಡಿದ ಕೆಲವು ಕೃತಿಗಳು ಕಾಣ ಸಿಕ್ಕಿದವು. ಅಲ್ಲಿನ ಎರಡು ಮನುಷ್ಯರ ಕಲಾಕೃತಿಯಂತೂ ಜೀವಂತ ಮನುಷ್ಯರೋ ಎಂಬಷ್ಟು ನೈಜವಾಗಿತ್ತು.

ಹಿಂದಿನ ದಿನದ ಹಸಿವು ನೆನಪಿದ್ದುದರಿಂದ ಬುರುಡೆ ಜಲಪಾತಕ್ಕೆ ಹೋಗುವ ಮುನ್ನ ದಾರಿಯಲ್ಲಿ ಸಿಕ್ಕಿದ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬ ತಿಂದು ಪ್ರಯಾಣ ಮುಂದುವರಿಸಿದೆವು. ಮತ್ತೆ ಮಣ್ಣಿನ ರಸ್ತೆ, ಮಳೆ, ಬನವಾಸಿಯಲ್ಲಿ ಒಂದು ಕೊಡೆ ಕೊಂಡಿದ್ದೆವಾದರೂ ಇದ್ದ ಇನ್ನೊಂದು ಕೊಡೆಯನ್ನು ಮರೆತು ಬಂದಿದ್ದರಿಂದ ನನ್ನ ಕ್ಯಾಮೆರಾವನ್ನು ವಾಹನದಲ್ಲೇ ಇಟ್ಟು ಮಳೆಯಲ್ಲಿ ನೆನೆಯುತ್ತ ಸಾಗಿದೆವು. ಸ್ವಲ್ಪ ದೂರ ಸಾಗಿದಂತೆಯೇ ಸಿಕ್ಕಿದ ಒಂದು ಮನೆಯಲ್ಲಿ ೨ ಕೊಡೆ ತೆಗೆದುಕೊಂಡು ಹಿಂದಿರುಗಿ ಬರುವಾಗ ಮರಳಿ ಕೊಡುತ್ತೇವೆ ಎಂದು ಭರವಸೆ ಹೇಳಿ ಮುಂದುವರಿದೆವು. ದಾರಿಯಲ್ಲಿ ಸಿಕ್ಕಿದ ಹಲವು ಜನರು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದರೂ ನಮಗೆ ಮರಳಿ ಹೋಗಲು ಮನಸ್ಸು ಬರಲಿಲ್ಲ. ಹೀಗೆ ದಾರಿಯಲ್ಲಿ ಸಾಗುತ್ತಿದ್ದಾಗ ಒಂದು ಸಂಕ ಎದುರಾಯಿತು. ಸುಮಾರು ೮೦ ಅಡಿಗಳಷ್ಟು ಅಗಲವಾಗಿ ಹರಿಯುವ ತೊರೆಗೆ ಅಡಿಕೆ ಮರ, ಕಾಡಿನ ಬಳ್ಳಿಯಿಂದ ಮಾಡಿದ ಸೇತುವೆ, ಕೆಳಗೆ ವೇಗವಾಗಿ ಹರಿಯುವ ಚಹಾ ವರ್ಣದ ನೀರು. ಮೊದಲ ಕೆಲವು ಹೆಜ್ಜೆಯನ್ನು ಇಡುತ್ತಲೇ ರವೀಂದ್ರ ಅದನ್ನು ದಾಟುವ ದುಸ್ಸಾಹಸ ಮಾಡದೆ ಉಳಿದುಕೊಂಡ. ಒಂದು ಬಗೆಯ ಅಳುಕು ಕಾಡುತ್ತಿದ್ದರೂ ಯಾವುದೊ ಒಂದು ಬಗೆಯ ಧೈರ್ಯದಿಂದ ಉಳಿದ ನಾವು ಮೂವರು ಸಂಕವನ್ನು ದಾಟಿದೆವು. ಸಂಕದ ಮಧ್ಯ ನಿಂತಾಗ ಮಾತ್ರ ಇಡೀ ಪ್ರಪಂಚವೇ ಸುತ್ತುತ್ತಿದೆಯೋ ಅನ್ನಿಸುತ್ತಿತ್ತು.

ಬೆಂಗಳೂರಿನಲ್ಲಿ ಕುಳಿತು ಅವ್ಯವಸ್ಥೆಯ ಕುರಿತು ಸರಕಾರವನ್ನು ದೂರುತ್ತಾ, ಪ್ರತಿಯೊಂದಕ್ಕೂ ಸರಕಾರದ ಮುಖ ನೋಡುವ ನಮಗೂ ಅವರಿಗೂ ಎಷ್ಟು ಅಂತರ. ಮಳೆಗಾಲದಲ್ಲಿ ಊರಿನ ಸುತ್ತ ನೀರು ತುಂಬಿ, ಊರು ದ್ವೀಪವಾದರೂ ಸರಕಾರ ಯಾವುದೇ ರೀತಿಯ ಸಂಪರ್ಕ ವ್ಯವಸ್ಥೆ ಮಾಡಿ ಕೊಡಲು ಮುಂದೆ ಬಂದಿಲ್ಲ. ಆದರೂ ಜನ ಇತರರನ್ನು ದೂರದೆ ತಮ್ಮದೇ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ನಾವು ಮೂವರೇ ಮುಂದಿನ ಪ್ರಯಾಣ ಬೆಳೆಸಿದೆವು. ದಾರಿ ಗದ್ದೆ, ಕಂಗಿನ ತೋಟ, ಗುಡ್ಡ, ಎಲ್ಲೋ ದೂರದಲ್ಲಿ ಕಾಣುವ ಹೆಂಚಿನ ಮನೆಯಿಂದ ಹೊಮ್ಮುತ್ತಿದ್ದ ಹೊಗೆ ನಮಗೆ ಮಯಾನಗರಿಯಂತೆ ಕಾಣಿಸುತ್ತಿತ್ತು. ಇಂಬಳಕ್ಕೆ ಸುಣ್ಣ ಒಳ್ಳೆಯ ಮದ್ದು ಎಂದು ತಿಳಿದ ನಾವು ಆ ದಿನ ಸುಣ್ಣ ಹಿಡಿದುಕೊಂಡು ಹೋಗಿದ್ದೆವು. ಸುಣ್ಣ ಹಚ್ಚಿದ ಕೂಡಲೇ ಅದು ಸಾಯುತ್ತಿತ್ತು ಕೂಡ. ಆದ್ದರಿಂದ ಮುಂದೆ ಎದುರಾದ ಅರಣ್ಯ ಮಾರ್ಗ ನಮ್ಮಲ್ಲಿ ಇಂಬಳದ ಭಯವನ್ನು ತೊಡೆದು ಹಾಕಿತ್ತು. ಅರಣ್ಯ ಘೋರವಾಗಿತ್ತು, ಸೂರ್ಯನ ಬೆಳಕು ನೆಲ ತಲುಪುವುದು ಕಷ್ಟವಾಗಿತ್ತಾದ್ದರಿಂದ ಬೆಳಕು ತುಂಬ ಮಂದವಾಗಿತ್ತು. ಮಳೆಯ ದೆಸೆಯಿಂದ ಹರಿಯುತ್ತಿದ್ದ ಚಿಕ್ಕ ಪುಟ್ಟ ತೊರೆಗಳೂ ಬಹಳ ರಭಸವಾಗಿ ಹರಿಯುತ್ತಿತ್ತು. ಸುಮಾರು ದೂರ ಸಾಗಿದ ನಂತರ ಒಂದು ತಗ್ಗಿನ ಜಾಗದಲ್ಲಿ ವೇಗವಾಗಿ ಹರಿಯುವ ತೊರೆಯನ್ನು ದಾಟಲಾರದೆ ಹಿಂದಿರುಗುವ ಮನಸ್ಸು ಮಾಡಿದೆವು. ಅಲ್ಲದೆ ಸಂಜೆ ಸಮೀಪಿಸುತ್ತಿದ್ದುದರಿಂದ ಕತ್ತಲಲ್ಲಿ ದಾರಿ ತಪ್ಪಿ ಹೋಗುವ ಸಂದರ್ಭವೂ ಇತ್ತು.

ಜೀವನದ ಪ್ರಯಾಣದಲ್ಲಿ ಸಾಗುವ ದಾರಿಯೂ ತಲುಪುವ ಗುರಿಯಂತೆ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಬುರುಡೆ ತಲುಪಲು ನಾವು ಸಾಗಿ ಬಂದ ಹಾದಿ ಮನೋಹರವಾಗಿತ್ತಾದ್ದರಿಂದ, ಅದನ್ನು ನೋಡದೆ ಹಿಂದಿರುಗಿದ ಕಹಿ ನಮ್ಮನ್ನು ಬಹಳವಾಗಿ ಕಾಡಲಿಲ್ಲ. ಮತ್ತೆ ಅದೇ ಸಂಕದ ಮಧ್ಯ ಧೈರ್ಯವಾಗಿ ನಿಂತು ವಿಚಿತ್ರ ಸುಖವನ್ನು ಅನುಭವಿಸಿದೆವು. ಸುಣ್ಣವನ್ನು ಮೈಗೆ ಬಳಿದುಕೊಂಡ ನಾವು ನಾಗ ಸಾಧುಗಳ ವೇಷ ಧರಿಸಿದಂತಿತ್ತು. ಸುಣ್ಣದಿಂದಾಗಿ, ಇಂಬಳದಿಂದಾದ ಗಾಯ ಸುಟ್ಟು ಹುಣ್ಣಿನ ರೂಪ ಪಡೆದಿತ್ತು. ಹಾಕಿದ ಚಪ್ಪಲಿ ಅದನ್ನು ಅರಚಿ ಗಾಯವನ್ನು ಇನ್ನೂ ಭಯಂಕರವಾಗಿ ಮಾಡಿತ್ತು. ಮರಳುವಾಗ ಕೊಡೆಯನ್ನು ವಾಪಾಸು ಕೊಟ್ಟು, ಮತ್ತೆ ಶಿರಸಿಯ ಹಾದಿಯನ್ನು ಹಿಡಿದೆವು.

Photography by Palachandra, All rights reservedಮೂರು ಮತ್ತೆ ನಾಲ್ಕನೇ ದಿನ ನಮ್ಮ ಗುರಿ ಯಲ್ಲಾಪುರದ ಆಸು ಪಾಸಿನಲ್ಲಿ ಸುತ್ತುವುದಾಗಿತ್ತು. ಬೆಳಿಗ್ಗೆ ೭:೩೦ಕ್ಕೆ ಪಂಚವಟಿಯನ್ನು ತೊರೆದು ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ಪಯಣಿಸಿ ಯಲ್ಲಾಪುರ ಸೇರಿದೆವು. ಹೋಟೆಲೊಂದರಲ್ಲಿ ಉಪಹಾರ ಮುಗಿಸಿ, ಅಂದಿನ ಪ್ರಯಾಣಕ್ಕೆ ಒಮ್ನಿಯೊಂದನ್ನು ಪತ್ತೆ ಮಾಡಿದೆವು. ಗಂಗಾವಳ್ಳಿ (ಬೇಡ್ತಿ) ನದಿ ೧೯೮ ಮೀಟರ್ ಎತ್ತರದಿಂದ ಮೂರು ಹಂತದಲ್ಲಿ ಕಣಿವೆಗೆ ದುಮುಖಿ ಹರಿಯುವ ಮನೋಹರ ದೃಶ್ಯ ಮಾಗೊಡ್ ಜಲಪಾತ. ಬೆಟ್ಟದ ಮೇಲೆ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹವಿದ್ದು, ಅನುಮತಿ ಇದ್ದರೆ ಉಳಿಯುವ ವ್ಯವಸ್ಥೆಯೂ ಇದೆ. ವಿಶ್ರಾಂತಿ ಗೃಹದವರೆಗೂ ಡಾಮರು ಬಳಿದ ರಸ್ತೆ ಇರುವುದರಿಂದ ನಡೆಯುವ ಸುಖದಿಂದ ವಂಚಿತರಾದೆವು. ಜಲಪಾತ ಮೋಡದಿಂದ ತೆರವುಗೊಂಡು ಮೈ ತುಂಬಿ ಧುಮುಕುತ್ತಿತ್ತು, ಆದರೆ ಕಣಿವೆ ಮಂಜಿನಿಂದ ಮುಸುಕಿದ್ದರಿಂದ ಬಿದ್ದ ನೀರು ಸ್ವಲ್ಪ ಸಮಯ ಹರಿದು ನಂತರ ಅದೃಶ್ಯವಾಗುತ್ತಿತ್ತು. ಹಾಗೆಯೇ 0.೫ಕಿ.ಮಿ. ಗುಡ್ಡವನ್ನು ಇಳಿದು ಹೋದರೆ ಕಣಿವೆ ಸಿಗುತ್ತದೆ, ಜಲಪಾತವನ್ನು ಕೆಳಗಿನಿಂದ ನೋಡುವ ಹಂಬಲದಿಂದ ಕೆಳಗಿಳಿಯತೊಡಗಿದೆವು. ಎತ್ತರೆತ್ತರದ ಮರಗಳು ಮೋಡವನ್ನು ಬಿಗಿದಪ್ಪಿ ಚುಂಬಿಸುತ್ತಿತ್ತು. ಮರಗಳ ಬಿಗಿದಪ್ಪುಗೆಗೆ ಕರಗಿದ ಮೋಡಗಳು ಮಂದ ಗಾಳಿಯೊಡನೆ ಬೆರೆತು ನಮ್ಮ ಸುತ್ತ ಸುಳಿದಾಡುತ್ತಿತ್ತು. ಗುಡ್ಡವನ್ನು ಇಳಿಯುವ ನಮ್ಮ ಕೆಲಸ ಸುಲಭದ್ದಾಗಿರಲಿಲ್ಲ. ಪಾಮಾಜಿ, ಬಂಡೆಗಳಿಂದ ಕೂಡಿದ ಇಳುಕಲು ದಾರಿ ತುಂಬಾ ಕಡಿದಾಗಿತ್ತು. ಸುಮಾರು ೩೦೦ಮಿ ಗಳಷ್ಟು ಕೆಳಗಿಳಿದ ನಮಗೆ ಮುಂದೆ ಸಾಗುವುದು ಕಷ್ಟವಾಗತೊಡಗಿತು. ಬಂದ ದಾರಿಗೆ ಸುಂಕ ಇಲ್ಲವೆಂದು ಏದುಸಿರು ಬಿಡುತ್ತಾ ಮತ್ತೆ ಮರಳಿ ಬಂದೆವು. ವಿಶ್ರಾಂತಿ ಗೃಹದ ಬಳಿಯಲ್ಲಿರುವ ಹೋಟೆಲ್ನಲ್ಲಿ ಚಹಾ ಕುಡಿದು, ಕಾವಡೆ ಕೆರೆಯತ್ತ ಪ್ರಯಾಣ ಬೆಳೆಸಿದೆವು.




Photography by Palachandra, All rights reserved

ಕೆರೆ ಎಂದ ಕ್ಷಣ ಕರಾವಳಿಯ ನನಗೆ ನೆನಪಿಗೆ ಬರುವುದು ಚೌಕಾಕಾರದಲ್ಲಿ ಕಟ್ಟೆ ಕಟ್ಟಿದ ಸುಮಾರು ಒಂದು ಎಕರೆಗಳಷ್ಟು ವಿಸ್ತಾರವಾದ ನಿಂತ ನೀರು. ಕಾವಡೆ ಕೆರೆಯಾದರೋ ೬೦ ಎಕರೆಗಳಷ್ಟು ವಿಶಾಲವಾಗಿ ಹರಡಿಕೊಂಡಿದೆ. ದಂಡೆಯ ಮೇಲೆ ಇದ್ದ ಶಿವನ ಹಾಗೂ ಇನ್ನೊಂದು ದೇವಾಲಯ ಅಂತಹ ಚೆಲುವಿನದ್ದಾಗಿರಲಿಲ್ಲ. ಶಿವಾಲಯದಲ್ಲಿ ೩ ಹಗಲು, ೩ ರಾತ್ರಿ ಮಳೆಯಾಗಲೆಂದು ಶಿವನಿಗೆ ಅಭಿಷೇಕ ಮಾಡುತ್ತಿದ್ದರು. ಅಲ್ಲಿ ಕೇಳಿ ಬರುತ್ತಿದ್ದ ರುದ್ರ, ಚಮಕ ಮಧುರ ಸಂಗೀತದಂತಿತ್ತು. ಮುಂದೆ ಜೇನುಕಲ್ಲು ಗುಡ್ಡ ಎಂಬ ಸೂರ್ಯಾಸ್ತಮಾನದ ಸ್ಥಳಕ್ಕೆ ಭೇಟಿಕೊಟ್ಟೆವು. ಗಿರಿ ಶಿಖರಗಳ ನಡುವೆ ಬಳಸಿಕೊಂಡು ಹರಿಯುವ ನದಿಯ ದೃಶ್ಯ ಸುಂದರವಾಗಿತ್ತು. ಮಳೆಗಾಲವಾದ್ದರಿಂದ ಸೂರ್ಯಾಸ್ತಮಾನದ ಸೊಬಗು ನೋಡಲು ಕಾಯದೆ ಯಲ್ಲಾಪುರಕ್ಕೆ ಮರಳಿದೆವು. ಮಧ್ಯಾನ್ಹ ಭೋಜನವಾಗಿಲ್ಲವಾದ್ದರಿಂದ ಹೋಟೆಲೊಂದನ್ನು ಸೇರಿ ಹೊಟ್ಟೆ ತುಂಬಿಸಿಕೊಂಡು ಬನಾನಾ ಕೌಂಟಿಯ ಕಡೆ ತೆರಳಿದೆವು.

ಬನಾನಾ ಕೌಂಟಿ ಉತ್ತರ ಕನ್ನಡದಲ್ಲಿ ಚೆಲುವಾದ ರೆಸಾರ್ಟ್, ಆದರೆ ಅಲ್ಲಿ ಪ್ರವೇಶ ಸಮಯ ೧೨ ಗಂಟೆಗೆ ನಿಗದಿಯಾಗಿದ್ದುದರಿಂದ ಸಂಜೆ ೫ ಗಂಟೆಗೆ ತೆರಳಿದ ನಮಗೆ, ಕೇವಲ ಒಂದು ರಾತ್ರಿಗಾಗಿ ೪.೫ ಸಾವಿರದಷ್ಟು ಖರ್ಚು ಮಾಡುವುದು ಸರಿ ಬೀಳಲಿಲ್ಲ. ಹೀಗಾಗ ಯಲ್ಲಾಪುರದಲ್ಲೇ ಬೇರೆ ಲಾಡ್ಜ್ಗಾಗಿ ಹುಡುಕಾಡ ತೊಡಗಿದೆವು. ಆದರೆ ಕಡಿಮೆ ಬೆಲೆಯ ಲಾಡ್ಜ್ಗಳು ತೀರ ಕಳಪೆಯಾಗಿದ್ದುದರಿಂದ, ಮತ್ತೆ ಶಿರಸಿಗೆ ಪ್ರಯಾಣ ಬೆಳೆಸಿ "ಮಧುವನ" ಎಂಬ ಲಾಡ್ಜ್ನಲ್ಲಿ ಉಳಿದುಕೊಂಡೆವು.

ಕೊನೆಯ ದಿನ ನಮ್ಮ ಪ್ರಯಾಣ ಮತ್ತೆ ಯಲ್ಲಾಪುರದ ಬಳಿಯಿರುವ ಸಾತೊಡ್ಡಿ ಜಲಪಾತ ಹಾಗೂ ಲಾಲ್ಗುಳಿ ಜಲಪಾತವನ್ನು ನೋಡುವುದಾಗಿತ್ತು. ಸಾತೊಡ್ಡಿಗೆ ಕೊನೆಯವರೆಗೂ ವಾಹನ ಸಂಚಾರದ ವ್ಯವಸ್ಥೆ ಇದ್ದುದರಿಂದ ಕೊನೆಯ ದಿನ ಹೆಚ್ಚು ನಡೆದು ದಣಿಯುವ ಪ್ರಮೇಯ ಇಲ್ಲ ಎಂದು ನಮ್ಮ ಲೆಕ್ಕಾಚಾರವಾಗಿತ್ತು.


Photography by Palachandra, All rights reservedಮಣ್ಣಿನ ರಸ್ತೆ ಒಂದು ಕಡೆ ತೀರ ಗೊಚ್ಚೆಗಳಿಂದ ಕೂಡಿದ್ದು, ನಮ್ಮ ಚಾಲಕ ಇಲ್ಲಿಂದ ಸಾತೊಡ್ಡಿ ಕೇವಲ ಎರಡೇ ತಿರುವು ಆದರೆ ಗಾಡಿ ಮಾತ್ರ ಮುಂದಕ್ಕೆ ಹೋಗಲಾರದು ಎಂದದ್ದರಿಂದ ಗಾಡಿಯಿಂದಿಳಿದು ಚಾರಣವನ್ನು ಆರಂಭಿಸಿದೆವು. ದಾರಿಯುದ್ದಕ್ಕೂ ಎತ್ತರೆತ್ತರದ ಬೀಟೆ ಮರಗಳು, ಬಿದುರಿನ ಹಿಂಡಿಲು, ರೆಂಬೆಗಳಲ್ಲಿ ಜೋತಾಡುವ ಕಪ್ಪು ಮುಸುಡಿನ ಮುಸುವಗಳು. ಆಗಿಂದಾಗ್ಗೆ ಕಣ್ಮುಂದೆ ಯಾವುದೋ ಸಮುದ್ರವನ್ನು ನೋಡಿದಂತೆ ಭಾಸವಾಗುತ್ತಿದ್ದರೂ ಅದು ನನ್ನ ಭ್ರಮೆ ಎಂದು ಸುಮ್ಮನಾದೆ. ಆದರೆ ಹೀಗೆಯೇ ಮುಂದುವರಿದಂತೆ ನನ್ನ ಸಂದೇಹ ದೂರವಾಯಿತು. ಅದು ಸಮುದ್ರವಲ್ಲ ಬದಲಿಗೆ ಕಾಳಿ ನದಿಗೆ ಅಡ್ಡ ಕಟ್ಟಿದ "ಕೊಡಸಳ್ಳಿ" ಅಣೆಕಟ್ಟು. ವಿಶಾಲವಾದ ಕಣಿವೆಯಲ್ಲಿ ಅಣೆಕಟ್ಟಿನ ಹಿನ್ನೀರು ನಿಂತು ಕಾಡು, ಹಳ್ಳಿಯನ್ನು ಮುಳುಗಿಸಿತ್ತು. ತಮ್ಮ ಕೂಗು ಯಾರನ್ನೂ ತಲುಪುವುದಿಲ್ಲವೆಂಬಂತೆ ನೀರಿನ ನಡುವೆ ಒಣ ಮರಗಳು ತಪಸ್ಸನ್ನಾಚರಿಸುತ್ತಿದ್ದವು. ವೈಭವಯುತವಾಗಿ ಹಿಂದೆ ಆಳಿದ ಯಾವುದೊ ಸಾಮ್ರಾಜ್ಯ ಶಾಪಗ್ರಸ್ಥವಾದ ರುದ್ರ ಭೂಮಿಯಂತಿತ್ತು.



Photography by Palachandra, All rights reservedಎರಡಲ್ಲ ಸುಮಾರು ೬ ಕಿ.ಮಿ.ಗಳಲ್ಲಿ ೨೦ ತಿರುವುಗಳನ್ನು ದಾಟಿದ ನಂತರ ಸಾತೊಡ್ಡಿ ಜಲಪಾತ ಕಾಣಿಸಿತು. ದಾರಿಯಲ್ಲಿ ಸಿಕ್ಕಿದ ಮನೆಯೆಂಬ ಹೋಟೆಲ್ನಲ್ಲಿ ಮುಂಗಡ ಕೊಟ್ಟು ಊಟಕ್ಕೆ ಹೇಳಿ ಬಂದೆವು. ತುಂಬಾ ಹತ್ತಿರದಿಂದಲೇ ಕಾಣಿಸುವ ಜಲಪಾತ ಸುಂದರವಾಗಿತ್ತು. ಮಳೆಯಿಂದ ಒದ್ದೆಯಾಗಿದ್ದ ಹಸಿರು, ಹಗುರವಾಗಿ ತೇಲುತ್ತಿದ್ದ ಮೋಡ, ಈಗ ತಾನೆ ಸ್ನಾನ ಮಾಡಿ ತಲೆಗೆ ಧೂಪದ ಹೊಗೆ ಹಾಕಿಸಿಕೊಳ್ಳುತ್ತಿದ್ದ ಚೆಲುವೆಯಂತಿತ್ತು. ನಾಗೇಶ ಮತ್ತೆ ರವೀಂದ್ರ ಎದುರಿನ ತೊರೆಗೆ ಅಡ್ಡವಾಗಿ ಹಾಕಿದ್ದ ಮರದ ಕೊರಡನ್ನು ದಾಟಿ ಜಲಪಾತಕ್ಕೆ ಇನ್ನೂ ಸಮೀಪ ತೆರಳಿ ನೀರಿನ ಸಿಂಚನವನ್ನು ಆಹ್ಲಾದಿಸುತ್ತಿದ್ದರು. ಫೋಟೋ ತೆಗೆದ ನಂತರ ನನಗೂ ಹೋಗುವ ಆಸೆಯಾಗಿ ಒಂದು ಕಾಲನ್ನು ಮರದ ತುಂಡಿನ ಮೇಲೆ ಇನ್ನೊಂದನ್ನು ತೊರೆಯ ನೀರಿಗೆ ಇಳಿಸಿದೆ. ಆದರೆ ಕಮ್ಮಿ ನೀರು ಇರಬಹುದೆಂಬ ನನ್ನ ಊಹೆ ತಲೆಕೆಳಗಾಗಿ, ನನ್ನ ಮೊಣಕಾಲಿನವರೆಗೆ ನೀರು ತುಂಬಿಕೊಂಡರೂ ತಳ ಸಿಗಲಿಲ್ಲ. ತೋಲನ ತಪ್ಪಿ ಬಿದ್ದು, ಎಡ ಕಾಲು ಮರದ ತುಂಡಿನ ಮೇಲೆ ಉಳಿದು ಮೊಣ ಕೀಲು ಬಾತುಕೊಂಡಿತು. ಏನೋ ಒಂದು ಬಗೆಯ ಸಂಕಟ ಕಾಣಿಸಿಕೊಂಡರೂ ೫ ನಿಮಿಷ ಸುಧಾರಿಸಿಕೊಂಡು ಅದನ್ನು ದಾಟಿ ನನ್ನ ಆಸೆ ತೀರಿಸಿಕೊಂಡೆ.

ಹಿಂದೆ ಬೆಣ್ಣೆ ಹೊಳೆ ಮತ್ತು ಬುರುಡೆ ಜಲಪಾತ ನೋಡುವ ಸಮಯದಲ್ಲಿ ಸರಕಾರ ಪ್ರವಾಸೋದ್ಯಮ ಸುಧಾರಣೆಯ ಕಾರ್ಯವಾಗಿ ಇಲ್ಲಿಗೆ ಸುಗಮ ದಾರಿ ಯಾಕೆ ನಿರ್ಮಿಸಿಲ್ಲ ಎಂಬ ಯೋಚನೆಯಾಯಿತು. ಆದರೆ ನಾಗರಿಕ ಪ್ರಪಂಚ ಇಂತಹ ಚೆಲುವಾದ ಸ್ಥಳಗಳಲ್ಲಿ ಮಾಡುವ ಅನಾಗರಿಕ ವರ್ತನೆಯನ್ನು ಸಾತೊಡ್ಡಿಯಲ್ಲಿ ಪ್ರತ್ಯಕ್ಷವಾಗಿ ನೋಡಿ ನನ್ನ ಅಭಿಪ್ರಾಯ ಬದಲಾಯಿತು. ಊಟ ಮಾಡಿ ಎಸೆದ ಪ್ಲಾಸ್ಟಿಕ್ ತಟ್ಟೆಗಳು, ಮಧ್ಯಪಾನ ಮಾಡಿ ಎಸೆದ ಬಾಟಲಿಗಳು ನಿಸರ್ಗದ ಆರೋಗ್ಯ ಕೆಡಿಸಿದ್ದವು. "ಯಥಾ ರಾಜ ತಥಾ ಪ್ರಜಾ", ಸರಕಾರದಂತೆಯೇ ನಮ್ಮವರಿಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಸುಂದರ ಜೀವನ ನಿರ್ಮಿಸುವ ಯೋಚನೆಯಿದ್ದಂತೆ ಕಾಣಿಸಲಿಲ್ಲ.

ಅದೇ ಹೋಟೆಲ್ಗೆ ಮರಳಿ ಊಟ ಮಾಡುವಾಗ ಮಾಲಿಕರೊಡನೆ ಯೋಗ ಕ್ಷೇಮ ವಿನಿಮಯವಾಯಿತು. ಆಕೆ ಒಂದು ವಾರದ ಹಿಂದಷ್ಟೇ ಕುರ್ಕ ಹಿಡಿದುಕೊಂಡು ಹೋದ ತಮ್ಮ ದನದ ಬಗ್ಗೆ ಭಾವುಕರಾಗಿ ಮಾತನಾಡುತ್ತಿದ್ದರು. ದಷ್ಟ ಪುಷ್ಟವಾಗಿ ಬೆಳೆದಿದ್ದ ಗುಂಡ ಎಂಬ ಅವರ ಸಾಕು ನಾಯಿ ಹಿಂದಿನ ದಿನ ನೋಡಿದ ಕುರ್ಕದ ನೆನಪಿನಿಂದ ಭಯದಿಂದ ಮನೆಯ ಒಳಗೂ ಹೊರಗೂ ಗಸ್ತು ತಿರುಗುತ್ತಿತ್ತು. ಅಂತೂ ಊಟ ಮುಗಿಸಿ ನನ್ನ ಕುಂಟು ಕಾಲಿನಿಂದ ೬ಕಿ.ಮಿ. ತೆವಳಿ ನಮ್ಮ ಗಾಡಿಯನ್ನು ಸೇರಿದೆವು.

೧೦ ಕಿ.ಮಿ. ಪ್ರಯಾಣ ಬೆಳೆಸಿ ಲಲ್ಗುಳಿಗೆ ಹೋದರೆ ಅಲ್ಲಿನ ಜಲಪಾತ ಅಣೆಕಟ್ಟು ಕಟ್ಟಿದ ಸಮಯದಿಂದ ಕಣ್ಮರೆಯಾಯಿತೆಂಬ ವಿಷಯ ತಿಳಿದು ಮನಸ್ಸಿಗೆ ಖೇದವಾಯಿತು. ಅಲ್ಲಿಯೇ ಬಳಿಯಲ್ಲಿರುವ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹ ನೋಡಿ ವಾಪಾಸು ಹೊರಡುವ ನಿರ್ಧಾರ ಮಾಡಿದೆವು. ಸಾತೊಡ್ಡಿಯಲ್ಲಿ ಒಂದೂ ಇಂಬಳವಿಲ್ಲದೆ ನಮ್ಮ ಹೊಸ ಅಸ್ತ್ರ ಪ್ರಯೋಗಿಸುವ ಅವಕಾಶ ದೊರಕಿಲ್ಲವಾಗಿತ್ತು. ವಿಶ್ರಾಂತಿ ಗೃಹದ ಸುತ್ತ ಮುತ್ತ ಹಲವು ಇಂಬಳ ಇದ್ದುವಾದ್ದರಿಂದ ಹೊಗೆಸೊಪ್ಪನ್ನು ಒಂದರ ಹತ್ತಿರ ಹಿಡಿದರೆ ಅದು ಸಾಯುವ ಬದಲು ಅದರ ಮೇಲೆ ಹತ್ತಿಕೊಂಡು ಆಟವಾಡ ತೊಡಗಿತು!

ಯಲ್ಲಾಪುರದಲ್ಲಿ ಶಿರಸಿಯ ಬಸ್ಸು ಹಿಡಿದು ಮಧುವನಕ್ಕೆ ಬಂದೆವು. ವಿಶ್ರಾಂತಿ ತೆಗೆದುಕೊಂಡು, ಊಟ ಮುಗಿಸಿ ಶಿರಸಿಯ ಬಸ್ ನಿಲ್ದಾಣಕ್ಕೆ ಬಂದಾಗಲಷ್ಟೆ ತಿಳಿದಿದ್ದು ಉತ್ತರ ಕನ್ನಡಕ್ಕೂ ನಮಗೂ ಒಂದು ಬಗೆಯ ಬಾಂಧವ್ಯ ಬೆಸೆದದ್ದು. ಬೆಂಗಳೂರಿನ ಬಸ್ ಏರಿದಾಗ ಏನೋ ಒಂದು ಕಳೆದುಕೊಂಡ ಅನುಭವ...



ಫೋಟೋ ಆಲ್ಬಮ್...

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)