Sunday, June 19, 2011

ಹಲಸಿನ ರುಚಿಯ ಹಲವು ಬಗೆ

ಹಲಸಿನ ಕಾಲ ಆರಂಭವಾಯಿತೆಂದರೆ ಗುಜ್ಜೆ ಪಲ್ಯ, ಹುಳಿ ದಿನನಿತ್ಯದ ಅಡುಗೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಹಣ್ಣಾಗತೊಡಗಿದರೆ  ಹಣ್ಣಿನ ದೋಸೆ, ಇಡ್ಲಿ, ಮುಳ್ಕ, ಪಾಯಸ ಮಾಮೂಲಿ. ಬೆಂಗಳೂರಿನ ರಿಲಯನ್ಸ್ ಫ್ರೆಷ್ನಲ್ಲಿ ಗುಜ್ಜೆ ನೋಡಿದಾಗ ನಮ್ಮ ಮನೆಯಲ್ಲಿ ಹಿಂದೆ ಸವಿದಿದ್ದ ಮೇಲೆ ತಿಳಿಸಿದ ಅಡುಗೆಯ ನೆನಪಾದರೂ, ಅದರ ಸಿಪ್ಪೆ ಸುಲಿದು ಕತ್ತರಿಸುವ ತ್ರಾಸ ಬೇಡವೆಂದು ಸುಮ್ಮನಾದೆ.

ಹಿಂದೆ ಬೇಸಿಗೆ ರಜೆಯಲ್ಲಿ ಕಳಸದ ದೊಡ್ಡಮ್ಮನ ಮನೆಗೆ ಹೋದರೆ ರಾಶಿ ರಾಶಿ ಹಲಸಿನ ಕಾಯಿ, ಹಣ್ಣು. ಹಲಸಿನ ಕಾಯಿಯನ್ನು ದೊಡ್ಡ ದೊಡ್ಡ ಕಡಾಯಿಯಲ್ಲಿ ಬೇಯಿಸಿ, ಉಪ್ಪು ಹುಳಿ ಖಾರ ಹಾಕಿಕೊಟ್ಟರೆ ಒರಳಲ್ಲಿ ಗುದ್ದಿ ಹಪ್ಪಳಕ್ಕೆ ಅಣಿಮಾಡುವುದು ನಮ್ಮ ಬಾಲ್ಯದ ಆಟದಲ್ಲೊಂದು. ಹಲಸಿನ ಹಣ್ಣು ಪಂಥ ಕಟ್ಟಿ  ಹೊಟ್ಟೆ ಬಿರಿಯುವಂತೆ ತಿಂದರೂ ಅಕ್ಷಯವಾದ ಹಣ್ಣುಗಳು ಕೊನೆಗೆ ಸೇರುವುದು ದನಗಳ ಹೊಟ್ಟೆಗೆ. ಇನ್ನೆಷ್ಟೋ ಹಣ್ಣುಗಳು ತೋಟದಲ್ಲಿಯೇ ಬಿದ್ದು ಕೊಳೆತು ಹೋಗುವುದೂ ಉಂಟು. ಇವೆಲ್ಲಾ ಬಕ್ಕೆಯ ವಿಷಯವಾದರೆ ಇಂಬವನ್ನಂತೂ ಕೇಳುವವರೇ ಇರಲಿಲ್ಲ.

ಕೆಲವೆಡೆ ಪರಿಸ್ಥಿತಿ ಬದಲಾಗಿದೆಯಾದರೂ ಹಲಸು ಬಡವರ ಆಹಾರವಾಗಿಯೇ ಹೆಚ್ಚಿನ ಪ್ರಚಾರ ಪಡೆಯದೇ ತೋಟದಲ್ಲೇ ಕೊಳೆಯುವ ಸ್ಥಿತಿ ಇಂದೂ ಮುಂದುವರೆದಿದೆ. ಜನರಿಗೆ ಹಲಸಿನ ವೈವಿಧ್ಯಮಯ ತಿನಿಸು, ರೈತರಿಗೆ ಮೌಲ್ಯವರ್ಧನೆಯನ್ನು ತಿಳಿಸುವ ಸಲುವಾಗಿಯೇ ಕದಂಬ ಸಂಸ್ಥೆಯು ಶಿರಸಿಯಲ್ಲಿ ಇದೇ ತಿಂಗಳ ೧೧, ೧೨ರಂದು ಹಲಸು ಮೇಳವನ್ನು ಆಯೋಜಿಸಿತ್ತು. ಒಂದೇ ಕಡೆ ದೊರಕಬಹುದಾದ ಹಲಸಿನ ವಿವಿಧತೆಯನ್ನು ನೋಡುವ ಸಲುವಾಗಿ ನನ್ನ ಸವಾರಿಯೂ ಅತ್ತ ಕಡೆ ಧಾವಿಸಿತು.

೧೦ರ ರಾತ್ರಿ ಬೆಂಗಳೂರಿನಿಂದ ಹೊರಟ ಬಸ್ಸು ಶನಿವಾರ ಬೆಳಿಗ್ಗೆ ೬ಗಂಟೆಗೆಲ್ಲಾ ಶಿರಸಿ ತಲುಪಿಸಿತ್ತು. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆಗೆ ಹಲಸಿನ ಖಾದ್ಯಗಳ ನೆನಪು ಸಂಗಾತಿಯಾಗಿತ್ತು. ಮೊದಲು ತಲುಪಿದ್ದೇ ಮೇಳ ನಡೆಯುವ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ. ಸಂಜೆ ೪ ಗಂಟೆಗೆ ಉದ್ಘಾಟಿಸಲ್ಪಡುವ ಮೇಳಕ್ಕೆ ಅಷ್ಟು ಮುಂಚೆ ಯಾರು ಬಂದಿರುತ್ತಾರೆ ಎಂದುಕೊಂಡರೂ ಆಗಲೇ ಛತ್ರವನ್ನು ಶುಚಿಗೊಳಿಸುವವರು, ಮೇಳದಲ್ಲಿ ಭಾಗವಹಿಸಲಿರುವ ರಾಜ್ಯದ ನಾನಾ ಭಾಗದವರು ನೆರೆದಿದ್ದರು. ಅಡುಗೆ ಮನೆಯ ಹೊರಗೆ ಇರಿಸಲಾಗಿದ್ದ ಹಲಸಿನ ರಾಶಿಯಂತೂ, ಮುಂದೆ ತಿನ್ನಲು ಸಿಗಬಹುದಾದ ಖಾದ್ಯಗಳ ಬಗ್ಗೆ ಯೋಚಿಸುವಂತೆ ಮಾಡಿತು. ಬೆಳಗ್ಗಿನ ಕಾರ್ಯಕ್ರಮ ಮುಗಿಸುವ ಸಲುವಾಗಿ ನಾನು ಹೊಟೆಲೊಂದರ ಕಡೆ ಹೆಜ್ಜೆ ಹಾಕಿದೆ.

೯ ಗಂಟೆಯ ಸಮಯಕ್ಕೆ ತಿಂಡಿ ಸ್ನಾನಾದಿಗಳನ್ನು ಮುಗಿಸಿ, ನಗರ ಪರಿಭ್ರಮಣೆ ಮುಗಿಸಿ, ಮತ್ತೆ ಮೇಳದ ಸ್ಥಳಕ್ಕೆ ಹಾಜರ್. ಆಗಲೇ ಹಲಸನ್ನು ಕಡಿಯುವವರ ಗುಂಪು, ಸೊಳೆ ಬಿಡಿಸುವವರ ಗುಂಪು, ಬೀಜ ಬಿಡಿಸುವವರ ಗುಂಪು, ಅಡುಗೆ ತಯಾರಿಸುವವರ ಗುಂಪು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಸ್ವಾಭಾವಿಕವಾಗಿಯೇ ನನ್ನ ಒಲವು ಸೊಳೆ ಬಿಡಿಸುವವರ ಕಡೆ ಹರಿದು ಅವರ ಚಿತ್ರ ತೆಗೆಯಲಾರಂಭಿಸಿದೆ. ಚಿತ್ರ ತೆಗೆದಿದ್ದಕ್ಕೆ ಪ್ರತಿಫಲವಾಗಿ ಕೆಲವು ಸೊಳೆಗಳು ನನ್ನ ಹೊಟ್ಟೆಯ ಪಾಲಾದವು.
ಬೀಜ ಸುಲಿಯುತ್ತಿರುವವರು ಕೇರಳದವರೆಂದೂ, ಸುಲಿಯುತ್ತಿರುವುದು ಪಾಯಸಕ್ಕೆಂದೂ ತಿಳಿಯಿತು. ಈ ತಿಳಿವನ್ನು ಪಡೆಯುವಲ್ಲಿ ಕೆಲವು ದುರ್ದೈವಿ ಬೀಜಗಳು ಪಾಯಸದ ಕಡಾಯಿಯ ಬದಲು ನನ್ನ ಉದರ ಗುಹೆ ಹೊಕ್ಕವು. ಅಡುಗೆ ಮನೆಯಲ್ಲಿ ಇಡ್ಲಿಗೆ ಹಿಟ್ಟನ್ನು ರುಬ್ಬುತ್ತಿದ್ದರಾದರೂ ಅವ್ಯಾವುದೂ ಈಗಲೇ ತಿನ್ನಲು ಬರುವುದಿಲ್ಲವೆಂದು ಅರಿತು ಹೊರ ನಡೆಯಬೇಕಾಯಿತು.


From ಹಲಸಿನ ರಾಶಿ- Sirsi Halasu Mela


ಸ್ವಲ್ಪ ಬದಲಾವಣೆ ಇರಲೆಂದು, ಅದಕ್ಕಿಂತಲೂ ಮುಖ್ಯವಾಗಿ ತಿಂದಿದ್ದು ಅರಗಲೆಂದು ಪಕ್ಕದಲ್ಲಿಯೇ ಇರುವ ಕೃಷಿ ಕೇಂದ್ರದ ಕಡೆಗೆ ಹೊರಟೆ. ಕೇಂದ್ರದಲ್ಲಿ ಮಹಿಳಾ ಕಾರ್ಮಿಕರೊಬ್ಬರು ಎದುರಾದರು. "ಇವತ್ತು ರಜೆ, ಏನಾಗ್ಬೇಕಿತ್ತು", ಎಂದು ಪ್ರಶ್ನಿಸಿದರು. ಉತ್ತರವಾಗಿ, "ಏನೂ ಇಲ್ಲ ಸುಮ್ನೆ ಬಂದೆ.. ಕಂಡ್ಕಂಡ್ ಹೋಗ್ವಾ ಅಂತ" ಅಂದೆ. "ಏನು ಗಿಡ ಇದೆ ಇಲ್ಲಿ, ಅಪ್ಪೆ ಗಿಡ ಸಿಗುತ್ತಾ..", ನನ್ನ ಪ್ರಶ್ನೆಗೆ ಅಕೆ, "ಸಧ್ಯಕ್ಕೆ ಇಲ್ಲಿ ಕ್ರೋಟಾನ್ ಗಿಡ ಇದೆ, ಇವತ್ತು ಕೊಡಲಾಗುವುದಿಲ್ಲ... ಸೋಮವಾರ ಬನ್ನಿ" ಎಂದು ನನ್ನ ಸಾಗಹಾಕಿದರು. ತಿಂದದ್ದು ಅರಗಿಸಿಕೊಳ್ಳುವ ನನ್ನ ಯತ್ನ ವಿಫಲವಾದರೂ ಪಕ್ಕದ ಅಂಗಡಿಯಲ್ಲಿದ್ದ ಬೀಡ ಇದಕ್ಕೆ ಸಹಾಯ ಮಾಡಿತು.

ಮತ್ತೆ ಮೇಳ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ. ಹಲಸಿನ ಉತ್ಪನ್ನ ಮಾರಾಟಗಾರರ ಮಳಿಗೆ ಅದಾಗಲೇ ಆರಂಭಗೊಂಡಿತ್ತು. ಹೀಪನಳ್ಳಿಯ ಎಸ್.ವಿ. ಹೆಗಡೆಯವರು, "ಅನ್ನಪೂರ್ಣ ಹೋಂ ಪ್ರಾಡಕ್ಟ್ಸ್"  ಹೆಸರಿನಲ್ಲಿ ಕಳೆದ ೮ ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ ಮಾಡಿ ಸ್ಥಳೀಯ ಮಾರುಕಟ್ಟೆ ಕಂಡುಕೊಂಡಿದ್ದಾರೆ. ವರ್ಷದಲ್ಲಿ ೩ ತಿಂಗಳು, ದಿನವೊಂದಕ್ಕೆ ಸರಾಸರಿ ೨೦-೨೫ ಹಲಸಿನ ಕಾಯಿಯನ್ನು ಚಿಪ್ಸು, ಸೊಳೆ ಉಂಡೆ ಕಾಳು, ಹಪ್ಪಳ ಅಲ್ಲದೇ ಸೊಳೆಯನ್ನು ಒಣಗಿಸಿಯೂ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳ ನೆರವಿಲ್ಲದೇ ನೇರ ಮಾರಾಟ. ಕೊಂಡ ಖಾರದ ಚಿಪ್ಸು ರುಚಿಯಾಗಿತ್ತು. ಆಸಕ್ತರು ಫೋನ್ ಮೂಲಕ (08384-224001) ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಹಲಸಿನ ಬೀಜದ ಖಿಚಡಿಯ ಹೊರತಾಗಿ ಪಕ್ಕದ ಇನ್ನೊಂದು ಮಳಿಗೆಯಲ್ಲಿಯೂ ಇದೇ ಉತ್ಪನ್ನಗಳಿದ್ದವು. ಬೀಜವನ್ನು ಉಪ್ಪಿನೊಂದಿಗೆ ಬೇಯಿಸಿ, ಚೂರಿ ಮೆಣಸಿನೊಂದಿಗೆ ನುರಿದು, ಲಿಂಬೇ ಹಣ್ಣು ಹಾಕಿದರೆ ಖಿಚಡಿ ರೆಡಿ. ಅಂಗೈ ತುಂಬಾ ತುಂಬಿದ ಖಿಚಡಿ ಸವಿಯುತ್ತಾ ಮುಂದಿನ ಮಳಿಗೆಯತ್ತ ಹೊರಟೆ.


From ಎಸ್.ವಿ. ಹೆಗಡೆ - Sirsi Halasu Mela


ಕೇರಳದ ಸುನೀಶ್ ನಮ್ಮಲ್ಲಿ ತೆರೆವಿದ್ದ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ತಂದಿದ್ದರು. ಹಣ್ಣಿನ ಚಾಕಲೇಟ್, ಹಣ್ಣಿನ ಬರ್ಫಿ, ಬೀಜದ ಚಟ್ನಿ ಪುಡಿ, ಬೀಜದ ಹಿಟ್ಟು, ಒಣಗಿಸಿದ ಹಣ್ಣು, ಒಣಗಿಸಿದ ಗುಜ್ಜೆ, ಸುಟ್ಟ ಬೀಜ ಇವುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯತ್ನ ನೂತನ. ಚಾಕಲೇಟು ಕೊಂಡು ತಿಂದರೂ ನನಗೆ ಅದರ ರುಚಿ ಹಿಡಿಸಲಿಲ್ಲ.  ಬೆಂಗಳೂರಿನಲ್ಲೂ ಹಲಸಿನ ಉತ್ಪನ್ನದ ಪರಿಚಯಕ್ಕೆ ಆಗಾಗ ಭೇಟಿ ನೀಡುತ್ತಾರೆ. IT campusಗಳಲ್ಲಿ ಹಲಸನ್ನು ಪರಿಚಯಿಸುವ ಕನಸು ಅವರದ್ದು. ಆಸಕ್ತರು email ಮುಖಾಂತರ (cdsuneesh[at]gmail.com) ಸಂಪರ್ಕಿಸಬಹುದು.


From ಸುನೀಶ್- Sirsi Halasu Mela


ದೊಡ್ನಳ್ಳಿಯ ಅನಂತ ಲಕ್ಷ್ಮಣ ಹೆಗಡೆ ತಮ್ಮ ತೋಟದ ಹಲಸಿನ ಹಲವು ಮಾದರಿಯನ್ನು ಡಬ್ಬಿಯಲ್ಲಿ ತುಂಬಿಸಿ ಮಾರಾಟಕ್ಕಿಟ್ಟಿದ್ದರು. ಸಂಪಿಗೆ ಎಸಳಿನ ಬಣ್ಣದ ಚಂದ್ರ ಬಕ್ಕೆ ಇವುಗಳ ನಡುವೆ ಎದ್ದು ಕಾಣಿಸುತ್ತಿತ್ತು. ಹಲಸಿನ ಹಣ್ಣಿನ ರುಚಿಯಾದ ಜ್ಯಾಮ್ ಇಲ್ಲಿ ಕಾಣಸಿಕ್ಕಿದ ಇನ್ನೊಂದು ಮೌಲ್ಯವರ್ಧಿತ ಉತ್ಪಾದನೆ. ಬ್ರೆಡ್ಡು, ದೋಸೆ, ಚಪಾತಿ ಜೊತೆ ಇವನ್ನು ತಿನ್ನಬಹುದಾದರೂ ಹಾಗೆಯೇ ತಿನ್ನಲೂಬಹುದು ಎಂದು ನನ್ನ ನಾಲಗೆ ತಿಳಿಸಿದೆ.


From ಅನಂತ ಲಕ್ಷ್ಮಣ ಹೆಗಡೆ-Sirsi Halasu Mela


ಹಲವು ವರ್ಷಗಳ ನಂತರ ನಮ್ಮ ಕುಟುಂಬದವರೊಬ್ಬರ ದರ್ಶನ ಈ ಮೇಳದಲ್ಲಿ ಲಭಿಸಿತು. ಅವರೂ ಬೆಂಗಳೂರಿನಿಂದ ಮೇಳದ ಸಲುವಾಗಿಯೇ ಪತಿಯೊಡನೆ (ಸಿದ್ಧಾರ್ಥ) ಬಂದಿದ್ದರು. "ನಾ ಇವ್ರಿಗೊಬ್ರಿಗೇ ಹಲ್ಸಿನ್ ಹುಚ್ ಅಂದ್ಕಂಡಿದ್ದೆ", ನನ್ನ ಉದ್ದೇಶ ತಿಳಿದ ಮೇಲೆ ಆಕೆಯ ಉದ್ಗಾರ. ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೆಬ್ರಿಯ ಬಳಿಯ ತಮ್ಮ ತೋಟದಲ್ಲಿ ಹಲಸಿನ ವಿವಿಧ ತಳಿ ಬೆಳೆಸುವ ಹಂಬಲ ಸಿದ್ಧಾರ್ಥರದ್ದು. ಕೇರಳ, ತಮಿಳುನಾಡೂ ಸೇರಿದಂತೆ ರಾಜ್ಯದ ಹಲವೆಡೆ ಸುತ್ತಾಡಿ ಇದುವರೆಗೆ ೮೦ ಸಸಿಗಳನ್ನು ತಮ್ಮ ತೋಟದಲ್ಲಿ ನಾಟಿ ಮಾಡಿಸಿದ್ದಾರೆ. ಇಲ್ಲಿಯೂ ಗಿಡ ಸಂಗ್ರಹಿಸುವ ಆಸೆಯಿಂದ ಬಂದಿದ್ದರು. ತಳಿಯ ಹೆಸರು ಗೊತ್ತಿಲ್ಲವಾದರೂ ಇಬ್ಬರೂ ಸೇರಿ ಕಸಿ ಮಾಡಿದ ಕೆಲವು ಸಸಿಗಳನ್ನು ಕೊಂಡೆವು. "ಗಿಡದ ಜೊತೆ ಹಣ್ಣಿನ ಮಾದರಿ ಇರಿಸಿದರೆ ಕೊಳ್ಳಲು ಅನುಕೂಲ. ಹೆಗಡೆಯವರ ಮನೆಯ ಬಕ್ಕೆ ಅಂತ ಹೇಳಿದ್ರೆ ನಮಗೆ ಹೇಗೆ ತಿಳಿಯುತ್ತೆ?  ", ಮಾರಾಟದಲ್ಲಿ ಸಸಿಯನ್ನು ಮಾತ್ರ ಇರಿಸಿದ್ದನ್ನು ಕಂಡು ಸಿದ್ಧಾರ್ಥರ ಪ್ರತಿಕ್ರಿಯೆ. ತಳಿಯಲ್ಲೂ ವೈವಿಧ್ಯತೆ ಇರದಿದ್ದನ್ನು ನೋಡಿ ಆ ಬಗ್ಗೆ ಪ್ರಶ್ನಿಸಿದಾಗ, "ಕಾರ್ಯಕ್ರಮ ಸಂಜೆ ಆರಂಭ, ದಕ್ಷಿಣ ಕನ್ನಡದಿಂದ ಕೆಲವು ತಳಿ ಬರಲಿಕ್ಕಿದೆ" ಎಂಬ ಉತ್ತರದಿಂದ ನಿರಾಶರಾದರು. "ತಮ್ಮ ಊರು ದಕ್ಷಿಣ ಕನ್ನಡಕ್ಕೆ ಬಹಳ ಹತ್ತಿರ, ಅಲ್ಲಿಂದಲೇ ಗಿಡ ಬರುವುದಾದರೆ  ಇಷ್ಟು ದೂರದಿಂದ ತೆಗೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಮೌಲ್ಯ ವರ್ಧನೆಯ ಜೊತೆಗೆ ಹಣ್ಣಿಗೂ, ನಾಟಕ್ಕೂ ಒದಗುವ ತಳಿಯನ್ನು ಗುರುತಿಸಿ ಬೆಳೆಸುವುದೂ ಮುಖ್ಯ." ತಮ್ಮ ಅಭಿಪ್ರಾಯ ತಿಳಿಸಿದರು.


From ಹಲಸಿನ ಸಸಿಗಳು - Sirsi Halasu Mela


ಆಗಲೇ ಹಲಸಿನ ಅಡುಗೆಯ ಸ್ಪರ್ಧೆಗೆ ಭಾಗವಹಿಸುವವರು ಬಗೆ ಬಗೆಯ ತಿನಿಸುಗಳನ್ನು ಜೋಡಿಸುತ್ತಿದ್ದರು. ಹಣ್ಣಿನ ಪಾಯಸ,  ಶ್ಯಾವಿಗೆ, ಪಡ್ಡು, ಜಾಮೂನು, ಖರ್ಜಿಕಾಯಿ, ಸಜ್ಜಪ್ಪ, ಜ್ಯಾಮ್, ರೊಟ್ಟಿ, ಕಡಬು, ಹಪ್ಪಳ, ಕೇಸರಿ ಬಾತು, ಕೇಕ್, ಹಾಲುಬಾಯಿ, ಕಾಯಿಯ ಬೊಂಡ, ಸೂಪು, ಖಾರದ ಹೋಳಿಗೆ, ಚಿಪ್ಸು, ಪಲ್ಯ, ಹುಳಿ ಗೊಜ್ಜು, ಖಾರ ಶೇವ್, ಸೋಂಟೆ, ಎರವು ಹಾಗೂ ಬೀಜದ ಚಕ್ಕುಲಿ, ಚಟ್ನಿಪುಡಿ, ಕೋಡುಬಳೆ, ಪಚ್ಚಡಿ, ಕಟ್ಲೆಟ್, ಪಾಯಸ, ಪಕೋಡ, ಉಂಡ್ಲೇ ಕಾಳು ಇನ್ನೂ ಅನೇಕ ಬಗೆಯ ತಿಂಡಿಗಳು
ತೀರ್ಪುಗಾರರ ನಿರ್ಣಯಕ್ಕೆ ಕಾದಿದ್ದವು. ಇವನ್ನೆಲ್ಲಾ ನೋಡಿ ತೀರ್ಪುಗಾರರ ಮೇಲೆ ಸಹಜವಾಗಿಯೇ ಅಸೂಯೆ ಮೂಡಿತು.


From ಹಲಸಿನ ಜಾಮೂನು - Sirsi Halasu Mela


ಆಗಲೇ ಸಮಯ ೧ ಆಗಿತ್ತು. ಮಧ್ಯಾಹ್ನ ಹಲಸಿನ ವಿಶೇಷ ಭೋಜನ ಪ್ರಮುಖ ಆಕರ್ಷಣೆಯಾಗಿತ್ತು. ಸುಮ್ಮನೇ ಊಟಕ್ಕೆ ಕಾಯುತ್ತಾ ಸಮಯ ವ್ಯರ್ಥಮಾಡುವ ಬದಲು ಮಾರಾಟಕ್ಕಿಟ್ಟಿದ್ದ ಹಲಸಿನ ಹಣ್ಣಿನ ಐಸ್-ಕ್ರೀಮ್ ಕಬಳಿಸಿದ್ದಾಯ್ತು. ಬಡಿಸುವವರಿಗೆ ಸಿದ್ಧಾರ್ಥ್ ಹುರಿದುಂಬಿಸಿ ೧:೩೦ರ ಸಮಯಕ್ಕೆ ಊಟ ಹಾಕಿಸುವಲ್ಲಿ ಸಫಲರಾದರು. ಹಲಸಿನ ಇಡ್ಲಿ, ಪಲ್ಯ, ಹುಳಿ, ಮಜ್ಜಿಗೆ ಹುಳಿ, ಅಪ್ಪೇ ಹುಳಿಯೊಂದಿಗೆ ಬೆರೆಸಿದ್ದ ಹಲಸಿನ ಸೊಳೆ, ಹಲಸಿನ ಪಾಯಸ ಊಟದ ಆಕರ್ಷಣೆಯಾಗಿತ್ತು. ಅಡಿಕೆಹಾಳೆಯಲ್ಲಿ ಎಲ್ಲಾ ಅಡುಗೆಯನ್ನು ತೃಪ್ತಿಯಿಂದ ಸವಿದು, ಕೊಂಡ ಗಿಡಗಳನ್ನು ಸಿದ್ಧಾರ್ಥರ ಕಾರಿಗೇರಿಸಿ ಊರಿನ ಕಡೆ ಹೊರಟೆವು. ಸಮಯದ ಅಭಾವವಿದ್ದಿದ್ದರಿಂದ ಸಂಜೆಯವರೆಗೂ ಇದ್ದು ಫಡ್ರೆಯವರ ಮಾತನ್ನು ಕೇಳಲು ಅವಕಾಶ ಸಿಗಲಿಲ್ಲ.

ರಾತ್ರಿ ೯ ಗಂಟೆಗೆ ನಮ್ಮೂರು ತಲುಪಿ ಮನೆಗೆ ಹೋದಾಗ, ಹೇಳದೇ ಬಂದಿದ್ದಕ್ಕೆ ಮನೆಯವರಲ್ಲಿ ಸಂತೋಷ, ಆಶ್ಚರ್ಯ. "ಅನ್ನ ಖಾಲಿ ಮಾರಾಯ, ಹಲ್ಸಿನ್ ಇಡ್ಲಿ ಇತ್ ತಿಂತ್ಯಾ" ಎಂಬ ಅಮ್ಮನ ಪ್ರಶ್ನೆಗೆ ಮುಗುಳ್ನಕ್ಕೆ.

ಇನ್ನಷ್ಟು ಚಿತ್ರಗಳು: Sirsi Halasu Mela

4 comments:

  1. ಪಾಲ,
    ನಿಮ್ಮ ಲೇಖನ ಓದುತ್ತಾ ನನಗೆ ನಿಮ್ಮ ಮೇಲೂ ಅಸೂಯೆ ಬಂತ್ರೀ! ಬಲ್ಲವನೆ ಬಲ್ಲ ಹಲಸಿನ ರುಚಿಯ!

    ReplyDelete
  2. ಈ ಸಲ ಥಾಯ್ಲ್ಯಾಂಡ್ಅಲ್ಲಿ ಇದ್ದು ಹಲಸಿನ ತಿಂಡಿ ತಪ್ಪಿ ಹೋಯ್ತು. ಇಲ್ಲಿ ಒಂದು ಡುರಿಯನ್ ಅಂತ ಒಂದು ಹಣ್ಣು ಸಿಗುತ್ತದೆ. ನೋಡಲು ಹಲಸೇ. ಆದರೆ ಹಲಸಿಗಿರುವುದಕ್ಕಿಂತ ಉದ್ದದ ಮುಳ್ಳುಗಳು. ಹಣ್ಣು ಹಲಸಿಗಿಂತ ಸಣ್ಣದು. ಸ್ವಲ್ಪ ಕಡಕ್ ರುಚಿ. ಲೋಕಲ್ ಅಂಗಡಿಗಳಲ್ಲಿ ಸಿಗುವ ಚಿಪ್ಸ್ ಬಹಳ ಚೆನ್ನಾಗಿದೆ. ಹಣ್ಣಿನ ಜಾತಿಯ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.http://en.wikipedia.org/wiki/Durian

    ReplyDelete
  3. ಪಾಲಚಂದ್ರರೇ ಮೊದಲಿಗೆ ನಿಮಗೆ ಧನ್ಯವಾದವನ್ನ ಹೇಳಬೇಕು. :) ಆಮೇಲೆ ಸ್ವಲ್ಪ ಸಿಟ್ಟಾಗಬೇಕು ನಿಮ್ಮಮೇಲೆ :) ಉತ್ತಮವಾದ ಚಂದ ಚಂದದ ಫೋಟೊಗಳು ಅದರೊಟ್ಟಿಗೆ ಉತ್ತಮ ಮಾಹಿತಿಯನ್ನ ನೀಡಿದ್ದೀರಿ. “ಅಡುಗೆ ಮನೆಯಲ್ಲಿ ಇಡ್ಲಿಗೆ ಹಿಟ್ಟನ್ನು ರುಬ್ಬುತ್ತಿದ್ದರಾದರೂ ಅವ್ಯಾವುದೂ ಈಗಲೇ ತಿನ್ನಲು ಬರುವುದಿಲ್ಲವೆಂದು ಅರಿತು ಹೊರ ನಡೆಯಬೇಕಾಯಿತು “ ಇಂತಹ ಹಾಸ್ಯದ ವಾಕ್ಯವನ್ನ ಬಳಸಿ ಲೇಖನವನ್ನ ಸುಂದರವಾಗಿಸಿದ್ದೀರಿ. ಜನರಿಗೆ ಹಲಸಿನ ಮೌಲ್ಯವರ್ಧನೆಯನ್ನ ತಿಳಿಸುವ ಸಲುವಾಗಿ ಕದಂಬ ಸಂಸ್ಥೆಯು ಶಿರಸಿಯಲ್ಲಿ ಆಯೋಜಿಸುತ್ತಿರುವ ಹಲಸಿನ ಮೇಳದ ಮಾಹಿತಿ ಹಲವು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನಮ್ಮ ಮನೆಯಲ್ಲೇ ನಡೆವ ನಮ್ಮ ಜೀವನದ ಉಸಿರಾದ ಕೃಷಿ ಸಂಬಂಧಿ ಒಂದು ಮೇಳಕ್ಕೆ ಹೋಗಲಾಗಲಿಲ್ಲವಲ್ಲ ಅನ್ನುವ ಕೊರಗು ನನ್ನಲ್ಲಿದೆ. ಅಂತೆಯೇ ಈ ವಿಷಯ ನನ್ನ ಹಲವು ಸಹೃದಯೀ ಮಿತ್ರರನ್ನೂ ಕಾಡುತ್ತಿದೆ. ನಿಮ್ಮ ಉತ್ಸಾಹ ದೊಡ್ಡದು. ಇಂತಹ ಉಪಯುಕ್ತ ಮೇಳಗಳಿಗೆ ಬೇಟಿ ಕೊಟ್ಟು ಅದರ ಅನುಭವವನ್ನ ಬ್ಲಾಗ್ ಬಾಂದವರಿಗೆ ಹಂಚುತ್ತಿದ್ದೀರಿ. ಕುಳಿತಲ್ಲಿಯೇ ಕೀಬೋರ್ಡನ್ನ ಕುಟ್ಟಿ ಅದರಿಂದ ಹೊರಬರುವ ನಾದವೇ ನನ್ನ ಅತ್ಯುತ್ತಮ ಲೇಖನ ಅಂತ ಬೀಗಿ ಕಾಮೆಂಟಿಗಾಗಿ ಕಾದು ಕುಳಿತುಕೊಳ್ಳುವ ಬದಲು ಇಂತಹ ಉಪಯುಕ್ತ ಲೇಖನವನ್ನ ಮಾಹಿತಿಯನ್ನ ಫೋಟೋವನ್ನ ಬ್ಲಾಗ್ ಬಾಂದವರಿಗೆ ಹಂಚಬೇಕೆಂಬ ಆಸೆ ನನ್ನಲ್ಲೂ ನಮ್ಮಲ್ಲೂ ಚಿಗುರೊಡೆಯುವದಕ್ಕೆ ನೀವು ಕಾರಣೇಕರ್ತರಾಗಿದ್ದೀರಿ. ಅಲ್ಲದೇ “ಬೆಂಗಳೂರಿನಲ್ಲಿ ಕೆಂಪಕ್ಕಿ ಮೇಳ “ “ಸಿರಿಧಾನ್ಯ ಮೇಳ “ ಇಂತಹ ಕೃಷಿ ಸಂಬಂಧಿ ಮೇಳಗಳ ಬಗ್ಗೆ ಉಪಯುಕ್ತ ಚಿತ್ರ ಸಹಿತ ಲೇಖನವನ್ನ ಕೊಟ್ಟಿದ್ದೀರಿ. ಧನ್ಯವಾದಗಳು ನಿಮಗೆ. ನಿಮ್ಮ ಸುಂದರ ಶೈಲಿಯ ಬರವಣಿಗೆಯಿಂದ ನಮ್ಮ ಬಾಯಲ್ಲಿ ನೀರೂರಿಸಿ ಅಲ್ಲದೇ ಉತ್ತಮ ಚಿತ್ರಗಳಿಂದ ಹಲಸಿನ ಹಣ್ಣಿನ ಖಾದ್ಯವನ್ನ ಕನ್ನಡಿ ಗಂಟಿನಂತೆಯೆ ಕಂಪ್ಯೂಟರ ಪರದೆಮೇಲೆ ಬರುವಂತೆ ಮಾಡಿ, ನಮ್ಮಲ್ಲಿ ಆಸೆ ಹುಟ್ಟಿಸಿದ್ದಕ್ಕೆ ನಿಮ್ಮಮೇಲೊಂದಿಷ್ಟು ಕೋಪವೂ ಇದೆ. ಹಾಗಂತ ಕೆಲವರು ನಿಮ್ಮನ್ನ ಈಗಾಗಲೇ ವಿಚಾರಿಸಿಕೊಂಡೂ ಆಗಿದೆ. ಉಪಯುಕ್ತ ಸುಂದರ ಲೆಖನ ಮತ್ತು ಚಿತ್ರಕ್ಕಾಗಿ ನಿಮಗೆ ಮತ್ತೊಮ್ಮೆ ಧನ್ಯವಾದಗಳು.

    ಪ್ರೀತಿಯಿಂದ
    ಮಹಾಬಲಗಿರಿ ಭಟ್ಟ

    ReplyDelete
  4. PALA navare modalu nimma mele tumba Hotte kichhu bartide, eradanedaagi tavu istu swarthigalu endu tilidiraliia, idu yake embudu tamage eegaagale gottagirabeku... alva.. ? iarali baraha tumba chennagi moodi bandide..

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)