Tuesday, May 10, 2011

ಸಾಂಪ್ರದಾಯಿಕ ಕೃಷಿಯಿಂದ ಸಹಜ ಕೃಷಿಯೆಡೆಗೆ

DSC_2231
ಬೇಸಿಗೆಯಲ್ಲಿ ನೀರು ಹನಿಸುವುದು ಬಿಟ್ಟು ಬೇರೆ ಆರೈಕೆಯಿಲ್ಲದ ತೆಂಗಿನ ತೋಟ.


“ಐದು ವರ್ಷದ ಹಿಂದೆ ೧೫ ದೇಸೀ ತಳಿಯ ನಿಂಬೆ ಗಿಡಗಳನ್ನು ನಾಟಿ ಮಾಡಿಸಿದ್ದೆ. ಕೊಟ್ಟಿಗೆ ಗೊಬ್ಬರ, ನೀರು, ಆರೈಕೆಯಲ್ಲಿ ಬೆಳೆದ ಗಿಡಗಳು ಸುಮಾರು ೨ ವರ್ಷ ಚೆನ್ನಾಗಿಯೇ ಫಸಲು ಕೊಟ್ಟಿತು. ಮುಂದಿನ ದಿನಗಳಲ್ಲಿ ಗಿಡಗಳು ಒಂದೊಂದಾಗಿ ಸೊರಗಲಾರಂಭಿಸಿದವು. ಇದೇ ಸಮಯದಲ್ಲಿ ಬೇಸಾಯ ಕಷ್ಟವೆಂದು ನನ್ನ ೬.೫ ಎಕರೆ ತೋಟವನ್ನು ಮಾರಲು ಹೊರಟಿದ್ದೆ. ಆದರೆ ಬೇಲಿಯ ಬದಿಯಲ್ಲಿದ್ದ ನಾನೇ ನಾಟಿ ಮಾಡಿ ಮರೆತಿದ್ದ ಗಿಡವೊಂದು ಕೃಷಿಯ ಬಗೆಗಿನ ನನ್ನ ನೋಟವನ್ನು ಬದಲಾಯಿಸಿದು. ಆರೈಕೆಯಲ್ಲಿ ಬೆಳೆಸಿದ್ದ ನಿಂಬೆ ಗಿಡಗಳು ಸೊರಗಿದ್ದರೆ ಬೇಲಿಯ ಬದಿ ನೆಟ್ಟು ಮರೆತಿದ್ದ ನಿಂಬೆಗಿಡ ಚೆನ್ನಾಗಿಯೇ ಬೆಳೆದಿತ್ತು ಅಲ್ಲದೇ ಫಸಲೂ ಚೆನ್ನಾಗಿಯೇ ಕೊಡಲಾರಂಭಿಸಿತ್ತು.”  ರವಿಯವರು (೪೬) ಸಹಜ ಕೃಷಿಯತ್ತ ಒಲವು ತೋರಿಸಲು ಕಾರಣವಾದ ಘಟನೆಯನ್ನು ತಿಳಿಸಿದರು.

DSC_2229
ಹೊಸ ಸದಸ್ಯನ ಸಂಭ್ರಮದಲ್ಲಿ ರವಿ

ಬೆಂಗಳೂರಿನಲ್ಲಿ ಸಿಮೆಂಟ್ ವ್ಯಾಪಾರಿಯಾಗಿದ್ದ ರವಿಯವರು ೨೫ ವರ್ಷಗಳ ಹಿಂದೆ ಎಕರೆಗೆ ೧೫,೦೦೦ ರೂಪಾಯಿಗಳಂತೆ  ಈಗಿನ ಬೆಂಗಳೂರು-ಕನಕಪುರ ರಸ್ತೆಯಲ್ಲಿನ ಬೋಳಾರೆ ಎಂಬ ಹಳ್ಳಿಯಲ್ಲಿ ೬.೫ ಎಕರೆ ಜಮೀನು ಖರೀದಿಸಿದ್ದರು. ಕಲ್ಲು ಬಂಡೆಗಳಿದ್ದ ಜಾಗವನ್ನು ಹಸನುಗೊಳಿಸಿ, ಕೆಂಪು ಮಣ್ಣಿನ ಸುಮಾರು ೫ ಎಕರೆ ಜಾಗದಲ್ಲಿ ದೇಸೀ ತೆಂಗಿನ ಸಸಿಗಳನ್ನು ನಾಟಿ ಮಾಡಿಸಿದ್ದರು. ನೆರಳಿಗಾಗಿ ಅಲ್ಲಲ್ಲಿ ಮಾವು, ಹಲಸು, ತೇಗ, ಸಿಲ್ವರ್ ಓಕ್ ಮರಗಳನ್ನೂ ಹಾಕಿಸಿದ್ದಾರೆ. ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಿ, ತೋಡಿನ ಮೂಲಕ ಹಾಯಿಸುತ್ತಾರೆ. ಸುಮಾರು ೫ ವರ್ಷಗಳ ಹಿಂದಿನವರೆಗೂ ಉಳುವುದು, ಗೊಬ್ಬರ ಹಾಕಿಸುವುದು ಒಂದು ಸಮಸ್ಯೆಯಾಗಿರಲಿಲ್ಲ. ನಂತರದ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ತೋಟವನ್ನು ನಿಭಾಯಿಸುವುದು ಕಷ್ಟವಾಗುತ್ತಾ ಹೋಯಿತು.

ಒಂದು ಕಡೆಯಲ್ಲಿ ಸಿಮೆಂಟ್ ವ್ಯಾಪಾರ, ಇನ್ನೊಂದು ಕಡೆ ದೂರದ ಹಳ್ಳಿಯಲ್ಲಿನ ಕೃಷಿ ನಿಭಾಯಿಸುವುದು ಕಷ್ಟವಾಗಿ ತೋಟ ಮಾರುವ ನಿರ್ಧಾರ ಕೈಗೊಂಡರು. ಆದರೂ ಹಲವು ವರ್ಷಗಳ ತೋಟದೊಂದಿಗಿನ ಒಡನಾಟ ಹೊಸ ಪ್ರಯೋಗಕ್ಕೆ ಪ್ರೇರೇಪಿಸುತ್ತಿತ್ತು. ನಿಂಬೇ ಗಿಡದ ಘಟನೆಯಲ್ಲದೇ, “ರಸ್ತೆ ಬದಿಯ ಮರಗಳು, ಕಾಡಿನಲ್ಲಿ ಬೆಳೆವ ಮರಗಳು ಯಾವುದೇ ಪೋಷಣೆಯಿಲ್ಲದೇ ಬೆಳೆಯಬಹುದಾದರೆ ನನ್ನ ತೋಟದಲ್ಲಿ ಯಾವುದೇ ಪೋಷಣೆಯಿಲ್ಲದೇ ಮರಗಳು ಏಕೆ ಬೆಳೆಯಲಾರದು? ”  ಎಂಬಂತಹ ವಿಚಾರ ಸರಣಿಯಿಂದಾಗಿ ತೋಟ ಮಾರುವ ಮೊದಲು ಸಹಜ ಕೃಷಿಯ ಪ್ರಯೋಗಕ್ಕೆ ಸಿದ್ಧರಾದರು.

ಮುಂದಿನ ವರ್ಷದಿಂದ ಉಳುವುದು ಗೊಬ್ಬರವುಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ತೋಟದಲ್ಲಿಯೇ ಸಿಗುವ ತೆಂಗಿನ ಸಿಪ್ಪೆ, ಗರಿಗಳು, ಹಸಿರು ಸೊಪ್ಪಿನಿಂದ ತೋಟದ ಮೇಲ್ಮಣ್ಣನ್ನು ಮುಚ್ಚತೊಡಗಿದರು. ತೋಟದಲ್ಲಿ ಕ್ರಮೇಣ ಗೆದ್ದಲಿನ ಚಟುವಟಿಕೆ ಹೆಚ್ಚಾಗತೊಡಗಿತು. ಒಣಗಿದ ಕಸ ಕಡ್ಡಿ ತಿಂದ ಗೆದ್ದಲು, ಮಣ್ಣಿನಲ್ಲಿ ಹುದುಗಿದ್ದ ಎರೆಹುಳು ಮಣ್ಣನ್ನು ಉತ್ತಂತೆಯೇ ಹದಗೊಳಿಸತೊಗಿತು. ಕೆಲವು ಕಡೆ ಮೀರಿ ಬೆಳೆದ ಕಳೆಗಳನ್ನು ಮಾತ್ರ ಸವರಬೇಕಾಗುತ್ತಿತ್ತು. ಮುಂದಿನ ವರ್ಷಗಳಲ್ಲಿ ಕಳೆಗಳ ನಿಯಂತ್ರಣಕ್ಕೆ ಆಡನ್ನು ಸಾಕಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ತಾವು ಬೆಂಗಳೂರಿನಲ್ಲಿ ನೆಲೆಸಿದ್ದರಿಂದ ತೋಟದಲ್ಲಿ ಗುಡಿಸಲು ಕಟ್ಟಿಸಿ  ಇಬ್ಬರು ಕೃಷಿ ಕಾರ್ಮಿಕರನ್ನು ಕರೆತಂದರು. ಅವರಿಗೆ ಸಾಕಷ್ಟು ಕೆಲಸ ಒದಗಿಸುವ ಸಲುವಾಗಿ ೫ ಆಡಿನ ಜೊತೆಗೆ ೨೦ ಕೋಳಿಗಳನ್ನೂ ಖರೀದಿಸಿದರು. ತೋಟದಲ್ಲಿ ಮಿತಿಮೀರಿ ಬೆಳೆಯುತ್ತಿರುವ ಗೆದ್ದಲು ಕೋಳಿಗಳಿಗೆ ಉತ್ತಮ ಆಹಾರ ಎಂಬುದು ಅವರ ಯೋಚನೆಯಾಗಿತ್ತು. ಗಿರಿರಾಜ, ಫೈಟರ್, ನಾಟಿ ಹೀಗೆ ಕೋಳಿಯ ಆಯ್ಕೆಯಲ್ಲೂ ವೈವಿಧ್ಯತೆ.

DSC_2233
ಕೋಳಿಗಳಿಗೆ ಆಹಾರವಾಗಬಲ್ಲ ಗೆದ್ದಲು

“ಈ ಜಾತಿಯ ಆಡು ನೋಡಿ (ಜಾತಿ ಯಾವುದೆಂದು ತಿಳಿಯಲಿಲ್ಲ), ಒಂದು ವರ್ಷದಲ್ಲಿ ೪೦ ಕೆ.ಜಿ.ಯವರೆಗೆ ಬೆಳೆಯುತ್ತದೆ. ೧೦,೦೦೦ ರೂಪಾಯಿಯಂತೂ ಖಂಡಿತ. ಅಲ್ಲದೇ ಆಡು ಬಂದ ಮೇಲೆ ಕಳೆ ಕೀಳಿಸಿದ್ದೇ ಇಲ್ಲ. ತೋಟದಲ್ಲೆಲ್ಲಾ ಸುತ್ತಾಡಿ ಕಳೆ ತಿಂದು ಗೊಬ್ಬರ ಕೂಡ ಹಾಕತ್ತದೆ. ಕೋಳಿಗಳೂ ಅಷ್ಟೆ; ೨೦ ತಂದಿದ್ದು ಈಗ ೫೦ ಆಗಿದೆ. ಬೆಳೆದ ಕೋಳಿಗೆ ಇಲ್ಲಿಯೇ ೨೫೦-೩೦೦ ರೂಪಾಯಿ ಧಾರಣೆಯಿದೆ. ಅಲ್ಲದೇ ಮೊಟ್ಟೆಯೂ ಆದಾಯದ ಮೂಲ.”, ರವಿ  ತಮ್ಮ ಉಪಕಸುಬಿನ ಪ್ರಯೋಜನವನ್ನು ತಿಳಿಸಿದರು. ಕಾರ್ಮಿಕರಿಗೆ, ಈ ಉಪಕಸುಬಿಗೆ (ತೋಟದ ಮೇವಿನ ಜೊತೆಗೆ  ಅಲ್ಪ ಪ್ರಮಾಣದಲ್ಲಿ ಪಶು ಆಹಾರವನ್ನೂ ಕೊಡುತ್ತಾರೆ.) ತಿಂಗಳಿಗೆ ೬೦೦೦ ರೂಪಾಯಿಯವರೆಗೆ ವೆಚ್ಚ ಬರುತ್ತದೆ.ಈ ವೆಚ್ಚವನ್ನೆಲ್ಲಾ ಪಶುಸಂಗೋಪನೆಯೊಂದೇ ಭರಿಸಿ ಕುಟುಂಬದ ಆದಾಯದ ಹೆಚ್ಚಳಕ್ಕೂ ಕಾರಣವಾಗಿದೆ.  ಮೊದಲಿನಿಂದಲೂ ಕೀಟನಾಶಕ ಪ್ರಯೋಗಿಸಿಲ್ಲ, ಇಲ್ಲಿಯ ಹಕ್ಕಿಗಳೇ ಕೀಟ ನಿಯಂತ್ರಣ ಮಾಡುತ್ತಿವೆ.

DSC_2215
ಕಳೆ, ಕೀಟ ನಿಯಂತ್ರಿಸುತ್ತಿರುವ ಆಡು, ಕೋಳಿಗಳು

DSC_2232
ಗೊಂಚಲು ಗೊಂಚಲಾಗಿ ಹಿಡಿದ ತೆಂಗಿನ ಕಾಯಿ

ತೆಂಗಿನ ಕಾಯಿ, ಹಲಸು, ನಿಂಬೆ, ಚಿಕ್ಕು, ಮಾವು ಸಿಲ್ವರ್ ಓಕ್ ಮರದ ಕಟ್ಟಿಗೆ, ಹಿಪ್ಪು ನೇರಳೆ ಋತುಮಾನಕ್ಕನುಗುಣವಾಗಿ ವರ್ಷ ಪೂರ್ತಿ ಆದಾಯ. ಉತ್ತಿಲ್ಲ, ಗೊಬ್ಬರವುಣಿಸಿಲ್ಲವಾದರೂ ಯಾವುದರಲ್ಲೂ ಫಸಲು ಕಡಿಮೆಯಾಗಿಲ್ಲ. ಇನ್ನೊಂದು ೧೦ ವರ್ಷ ಕಳೆದರೆ ದೀರ್ಘಾವಧಿ ಬೆಳೆಗಳಾದ ತೇಗದ ಮರಗಳೂ ಆದಾಯ ಕೊಡಬಹುದು. ೨ ವರ್ಷಗಳ ಹಿಂದೆ ಸಿಮೆಂಟ್ ವ್ಯಾಪರವನ್ನು ಬಿಟ್ಟ ರವಿಯವರ ೪ ಜನರ ಕುಟುಂಬಕ್ಕೆ ಈಗ ಕೃಷಿಯೇ ಆದಾಯದ ಮೂಲ. ಈ ವರ್ಷದಲ್ಲಿ ತೆಂಗಿನ ಮರಗಳ ನಡುವೆ ಬಾಳೆ, ಶುಂಠಿ, ನುಗ್ಗೆ ಬೆಳೆಸುವ ಪ್ರಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. “ಈ ಜಾಗ ಮಾರಿಬಂದ ಹಣವನ್ನು ಬ್ಯಾಂಕ್ನಲ್ಲಿರಿಸಿ ಅದರ ಬಡ್ಡಿಯಿಂದ ಬದುಕಬಹುದಾದರೂ, ಕೃಷಿ ಆದಾಯ, ಉದ್ಯೋಗ, ಬಿಡುವು, ನೆಮ್ಮದಿ ಎಲ್ಲವನ್ನೂ ನೀಡುತ್ತಿದೆ”  ಎನ್ನುತ್ತಾರೆ ರವಿ.

3 comments:

  1. ಭೂಮಿತಾಯಿಯನ್ನು ಮರೆತು ಪಟ್ಟಣದಲ್ಲಿ ಬೀಡುಬಿಟ್ಟಿರುವ ನಮ್ಮಂತವರಿಗೆ ಒಂದು ರೀತಿಯ ಗುಣಪಾಠವಿದ್ದಂತಿದೆ ರವಿಯವರ ಈ ಸಾಹಸ. ಇದನ್ನು ಲೇಖನ ರೂಪದಲ್ಲಿ ಒದಗಿಸಿರುವ ಪಾಲ ಅವರಿಗೆ ಧನ್ಯವಾದಗಳು.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)